logo

|

Home >

schools-saivism >

sri-basavanna-vachanagalu

ಶ್ರಿ ಬಸವಣ್ಣನವರ ವಚನಗಳು


The English translation and explanation of select Basavanna Vachanagalu is available in the Vachana Series.

 

 

ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು, ನಿಮ್ಮ ನಿಲುವು ಕೂಡಲಸಂಗಮದೇವಾ, ಕನ್ಯೆಯ ಸ್ನೇಹದಂತಿದ್ದಿತ್ತು.
ಕಾಳಿಯ ಕಣ್ ಕಾಣದಿಂದ ಮುನ್ನ, ತ್ರಿಪುರ ಸಂಹಾರದಿಂದ ಮುನ್ನ, ಹರಿವಿರಂಚಿಗಳಿಂದ ಮುನ್ನ, ಉಮೆಯ ಕಳ್ಯಾಣದಿಂದ ಮುನ್ನ, ಮುನ್ನ, ಮುನ್ನ, ಮುನ್ನ, - ಅಂದಿಂಗೆಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವಾ.
ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ನಾನವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ, ನೀನು ಆಕಾರವಾಗಿರ್ದಲ್ಲಿ ನಾನು ವೃಶ್ಹಭನೆಂಬ ವಾಹನವಾಗಿರ್ದೆ ಕಾಣಾ ಅಯ್ಯಾ; ನೀನೆನ್ನ ಭವದ ಕೊಂದಿಹೆನೆಂದು ಜಂಗಮ ಲಾಂಚ್ಹನನಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದೊಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ, ಪ್ರಥಮ ಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿಯೆನ್ನ ನಿರಿಸಿಕೊಂಡಿರ್ದಿರಯ್ಯಾ, ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿಸಿಕೊಂಡಿರ್ದಿರಯ್ಯಾ, ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಲೀಲಾ ವಿನೋದದಿಂದಿರಿಸಿಕೊಂಡಿರ್ದಿರಯ್ಯಾ, ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಮನಃ ಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ಸರ್ವಕಾಲ ಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಶ್ಹಭನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮೊಕ್ಕುದಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.
ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.
’ಕರಿಘನ ಅಂಕುಶ ಕಿರಿದೆ’ನ್ನಬಹುದೆ? ಬಾರದಯ್ಯಾ. ’ಗಿರಿಘನ ವಜ್ರ ಕಿರಿದೆ’ನ್ನಬಹುದೆ? ಬಾರದಯ್ಯಾ. ತಮ್ಮಂಥ ಘನ ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯ. ’ಮರಹು ಘನ ನಿಮ್ಮ ನೆನೆವ ಮನ ಕಿರಿದೆ’ನ್ನಬಹುದೆ? ಬಾರದಯ್ಯಾ ಕೂಡಲಸಂಗಮದೇವಾ.
ಭವಬಂಧನ ಭವಪಾಶವಾದ ಕಾರಣವೇನಯ್ಯಾ? ಹಿಂದಣ ಜನ್ಮದಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮನ ಮರೆದೆನಾಗಿ ಅರಿದೋಡೀ ಸಂಸಾರವ ಹೊದ್ದಲೀವನೆ ಕೂಡಲಸಂಗಮದೇವಾ.
ಸಂಸಾರ ಸಾಗರನ ತೆರೆಕೊಬ್ಬಿ ಮುಖದ ಮೇಲೆ ಅಲೆಯುತ್ತಿದ್ದುದೇ ನೋಡಾ! ಸಂಸಾರಸಾಗರ ಉರದುದ್ದವೇ? ಹೇಳಾ! ಸಂಸಾರ ಸಾಗರ ಕೂರಲುದ್ದವೇ? ಹೇಳಾ? ಸಂಸಾರ ಸಾಗರ ಸಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ? ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ? ಕೂಡಲಸಂಗಮದೇವಾ ನಾನೇನೆನುವೆನಯ್ಯಾ?
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ! ಇಂದೆನ್ನ ದೇಹಕ್ಕೆ ಗ್ರಹಣವಾಯಿತು, ಇನ್ನೆಂದಿಗೆ ಮೋಕ್ಶವಹುದೋ ಕೂಡಲಸಂಗಮದೇವಾ
ಇಲಿ ಗಡಹನೊಡ್ಡಿದಲ್ಲಿರ್ಪಂತೆ ಎನ್ನ ಸಂಸಾರ ತನು ಕೆಡುವನ್ನಕ್ಕ ಮಾಣದು; ಹೆರರ ಬಾಧಿಸುವುದು ತನು ಕೆಡುವನ್ನಕ್ಕಮಾಣದು. ಹೆರರ ಚ್ಹಿದ್ರಿಸುವುದು ತನು ಕೆಡುವನ್ನಕ್ಕ ಮಾಣದು ಅಕಟಕಟಾ! ಸಂಸಾರಕ್ಕಾಸತ್ತೆ ಕೂಡಲಸಂಗಮದೇವಾ.೧೦
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆನಗಾಯಿತ್ತಯ್ಯಾ! ಅಕಟಕಟಾ ಸಂಸಾರ ವೃಥಾ ಹೋಯಿತಲ್ಲಾ! ಕರ್ತುವೇ ಕೂಡಲಸಂಗಮದೇವಾ ಇವ ತಪ್ಪಿಸಿ ಎನ್ನನು ರಕ್ಶಿಸಯ್ಯಾ.೧೧
ಶೂಲದ ಮೇಲಣ ವಿಭೋಗವೇನಾದೊಡೇನೋ? ನಾನಾವರ್ಣದ ಸಂಸಾರ ಹಾವ-ಹಾವಡಿಗನ ಸ್ನೇಹದಂತೆ! ತನ್ನಾತ್ಮ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೆ! ಮಹಾದಾನಿ ಕೂಡಲಸಂಗಮದೇವಾ.೧೨
ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ, ಎನ್ನನು ಕಾಯಯ್ಯಾ ಸಂಗಮದೇವಾ ಹುರುಳಿಲ್ಲ ಹುರುಳಿಲ್ಲ! ಶಿವಧೋ! ಶಿವಧೋ!೧೩
ನಾನೊಂದು ನೆನೆದೊಡೆ ತಾನೊಂದು ನೆನೆವುದು, ನಾವಿತ್ತಲೆಳೆ ದೊಡೆ ತಾನತ್ತಲೆಳೆವುದು; ತಾ ಬೇರೆಯೆನ್ನನಳಲಿಸಿ ಕಾಡಿತ್ತು. ತಾ ಬೇರೆಯೆನ್ನ ಬಳಲಿಸಿ ಕಾಡಿತ್ತು. ಕೂಡಲಸಂಗನ ಕೂಡಿಹೆನೆಂದೊಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ!೧೪
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ! ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ! ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ! ಇದಾವ ಪರಿಯಲ್ಲಿ ಕಾಡಿತ್ತು ಮಾಯೆ ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ, ನೀವೇ ಬಲ್ಲಿರಿ ಕೂಡಲಸಂಗಮದೇವಾ.೧೫
ಕೊಡೆವಿಡಿದು ಕುದುರೆಯ ದೃಢವುಳ್ಳ ರಾವುತನೇರಿ ಕೊಡೆ ಕೋಟಿ, ಶೂರರು, ಹನ್ನಿಬ್ಬರಯ್ಯಾ! ಚ.ದ್ರಕಾಂತ ಗಿರಿಯ ಗಜ ಬಂದು ಮೂದಲಿಸಿ ಅರಿದು ಕೊಲುವೊಡೆ ರಿಪುಗಳ ಕಲಿತನವನೋಡಾ! ಅವಿಗೆಯೊಳಡಗಿದ ಪುತ್ಥಳಿಯ ರೂಹಿನಂತಾಯಿತ್ತು, ಕೂಡಲಸಂಗಮದೇವಾ ನಿಮ್ಮ ಹೆಸರಿಲ್ಲದ ಹೆಸರು.೧೬
ಇಂದಿಗೆಂತು ನಾಳಿಗೆಂತು ಎಂದು ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲಾ; ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲಾ! ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದುದಯ್ಯಾ ಈ ಮಾಯೆ ಕೂಡಲಸಂಗಮದೇವಾ.೧೭
ದಿಟ ಪುಟ ಭಕುತಿ ಸಂಪುಟ ನೆಲೆಗೊಳ್ಳದಾಗಿ ಟಿಂಬಕನನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ; ಟೀಕವ ಟಿಂಬಕನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ; ಕೂಡಲಸಂಗಮದೇವಯ್ಯಾ, ಹೊನ್ನ ಹೆಣ್ಣ ಮಣ್ಣ ತೋರಿ.೧೮
  ಆಸತ್ತೆ ಅಲಸಿದೆನೆಂದಡೆ ಮಾಣದು,
  ಬೇಸತ್ತೆ ಬೆಂಬಿದ್ದೆನೆಂದಡೆ ಮಾಣದು,
  ಏವೆನೇವೆನೆಂದಡೆ ಮಾಣದು,
  ಕಾಯದ, ಕರ್ಮದ ಫಲಭೋಗವು !
  ಕೂಡಲಸಂಗನ ಶರಣರು ಬಂದು
  ಹೋ ಹೋ, ಅಂಜದಿರೆಂದಡಾನು ಬದುಕುವೆನು.
19
 20
ಅರಿಯದೆ ಜನನಿಯ ಜಠರದಲ್ಲಿ
ಬಾರದ ಭವಂಗಳ ಬರಿಸಿದೆ ತಂದೆ,
ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ?
ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ !
ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ.
21
ಎಂದೊ, ಸಂಸಾರದ ದಂದುಗ ಹಿಂಗುವುದು ?
ಎಂದೊ, ಮನದಲ್ಲಿ ಪರಿಣಾಮವಹುದೆನಗೆಂದೋ, ಎಂದೋ ?
ಕೂಡಲಸಂಗಮದೇವಾ,
ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ.
22
ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದಡಿಲ್ಲ ಕಂಡಯ್ಯಾ.
ತಾಳಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ.
ಕೂಡಲಸಂಗಮದೇವಾ ಕೇಳಯ್ಯಾ,
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ !
23
ಮುನ್ನ ಮಾಡಿದ ಪಾಪ ಬೆನ್ನ ಬಿಡದನ್ನಕ್ಕ
ಇನ್ನು ಬಯಸಿದಡುಂಟೆ ?
ಭಕ್ತಿಯುಳ್ಳವರ ನೋಡಿ ನೋಡಿ ಬಯಸಿದಡುಂಟೆ,
ಕೂಡಲಸಂಗಮದೇವರಲ್ಲಿ ಮುನ್ನ ವರವ ಹಡೆಯದನ್ನಕ್ಕ?
24
ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ,
ಚಂದ್ರ ಕುಂದೆ, ಕುಂದುವುದಯ್ಯಾ.
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾ
ಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿ
ಚಂದ್ರಮನಡ್ಡ ಬಂದನೆ, ಅಯ್ಯಾ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ,
ಜಗದ ನಂಟ ನೀನೆ, ಅಯ್ಯಾ,
ಕೂಡಲಸಂಗಮದೇವಯ್ಯಾ!
25
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !
26
ಎನ್ನ ಗುಣ ಅವಗುಣವ ಸಂಪಾದಿಸುವೆ ಅಯ್ಯಾ !
ಸರಿಯೆ, ಅಪ್ರತಿಮಹಿಮಾ, ನಿಮಗಾನು ಪ್ರತಿಯೆ
ಕೂಡಲಸಂಗಮದೇವಾ ನೀವು ಮಾಡಲಾನಾದೆನು.
27
ಬೆದಕದಿರು ಬೆದಕದಿರು, ಬೆದಕಿದಡೆ ಹುರುಳಿಲ್ಲ,
ಚಿತ್ತರಟ್ಟೆಯ ಕಾಯಲ್ಲಿ ಮತ್ತೇನನರಸುವಿರಯ್ಯಾ
ನಿಮ್ಮ ಉತ್ತಮಿಕೆಯ ಪೂರೈಸುವುದು
ಕೂಡಲಸಂಗಮದೇವಾ.
28
ಎನ್ನ ಚಿತ್ತವು ಅತ್ತಿಯ ಹಣ್ಣು, ನೋಡಯ್ಯಾ,
ವಿಚಾರಿಸಿದಡೆ ಏನೂ ಹುರುಳಿಲ್ಲಯ್ಯಾ.
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಪುಮಾಡಿ ನೀವಿರಿಸಿದಿರಿ,
ಕೂಡಲಸಂಗಮದೇವಾ.
29
ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ,
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ.
ನುಡಿಗೆ ತಕ್ಕ ನಡೆಯ ಕಂಡಡೆ
ಕೂಡಲಸಂಗಮದೇವನೊಳಗಿಪ್ಪನಯ್ಯಾ.
30
ಮುಂಗೈಯ ಕಂಕಣಕ್ಕೆ ಕನ್ನಡಿಯ ತೋರುವಂತೆ
ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು ನೋಡಾ.
ನಾಯಿಗೆ ನಾರಿವಾಣವಕ್ಕುವುದೆ
ಕೂಡಲಸಂಗಮದೇವಾ.
31
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ.
32
ಮರನನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತ್ತಲಿದ್ದೇನೆ,
ಬೆಂದ ಮನವ ನಾನೆಂತು ನಂಬುವೆನಯ್ಯಾ
ಎಂತು ನಚ್ಚುವೆನಯ್ಯಾ
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ
ಹೋಗಲೀಯದಯ್ಯಾ.
33
ಅಂದಣವನೇರಿದ ಸೊಣಗನಂತೆ
ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು.
ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು,
ಮೃಡ ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು-
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.
34
ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ ಎನ್ನ ಬಾಳುವೆ.
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು-
ಕೂಡಲಸಂಗಮದೇವಯ್ಯಾ, ನಿಮ್ಮ ಧರ್ಮ.
35
ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,
ಎನ್ನ ಬಿಡು, ತನ್ನ ಬಿಡು ಎಂಬುದು ಕಾಯವಿಕಾರ,
ಎನ್ನ ಬಿಡು, ತನ್ನ ಬಿಡು, ಎಂಬುದು ಮನೋವಿಕಾರ.
ಕರಣೇಂದ್ರಿಯಂಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೈದುಗೆ, ಕೂಡಲಸಂಗಮದೇವಾ.
36
ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ :
ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ ನೋಡಾ.
ಬೆಂದ ಕರಣಾದಿಗಳು ಒಂದೆ ಪಥವನರಿಯವು,
ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ
ಎನ್ನ ತಂದೆ ಕೂಡಲಸಂಗಮದೇವಾ,
ನಿಮ್ಮ ಶರಣರ ಬಳಿವಿಡಿದಡೆ ಎನ್ನ ದಂದುಗ ಹಿಂಗುವುದು.
37
ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು.
ಏನ ಮಾಡುವೆನೀ ಮನವನು, ಎಂತು ಮಾಡುವೆನೀ ಮನವನು.
ಕೂಡಲಸಂಗಮದೇವನ ಶರಣರ
ನಚ್ಚದ ಮಚ್ಚದ ಬೆಂದ ಮನವನು.
38
ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ ಮನವು,
ಇದಿರಿಚ್ಚೆಯ ನುಡಿದಡೆ ಮೆಚ್ಚದೀ ಮನವು.
ಕೂಡಲಸಂಗನ ಶರಣರ
ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು.
39
ಸುಡಲೀ ಮನವೆನ್ನನುಡುಹನ ಮಾಡಿತ್ತು,
ನಡೆವಲ್ಲಿ ನುಡಿವಲ್ಲಿ ಅಧಿಕನೆಂದೆನಿಸಿತ್ತು.
ಬೆಡಗಿನ ಕೀಲು ಕಳೆದು ಕೆಡೆದ ಬಳಿಕ
ಕಡುಗೂರ್ಪ ಮಡದಿ ತಾ ಮುಟ್ಟಲಮ್ಮಳು,
ಒಡಲನುರಿಕೊಂಬುದು, ಒಡವೆಯನರಸ ಕೊಂಬ,
ಕಡುಗೂರ್ಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ
ಮುನ್ನ ಮಾಡಿದುದು ತನ್ನ ಬೆನ್ನ ಬಿಡದನ್ನಕ್ಕ,
ಇನ್ನು ಮಾಡಿದರಳವೆ ಕೂಡಲಸಂಗಮದೇವಾ.
40
ವಚನದ ಹುಸಿ ನುಸುಳೆಂತು ಮಾಬುದೆನ್ನ
ಮನದ ಮರ್ಕಟತನವೆಂತು ಮಾಬುದೆನ್ನ
ಹೃದಯದ ಕಲ್ಮಷವೆಂತು ಮಾಬುದೆನ್ನ
ಕಾಯವಿಕಾರಕ್ಕೆ ತರಿಸಲುವೋದೆನು,
ಎನಗಿದು ವಿಧಿಯೇ, ಕೂಡಲಸಂಗಮದೇವಾ.
41
ಅಂಗದ ನಮಾಫಟವು ಸಿಂಗದ ಗಾತ್ರವು,
ಹಿಂಗದು ಮನದಲ್ಲಿ ನಾನಾ ವಿಕಾರವು.
ಬಂದೆಹೆನೆಂದರಿಯಲಿಲ್ಲಾಗಿ, ಸಂದೇಹ ಬಿಡದಾಗಿ,
ಮುಂದುಗಾಣದು ಲೋಕ,
ಬೆಂದ ಮಾಯಕ್ಕಂಜಿ ನಿಮ್ಮ ಮರೆವೊಕ್ಕೆ,
ಕೂಡಲಸಂಗಮದೇವಾ.
42
ವಿಕಳನಾದೆನು ಪಂಚೇಂದ್ರಿಯ ಸಪ್ತಧಾತುವಿನಿಂದ,
ಮತಿಗೆಟ್ಟೆನು ಮನದ ವಿಕಾರದಿಂದ,
ಧೃತಿಗೆಟ್ಟೆನು ಕಾಯವಿಕಾರದಿಂದ,
ಧೃತಿಗೆಟ್ಟೆನು ಕಾಯವಿಕಾರದಿಂದ,
ಶರಣುವೊಕ್ಕೆನು ಕೂಡಲಸಂಗಮದೇವಯ್ಯಾ.
43
ಮುನಿದೆಯಾದಡೆ ಒಮ್ಮೆ ಜರೆದಡೆ ಸಾಲದೆ
ಅಕಟಕಟಾ, ಮದನಂಗೆ ಮಾರುಗೊಡುವರೆ
ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ
ಕೂಡಲಸಂಗಮದೇವಾ.
44
ಆನು ಒಬ್ಬನು, ಸುಡುವರೈವರು,
ಮೇಲೆ ಕಿಚ್ಚು ಘನ, ನಿಲಲುಬಾರದು.
ಕಾಡ ಬಸವನ ಹುಲಿ ಕೊಂಡೊಯ್ದಡೆ
ಆರೈಯಲಾಗದೆ ಕೂಡಲಸಂಗಮದೇವಾ.
45
ಆಸೆ, ಆಮಿಷ, ತಾಮಸ, ಹುಸಿ, ವಿಷಯ,
ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ-
ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ.
ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು.
ಇದು ಕಾರಣ, ಇವೆಲ್ಲವ ಕಳೆದು
ಎನ್ನ ಪಂಚೈವರ, ಭಕ್ತರ ಮಾಡು ಕೂಡಲಸಂಗಮದೇವಾ.
46
ಎಂತು ಶಿವಭಕ್ತಿಯ ನಾನುಪಮಿಸುವೆನಯ್ಯಾ
ಎಂತು ಶಿವಾಚಾರವೆನಗೆ ವೇದ್ಯವಪ್ಪುದೋ ಅಯ್ಯಾ
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಂದ ಕಟ್ಟುವಡೆದೆನು.
ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ.
ಪಂಚೇಂದ್ರಿಯ, ಸಪ್ತಧಾತು
ಹರಿಹಂಚುಮಾಡಿ ಕಾಡಿಹವಯ್ಯಾ,
ಅಯ್ಯಾ, ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ
ಕೂಡಲಸಂಗಮದೇವಾ, ನಾನೇವೆನೇವೆನಯ್ಯಾ.
47
ಕಾಯವಿಕಾರ ಕಾಡಿಹುದಯ್ಯಾ,
ಮನೋವಿಕಾರ ಕೂಡಿಹುದಯ್ಯಾ.
ಇಂದ್ರಿಯ ವಿಕಾರ ಸುಳಿವುದಯ್ಯಾ !
ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ !
ಅನ್ಯ ಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ.
ಅನುಪಮಸುಖಸಾರಾಯ ಶರಣರಲ್ಲಿ-
ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ.
48
ಬಂದ ಯೋನಿಯನರಿದು ಸಲಹೆನ್ನ ತಂದೆ.
ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು,
ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು,
ಎನ್ನ ತಂದೆ ಕೂಡಲಸಂಗಮದೇವಾ, ಮಾಣಿಸು ನಿಮ್ಮ ಧರ್ಮ.
49
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ.
50
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ.
ಪಶುವೇನ ಬಲ್ಲುದು ಹಸುರೆಂದೆಠಸುವುದು.
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ,
ಸುಬುದ್ಧಿಯೆಂಬ ಉದಕವನೆರೆದು,
ನೋಡಿ ಸಲಹಯ್ಯಾ, ಕೂಡಲಸಂಗಮದೇವಾ.
51
ಕೆಸರಲ್ಲಿ ಬಿದ್ದ ಪಶುವಿನಂತೆ
ಆನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ, ಅಯ್ಯಾ.
ಆರೈವವರಿಲ್ಲ, ಅಕಟಕಟ !
ಪಶುವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ.
52
ಬಡಪಶು ಪಂಕದಲ್ಲಿ ಬಿದ್ದಡೆ
ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ
ಶಿವ ಶಿವ ಹೋದೆಹೆ, ಹೋದೆಹೆನಯ್ಯಾ.
ನಿಮ್ಮ ಮನದತ್ತಲೆನ್ನ ತೆಗೆಯಯ್ಯಾ.
ಪಶುವಾನು, ಪಶುಪತಿ ನೀನು,
ತುಡುಗುಣಿಯೆಂದು ಎನ್ನ ಹಿಡಿದು ಬಡಿಯದ ಮುನ್ನ
ಒಡೆಯಾ ನಿಮ್ಮ ಬಯ್ಯದಂತೆ ಮಾಡು,
ಕೂಡಲಸಂಗಮದೇವಾ.
53
ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ
`ಅಂಬೆ ಅಂಬೆ' ಎಂದು ಕರೆವುತ್ತಲಿದ್ದೇನೆ,
`ಅಂಬೆ ಅಂಬೆ' ಎಂದು ಒರಲುತ್ತಲಿದ್ದೇನೆ,
ಕೂಡಲಸಂಗಮದೇವ `ಬಾಳು ಬಾಳೆಂಬನ್ನಕ್ಕ.
54
 55
ಅಯ್ಯಾ, ಅಯ್ಯಾ, ಎಂದು ಕರೆವುತ್ತಲಿದ್ದೇನೆ.
ಅಯ್ಯಾ, ಅಯ್ಯಾ, ಎಂದು ಒರಲುತ್ತಲಿದ್ದೇನೆ.
ಓ ಎನ್ನಲಾಗದೆ ಅಯ್ಯಾ
ಆಗಳೂ ನಿಮ್ಮ ಕರೆವುತ್ತಲಿದ್ದೇನೆ
ಮೋನವೇ ಕೂಡಲಸಂಗಮದೇವಾ.
56
ನೀ ಹುಟ್ಟಿಸಿದಲ್ಲಿ ಹುಟ್ಟಿ,
ನೀ ಕೊಂದಲ್ಲಿ ಸಾಯದೆ, ಎನ್ನ ವಶವೆ ಅಯ್ಯಾ
ನೀವಿರಿಸಿದಲ್ಲಿ ಇರದೆ, ಎನ್ನ ವಶವೆ ಅಯ್ಯಾ
ಅಕಟಕಟಾ, ಎನ್ನವನೆನ್ನವನೆನ್ನಯ್ಯಾ
ಕೂಡಲಸಂಗಮದೇವಯ್ಯಾ.
57
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ ಸಲಹುತ್ತ,
ಶಿವ ಶಿವಾ ಎಂದೋದಿಸಯ್ಯಾ.
ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು,
ಕೂಡಲಸಂಗಮದೇವಾ.
58
ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ,
ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ,
ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ,
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ.
59
ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ,
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ,
ಎನ್ನ ಮಾನಾಪಮಾನವೂ ನಿಮ್ಮದಯ್ಯಾ,
ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ.
60
ಸಟೆಯಿಲ್ಲದಂತೆ, ಪ್ರಪಂಚವಿಲ್ಲದಂತೆ, ವೈಶಿಕವಿಲ್ಲದಂತೆ,
ನಡೆಸಯ್ಯಾ ಲಿಂಗತಂದೆ.
ಒಂದು ನಿಮಿಷವಾದಡೆಯೂ ನಿಮ್ಮ ಶರಣರ ಸಂಗದಲ್ಲಿರಿಸಯ್ಯಾ.
ಬೇರೆ ಮತ್ತೆ ಅನ್ಯವ ತೋರದಿರಯ್ಯಾ.
ಹೊಲಬುಗೆಟ್ಟೆನಯ್ಯಾ, ಕೂಡಲಸಂಗಮದೇವಾ.
61
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
62
ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ ಇಳಿಯಬಿಟ್ಟಡೆ
ನಿಮ್ಮ ನಗುವರಯ್ಯಾ.
ಶಿವಬಟ್ಟೆಯಲೆನ್ನನು ಇರಿಸಯ್ಯಾ ಹರನೆ,
ಹೊಲಬುಗೆಟ್ಟೆನು ಬಟ್ಟೆಯ ತೋರಯ್ಯಾ.
ಹುಯ್ಯಲಿಟ್ಟೆನು, ಗಣಂಗಳು ಕೇಳಿರಯ್ಯಾ.
ಕೂಡಲಸಂಗಮದೇವಯ್ಯ ಎನ್ನ ಕಾಡಿಹನಯ್ಯಾ.
63
ಅಕಟಕಟಾ, ಶಿವ ನಿನಗಿನಿತು ಕರುಣವಿಲ್ಲ,
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ,
ಏಕೆ ಹುಟ್ಟಿಸಿದೆ, ಇಹಲೋಕ ದುಃಖಿಯ
ಪರಲೋಕದೂರನ ಏಕೆ ಹುಟ್ಟಿಸಿದೆ
ಕೂಡಲಸಂಗಮದೇವಾ ಕೇಳಯ್ಯಾ,
ಎನಗಾಗಿ ಮತ್ತೊಂದು ತರುಮರನಿಲ್ಲವೆ.
64
ನರ ಕೂರಂಬಿನಲೆಚ್ಚ, ಅವಂಗೊಲಿದೆಯಯ್ಯಾ,
ಅರಳಂಬಿನಲೆಚ್ಚ ಕಾಮನನುರುಹಿದೆ.
ಇರುಳು ಹಗಲೆನ್ನದೆ ಪ್ರಾಣಘಾತಕವ ಮಾಡಿದ
ಬೇಡನ ಕೈಲಾಸಕೊಯ್ದೆಯಯ್ಯಾ,
ಎನ್ನನೇತಕೊಲ್ಲೆ ಕೂಡಲಸಂಗಮದೇವಾ.
65
ನೀನೊಲಿದಡೆ ಕೊರಡು ಕೊನರುವುದಯ್ಯಾ,
ನೀನೊಲಿದಡೆ ಬರಡು ಹಯನಹುದಯ್ಯಾ,
ನೀನೊಲಿದಡೆ ವಿಷವೆಲ್ಲ ಅಮೈತವಹುದಯ್ಯಾ,
ನೀನೊಲಿದಡೆ ಸಕಲ ಪಡಿಪದಾರ್ಥ
ಇದಿರಲ್ಲಿರ್ಪುವು ಕೂಡಲಸಂಗಮದೇವಾ.
66
ಮೇರುಗುಣವನರಸುವುದೆ ಕಾಗೆಯಲ್ಲಿ
ಪರುಷಗುಣವನರಸುವುದೆ ಕಬ್ಬುನದಲ್ಲಿ
ಸಾಧುಗುಣವನರಸುವುದೆ ಅವಗುಣಿಯಲ್ಲಿ
ಚಂದನಗುಣವನರಸುವುದೆ ತರುಗಳಲ್ಲಿ
ಸರ್ವಗುಣಸಂಪನ್ನ ಲಿಂಗವೆ, ನೀನೆನ್ನಲ್ಲಿ
ಅವಗುಣವನರಸುವರೆ ಕೂಡಲಸಂಗಮದೇವಾ.
67
ಭವಭವದಲ್ಲಿ ಎನ್ನ ಮನವು ಸಿಲುಕದೆ
ಭವಭವದಲ್ಲಿ ಎನ್ನ ಮನವು ಕಟ್ಟದೆ
ಭವಸಾಗರದಲ್ಲಿ ಮುಳುಗದೆ
ಭವರಾಟಳದೊಳು ತುಂಬದೆ ಕೆಡಹದೆ
ಭವವಿರಹಿತ ನೀನು, ಅವಧಾರು
ಕರುಣಿಸು ಕೂಡಲಸಂಗಮದೇವಾ.
68
ಆಸೆಯೆಂಬ ಪಾಶದಲ್ಲಿ ಭವಬಂಧನನಾಗಿರ್ದೆನಯ್ಯಾ,
ಸಕೃತು ನಿಮ್ಮ ನೆನೆಯಲು ಎನಗೆ ತೆರಹಿಲ್ಲಯ್ಯಾ !
ಕರುಣಾಕರ, ಅಭಯಕರ, ವರದ,
ನೀ ಕರುಣಿಸಯ್ಯಾ.
ಸಂಸಾರಬಂಧನವನು ಮಾಣಿಸಿ, ಎನಗೆ ಕೃಪೆಯ ಮಾಡಿ,
ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸು,
ಭಕ್ತಜನಮನೋವಲ್ಲ ಕೂಡಲಸಂಗಮದೇವಾ.
69
ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು.
70
ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.
ತನುವುದ್ದೇಶ, ಮನವುದ್ದೇಶವಾಗಿ
ಮಾಡುವ ನೇಮ ಸಲ್ಲವು, ಸಲ್ಲವು.
ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.
ಕೂಡಲಸಂಗಮದೇವಯ್ಯಾ
ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು.
71
ಗುರುವಚನವಲ್ಲದೆ ಲಿಂಗವೆಂದೆನಿಸದು,
ಗುರುವಚನವಲ್ಲದೆ ಜಂಗಮವೆಂದೆನಿಸದು,
ಗುರುವಚನವಲ್ಲದೆ ನಿತ್ಯವೆಂದೆನಿಸದು,
ಗುರುವಚನವಲ್ಲದೆ ನೇಮವೆಂದೆನಿಸದು.
ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ
ಭಯ ಭ್ರಷ್ಟರ ಮೆಚ್ಚುವನೆ,
ನಮ್ಮ ಕೂಡಲಸಂಗಮದೇವ.
72
ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ.
ಕಹಿ ಸೋರೆಯ ಕಾಯ ತಂದು ವಿಭೂತಿಯ ತುಂಬಿದಡೆ
ಸಿಹಿಯಾಗದೆ ಮೂರು ದಿವಸಕ್ಕಯ್ಯಾ
ಹಲವು ಕಾಲ ಕೊಂದ ಸೂನೆಗಾರನ ಕತ್ತಿಯಾದಡೇನು
ಪರುಷ ಮುಟ್ಟಲಿಕೆ ಹೊನ್ನಾಗದೆ ಅಯ್ಯಾ
ಲಲಾಟದಲ್ಲಿ ವಿಭೂತಿ ಬರೆಯಲಿಕೆ ಪಾಪ ಪಲ್ಲಟವಾಗದೆ
ಕೂಡಲಸಂಗಮದೇವಾ.
73
ನೀರಿಂಗೆ ನೈದಿಲೆಯೆ ಶೃಂಗಾರ,
ಸಮುದ್ರಕ್ಕೆ ತೆರೆಯೆ ಶೃಂಗಾರ,
ನಾರಿಗೆ ಗುಣವೆ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ.
74
ಕರಿಯಂಜುವುದು ಅಂಕುಶಕ್ಕಯ್ಯಾ,
ಗಿರಿಯಂಜÅವುದು ಕುಲಿಶಕ್ಕಯ್ಯಾ,
ತಮಂಧವಂಜುವುದು ಜ್ಯೋತಿಗಯ್ಯಾ,
ಕಾನನವಂಜುವುದು ಬೇಗೆಗಯ್ಯಾ,
ಪಂಚಮಹಾಪಾತಕವಂಜುವುದು
ಕೂಡಲಸಂಗನ ನಾಮಕ್ಕಯ್ಯಾ.
75
ಜಪತಪ ನಿತ್ಯನೇಮವೆನಗುಪದೇಶ,
ನಿಮ್ಮ ನಾಮವೆನಗೆ ಮಂತ್ರ,
ಶಿವನಾಮವೆನಗೆ ತಂತ್ರ,
ಕೂಡಲಸಂಗಮದೇವಯ್ಯಾ
ನಿಮ್ಮ ನಾಮವೆನಗೆ ಕಾಮಧೇನು.
76
ಅಕಟಕಟಾ ಬೆಡಗು ಬಿನ್ನಾಣವೆಂಬುದೇನೊ !
ಓಂ ನಮಃ ಶಿವಾಯ ಎಂಬುದೇ ಮಂತ್ರ,
ಓಂ ನಮಃ ಶಿವಾಯ ಎಂಬುದೇ ತಂತ್ರ,
ನಮ್ಮ ಕೂಡಲಸಂಗಮದೇವರ ನೆನೆವುದೆ ಮಂತ್ರ.
77
ವಶ್ಯವ ಬಲ್ಲೆವೆಂದೆಂಬಿರಯ್ಯಾ,
ಬುದ್ಧಿಯನರಿಯದ ಮನುಜರು ಕೇಳಿರಯ್ಯಾ.
ವಶ್ಯವಾವುದೆಂದರಿಯದೆ ಮರುಳುಗೊಂಬಿರಿ,
ಎಲೆ ಗಾವಿಲ ಮನುಜರಿರಾ.
ಓಂ ನಮಃ ಶಿವಾಯ ಎಂಬ ಮಂತ್ರ ಸರ್ವಜನವಶ್ಯ
ಕೂಡಲಸಂಗಮದೇವಾ.
78
ಭವಬಂಧನ ದುರಿತಂಗಳ ಗೆಲುವಡೆ
ಓಂ ನಮಃ ಶಿವಶರಣೆಂದಡೆ ಸಾಲದೆ
ಹರ ಹರ ಶಂಕರ, ಶಿವ ಶಿವ ಶಂಕರ,
ಜಯ ಜಯ ಶಂಕರ ಶರಣೆನುತ್ತಿದ್ದೇನೆ.
ಎನ್ನ ಪಾತಕ ಪರಿಹರ,
ಕೂಡಲಸಂಗಮದೇವಾ ಶರಣೆನುತ್ತಿದ್ದೇನೆ.
79
ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ,
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಎನಗಿದೆ ಮಂತ್ರ, ಇದೇ ಜಪ.
ಕೂಡಲಸಂಗಮದೇವಾ ನೀನೆ ಬಲ್ಲೆ, ಎಲೆ ಲಿಂಗವೆ.
80
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ.
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಭೇದವ ಮಾಡಲಮ್ಮವು.
81
ಬಿಳಿಯ ಕರಿಕೆ, ಕಣಿಗಿಲೆಲೆಯ,
ತೊರೆಯ ತಡಿಯ ಮಳಲ ತಂದು,
ಗೌರಿಯ ನೋನುವ ಬನ್ನಿರೆ.
ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು
ಅನುಪಮದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದು.
82
ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.
83
ಪಾತಕ ಶತಕೋಟಿಯನೊರಸಲು
ಸಾಲದೆ ಒಂದು ಶಿವನ ನಾಮ
ಸಾಲದೆ ಒಂದು ಹರನ ನಾಮ
ಕೂಡಲಸಂಗಮದೇವಾ
ನಿಮ್ಮ ಉಂಡಿಗೆಯ ಪಶುವ ಮಾಡಿದೆಯಾಗಿ.
84
ಲಿಂಗದ ಉಂಡಿಗೆಯ ಪಶುವಾನಯ್ಯಾ,
ವೇಷಧಾರಿಯಾನು, ಉದರಪೋಷಕ ನಾನಯ್ಯಾ,
ಕೂಡಲಸಂಗನ ಶರಣರ ಧರ್ಮದ ಕವಿಲೆಯಾನು.
85
ನಮಃ ಶಿವಾಯ ನಮಃ ಶಿವಾಯ ನಮಃ ಶಿವಾಯ
ಶರಣೆಂದಿತ್ತು ಲಲಾಟಲಿಖಿತ,
ಬರೆದ ಬಳಿಕ ಪಲ್ಲಟವ ಮಾಡಬಾರದು.
ಎನ್ನ ಉರದ ಉಂಡಿಗೆ, ಶಿರದ ಅಕ್ಷರ
ಕೂಡಲಸಂಗಯ್ಯಾ ಶರಣೆಂದಿತ್ತು.
86
ಅಡ್ಡ ವಿಭೂತಿುಲ್ಲದವರ ಮುಖಹೊಲ್ಲ, ನೋಡಲಾಗದು.
ಲಿಂಗದೇವನಿಲ್ಲದಠಾವು ನರವಿಂಧ್ಯ, ಹೊಗಲಾಗದು.
ದೇವಭಕ್ತರಿಲ್ಲದೂರು ಸಿನೆ ಹಾಳು,
ಕೂಡಲಸಂಗಮದೇವಾ.
87
ಅಡ್ಡ ತ್ರಿಪುಂಡ್ರದ, ಮಣಿಮಕುಟವೇಷದ
ಶರಣರ ಕಂಡಡೆ ನಂಬುವುದೆನ್ನ ಮನವು,
ನಚ್ಚುವುದೆನ್ನ ಮನವು, ಸಂದೇಹವಿಲ್ಲದೆ.
ಇವಿಲ್ಲದವರ ಕಂಡಡೆ ನಂಬೆ ಕೂಡಲಸಂಗಮದೇವಾ.
88
ಆರಾಧ್ಯ ಪ್ರಾಣಲಿಂಗವೆಂದರಿದು,
ಪೂರ್ವಗುಣವಳಿದು ಪುನರ್ಜಾತನಾದ ಬಳಿಕ,
ಸಂಸಾರಬಂಧುಗಳೆನ್ನವರೆಂದಡೆ
ನಂಟುಭಕ್ತಿ ನಾಯಕನರಕ-
ಇಂತೆಂದುದು ಕೂಡಲಸಂಗನ ವಚನ.
89
ತಾಳಮರದ ಕೆಳಗೆ ಒಂದು ಹಾಲ ಹರಮಿದ್ದಡೆ
ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬರು.
ಈ ಭಾವನಿಂದೆಯ ಮಾಣಿಸಾ
ಕೂಡಲಸಂಗಮದೇವಾ.
90
ಸುಪಥಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು ನಡೆವಿರಯ್ಯಾ,
ತತ್ತ್ವಮಸಿ ಎಂಬುದನರಿದು ಕತ್ತಲೆಗೆ ಓಡುವಿರಯ್ಯಾ.
ವೇದವಿಪ್ರರ ವಿಚಾರಿಸಿ ನೋಡಲು,
ಉಪದೇಶಪರೀಕ್ಷೆ ನರಕವೆಂದುದು
ಕೂಡಲಸಂಗನ ವಚನಸೂಚನೆ.
91
ಕುಂಬಳದ ಕಾುಗೆ ಕಬ್ಬುನದ ಕಟ್ಟ ಕೊಟ್ಟಡೆ
ಕೊಳೆವುದಲ್ಲದೆ ಬಲುಹಾಗಬಲ್ಲುದೆ
ಅಳಿಮನದವಂಗೆ ದೀಕ್ಷೆಯ ಕೊಟ್ಟಡೆ
ಭಕ್ತಿಯೆಂತಹುದು ಮುನ್ನಿನಂತೆ.
ಕೂಡಲಸಂಗಯ್ಯಾ
ಮನಹೀನನ ಮೀಸಲ ಕಾ್ದುರಿಸಿದಂತೆ.
92
ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ
ರಂಜನೆಯಹುದಲ್ಲದೆ ಅದರ ಗಂಜಳ ಬಿಡದಣ್ಣಾ,
ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದಡೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣಾ.
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆ
ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ.
93
ಕಬ್ಬುನದ ಕೋಡಗವ ಪರುಷ ಮುಟ್ಟಲು,
ಹೊನ್ನಾದಡೇನು ಮತ್ತೇನಾದಡೇನು
ತನ್ನ ಮುನ್ನಿನ ರೂಹ ಬಿಡದನ್ನಕ್ಕ
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಬಕರುಗಳಯ್ಯಾ.
94
ತನುವಿನಲೊಂದಿಟ್ಟು ಮನದಲೆರಡಿಟ್ಟಡೆ,
ಬಲ್ಲನೊಲ್ಲನಯ್ಯಾ, ಲಿಂಗವು ಬಲ್ಲನೊಲ್ಲನಯ್ಯಾ.
ಪರಚಿಂತೆಯನೊಲ್ಲನೊಲ್ಲ
ಕೂಡಲಸಂಗಮದೇವ.
95
ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ
ಬಲ್ಲನೊಲ್ಲನಯ್ಯಾ ಲಿಂಗವು,
ಅವರು ಪಥಕ್ಕೆ ಸಲ್ಲರು ಸಲ್ಲರಯ್ಯಾ.
ಒಳಹೊರಗೊಂದಾಗದವರಿಗೆ
ಅಳಿಯಾಸೆದೋರಿ ಬೀಸಾಡುವನವರ
ಜಗದೀಶ ಕೂಡಲಸಂಗಮದೇವ.
96
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನದೊಳಗೆ [ಮನದೊ]ಡೆಯನಿದ್ದಾನೊ, ಇಲ್ಲವೊ
ಇಲ್ಲ, ಕೂಡಲಸಂಗಮದೇವಾ.
97
ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ
ಕೋಡುಗ ಬಲ್ಲುದೆ ಸೆಳೆಮಂಚದ ಸುಖವ
ಕಾಗೆ ನಂದನವನದೊಳಗಿದ್ದಡೇನು,
ಕೋಗಿಲೆಯಾಗಬಲ್ಲುದೆ ಹೇಳಾ
ಕೊಳನ ತಡಿಯಲೊಂದು ಹೊರಸು ಕುಳ್ಳಿರ್ದಡೇನು,
ಕಳಹಂಸಿಯಾಗಬಲ್ಲುದೆ, ಕೂಡಲಸಂಗಮದೇವಾ.
98
ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು,
ನೆನೆದು ಮೃದುವಾಗಬಲ್ಲುದೆ
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ,
ಮನದಲ್ಲಿ ದೃಡವಿಲ್ಲದನ್ನಕ್ಕ
ನಿದಾನವ ಕಾಯಿದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು, ಕೂಡಲಸಂಗಮದೇವಾ.
99
ಸಂತವಿದ್ದ ಮನೆಗೆ ಕೊಂತವ ತಂದಂತೆ
ಇದನೆಂತು ಸಂತೈಸುವೆನು
ಸಂತೆಯ ಗುಡಿಲ ಸೂಳೆಗೆ ಕೊಂತವಳವಡುವುದೆ
ಕೂಡಲಸಂಗಮದೇವರ ಮಹತ್ತು
ಆರಿಗೂ ಆಳವಡದು.
100
ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ
ಕೂಸಿಂಗಲ್ಲ, ಬೊಜಗಂಗಲ್ಲ.
ಕೂಸನೊಮ್ಮೆ ಸಂತವಿಡುವಳು, ಬೊಜಗನನೊಮ್ಮೆ ನೆರೆವಳು.
ಧನದಾಸೆ ಬಿಡದು ಕೂಡಲಸಂಗಮದೇವಾ.
101
ಎರದೆಲೆಯಂತೆ ಒಳಗೊಂದು ಹೊರಗೊಂದಾದಡೆ ಮೆಚ್ಚುವನೆ
ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ !
ಉಡುವಿನ ನಾಲಗೆಯಂತೆ ಎರಡಾದಡೆ
ಕೂಡಲಸಂಗಯ್ಯ ಮೆಚ್ಚುವನೆ.
102
ಭಕ್ತರ ಕಂಡಡೆ ಬೋಳರಪ್ಪಿರಯ್ಯಾ,
ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ,
ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ,
ಅವರವರ ಕಂಡಡೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯಾ.
ಕೂಡಲಸಂಗಯ್ಯನ ಪೂಜಿಸಿ, ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ.
103
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿ ಮಸಣಿಯ ಭಕ್ತೆ.
ಗಂಡ ಕೊಂಬುದು ಪಾದೋದಕ-ಪ್ರಸಾದ,
ಹೆಂಡತಿ ಕೊಂಬುದು ಸುರೆ-ಮಾಂಸ.
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಿಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವಾ.
104
ಹಾವಡಿಗನು ಮೂಕೊರತಿಯು:
ತನ್ನ ಕೈಯಲ್ಲಿ ಹಾವು,
ಮಗನ ಮದುವೆಗೆ ಶಕುನವ ನೋಡಹೋಹಾಗ
ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು,
ಶಕುನ ಹೊಲ್ಲೆಂಬ ಚದುರನ ನೋಡಾ.
ತನ್ನ ಸತಿ ಮೂಕೊರತಿ, ತನ್ನ ಕೈಯಲ್ಲಿ ಹಾವು,
ತಾನು ಮೂಕೊರೆಯ.
ತನ್ನ ಬ್ಥಿನ್ನವನರಿಯದೆ ಅನ್ಯರನೆಂಬ
ಕುನ್ನಿಯನೇನೆಂಬೆ ಕೂಡಲಸಂಗಮದೇವಾ.
105
ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು,
ಕಂಗಳಿಚ್ಛೆಗೆ ಪರವಧುವ ನೆರೆವರು.
ಲಿಂಗಲಾಂಛನಧಾರಿಯಾದಲ್ಲಿ ಫಲವೇನು
ಲಿಂಗಪಥವ ತಪ್ಪಿ ನಡೆವವರು
ಜಂಗಮಮುಖದಿಂದ ನಿಂದೆ ಬಂದಡೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವಾ.
106
ಶಿವಜನ್ಮದಲ್ಲಿ ಹುಟ್ಟಿ, ಲಿಂಗೈಕ್ಯರಾಗಿ,
ತನ್ನ ಅಂಗದ ಮೇಲೆ ಲಿಂಗವಿರುತಿರಲು,
ಅನ್ಯರನೆ ಹಾಡಿ, ಅನ್ಯರನೆ ಹೊಗಳಿ,
ಅನ್ಯರ ವಚನವ ಕೊಂಡಾಡಲು, ಕರ್ಮ ಬಿಡದು, ಭವಬಂಧನ !
ಶ್ವಾನಯೋನಿಯಲ್ಲಿ ಬಪ್ಪುದು ತಪ್ಪದು !
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಬಕರಿಗೆ
ಮಳಲ ಗೋಡೆಯನಿಕ್ಕಿ, ನೀರಲ್ಲಿ ತೊಳೆದಂತಾುತ್ತಯ್ಯಾ.
107
ಅರ್ಥರೇಖೆುದ್ದಲ್ಲಿ ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು
ಮರ್ಕಟನ ಕೈಯಲ್ಲಿ ಮಾಣಿಕವಿದ್ದು ಫಲವೇನು
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ! ಶಿವಪಥವನರಿಯದನ್ನಕ್ಕ.
108
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷೆ*ುಲ್ಲದ ಭಕ್ತ,
ಇದ್ದಡೇನೊ ಶಿವ ಶಿವಾ ಹೋದಡೇನೊ
ಕೂಡಲಸಂಗಮದೇವಯ್ಯಾ
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ.
109
ಅವಳ ವಚನ ಬೆಲ್ಲದಂತೆ, ಹೃದಯದಲಿಪ್ಪುದು ನಂಜು ಕಂಡಯ್ಯಾ.
ಕಂಗಳಲೊಬ್ಬನ ಕರೆವಳು, ಮನದಲೊಬ್ಬನ ನೆರೆವಳು.
ಕೂಡಲಸಂಗಮದೇವ ಕೇಳಯ್ಯಾ,
ಮಾನಿಸಗಳ್ಳೆಯ ನಂಬದಿರಯ್ಯಾ.
110
ಹಾದರಕ್ಕೆ ಹೋದಡೆ, ಕಳ್ಳದಮ್ಮವಾುತ್ತು;
ಹಾಳು ಗೋಡೆಗೆ ಹೋದಡೆ, ಚೇಳೂರಿತ್ತು;
ಅಬ್ಬರವ ಕೇಳಿ ತಳವಾರ ಉಟ್ಟ ಸೀರೆಯ ಸುಲಿದ;
ನಾಚಿ ಹೋದಡೆ ಮನೆಯ ಗಂಡ ಬೆನ್ನ ಬಾರನೆತ್ತಿದ,
ಅರಸು ಕೂಡಲಸಂಗಮದೇವ ದಂಡವ ಕೊಂಡ.
111
ಗರಿ ತೋರೆ ಗಂಡರೆಂಬವರ ಕಾಣೆ,
ನಿರಿ ಸೋಂಕೆ ಮುನಿ[ಯ]ಲ್ಲ ನೋಡಯ್ಯಾ.
ನಂಟುತನವೇನವನ ಬಂಟತನವೇನವನ
ಹುಲ್ಲುಕಿಚ್ಚು, ಹೊಲೆಯನ ಮೇಳಾಪ-
ಅಲ್ಲಿ ಹುರುಳಿಲ್ಲ, ಕೂಡಲಸಂಗಮದೇವಾ.
112
ಅಳೆವುತ್ತ ಅಳೆವುತ್ತ ಬಳಲುವರಲ್ಲದೆ, ಕೊಳಗ ಬಳಲುವುದೆ
ನಡೆವುತ್ತ ನಡೆವುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ
ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ, ಕೋಲು ಬಳಲುವುದೆ
ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ
ಕೂಡಲಸಂಗಮದೇವಾ, ಅರಸರಿಯದ ಬಿಟ್ಟಿಯೋ.
113
ಒಲೆಯ ಬೂದಿಯ ಬಿಲಿಯಲು ಬೇಡ,
ಒಲಿದಂತೆ ಹೂಸಿಕೊಂಡಿಪ್ಪುದು.
ಹೂಸಿ ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ
ಒಂದನಾಡಹೋಗಿ ಒಂಬತ್ತನಾಡುವ ಡಂಬಕರ ಮೆಚ್ಚ
ಕೂಡಲಸಂಗಯ್ಯ.
114
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು,
ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ.
115
ನಂಬರು ನಚ್ಚರು ಬರಿದೆ ಕರೆವರು,
ನಂಬಲರಿಯರೀ ಲೋಕದ ಮನುಜರು,
ನಂಬಿ ಕರೆದಡೋ ಎನ್ನನೆ ಶಿವನು
ನಂಬದೆ ನಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ.
116
ಹುತ್ತವ ಬಡಿದಡೆ ಹಾವು ಸಾಯಬಲ್ಲುದೆ ಅಯ್ಯಾ
ಅಘೋರ ತಪವ ಮಾಡಿದಡೇನು
ಅಂತರಂಗ ಆತ್ಮಶುದ್ಧಿುಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮದೇವ.
117
ಕಾಮವೇಕೊ, ಲಿಂಗಪ್ರೇಮಿಯೆನಿಸುವಂಗೆ
ಕ್ರೋಧವೇಕೊ, ಶರಣವೇದ್ಯನೆನಿಸುವಂಗೆ
ಲೋಭವೇಕೊ, ಭಕ್ತಿಯ ಲಾಭವ ಬಯಸುವಂಗೆ
ಮೋಹವೇಕೊ ಪ್ರಸಾದವೇದ್ಯನೆನಿಸುವಂಗೆ
ಮದಮತ್ಸರವುಳ್ಳವಂಗೆ ಹೃದಯಶುದ್ಧವೆಲ್ಲಿಯದೊ
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ.
118
ಸಾರ: ಸಜ್ಜನರ ಸಂಗವ ಮಾಡೂದು,
ದೂರ ದುರ್ಜನರ ಸಂಗ ಬೇಡವಯ್ಯಾ.
ಆವ ಹಾವಾದಡೇನು:ವಿಷವೊಂದೆ,
ಅಂತವರ ಸಂಗ ಬೇಡವಯ್ಯಾ.
ಅಂತರಂಗ ಶುದ್ಧವಿಲ್ಲದವರ ಸಂಗವು
ಸಿಂಗಿ, ಕಾಳಕೂಟ ವಿಷವೊ, ಕೂಡಲಸಂಗಯ್ಯಾ.
119
ಹಸಿದು ಎಕ್ಕೆಯ ಕಾಯ ಮೆಲಬಹುದೆ
ನೀರಡಿಸಿ ವಿಷವ ಕುಡಿಯಬಹುದೆ
ಸುಣ್ಣದ, ತುಯ್ಯಲ[ದ] ಬಣ್ಣವೊಂದೆ ಎಂದಡೆ
ನಂಟುತನಕ್ಕೆ ಉಣಬಹುದೆ
ಲಿಂಗಸಾರಾಯ ಸಜ್ಜನರಲ್ಲದವರ
ಕೂಡಲಸಂಗಮದೇವರೆಂತೊಲಿವ.
120
ಎಲವದ ಮರ ಹೂತು ಫಲವಾದ ತೆರನಂತೆ;
ಸಿರಿಯಾದಡೇನು, ಶಿವಭಕ್ತಿುಲ್ಲದನ್ನಕ್ಕ
ಫಲವಾದಡೇನು ಹೇಳಾ, ಹಾವುಮೆಕ್ಕೆಯ ಕಾು
ಕುಲವಿಲ್ಲದ ರೂಹು ಎಲ್ಲದ್ದಡೇನು
ಬಚ್ಚಲ ನೀರು ತಿಳಿದಲ್ಲಿ ಫಲವೇನು
ಅವಗುಣಿಗಳನು ಮೆಚ್ಚ ಕೂಡಲಸಂಗಮದೇವ.
121
ಬಚ್ಚಲ ನೀರು ತಿಳಿದಡೇನು
ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು
ಆಕಾಶದ ಮಾವಿನ ಫಲವೆಂದಡೇನು
ಕೊಯ್ಯಲಿಲ್ಲ, ಮೆಲ್ಲಲಿಲ್ಲ.
ಕೂಡಲಸಂಗನ ಶರಣರ ಅನುಭಾವವಿಲ್ಲದವ
ಎಲ್ಲಿದ್ದಡೇನು, ಎಂತಾದಡೇನು.
122
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು.
ಜಗವೆಲ್ಲವ ಕಾಬ ಕಣ್ಣು,
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು.
ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು,
ಕೂಡಲಸಂಗಮದೇವಾ.
123
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ.
124
ಏತ ತಲೆವಾಗಿದಡೇನು, ಗುರುಭಕ್ತನಾಗಬಲ್ಲುದೆ
ಇಕ್ಕುಳ ಕೈಮುಗಿದಡೇನು, ಭೃತ್ಯಾಚಾರಿಯಾಗಬಲ್ಲುದೆ
ಗಿಳಿಯೋದಿದಡೇನು, ಲಿಂಗವೇದಿಯಾಗಬಲ್ಲುದೆ
ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ
ಅನಂಗಸಂಗಿಗಳೆತ್ತಬಲ್ಲರು!
125
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ:
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ,
ಅಪ್ಪಿದಡೆ ಸುಖವಿಲ್ಲ, ಮೆಲಿದಡೆ ರುಚಿುಲ್ಲ.
ಕೂಡಲಸಂಗಮದೇವಾ, ನಿಜವಿಲ್ಲದವನ ಭಕ್ತಿ.
126
ಸ್ನೇಹ ತಪ್ಪಿದಠಾವಿನಲ್ಲಿ ಗುಣವನರಸುವರೆ ಅಯ್ಯಾ
ಹೂ ಬಾಡಿದಲ್ಲಿ ಪರಿಮಳವನರಸುವರೆ ಅಯ್ಯಾ
ಎನ್ನ ತಂದೆ ಕೂಡಲಸಂಗಮದೇವಾ
ತೊರೆ ಇಳಿದಡೆ ಅಂಬಿಗಂಗೇನುಂಟು.
127
ಆಸೆಗೆ ಹುಟ್ಟಿದ ಪ್ರಾಣಿ ಆಸೆಯನೆ ಕಲಿತು,
ಪುಣ್ಯದ ಪದವಿಯ ಬಯಸಿದಡೆ
ಭವಮಾಲೆಯ ಬರವು ತಪ್ಪದು.
ಬೇಡಲು ಹುಟ್ಟಿದ ಪ್ರಾಣಿಗೆ, ಬೇಡಲು ವಿಧಿಯೆ
ಸೂಳೆಗೆ ಹುಟ್ಟಿದ ಪ್ರಾಣಿಗೆ ನಿಜಗುಣ ಸಜ್ಜನವಪ್ಪುದೆ
ಲಿಂಗ-ಉದಯ, ಶರಣ-ವಿಸ್ತಾರವು ಬಯಸಿದಡೊಳವೆ
ಕೂಡಲಸಂಗಮದೇವಾ, ನಿಮ್ಮಲ್ಲಿ.
128
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇುತ್ತು.
ಕೊಂದಹರೆಂಬುದನರಿಯದೆ
ಬೆಂದ ಒಡಲ ಹೊರೆವುತ್ತಲದೆ.
ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು.
ಕೊಂದವರುಳಿವರೆ ಕೂಡಲಸಂಗಮದೇವಾ.
129
ಹಾವಿನ ಬಾಯ ಕಪ್ಪೆ ಹಸಿದು
ಹಾರುವ ನೊಣಕ್ಕೆ ಆಸೆಮಾಡುವಂತೆ,
ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು
ಮೇಲೇಸುಕಾಲ ಬದುಕುವನೊ
ಕೆಡುವೊಡಲ ನಚ್ಚಿ, ಕಡುಹುಸಿಯನೆ ಹುಸಿದು, ಒಡಲ ಹೊರೆವರ
ಕೂಡಲಸಂಗಮದೇವಯ್ಯನೊಲ್ಲ, ಕಾಣಿರಣ್ಣಾ.
130
ಆರತವಡಗದು, ಕ್ರೋಧ ತೊಲಗದು.
ಕ್ರೂರ ಕುಭಾಷೆ, ಕುಹಕ ಬಿಡದನ್ನಕ್ಕ
ನೀನೆತ್ತಲು ಶಿವನೆತ್ತಲು ಹೋಗುತ್ತ ಮರುಳೆ.
ಭವರೋಗವೆಂಬ ತಿಮಿರ ತಿಳಿಯದನ್ನಕ್ಕ
ಕೂಡಲಸಂಗಯ್ಯನೆತ್ತ, ನೀನೆತ್ತ ಮರುಳೆ.
131
ಹಾವು ತಿಂದವರ ನುಡಿಸಬಹುದು,
ಗರ ಹೊಡೆದವರ ನುಡಿಸಬಹುದು,
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ.
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ, ಕೂಡಲಸಂಗಮದೇವಾ.
132
ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ,
ದಾರಿ ಸಂಗಡ ಬೇಡ, ದೂರ ನುಡಿಯಲು ಬೇಡ,
ಕೂಡಲಸಂಗನ ಶರಣರಲ್ಲಿ
ಅಚ್ಚಲಿಂಗೈಕ್ಯಂಗೆ ತೊತ್ತಾಗಿಹುದಯ್ಯಾ.
133
ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ,
ದೂರ ದುರ್ಜನರ ಸಂಗವದು ಭಂಗವಯ್ಯಾ.
ಸಂಗವೆರಡುಂಟು:ಒಂದ ಹಿಡಿ, ಒಂದ ಬಿಡು,
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ.
134
ಹೊಲೆಯ ಹೊಲಬಿಗನಾದಡೆ,
ಅವನ ಹೊರೆಯಲಿಪ್ಪುದು ಲೇಸು ಕಂಡಯ್ಯಾ.
ಹೊಲಬುಗೆಡದೆ ಲಿಂಗ ಶರಣೆನ್ನಿರಯ್ಯಾ.
ಹೊಲಬುಗೆಡಬೇಡ, ಶಿವ ಶರಣೆನ್ನಿರಯ್ಯಾ.
ನಮ್ಮ ಕೂಡಲಸಂಗನ ಮಹಾಮನೆಯಲು
ಮಾದಾರ ಚೆನ್ನಯ್ಯ ಹೊಲಬಿಗನಯ್ಯಾ.
135
ದೂಷಕನವನೊಬ್ಬ ದೇಶವ ಕೊಟ್ಟಡೆ,
ಆಸೆಮಾಡಿ ಅವನ ಹೊರೆಯಲಿರಬೇಡ.
ಮಾದಾರ ಶಿವಭಕ್ತನಾದಡೆ,
ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ,
ತೊತ್ತಾಗಿಪ್ಪುದು ಕರ ಲೇಸಯ್ಯಾ.
ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು,
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.
136
 137
 138
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ
‍ಈ ಲೋಕದೊಳಗೆ ಮತ್ತೆ ಅನಂತಲೋಕ
‍‍ಶಿವಲೋಕ, ಶಿವಾಚಾರವಯ್ಯಾ.
‍‍‍ಶಿವಭಕ್ತನಿದ್ದಠಾವೆ ದೇವಲೋಕ, 
‍‍ಭಕ್ತನಂಗಳವೆ ವಾರಣಾಸಿ, ಕಾಯಕವೆ ಕೈಲಾಸ, 
ಇದು ಸತ್ಯ, ಕೂಡಲಸಂಗಮದೇವಾ.
139
ಕಟ್ಟಿದಿರಿನಲ್ಲಿ ಶಿವಭಕ್ತನ ಕಂಡು
ದೃಷ್ಟವಾರಿ ಶರಣೆಂದಡೆ,
ಹುಟ್ಟೇಳು ಜನ್ಮದ ಪಾಪ ಬಿಟ್ಟು ಹಿಂಗುವುದು ನೋಡಾ.
ಮುಟ್ಟಿ ಚರಣಕ್ಕೆರಗಿದಡೆ ತನು[ವ]ಪ್ಪಿದಂತೆ,
ಅಹುದು ಪರುಷ ಮುಟ್ಟಿದಂತೆ.
ಕರ್ತೃ ಕೂಡಲಸಂಗನ ಶರಣರ ಸಂಗವು
ಮತ್ತೆ ಭವಮಾಲೆಗೆ ಹೊದ್ದಲೀಯದು ನೋಡಾ.
140
ಆರಾರ ಸಂಗವೇನೇನ ಮಾಡದಯ್ಯಾ
ಕೀಡೆ ಕೊಂಡಲಿಗನಾಗದೆ ಅಯ್ಯಾ
ಚಂದನದ ಸನ್ನಿಧಿಯಲ್ಲಿ ಪರಿಮಳ ತಾಗಿ
ಬೇವು, ಬೊಬ್ಬುಲಿ, ತರಿಯ ಗಂಧಂಗಳಾಗವೆ
ನಮ್ಮ ಕೂಡಲಸಂಗನ ಶರಣರ ಸನ್ನಿಧಿುಂದ
ಕರ್ಮ ನಿರ್ಮಳವಾಗದಿಹುದೆ.
141
ಎಂತಹವನಾದಡೇನು, ಲಿಂಗವ ಮುಟ್ಟದವನೆ ಕೀಳುಜಾತಿ.
ಕುಲವಹುದು ತಪ್ಪದು ಲಿಂಗ ಮುಟ್ಟಲೊಡನೆ,
ಹೊನ್ನಹುದು ತಪ್ಪದು ಪರುಷ ಮುಟ್ಟಲೊಡನೆ.
ಕೂಡಲಸಂಗಮದೇವನೊಲ್ಲ ಸರ್ವಸಂದೇಹಿಗಳ.
142
ಓದಿದಡೇನು, ಕೇಳಿದಡೇನು, ಶಿವಪಥವನರಿಯದನ್ನಕ್ಕ
ಓದಿತ್ತು ಕಾಣಿರೋ ಶುಕನು, ಶಿವಜ್ಞಾನವನರಿಯದನ್ನಕ್ಕ.
ಓದಿದ ಫಲವು ಮಾದಾರ ಚೆನ್ನಯ್ಯಂಗಾುತ್ತು
ಕೂಡಲಸಂಗಮದೇವಾ.
143
ಹಾವಿನ ಡೊಂಕು ಹುತ್ತಕ್ಕೆ ಸಸಿನ,
ನದಿಯ ಡೊಂಕು ಸಮುದ್ರಕ್ಕೆ ಸಸಿನ,
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.
144
ಭಕ್ತನ ಮುಖದರ್ಪಣದಲ್ಲಿ ಲಿಂಗವ ಕಾಣಬಹುದು,
ಭಕ್ತದೇಹಿಕ ದೇವ ಅನಿಮಿಷನಾಗಿ !
ಕೂಡಲಸಂಗಮದೇವ
ಭಕ್ತನ ನುಡಿಯ ನಡುವೆ ರಾಶಿಯಾಗಿಪ್ಪನು.
145
ಭಕ್ತಿ ಎಂತಹದಯ್ಯಾ
ದಾಸಯ್ಯ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ಸಿರಿಯಾಳ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ನಮ್ಮ ಬಲ್ಲಾಳ ಮಾಡಿದಂತಹದಯ್ಯಾ.
ಭಕ್ತಿ ಎಂತಹದಯ್ಯಾ
ಕೂಡಲಸಂಗಮದೇವಾ, ನೀ ಬಾಣನ ಬಾಗಿಲ ಕಾದಂತಹದಯ್ಯಾ.
146
ಮುನ್ನಿನವರು ಹೋದ ದಾರಿ ಭಯ ಕಾಣಿರಣ್ಣಾ,
ಬಲ್ಲಾಳನ ವಧುವಿನೊಡನೆ ಸರಸವನಾಡಿದಂದಿಂದ ಭಯ ಕಾಣಿರಣ್ಣಾ,
ಸಿರಿಯಾಳನ ಮಗನ ಬೇಡಿದಂದಿಂದ ಭಯ ಕಾಣಿರಣ್ಣಾ.
ದಾಸನ ವಸ್ತ್ರವ ಸೀಳಿದಂದಿಂದ ಭಯ ಕಾಣಿರಣ್ಣಾ.
ಅಘಟಿತಘಟಿತರು, ವಿಪರೀತಚರಿತ್ರರು-
ಕೂಡಲಸಂಗನ ಶರಣರು ನಡೆದ ದಾರಿ ಭಯ ಕಾಣಿರಣ್ಣಾ.
147
ದೇವನೊಳ್ಳಿದನೆಂದು ಮುಯ್ಯಾನಲು ಬೇಡ,
ತರಕಟಗಾಡಿದನೊಳ್ಳಿದನೆ
ಅಳಿಸುವ ನಗಿಸುವನೊಳ್ಳಿದನೆ
ಬೆಚ್ಚದೆ ಬೆದರದೆ ತೊತ್ತುತನವ ಮಾಡಲು,
ತನ್ನನೀವ ಕೂಡಲಸಂಗಮದೇವ.
148
ನೆರೆ ನಂಬೋ ನೆರೆ ನಂಬೋ ಧರಧುರವಿಲ್ಲದೆ ಸಾಮವೇದಿಗಳಂತೆ,
ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ,
ನೆರೆ ನಂಬೋ ನೆರೆ ನಂಬೋ ಸಿರಿಯಾಳ-ಚಂಗಳೆಯಂತೆ,
ನೆರೆ ನಂಬೋ ನೆರೆ ನಂಬೋ ಸಿಂಧು-ಬಲ್ಲಾಳನಂತೆ,
ನೆರೆ ನಂಬಿದೆಯಾದಡೆ ತನ್ನನೀವ ಕೂಡಲಸಂಗಮದೇವ.
149
ಬಲ್ಲಿದರೊಡನೆ ಬವರವಾದಡೆ ಗೆಲಲುಂಟು, ಸೋಲಲುಂಟು,
ಕ[ಳ]ನೊಳಗೆ ಭಾಷೆ ಪೂರಾಯವಯ್ಯಾ.
ನಮ್ಮ ಕೂಡಲಸಂಗನ ಶರಣರಿಗೆ ಮಾಡಿ ಮಾಡಿ
ಧನ ಸವೆದು ಬಡವನಾದಡೆ
ಆ ಭಕ್ತನು ಆ ಲಿಂಗಕ್ಕೆ ಪೂಜೆಯಹನು.
150
ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು
ಶ್ರೀಗಂಧದ ಸನ್ನಿಧಿಯಲು ಪರಿಮಳವಾಗವೆ
ಲಿಂಗವಂತನ ಸನ್ನಿಧಿುಂದ ಹಿಂದಣ ದುಸ್ಸಂಗವು ಕೆಡುವುದು.
ಕೂಡಲಸಂಗಮದೇವಯ್ಯಾ,
ಸಿರಿಯಾಳನ ಸಾರಿರ್ದ ನರರೆಲ್ಲಾ ಸುರರಾಗರೆ.
151
ಪರುಷದ ಹೊರೆಯಲ್ಲಿ ಕಬ್ಬುನವಿದ್ದು ಹೊನ್ನಾುತ್ತು, ನೋಡಿರೆ !
ಅವ್ವಾ ಚಂಗಳೆ, ನೀನಿದ್ದೇಳು ಕೇರಿಯವರು
ಲಿಂಗದ ನೋಂಪಿಯ ನೋಂತರೆ, ಹೇಳಾ
ಕೂಡಲಸಂಗಮದೇವಂಗೆ
ಚೀಲಾಳನೆಂಬ ಬಾುನವನಿಕ್ಕಿದರೆ ಹೇಳಾ.
152
ಗೀತವ ಬಲ್ಲಾತ ಜಾಣನಲ್ಲ, ಮಾತ ಬಲ್ಲಾತ ಜಾಣನಲ್ಲ.
ಜಾಣನು ಜಾಣನು, ಆತ ಜಾಣನು
ಲಿಂಗವ ನೆರೆ ನಂಬಿದಾತ ಜಾಣನು,
ಜಂಗಮಕ್ಕೆ ಸವೆಸುವಾತ ಆತ ಜಾಣನು,
ಜವನ ಬಾಯಲು ಬಾಲವ ಕೊಯ್ದುಹೋದಾತ ಆತ ಜಾಣನು,
ನಮ್ಮ ಕೂಡಲಸಂಗನ ಶರಣರನು.
153
ಲೇಸೆನಿಸಿಕೊಂಡು ಅಯ್ದು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ನಾಲ್ಕು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ಮೂರು ದಿವಸ ಬದುಕಿದಡೇನು
ಲೇಸೆನಿಸಿಕೊಂಡು ಎರಡು ದಿವಸ ಬದುಕಿದಡೇನು
ಜೀವಿತಂ ಶಿವಭಕ್ತಾನಾಂ ವರಂ ಪಂಚ ದಿನಾನಿ ಚ
ನಾಜಕಲ್ಪಸಹಸ್ರಾಣಿ ಭಕ್ತಿಹೀನಸ್ಯ ಶಾಂಕರಿ
ಎಂದುದಾಗಿ ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೊ!
154
ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು
ಕೂಡಲಸಂಗಮದೇವಾ.
155
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು-
ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ
ಕಾಡ ಮೃಗವೊಂದಾಗಿರಲಾಗದೆ, ದೇವಾ
ಊರ ಮೃಗವೊಂದಾಗಿರಲಾಗದೆ, ಹರನೆ
ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ_
ವನವಾಸ, ನರವಿಂಧ್ಯ ಕಾಣಿರಣ್ಣಾ.
156
ಹೊತ್ತಾರೆ ಎದ್ದು ಶಿವಲಿಂಗದೇವನ
ದೃಷ್ಟವಾರಿ ನೋಡದವನ ಸಂಸಾರವೇನವನ
ಬಾಳುವೆಣನ ಬೀಳುವೆಣನ ಸಂಸಾರವೇನವನ
ನಡೆವೆಣನ ನುಡಿವೆಣನ ಸಂಸಾರವೇನವನ
ಕರ್ತು ಕೂಡಲಸಂಗಾ
ನಿಮ್ಮ ತೊತ್ತುಗೆಲಸ ಮಾಡದವನ ಸಂಸಾರವೇನವನ.
157
ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ,
ನೆಲನಾಳ್ವನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ.
ಮೊಲನಿಂದ ಕರಕಷ್ಟ ನರನ ಬಾಳುವೆ,
ಸಲೆ ನಂಬೊ ನಮ್ಮ ಕೂಡಲಸಂಗಮದೇವನ.
158
ಉತುಪತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ
ಮತ್ತೆ ದುರಿತಂಗಳ ಹೆರುವ ಹೇಗತನವೇಕಯ್ಯಾ
ಮೃತ್ಯುವಿನ ಬಾುಗೆ ಒಳಗಾಗಲೇಕೆ
ಒತ್ತೊತ್ತೆಯ ಜನನವ ಗೆಲುವಡೆ ಕರ್ತನ ಪೂಜಿಸು
ನಮ್ಮ ಕೂಡಲಸಂಗಮದೇವನ.
159
ಮನವೆ ಸರ್ಪ, ತನು ಹೇಳಿಗೆ :
ಹಾವಿನೊಡತಣ ಹುದುವಾಳಿಗೆ !
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೆ ಗಾರುಡ, ಕೂಡಲಸಂಗಮದೇವಾ.
160
ನರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗದ ಮುನ್ನ,
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ,
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ,
ಮುಪ್ಪಿಂದೊಪ್ಪವಳಿಯದ ಮುನ್ನ,
ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವನ.
161
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟುಕೊಟ್ಟು
ರಕ್ಷಿತವ ಮಾಡುವ ಭರವ ನೋಡಾ.
ಮಹಾದಾನಿ ಕೂಡಲಸಂಗಯ್ಯನ ಪೂಜಿಸಿ
ಬದುಕೋ ಕಾಯ ನಿಶ್ಚೈಸದೆ.
162
ಹಂಜರ ಬಲ್ಲಿತ್ತೆಂದು ಅಂಜದೆ ಓದುವ ಗಿಳಿಯೆ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ, ನಿನ್ನ ಮನದಲ್ಲಿ.
ಮಾಯಾಮಂಜರ ಕೊಲುವಡೆ ನಿನ್ನ ಹಂಜರ ಕಾವುದೆ
ಕೂಡಲಸಂಗಮದೇವನಲ್ಲದೆ.
163
 164
ಎಲೆ ಎಲೆ ಮಾನವಾ, ಅಳಿಯಾಸೆ ಬೇಡವೋ,
ಕಾಳ, ಬೆಳೆದಿಂಗಳು, ಸಿರಿ ಸ್ಥಿರವಲ್ಲ.
ಕೇಡಿಲ್ಲದ ಪದವಿ
ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು.
165
ಎಂತಕ್ಕೆ ಎಂತಕ್ಕೆ
ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣು ಓ !
ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣು ಓ !
ಮರಳಿ ಭವಕ್ಕೆ ಬಾಹೆ, ಬಾರದಿಹೆ,
ಕರ್ತು ಕೂಡಲಸಂಗಂಗೆ ಶರಣೆನ್ನು ಓ !
166
ಶಕುನವೆಂದೆಂಬೆ, ಅವಶಕುನವೆಂದೆಂಬೆ.
ನಿಮ್ಮವರು ಅಳಲಿಕೆ ಅಂದೇಕೆ ಬಂದೆ
ನಿಮ್ಮವರು ಅಳಲಿಕೆ ಇಂದೇಕೆ ಹೋದೆ
ನೀ ಹೋಹಾಗಳಕ್ಕೆ ! ಬಾಹಾಗಳಕ್ಕೆ !
ಅಕ್ಕೆ ಬಾರದ ಮುನ್ನ ಪೂಜಿಸು
ಕೂಡಲಸಂಗಮದೇವನ.
167
ನಿಮಿಷದ ನಿಮಿಷಂ ಭೋ, ಕ್ಷಣದೊಳಗರ್ಧಂ ಭೋ,
ಕಣ್ಣುಮುಚ್ಚಿ ಬಿಚ್ಚುವಿನಿಸು ಬೇಗಂ ಭೋ,
ಸಂಸಾರದಾಗುಂ ಭೋ, ಸಂಸಾರದ ಹೋಗುಂ ಭೋ,
ಸಂಸಾರಂ ಭೋ :
ಕೂಡಲಸಂಗಮದೇವ ಮಾಡಿದ
ಮಾಯಂ ಭೋ, ಅಭ್ರಚ್ಛಾಯಂ ಭೋ.
168
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು
ಹರಿದು ಹೆದ್ದೊರೆಯು, ಕೆರೆ ತುಂಬಿದಂತಯ್ಯಾ,
ನೆರೆಯದ ವಸ್ತು ನೆರೆವುದು ನೋಡಯ್ಯಾ,
ಅರಸು ಪರಿವಾರ ಕೈವಾರ ನೋಡಯ್ಯಾ.
ಪರಮ ನಿರಂಜನನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲುಕೊಂಡಂತೆ,
ಕೂಡಲಸಂಗಮದೇವಾ.
169
ಹೊಯ್ದಡೆ ಹೊಯ್ಗಳು ಕೈಯ ಮೇಲೆ,
ಬೈದಡೆ ಬೈಗಳು ಕೈಯ ಮೇಲೆ.
ಹಿಂದಣ ಜನನವೇದಡಾಗಲಿ,
ಇಂದಿನ ಭೋಗವು ಕೈಯ ಮೇಲೆ.
ಕೂಡಲಸಂಗಮದೇವಯ್ಯಾ
ನಿಮ್ಮ ಪೂಜಿಸಿದ ಫಲ ಕೈಯ ಮೇಲೆ.
170
ಆದ್ಯರ ವಚನ ಪರುಷ ಕಂಡಣ್ಣಾ;
ಸದಾಶಿವನೆಂಬ ಲಿಂಗ[ವು] ನಂಬುವುದು,
ನಂಬಲೊಡನೆ ನೀ ವಿಜಯ ಕಂಡಣ್ಣಾ.
ಅಧರಕ್ಕೆ ಕಹಿ, ಉದರಕ್ಕೆ ಸಿಹಿ
ಕೂಡಲಸಂಗನ ಶರಣರ ವಚನ ಬೇವ ಸವಿದಂತೆ.
171
ಹೊತ್ತಾರೆ ಎದ್ದು, ಅಗ್ಫವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.
172
ಅಚ್ಚಿಗವೇಕಯ್ಯಾ ಸಂಸಾರದೊಡನೆ ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು.
173
ಅಂದು ಇಂದು ಮತ್ತೊಂದೆನಬೇಡ,
ದಿನವಿಂದೇ `ಶಿವ ಶರಣೆಂ'ಬವಂಗೆ,
ದಿನವಿಂದೇ 'ಹರ ಶರಣೆಂ'ಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.
174
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದು,
ಮಾಡಿದ ಪೂಜೆಯ ನೋಡುವುದಯ್ಯಾ.
ಶಿವತತ್ವಗೀತವ ಪಾಡುವುದು,
ಶಿವನ ಮುಂದೆ ನಲಿದಾಡುವುದಯ್ಯಾ.
ಭಕ್ತಿಸಂಭಾಷಣೆಯ ಮಾಡುವುದು,
ನಮ್ಮ ಕೂಡಲಸಂಗನ ಕೂಡುವುದು.
175
ಆಳಿಗೊಂಡಹರೆಂದು ಅಂಜಲದೇಕೆ
ನಾಸ್ತಿಕವಾಡಿಹರೆಂದುನಾಚಲದೇಕೆ
ಆರಾದಡಾಗಲಿ ಶ್ರೀಮಹಾದೇವರಿಗೆ ಶರಣೆನ್ನಿ. ಏನೂ ಅರಿಯೆನೆಂದು
ಮೋನಗೊಂಡಿರಬೇಡ.
ಕೂಡಲಸಂಗಮದೇವರ ಮುಂದೆ ದಂದಣ ದತ್ತಣಯೆನ್ನಿ.
176
 177
ಅಂಕ ಕಳನೇರಿ ಕೈಮರೆದಿರ್ದಡೆ ಮಾರಂಕ ಬಂದಿರಿವುದ ಮಾಂಬನೆ 
ನಿಮ್ಮ ನೆನಹ ಮನ ಮರೆದಿರ್ದಡೆ ಮಾಯೆ ತನುವನಂಡಲೆವುದ ಮಾಬುದೆ 
ಕೂಡಲಸಂಗಯ್ಯನ ನೆನೆದಡೆ, ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.
178
ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ,
ಶಿವಶರಣರ ಮುಂದೆ ಆಡಿಹರಯ್ಯಾ ಹಾಡಿಹರಯ್ಯಾ.
ಕೋಡಂಗಿಯಾಟವನಾಡಿದ ಭಕ್ತಂಗೆ ಬೇಡಿತ್ತನೀವ,
ನಮ್ಮ ಕೂಡಲಸಂಗಮದೇವ.
179
ಹೊಲಬುಗೊಂಡರಸಬೇಡ, ಬಿಲಿತು ತರಬೇಡ,
ಒಲಿದೊಮ್ಮೆ ಶಿವಶರಣೆನ್ನಿರಯ್ಯಾ.
ಒಂದು ಸೊಲ್ಲಿಂಗೆ ಮುಕ್ತಿ ಸಿದ್ಧಿ,
ಕೂಡಲಸಂಗಮದೇವ ಭಕ್ತಿಲಂಪಟನಾಗಿ.
180
ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ.
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ.
ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾುತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
181
ಹಸಿವಾದಡುಂಬುದನು, ಸತಿಯ ಸಂಭೋಗವನು
ಆನಾಗಿ ನೀ ಮಾಡೆಂಬವರುಂಟೆ
ಮಾಡುವುದು, ಮಾಡುವುದು ಮನಮುಟ್ಟಿ,
ಮಾಡುವುದು, ಮಾಡುವುದು ತನುಮುಟ್ಟಿ,
ತನುಮುಟ್ಟಿ ಮನಮುಟ್ಟದಿರ್ದಡೆ
ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ.
182
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.
183
ಬಂಡಿ ತುಂಬ ಪತ್ರೆಯ ತಂದು ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಿ.
ತಾಪತ್ರಯವ ಕಳೆದು ಪೂಜಿಸಿ, ತಾಪತ್ರಯವ ಲಿಂಗನೊಲ್ಲ.
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ.
184
ಭಕ್ತನಾಗಿ ಲಿಂಗ ಜಂಗಮವ ಪೂಜಿಸಬೇಕು.
ಭಕ್ತನಾಗಿ ತನ್ನ ತಾ ಪೂಜಿಸಿಕೊಂಬುದು ಎಂತಯ್ಯಾ
ಸ್ವಾಮಿಭೃತ್ಯಸಂಬಂಧವು ಎಂತಯ್ಯಾ ಪೂರುಸುವುದು
ಕೂಡಲಸಂಗಮದೇವಾ, ಕಣ್ಣಕಟ್ಟಿ ಕನ್ನಡಿಯ ತೋರುವಂತೆ !
185
ಭೂಮಿಯೊಳಗೆ ನಿಧಾನವಿದ್ದುದ
ಅಂಜನವುಳ್ಳವರು ತೋರಿರಯ್ಯಾ.
ಅಂಜಲುಬೇಡ ಕಂಡಾ, ಮನದಲ್ಲಿ ಸಂದೇಹವ ಮಾಡದಿರಾ.
ಜಂಗಮದೊಳಗೆ ಲಿಂಗಯ್ಯನಿದ್ದಾನೆಂದು ನಂಬುಗೆಯುಳ್ಳಡೆ
ತೋರುವ ಕೂಡಲಸಂಗಯ್ಯ.
186
ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ,
ಜಂಗಮದೊಳಗೆ ಲಿಂಗಯ್ಯ ಸನ್ನಹಿತನಾಗಿಪ್ಪ.
`ಸ್ಥಾವರ ಜಂಗಮ ಒಂದೆ' ಎಂದುದು ಕೂಡಲಸಂಗನ ವಚನ.
187
ಗೀತವ ಹಾಡಿದಡೇನು, ಶಾಸ್ತ್ರ-ಪುರಾಣವ ಕೇಳಿದಡೇನು,
ವೇದವೇದಾಂತವ ನೋಡಿದಡೇನು
ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು
ಎಲ್ಲರಲ್ಲಿ [ಪ್ರಾ]ಜ್ಞರಾದಡೇನು
ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ.
188
ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕೆ ಅಂಜಲೇಬೇಕು,
ದಕ್ಕ ನುಂಗಿದಂತೆ ಬೆರೆತುಕೊಂಡಿರಬೇಡ.
ಬೀಗಿ ಬೆಳೆದ ಕೊನೆವಾಳೆಯಂತೆ ಬಾಗಿಕೊಂಡಿದ್ದಡೆ,
ಬೇಡಿದ ಪದವಿಯನೀವ ಕೂಡಲಸಂಗಮದೇವ.
189
ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು,
ವರ್ಮವನರಿಯದ ಮಾಟ ಸುದಾನದ ಕೇಡು.
ಬಂದ ಸಮಯೋಚಿತವನರಿಯದಿದ್ದಡೆ
ನಿಂದಿರಲೊಲ್ಲ ಕೂಡಲಸಂಗಮದೇವ.
190
ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ
ನಮ್ಮ ಶರಣರಿಗುರಿ[ಯ]ರಗಾಗಿ ಕರಗದನ್ನಕ್ಕ,
ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ.
ಕೂಡಲಸಂಗಮದೇವಾ,
ಬರಿಯ ಮಾತಿನ ಮಾಲೆಯಲೇನಹುದು.
191
ಲಾಂಛನ ಹೊರಗೆ ಬಂದಿರಲು, ಒಳಗೆ ಲಿಂಗಾರ್ಚನೆಯೆಂತಯ್ಯಾ
ಮುಖದಲ್ಲಿ ಕಟ್ಟಿದ ಕನ್ನಡಿ, ಮೂಗಿನ ಮೇಲಣ ಕತ್ತಿ !
ಸಮಯಾಚಾರವೆಂತುಟಯ್ಯಾ ರಿ ಕೂಡಲಸಂಗಮದೇವಯ್ಯಾ.
192
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ;
ಅದು ಬೇಡದು, ಬೆಸಗೊಳ್ಳದು,
ತಂದೊಮ್ಮೆ ನೀಡಬಹುದು.
ಕಾಡುವ ಬೇಡುವ ಜಂಗಮ ಬಂದಡೆ,
ನೀಡಲುಬಾರದು ಕೂಡಲಸಂಗಮದೇವಾ.
193
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.
194
ನಾಗಂಗೆ ಹೊಸತನಿಕ್ಕಿಹೆವೆಂಬರು,
ನಾಗ ಬಂದಡೆ ಕೋಲ ಕಳೆದುಕೊಂಬರು.
ಆಗದಯ್ಯಾ, ಜಂಗಮಲಿಂಗವೆಂಬ ಶಬ್ದವಾಗದಯ್ಯಾ,
ಕೂಡಲಸಂಗಮದೇವನಲ್ಲಿ ಸಿಂಧುಬಲ್ಲಾಳಂಗಲ್ಲದೆ ಆಗದಯ್ಯಾ.
195
ಎರೆದಡೆ ನನೆಯದು, ಮರೆದಡೆ ಬಾಡದು,
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ;
ಕೂಡಲಸಂಗಮದೇವಾ, ಜಂಗಮಕ್ಕೆರೆದಡೆ ಸ್ಥಾವರ ನನೆುತ್ತು.
196
ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ,
ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ,
ಜಂಗಮವಾಪ್ಯಾಯನವಾದಡೆ ಲಿಂಗ ಸಂತ್ಟುಯಹುದಯ್ಯಾ.
ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ
ಅಹಂ ತುಷ್ಟೋsಡಿಸ್ಮ್ಯುಮಾದೇವಿ ಉಭಯೋರ್ಲಿಂಗಜಂಗಮಾತ್
ಇದು ಕಾರಣ ಕೂಡಲಸಂಗಮದೇವರಲ್ಲಿ
ಜಂಗಮವಾಪ್ಯಾಯನವಾದಡೆ ಲಿಂಗಸಂತ್ಟು.
197
ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು.
ಕಳ್ಳನಾಣ್ಯ ಸಲುಗೆಗೆ ಸಲ್ಲದು,
ಕಳ್ಳನಾಣ್ಯವ ಸಲಲೀಯರಯ್ಯಾ.
ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ
ಕೂಡಲಸಂಗಮದೇವಾ.
198
ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲಾ ಕೇಳಿರಣ್ಣಾ:
ಹಾಗದ ಕೆರಹ ಹೊರಗೆ ಕಳೆದು,
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ.
ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪುದು.
ಕೂಡಸಂಗನ ಶರಣರಿಗೆ ಸವೆಸಲೇಬೇಕು.
199
ಉಂಡುದು ಬಂದಿತ್ತೆಂಬ ಸಂದೇಹಿ ಮಾನವ ನೀ ಕೇಳಾ:
ಉಂಡುದೇನಾುತ್ತೆಂಬುದ ನಿನ್ನ ನೀ ತಿಳಿದು ನೋಡಾ,
ಉಂಡುದು ಆಗಳೆ ಅಪೇಯವಾುತ್ತು.
ಆ ಉಂಡುದನುಣಬಂದ ಹಂದಿಯ ಬಾಳುವೆಯವರ ಕಂಡು
ಆನು ಮರುಗುವೆನಯ್ಯಾ, ಕೂಡಲಸಂಗಮದೇವಯ್ಯಾ.
200
ಆಯುಷ್ಯವುಂಟು ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ;
ಆಯುಷ್ಯ ತೀರಿ ಪ್ರಳಯ ಬಂದಡೆ ಆ ಅರ್ಥವನುಂಬುವರಿಲ್ಲ.
ನೆಲನನಗೆದು ಮಡುಗದಿರಾ, ನೆಲ ನುಂಗಿದಡುಗುಳುವುದೆ
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ !
ನಿನ್ನ ಮಡದಿಗಿರಲೆಂದಡೆ, ಆ ಮಡದಿಯ ಕೃತಕ ಬೇರೆ;
ನಿನ್ನ ಒಡಲು ಕಡೆಯಲು ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ,
ಕೂಡಲಸಂಗನ ಶರಣರಿಗೆ ಒಡನೆ ಸವೆಸುವುದು.
201
ತನು ಮನ ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಮುಂದಿಟ್ಟುಕೊಂಡು
ಒಳಲೊಟೆಯ ನುಡಿವವರು ನೀವೆಲ್ಲರೂ ಕೇಳಿರೆ.
ತಲಹಿಲ್ಲದ ಕೋಲು ಹೊಳ್ಳು ಹಾರುಹುದಲ್ಲದೆ
ಗುರಿಯ ತಾಗಬಲ್ಲುದೆ
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ್ಕ
ಕೂಡಲಸಂಗಮದೇವನೆಂತೊಲಿವನಯ್ಯಾ
202
ತನು-ಮನ-ಧನವೆಂಬ ಮೂರು ಕತ್ತಿುವೆ,
ಸಲೆ ಮೂಗಿನ ಮೇಲೆ ಅಯ್ಯಾ,
ಲಿಂಗ ಜಂಗಮಕ್ಕೆ ಮಾಡಿಹೆನೆಂಬವಂಗೆ
ಇದು ಕಾರಣ, ಕೂಡಲಸಂಗನ ಶರಣರಿಗೆ ಅಂಜಲೇಬೇಕು.
203
ಸರ್ವಭೂತಾತ್ಮನೆಂಬ ಮಾತಿನ ಮಾತಿನಲ್ಲಿ ಹೋಗದು,
ತನುಮನಧನವ ಸವೆಸಲೇಬೇಕು.
ನಮ್ಮ ಕೂಡಲಸಂಗನ ಶರಣರಿಗೆ ಅಂಜಲೇಬೇಕು.
204
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಹೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ,
ಉಂಡು, ತಂಬುಲಗೊಂಡು ಹೋಹುದಲ್ಲ.
ತನು ಮನ ಧನವ ಸಮರ್ಪಿಸದವರ
ಕೂಡಸಂಗಮದೇವರೆಂತೊಲಿವ.
205
ತನುವ ಕೊಟ್ಟು ಗುರುವನೊಲಿಸಬೇಕು,
ಮನವ ಕೊಟ್ಟು ಲಿಂಗವನೊಲಿಸಬೇಕು,
ಧನವ ಕೊಟ್ಟು ಜಂಗಮವನೊಲಿಸಬೇಕು.
ಈ ತ್ರಿವಿಧವ ಹೊರಗು ಮಾಡಿ,
ಹರೆಯ ಹೊುಸಿ, ಕುರುಹ ಪೂಜಿಸುವ ಗೊರವರ ಮೆಚ್ಚ
ಕೂಡಲಸಂಗಮದೇವ.
206
ಆಡಿದಡೇನು, ಹಾಡಿದಡೇನು, ಓದಿದಡೇನು ತ್ರಿವಿಧದಾಸೋಹವಿಲ್ಲದನ್ನಕ್ಕರಿ
ಆಡದೆ ನವಿಲು ಹಾಡದೆ ತಂತಿ ಓದದೆ ಗಿಳಿ
ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ.
207
ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ.
208
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ.
ಮಾತಿನ ಮಾತಿನ ಕವುಳುಗೋಲ ಶ್ರವದಲ್ಲಿ
ಸತ್ತವರೊಳರೆ ಅಯ್ಯಾ
ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ.
209
ಮಾತಿನ ಮಾತಿನಲಪ್ಪುದೆ ಭಕ್ತಿ
ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ,
ಧನ ಸವೆಯದನ್ನಕ್ಕ ಅಪ್ಪುದೆ ಭಕ್ತಿ
ಕೂಡಲಸಂಗಮದೇವನೆಲುದೋರೆ ಸರಸವಾಡುವನು
ಸೈರಿಸದನ್ನಕ್ಕ ಅಪ್ಪುದೆ ಭಕ್ತಿ.
210
ಹಾವಸೆಗಲ್ಲ ಮೆಟ್ಟಿ ಹರಿದು, ಗೊತ್ತ ಮುಟ್ಟಬಾರದಯ್ಯಾ,
ನುಡಿದಂತೆ ನಡೆಯಲು ಬಾರದಯ್ಯಾ.
ಕೂಡಲಸಂಗನ ಶರಣರ ಭಕ್ತಿ, ಬಾಳ ಬಾಯಧಾರೆ.
211
ಭಕ್ತಿಯೆಂಬುದ ಮಾಡಬಾರದು,
ಕರಗಸದಂತೆ ಹೋಗುತ್ತ ಕೊರೆದು, ಬರುತ್ತ ಕೊಯ್ವುದು.
ಘಟಸರ್ಪನಲ್ಲಿ ಕೈದುಡುಕಿದಡೆ ಹಿಡಿವುದ ಮಾಬುದೆ
ಕೂಡಲಸಂಗಮದೇವಾ.
212
ಹಲವುಕಾಲ ಧಾವತಿಗೊಂದು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ,
ಸಲೆ ನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು.
[ಸು]ಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ-
ಶಿವನ ಸೊಮ್ಮ ಶಿವಂಗೆ ಮಾಡದೆ, ಅನ್ಯಕ್ಕೆ ಮಾಡಿದಡೆ,
ತನ್ನ ಭಕ್ತಿ ತನ್ನನೆ ಕೆಡಿಸುವುದು ಕೂಡಲಸಂಗಮದೇವಾ!
213
ನಚ್ಚಿದೆನೆಂದಡೆ ಮಚ್ಚಿದೆನೆಂದಡೆ, ಸಲೆ ಮಾರುವೋದೆನೆಂದಡೆ
ತನುವನಲ್ಲಾಡಿಸಿ ನೋಡುವೆ ನೀನು.
ಮನವನಲ್ಲಾಡಿಸಿ ನೋಡುವೆ ನೀನು.
ಧನವನಲ್ಲಾಡಿಸಿ ನೋಡುವೆ ನೀನು.
ಇವಕ್ಕಂಜದಿದ್ದಡೆ ಭಕ್ತಿಕಂಪಿತ [ನೀನು] ಕೂಡಲಸಂಗಮದೇವಾ.
214
ಕವುಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ
ಕಳನೇರಿ ಕಾದುವುದರಿದು ನೋಡಾ.
ಬಣ್ಣವಿಟ್ಟು ನುಡಿದಲ್ಲಿ ಫಲವೇನು
ಚಿನ್ನಗೆಯ್ಕವನ್ನಾಡುವವನಂತೆ.
ಬಂದ ಸಮಯವನರಿತು, ಇದ್ದುದ ವಂಚಿಸದಿದ್ದಡೆ
ಕೂಡಸಂಗಮದೇವನೊಲಿದು ಸಲಹುವ.
215
ಧನಕ್ಕೆ ಮನವನೊಡ್ಡಿದಡೇನು ಮನಕ್ಕೆ ಧನವನೊಡ್ಡಿದಡೇನು
ತನು, ಮನ, ಧನವ ಮೀರಿ ಮಾತಾಡಬಲ್ಲಡೆ
ಆತ ನಿಸ್ಸೀಮನು, ಆತ ನಿಜೈಕ್ಯನು.
ತನು, ಮನ, ಧನವನುವಾದಡೆ
ಕೂಡಲಸಂಗಮದೇವನೊಲಿವ.
216
ಅರ್ಥ ಪ್ರಾಣ ಅಭಿಮಾನದಲ್ಲಿ ವಂಚನೆುಲ್ಲದಿಹುದೆ ಭಕ್ತಿ,
ಹೆಚ್ಚು ಕುಂದಿಲ್ಲದಿಹುದೆ ಸಮಯಾಚಾರ,
ಜಂಗಮವೆ ಲಿಂಗವೆಂಬುದಕ್ಕೆ ಏನು ಗುಣ
ಮನದ ಲಂಪಟತನ ಹಿಂಗದಾಗಿ
ಒಡೆಯರ ಬರವಿಂಗೆ ಕುನ್ನಿ ಬಾಲವ ಬಡಿದಡೆ
ವೆಚ್ಚವೇನು ಹತ್ತುವುದು ಕೂಡಲಸಂಗಮದೇವಾ.
217
ಹಸಿದು ಬಂದ ಗಂಡಂಗೆ ಉಣಲಿಕ್ಕದೆ,
ಬಡವಾದನೆಂದು ಮರುಗುವ ಸತಿಯ ಸ್ನೆಹದಂತೆ
ಬಂದುದನರಿಯಳು, ಇದ್ದುದ ಸವಸಳು.
ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ
ಕೂಡಲಸಂಗಮದೇವಾ.
218
ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾುತ್ತು,
ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರ ಕಠಿಣವಾುತ್ತು
ಮೊದಲಲ್ಲಿ ಲಿಂಗಭಕ್ತಿ ಹಿತವಾುತ್ತು,
ಕಡೆಯಲ್ಲಿ ಜಂಗಮಭಕ್ತಿ ಕಠಿಣವಾುತ್ತು
ಇದು ಕಾರಣ ಕೂಡಲಸಂಗಮದೇವನವರ ಬಲ್ಲನಾಗಿ ಒಲ್ಲನಯ್ಯಾ.
219
ಬರಬರ ಭಕ್ತಿ ಅರೆಯಾುತ್ತು ಕಾಣಿರಣ್ಣಾ :
ಮೊದಲದಿನ ಹಣೆಮುಟ್ಟಿ, ಮರುದಿನ ಕೈಮುಟ್ಟಿ,
ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ.
ಹಿಡಿದುದ ಬಿಡದಿದ್ದಡೆ ಕಡೆಗೆ ಚಾಚುವ,
ಅಲ್ಲದಿದ್ದಡೆ ನಡುನೀರಲದ್ದುವ ನಮ್ಮ ಕೂಡಲಸಂಗಮದೇವ.
220
ಬಿದಿರಲಂದಣವಕ್ಕು, ಬಿದಿರೆ ಸತ್ತಿಗೆಯಕ್ಕು,
ಬಿದಿರಲ್ಲಿ ಗುಡಿಯು ಗೂಡಾರವಕ್ಕು,
ಬಿದಿರಲ್ಲಿ ಸಕಲಸಂಪದವೆಲ್ಲವು,
ಬಿದಿರದವರ ಮೆಚ್ಚ ಕೂಡಲಸಂಗಮದೇವ.
221
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ,
ಬಂಧುಗಳು ಬಂದಾಗಳಿಲ್ಲೆನ್ನ.
ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ,
ಬಂದ ಪುರಾತರಿಗೆ ಇಲ್ಲೆಂಬ,
ಸಾವಾಗ ದೇಹವ ದೇಗುಲಕ್ಕೆ ಒಯ್ಯೆಂಬ,
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ ಕೂಡಲಸಂಗಮದೇವಾ.
222
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ,
ನಾಯ ಹಾಲು ನಾುಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ.
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.
223
ಬಲಿಯ ಭೂಮಿ, ಕರ್ಣನ ಕವಚ, ಖಚರನ ಆಸ್ಥಿ,
ಶಿಬಿಯ ಮಾಂಸ ವೃಥಾ ಹೋುತ್ತಲ್ಲಾ,
ಶಿವಭಕ್ತಿಮತಿಕ್ರಮ್ಯ ಯದ್ದಾನಂ ಚ ವಿದ್ಥೀಯತೇ
ನಿಷ್ಫಲಂ ತು ಭವೇದ್ದಾನಂ ರೌರವಂ ನರಕಂ ವ್ರಜೇತ್
ಇಂತೆಂದುದಾಗಿ, ಕೂಡಲಸಂಗನ ಶರಣರನರಿಯದೆ
ಕೀರ್ತಿವಾರ್ತೆಗೆ ಮಾಡಿದವನ ಧನವು ವೃಥಾ ಹೋುತ್ತಲ್ಲಾ.
224
ಹತ್ತು ಮತ್ತರ ಭೂಮಿ, ಬತ್ತದ ಹಯನು, ನಂದಾದೀವಿಗೆಯ
ನಡೆಸಿಹೆವೆಂಬವರ ಮುಖವ ನೋಡಲಾಗದು,
ಅವರ ನುಡಿಯ ಕೇಳಲಾಗದು.
ಅಂಡಜ, ಸ್ವೇದಜ, ಉದ್ಭಿಜ, ಜರಾಯುಜವೆಂಬ ಪ್ರಾಣಿಗಳಿಗೆ
ಭವಿತವ್ಯವ ಕೊಟ್ಟವರಾರೊ
ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ
ಎನ್ನಿಂದಲೆ ಆುತ್ತು, ಎನ್ನಿಂದಲೆ ಹೋುತ್ತು ಎಂಬವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ
ಕೂಡಲಸಂಗಮದೇವ.
225
ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ ಮಾಡುವ
ಭಕ್ತನ ಮನೆಯದು ಲಂದಣಗಿತ್ತಿಯ ಮನೆ.
ಸರ್ವಜೀವದಯಾಪಾರಿಯೆಂದು ಭೂತದೇಹಕಿಕ್ಕುವನ ಮನೆ
ಸುದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದಡೆ
ತಾಯ ಹೆಸರಾುತ್ತು, ತಂದೆಯ ಹೆಸರಿಲ್ಲ
ಕೂಡಲಸಂಗಮದೇವಾ.
226
ಕಾಲಾಗ್ನಿರುದ್ರನ ಮೇಳಾಪವನರಿಯದವರು
ಕಾಳುಬೇಳೆನುತಿಪ್ಪರಯ್ಯಾ.
ಕಾನನದಡವಿಯಲ್ಲಿ ಕಿಚ್ಚು [ಬೇ]ಳುವೆಯಾಗಿ
ಮಿಕ್ಕಡೊರಲುವ ಬಳ್ಳುವಿನಂತೆ ಇಪ್ಪರಯ್ಯಾ,
ಮನುಜರು ನರವಿಂಧ್ಯದೊಳಗೆ.
ತತ್ಕಾಲಪ್ರೇಮವನರಿಯದೆ ವಿಭವಕ್ಕೆ ಮಾಡಿದ ಭಕ್ತಿ
ಇರುಳು ಸತ್ತಿಗೆಯ ಹಿಡಿುಸಿಕೊಂಬಂತೆ ಕೂಡಲಸಂಗಮದೇವಾ.
227
ಹರ[ಹಿ] ಮಾಡುವುದು ಹರಕೆಯ ಕೇಡು,
ನೆರಹಿ ಮಾಡುವುದು ಡಂಬಿನ ಭಕ್ತಿ.
ಹರ[ಹ]ಬೇಡ, ನೆರಹಬೇಡ
ಬಂದ ಬರವನರಿತು ಮಾಡಬಲ್ಲಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವ.
228
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ
ಕಡಬಡ್ಡಿಯ ಕೊಡಲಾಗದು.
ಬಂದಡೊಂದು ಲೇಸು, ಬಾರದಿದ್ದಡೆರಡು ಲೇಸು.
ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ. ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ.
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ
ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು.
229
ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ,
ಹಿರಿಯರು ನರಮಾಂಸವ ಭುಂಜಿಸುವರೆ
ತನುವುಕ್ಕಿ ಮನವುಕ್ಕಿ ಮಾಡಬೇಕು ಭಕ್ತನು,
ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವಾ.
230
ಬಂದುದ ಕೈಕೊಳ್ಳಬಲ್ಲಡೆ ನೇಮ,
ಇದ್ದುದ ವಂಚನೆಯ ಮಾಡದಿದ್ದಡೆ ನೇಮ.
ನಡೆದು ತಪ್ಪದಿದ್ದಡೆ ಅದು ನೇಮ,
ನುಡಿದು ಹುಸಿಯದಿದ್ದಡೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದಡೆ
ಒಡೆಯರಿಗೊಡವೆಯನೊಪ್ಪಿಸುವುದೆ ನೇಮ.
231
ಹಾಲ ನೇಮ, ಹಾಲ ಕೆನೆಯ ನೇಮ,
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
ಬೆಣ್ಣೆಯ ನೇಮ, ಬೆಲ್ಲದ ನೇಮ,
ಅಂಬಲಿಯ ನೇಮದವರನಾರನೂ ಕಾಣೆ.
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.
232
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
233
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲಿಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ.
234
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
235
ಕೆಡೆ ನಡೆಯದೆ, ಕೆಡೆ ನುಡಿಯದೆ, ಅನ್ಯರ ಪ್ರತಿಪಾದಿಸದಿದ್ದಡೆ
ಏನ ಮಾಡನಯ್ಯಾ ಲಿಂಗವು ಏನ ಕೊಡನಯ್ಯಾ
ತಾನು ಏನ ಬೇಡಿದುದನೀವನಾಗಿ,
ನಂಬುಗೆಯುಳ್ಳ ಶಿವಭಕ್ತಂಗೆ ಇದೇ ದಿಬ್ಯ, ಕೂಡಲಸಂಗಮದೇವಾ.
236
ಸ್ವಾಮಿಭೃತ್ಯಸಂಬಂಧಕ್ಕೆ ಆವುದು ಪಥವೆಂದಡೆ:
ದಿಟವ ನುಡಿವುದು, ನುಡಿದಂತೆ ನಡೆವುದು.
ನುಡಿದು ಹುಸಿವ, ನಡೆದು ತಪ್ಪುವ ಪ್ರಪಂಚಿಯನೊಲ್ಲ
ಕೂಡಲಸಂಗಮದೇವ.
237
ಸತ್ಯವುಳ್ಳ ಭಂಡವ ತುಂಬುವುದಯ್ಯಾ.
ಸುುಧಾನವಯ್ಯಾ, ಸುುಧಾನವಯ್ಯಾ, ಮನ ಧಾರೆವಟ್ಟಲು.
ಕೂಡಲಸಂಗನ ಶರಣರು ಹಿಡಿಯದ ಭಂಡವನು
ಆರಾದಡಾಗಲಿ ಹೋಗಲೀಯರಯ್ಯಾ.
238
ದೇವಲೋಕ ಮತ್ರ್ಯಲೋಕವೆಂಬುದು ಬೇರಿಲ್ಲ ಕಾಣಿರೋ !
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮತ್ರ್ಯಲೋಕ.
ಆಚಾರವೆ ಸ್ವರ್ಗ, ಅನಾಚಾರವೆ ನರಕ. ಕೂಡಲಸಂಗಮದೇವಾ, ನೀವೆ ಪ್ರಮಾಣು.
239
ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ,
`ಅಯ್ಯಾ ಎಂದಡೆ ಸ್ವರ್ಗ, `ಎಲವೊ ಎಂದಡೆ ನರಕ.
ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ
ಕೈಲಾಸವೈದುವುದೆ ಕೂಡಲಸಂಗಮದೇವಾ.
240
ಏನಿ ಬಂದಿರಿ, ಹದುಳಿದ್ದಿರೆ ಎಂದಡೆ ನಿ[ಮ್ಮೈ]ಸಿರಿ ಹಾರಿ ಹೋಹುದೆ
ಕುಳ್ಳಿರೆಂದಡೆ ನೆಲ ಕುಳಿಹೋಹುದೆ ಒಡನೆ ನುಡಿದಡೆ ಸಿರ,
ಹೊಟ್ಟೆಯೊಡೆವುದೆ ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ ಮೂಗ
ಕೊಯ್ವುದ ಮಾಬನೆ ಕೂಡಲಸಂಗಮದೇವಯ್ಯ.
241
 242
ಭಕ್ತಿಯೆಂಬ ನಿಧಾನವ ಸಾದ್ಥಿಸುವಡೆ
ಶಿವಪ್ರೇಮವೆಂಬ ಅನಂಜನವನೆಚ್ಚಿಕೊಂಬುದು,
ಭಕ್ತನಾದವಂಗೆ ಇದೇ ಪಥವಾಗಿರಬೇಕು.
ನಮ್ಮ ಕೂಡಲಸಂಗನ ಶರಣರ ಅನುಭಾವ ಗಜವೈದ್ಯ.
243
ಕಂಡ ಭಕ್ತರಿಗೆ ಕೈಮುಗಿಯುವಾತನೆ ಭಕ್ತ,
ಮೃದುವಚನವೆ ಸಕಲ ಜಪಂಗಳಯ್ಯಾ,
ಮೃದುವಚನವೆ ಸಕಲ ತಪಂಗಳಯ್ಯಾ,
ಸದುವಿನಯವೆ ಸದಾಶಿವನ ಒಲುಮೆಯಯ್ಯಾ.
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
244
ಇತ್ತ ಬಾರಯ್ಯಾ, ಇತ್ತ ಬಾರಯ್ಯಾ ಎಂದು
ಭಕ್ತರೆಲ್ಲರೂ ಕೂರ್ತು ಹತ್ತಿರೆ ಕರೆವುತ್ತಿರಲು,
ಮತ್ತೆ ಕೆಲಕ್ಕೆ ಸಾರ್ದು, ಶರಣೆಂದು ಹಸ್ತ ಬಾಯನೆ ಮುಚ್ಚಿ,
ಕಿರಿದಾಗಿ ಭೃತ್ಯಾಚಾರವ ನುಡಿದು,
ವಿನಯ ತದ್ಧ್ಯಾನವುಳ್ಳಡೆ ಎತ್ತಿಕೊಂಬನಯ್ಯಾ,
ಕೂಡಲಸಂಗಮದೇವ ಪ್ರಮಥರ ಮುಂದೆ.
245
ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು.
ಕರ್ತನಾಗಿ ಕಾಲ ತೊಳೆುಸಿಕೊಂಡಡೆ ಹಿಂದೆ ಮಾಡಿದ ಭಕ್ತಿಗೆ ಹಾನಿ. ಲಕ್ಕಗಾವುದ
ದಾರಿಯ ಹೋಗಿ
ಭಕ್ತನು ಭಕ್ತನ ಕಾಂಬುದು ಸದಾಚಾರ. ಅಲ್ಲಿ ಕೂಡಿ ದಾಸೋಹವ ಮಾಡಿದಡೆ
ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ.
246
ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
247
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ.
248
ಅರ್ಥಕ್ಕೆ ತಪ್ಪಿದಡೇನು, ಪ್ರಾಣಕ್ಕೆ ತಪ್ಪಿದಡೇನು,
ಅಭಿಮಾನಕ್ಕೆ ತಪ್ಪಿದಡೇನು
ಶರಣರು ಶರಣರಲ್ಲಿ ಗುಣವನರಸುವರೆ
ಕೂಡಲಸಂಗನ ಶರಣರು ನೊಂದು ಸೈರಿಸಬೇಕು.
249
ಕಾಣದಠಾವಿನಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು.
ಅದೇನು ಕಾರಣ
ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ !
ಎನ್ನ ಮನದ ತದ್‍ದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು,
ಕೂಡಲಸಂಗಮದೇವಾ.
250
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ,
ಒರೆಗೆ ಬಣ್ಣಕ್ಕೆ ತಂದೆನ್ನ ಪುಟವನಿಕ್ಕಿ ನೋಡಯ್ಯಾ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ,
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲಹು
ಕೂಡಲಸಂಗಮದೇವಾ.
251
ವೇದಾದಿ ನಾಮ ನಿರ್ನಾಮ ಮಹತ್ತತ್ತ್ಜಂ ಮದೀಶ್ವರಃ
ಗುರೂಕ್ತಮಂತ್ರಮಾರ್ಗೇಣ ಇಷ್ಟಲಿಂಗಂ ತು ಶಾಂಕರಿ
ಎಂದುದಾಗಿ, ವಚನಪಾತಕವೆನ್ನ, ವಚನದೋಷಂಗಳೆನ್ನ,
ಕಾಡಿ ಕಾಡಿ ಕೆಡಿಸಿಹವೆನ್ನ ! ಕೂಡಲಸಂಗಮದೇವಾ `ಅಹಂ ಎಂಬ ಅಹಂಕಾರವೆನ್ನ.
252
ಅವರಿವರೆನ್ನದೆ ಚರಣಕ್ಕೆರಗಲು ಅಯ್ಯತನವೇರಿ,
[ಬಿ]ಬ್ಬನೆ ಬಿರಿವೆ ನಾನು, ಕೆಚ್ಚು ಬೆಳೆುತ್ತಯ್ಯಾ.
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು ಬೆಳ್ಳುಕನ ಮಾಡಿ,
ಬೆಳುಗಾರದಂತೆ ಮಾಡು ಕೂಡಲಸಂಗಮದೇವಾ.
253
ನಡೆಯ ಕಂಡಾ ನಂಬಿ, ನುಡಿಯೆಲ್ಲಾ ಉಪಚಾರ !
ಮಿಗಿಲೊಂದು ಮಾತು ಬಂದಡೆ ಸೈರಿಸಲಾರೆನು.
ತುಯ್ಯಲಾದಡೆ ಉಂಬೆ, ಹುಯ್ಯಲಾದಡೆ ಓಡುವೆ,
ಆಳು ಬೇಡಿದಡೆ ಆಳ್ದನೇನನೀವನಯ್ಯಾ ಆಳಾಗಿ ಹೊಕ್ಕು ಅರಸಾಗಿ ನಡೆದಡೆ,
ಆಳಿಗೊಂಡಿತೆನ್ನ ಕೂಡಲಸಂಗನ ಭಕ್ತಿ.
254
ಇರಿಸಿಕೊಂಡು ಭಕ್ತರಾದರೆಮ್ಮವರು,
ತರಿಸಿಕೊಂಡು ಭಕ್ತರಾದರೆಮ್ಮವರು,
ಕೊರೆಸಿಕೊಂಡು ಭಕ್ತರಾದರೆಮ್ಮವರು,
ಜರಿಸಿಕೊಂಡು ಭಕ್ತರಾದರೆಮ್ಮವರು.
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾುತ್ತು.
255
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ !
ಕುಂದು-ಹೆಚ್ಚ ನುಡಿವೆ.
ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ,
ಕೂಡಲಸಂಗನ ಶರಣರ ಎನ್ನಾಳ್ದರೆಂಬೆ.
256
ಇಲ್ಲವೆಯ ಮೇಲೆ ಕಂಚೊಡೆದಂತೆ ಬಡ ಮನವೆನ್ನ ಕಾಡಿಹಿತಯ್ಯಾ,
ಮತಿುಲ್ಲದ ಮರುಳ ನಾನಯ್ಯಾ,
ಭಕ್ತಿುಲ್ಲದ ಬಡವ ನಾನು.
ನಿಮ್ಮ ನೆನಹವಿಲ್ಲದೆ ನಿರ್ಭಾಗ್ಯನಾದೆ,
ಎನಗೆ ನೀ ಕರುಣಿಸು ಕೂಡಲಸಂಗಮದೇವಾ.
257
ಲಿಂಗವ ನಚ್ಚದೀ ಮನವು, ಜಂಗಮವ ನಂಬದೀ ಮನವು,
ಕೂಪರ ಕಂಡಡೆ ಒಲ್ಲದೀ ಮನವು. ಈ ಮನದ ಭ್ರಮೆಯನೆಲ್ಲವ ಮರೆಸಿ,
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು
ಕೂಡಲಸಂಗಮದೇವಾ.
258
ಅಶನ ಕುಂದದು, ವ್ಯಸನ ಮಾಣದು,
ಆರತವಡಗದು, ಬೆವಹಾರ ಮಾಣದು.
ಮಜ್ಜನಕ್ಕೆರೆವೆನಯ್ಯಾ:ಕಾಯವಿಕಾರಿಯಾನು.
ಮಜ್ಜನಕ್ಕೆರೆವೆನಯ್ಯಾ:ಜೀವವಿಕಾರಿಯಾನು.
ಮಜ್ಜನಕ್ಕೆರೆವೆನಯ್ಯಾ:ಶರಣನಲ್ಲ, ಲಿಂಗೈಕ್ಯನಲ್ಲ.
ಕೂಡಲಸಂಗಮದೇವರಲ್ಲಿ
ಅಂತರಬೆಂತರ ನಾನಯ್ಯಾ.
259
ಕುದುರನೇಸ ತೊಳೆದಡೆಯೂ ಕೆಸರು ಮಾಬುದೆ
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು ಕೃಪೆಯ ಮಾಡಯ್ಯಾ.
ಕಂಬಳಿಯಲ್ಲಿ ಕಣಕವ ನಾದಿದಂತೆ ಕಾಣಿರೇ ಎನ್ನ ಮನ.
ಕೂಡಲಸಂಗಮದೇವಾ, ನಿಮಗೆ ಶರಣೆಂದು ಶುದ್ಧ ಕಾಣಯ್ಯಾ.
260
ಕಾಮಧೇನು ನಿಮ್ಮ ಸಾರಿರಲು ಪರರ ಬೇಡಲಾರೆನಯ್ಯಾ. ನಿಮ್ಮುವ ಪೂಜಿಸಿ
ಭವಬಂಧನ ಬಿಡದೇಕಯ್ಯಾ ಹಿಂದಣ ಜನ್ಮದ ಚಿಹ್ನೆ ಬಿಡದನ್ನಕ್ಕ ನಿಮ್ಮ ಪೂಜಿಸಿ
ಏವೆನಯ್ಯಾ ಎನ್ನ ಮನದ ಅವಗುಣವ ಕಳೆದು ನಿಮ್ಮ ಶರಣರಿಗೆ ಶರಣೆಂಬುದ
ಕರುಣಿಸು, ಕೂಡಸಂಗಮದೇವಾ.
261
ದುವ್ರ್ಯಸನಿ ದುರಾಚಾರಿ ಎಂದೆನಿಸದಿರಯ್ಯಾ, ಎನ್ನ. ಲಿಂಗವ್ಯಸನಿ ಜಂಗಮಪ್ರೇಮಿ
ಎಂದೆನಿಸಯ್ಯಾ,
`ಅವಶ್ಯಮನುಭೋಕ್ತವ್ಯಂ' ಎಂದೆನಿಸದಿರಯ್ಯಾ ಕೂಡಲಸಂಗಮದೇವಾ,
ಸೆರಗೊಡ್ಡಿ ಬೇಡುವೆನು.
262
ಧೃತಿಗೆಟ್ಟು ಅನ್ಯರ ಬೇಡದಂತೆ,
ಮತಿಗೆಟ್ಟು ಪರರುವ ಹೊಗಳದಂತೆ,
ಪರಸತಿಯರ ರತಿಗೆ ಮನ ಹಾರದಂತೆ,
ಶಿವಪಥವೊಲ್ಲದವರೊಡನಾಡದಂತೆ,
ಅನ್ಯಜಾತಿಯ ಸಂಗವ ಮಾಡದಂತೆ,
ಎನ್ನ ಪ್ರತಿಪಾಲಿಸು, ಕೂಡಲಸಂಗಮದೇವಾ.
263
ಮತ್ತೊಂದ ಕಾಣದೆ, ಮತ್ತೊಂದ ಕೇಳದೆ,
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ
ಇರಿಸಯ್ಯಾ, ಕೂಡಲಸಂಗಮದೇವಾ.
264
ಮತಿಮಂದನಾಗಿ ಗತಿಯ ಕಾಣದೆ ಇದ್ದೆನಯ್ಯಾ :
ಹುಟ್ಟುಗುರುಡನ ಕೈಯ ಕೋಲ ಕೊಟ್ಟು ನಡೆಸುವಂತೆ
ನಡೆಸಯ್ಯಾ ಎನ್ನ. ನಿಮ್ಮ ಅಚ್ಚ ಶರಣರ ಒಕ್ಕುದ ಮಿಕ್ಕುದ ನಚ್ಚಿಸು,
ಮಚ್ಚಿಸು,  ಕೂಡಲಸಂಗಮದೇವಾ.
265
ಕಾಣದುದನೆಲ್ಲವ ಕಾಣಲಾರೆನಯ್ಯಾ,
ಕೇಳದುದನೆಲ್ಲವ ಕೇಳಲಾರೆನಯ್ಯಾ.
ದ್ರೋಹವಿಲ್ಲ ಎಮ್ಮ ಶಿವನಲ್ಲಿ, ಸೀಮೆಯಯ್ಯಾ.
ಒಲೆಯ ಮುಂದಿದ್ದು ಮಾಡದ ಕನಸ ಕಾಂಬವರನೊಲ್ಲನಯ್ಯಾ
ಕೂಡಲಸಂಗಮದೇವ.
266
ಎತ್ತು ತೊತ್ತಾಗಿ, ಭೃತ್ಯನಾಗಿ ಎಂದಿಪ್ಪೆನಯ್ಯಾ.
ನಿಮ್ಮವರ ಮನೆಯಲು ಕೂಡಲಸಂಗಮದೇವಾ,
ಲಿಂಗಜಂಗಮದ ಲೆಂಗಿಯಾಗಿ.
267
ಕಾಣಬಹುದೆ ಪರುಷದ ಗಿರಿ ಅಂಧಕಂಗೆ
ಮೊಗೆಯಬಹುದೆ ರಸದ ಬಾವಿ ನಿರ್ಭಾಗ್ಯಂಗೆ
ತೆಗೆಯಬಹುದೆ ಕಡವರವು ದಾರಿದ್ರಂಗೆ
ಕರೆಯಬಹುದೆ ಕಾಮಧೇನು ಅಶುದ್ಧಂಗೆ
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣು ಮಾಡಿಕೊಂಡಡೆ ಹೋಲಬಹುದೆ
ಎನ್ನೊಡೆಯ ಕೂಡಲಸಂಗನ ಶರಣರನು
ಪುಣ್ಯವಿಲ್ಲದೆ ಕಾಣಬಹುದೆ.
268
ಎಂತಕ್ಕೆ ಎಂತಕ್ಕೆ ನಾ ನಿಮ್ಮ ದೇವರೆಂದರಿದೆನು, ಇಂತಾಗಿ ನೀವೆನ್ನನಾರೆಂದರಿುರಿ.
ನಂಬಲರಿಯೆ, ನಂಬಿಸಲರಿಯೆ. ಒಲಿಯಲರಿಯೆ, ಒಲಿಸಲರಿಯೆ. ಯಥಾ ಭಾವಸ್ತಥಾ
ಲಿಂಗಂ ಸತ್ಯಂ ಸತ್ಯಂ ನ ಸಂಶಯಃ ಯಥಾ ಭಕ್ತಿಸ್ತಥಾ ಸಿದ್ಧಿ:ಸತ್ಯಂ ಸತ್ಯಂ
ನ ಸಂಶಯಃ ಎಂದುದಾಗಿ, ಕೂಡಲಸಂಗಮದೇವಾ, ಕೇಳಯ್ಯಾ ಕೋಟಿ ಕೋಟಿ
ವರುಷ ಕೋಟಲೆಗೊಂಡೆನಯ್ಯಾ.
269
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ಆನಿದ್ದೇನಯ್ಯಾ.
ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ,
ಶಿವ ನಿಮ್ಮ ಒಲವಿಲ್ಲದಂತೆ ಆನಿದ್ದೇನಯ್ಯಾ.
ಕೆಟ್ಟು ಬಾಳುವರಿಲ್ಲ ಎಮ್ಮವರ ಕುಲದಲ್ಲಿ,
ನೀನೊಲಿದಂತೆ ಸಲಹಯ್ಯಾ, ಕೂಡಲಸಂಗಮದೇವಾ.
270
ಉದಯಾಸ್ತಮಾನವೆನ್ನ ಬೆಂದ ಬಸುರಿಂಗೆ ಕುದಿಯಲಲ್ಲದೆ, ನಿಮ್ಮ ನೆನೆಯಲು
ತೆರಹಿಲ್ಲಯ್ಯಾ. ಎಂತೋ ಲಿಂಗ ತಂದೆ, ಎಂತಯ್ಯಾ ಎನ್ನ ಪೂರ್ವಲಿಖಿತ
ಬೆರಣಿಯನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲೆನಗೆ, ನೀ ಕರುಣಿಸು,
ಕೂಡಲಸಂಗಮದೇವಾ.
271
ತಾಮಸ ಮುಸುಕಿ ಕಂಗಳ ಕೆಡಿಸಿತ್ತೆನ್ನ, ಭಕ್ತಿ.
ಕಾಮವೆಂಬ ಅಗ್ನಿಗೆ ಮುರಿದಿಕ್ಕಿತ್ತೆನ್ನ, ಭಕ್ತಿ.
ಉದರಕ್ಕೆ ಕುದಿಕುದಿದು ಮುಂದುಗೆಡಿಸಿತ್ತೆನ್ನ, ಭಕ್ತಿ.
ಇದಿರನಾಶ್ರುಸಲು ಹೋುತ್ತೆನ್ನ, ಭಕ್ತಿ.
ಹೆಣಮೂಳನು ನಾನು ಕೂಡಲಸಂಗಮದೇವಾ,
ಕ್ಷಣ ಹದುಳವಿರದೆ ಬಾಯ ಟೊಣೆದು ಹೋುತ್ತೆನ್ನ, ಭಕ್ತಿ.
272
ಏನಿದ್ದಡೇನಿದ್ದಡೊಲ್ಲದು ನಿಮ್ಮನುಭಾವಕ್ಕೆನ್ನ ಮನವು.
ಡಂಬಕನೆಂಬವ ನಾನು ಕಂಡಯ್ಯಾ,
ಕೂಡಲಸಂಗಮದೇವರ ಪೂಜಿಸಿ ಮಾನವರಾಸೆ ಬಿಡದಾಗಿ.
273
ಬೆಲ್ಲವ ತಿಂದ ಕೋಡಗದಂತೆ ಸಿಹಿಯ ನೆನೆಯದಿರಾ, ಮನವೆ,
ಕಬ್ಬ ತಿಂದ ನರಿಯಂತೆ ಹಿಂದಕ್ಕೆಳಸದಿರಾ, ಮನವೆ.
ಗಗನವನಡರಿದ ಕಾಗೆಯಂತೆ ದೆಸೆದಸೆಗೆ ಹಂಬಲಿಸದಿರಾ, ಮನವೆ.
ಕೂಡಲಸಂಗನ ಶರಣರ ಕಂಡು ಲಿಂಗವೆಂದೆ ನಂಬು, ಮನವೆ.
274
ಒಡೆಯರ ಕಂಡಡೆ ಕಳ್ಳನಾಗದಿರಾ, ಮನವೆ.
ಭವದ ಬಾರಿಯ ತಪ್ಪಿಸಿಕೊಂಬಡೆ ನೀನು ನಿಯತನಾಗಿ, ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು, ಮನವೆ. ಕೂಡಲಸಂಗನ ಶರಣರಲ್ಲಿ
ಭಕ್ತಿಯ ನೋನುವಡೆ
ಕಿಂಕಿಲನಾಗಿ ಬದುಕು, ಮನವೆ.
275
ಕೋಟ್ಯನುಕೋಟಿ ಜಪವ ಮಾಡಿ ಕೋಟಲೆಗೊಳ್ಳಲದೇಕೆ ಮನವೆ
ಕಿಂಚಿತು ಗೀತವೊಂದನಂತಕೋಟಿ ಜಪ.
ಜಪವೆಂಬುದೇಕೆ, ಮನವೆ
ಕೂಡಲಸಂಗನ ಶರಣರ ಕಂಡು,
ಆಡಿ ಹಾಡಿ ಬದುಕು ಮನವೆ.
276
ಮನವೆ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೆ !
ಲಿಂಗವ ನಂಬು ಕಂಡಾ, ಮನವೆ !
ಜಂಗಮವ ನಂಬು ಕಂಡಾ, ಮನವೆ !
ಕೂಡಲಸಂಗಮದೇವರ ಬಿಡದೆ ಬೆಂಬತ್ತು ಕಂಡಾ, ಮನವೆ !
277
ಸುರರ ಬೇಡಿದಡಿಲ್ಲ, ನರರ ಬೇಡಿದಡಿಲ್ಲ ಬರೆದ ಧೃತಿಗೆಡಬೇಡ ಮನವೆ !
ಆರನಾದಡೆಯೂ ಬೇಡಿ ಬೇಡಿ ಬರಿದೆ ಧೃತಿಗೆಡಬೇಡ ಮನವೆ !
ಕೂಡಲಸಂಗಮದೇವ[ನ]ಲ್ಲದೆ, ಆರ ಬೇಡಿದಡಿಲ್ಲ ಮನವೆ !
278
ಆಡಿ ಅಳುಪದಿರಾ, ಲೇಸಮಾಡಿ ಮರುಗದಿರಾ, ಎಲೆ ಮನವೆ.
ಕೂಡಿ ತಪ್ಪದಿರಾ, ಬೇಡಿದವರಿಗಿಲ್ಲೆನ್ನದಿರು ಕಂಡಾ.
ನಾಡ ಮಾತು ಬೇಡ, ಸೆರಗೊಡ್ಡಿ ಬೇಡು
ಕೂಡಲಸಂಗನ ಶರಣರ.
279
ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ !
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ.
280
ಒಳ್ಳಿಹ ಮೈಲಾರನ ಒಳಗೆಲ್ಲ ಸಣಬು, ಹೊರಗಣ ಬಣ್ಣ ಕರ ಲೇಸಾುತ್ತಯ್ಯಾ.
ಶ್ವಾನನ ನಿದ್ರೆ, ಅಜ್ಞಾನಿಯ ತಪದಂತೆ ಆುತ್ತಯ್ಯಾ ಎನ್ನ ಮತಿ,
ಕೂಡಲಸಂಗಮದೇವಾ.
281
ಲೋಕೋಪಚಾರಕ್ಕೆ ಮಜ್ಜನಕ್ಕೆರೆವೆನಯ್ಯಾ.
ಮನದ ತಾಮಸ ಬಿಡದು, ಮನದ ಕಪಟ ಬಿಡದು,
ಶಿವಶರಣೆಂಬುದು ಅಳವಡದಯ್ಯಾ.
ಎನ್ನ ಮನದಲ್ಲಿ ಎರಡುಳ್ಳನ್ನಕ್ಕ
ಕೂಡಲಸಂಗಮದೇವನೆಂತೊಲಿವ.
282
ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ !
ಎನ್ನಲ್ಲೇನನರಸುವೆ
ನಂಬಿಯೂ ನಂಬದ ಡಂಬಕ ನಾನಯ್ಯಾ,
ಹಾವ ತೋರಿ ಹವಿಯ ಬೇಡುವಂತೆ-
ಕೂಡಲಸಂಗಮದೇವಾ.
283
ಕೆಲಕ್ಕೆ ಶುದ್ಧನಾದೆನಲ್ಲದೆ, ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯಾ
ಕೈಮುಟ್ಟಿ ಪೂಜಿಸುವಡೆ, ಎನ್ನ ಕೈ ಶುದ್ಧವಲ್ಲಯ್ಯಾ.
ಮನಮುಟ್ಟಿ ಪೂಜಿಸುವಡೆ, ಎನ್ನ ಮನ ಶುದ್ಧವಲ್ಲಯ್ಯಾ.
ಭಾವ ಶುದ್ಧವಾದಡೆ, ಕೂಡಲಸಂಗಯ್ಯನು
ಇತ್ತ ಬಾಯೆಂದತ್ತಿಕೊಳ್ಳನೇಕಯ್ಯಾ.
284
ಕುಲಮದಕ್ಕೆ ಹೋರಿ ಜಂಗಮಭೇದವ ಮಾಡುವೆ, ಫಲವೇನು
ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ.
ಛಲಮದಕ್ಕೆ ಹೋರಿ ಲಿಂಗಭೇದವ ಮಾಡುವೆ,
ಜಂಗುಳಿಯ ಕಾವ ಗೋವ ಹಲವು ಪಶುವ ನಿವಾರಿಸುವಂತೆ
ತನು ಭಕ್ತನಾುತ್ತು, ಎನ್ನ ಮನ ಭವಿ
ಕೂಡಲಸಂಗಮದೇವಾ.
285
ಲಿಂಗದಲ್ಲಿ ಕಠಿಣವುಂಟೆ ಜಂಗಮದಲ್ಲಿ ಕುಲವುಂಟೆ
ಪ್ರಸಾದದಲ್ಲಿ ಆರುಚಿಯುಂಟೆ
ಈ ತ್ರಿವಿಧದಲ್ಲಿ ಭಾವಭೇದವನರಸುವೆನು,
ಕೂಡಲಸಂಗಮದೇವಾ, ಧಾ[ರಾ]ವಟ್ಟಲೆನ್ನ ಭಕ್ತಿ.
286
ಲೌಕಿಕರ ಕಂಡು ಆಡುವೆ, ಹಾಡುವೆ.
ತಾರ್ಕಿಕರ ಕಂಡು ಆಡುವೆ, ಹಾಡುವೆ.
ಸಹಜಗುಣವೆನ್ನಲಿಲ್ಲಯ್ಯಾ, ನಿಜಭಕ್ತಿಯೆನಗಿಲ್ಲ, ತಂದೆ.
ಏಕೋಭಾವ ಎನಗುಳ್ಳಡೆ, ಏಕೆ ನೀ ಕರುಣಿಸೆ
ಕೂಡಲಸಂಗಮದೇವಾ.
287
ಓತಿ ಬೇಲಿವರಿವಂತೆ ಎನ್ನ ಮನವಯ್ಯಾ,
ಹೊತ್ತಿಗೊಂದು ಪರಿನಪ್ಪ ಗೋಸುಂಬೆಯಂತೆನ್ನ ಮನವು,
ಬಾವುಲ ಬಾಳುವೆಯಂತೆನ್ನ ಮನವು.
ನಡುವಿರುಳೆದ್ದ ಕುರುಡಂಗೆ ಅಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದಡುಂಟೆ
ಕೂಡಲಸಂಗಮದೇವಾ.
288
 289
ಶಬ್ದಸಂಭಾಷಣೆಯ ನುಡಿಯ ವರ್ತಿಸಿ ನುಡಿವೆ,
ತೊಡಹದ ಕೆಲಸದ ಬಣ್ಣದಂತೆ
ಕಡಿಹಕ್ಕೆ ಒರೆಗೆ ಬಾರದು, ನೋಡಾ.
ಎನ್ನ ಮನದಲೊಂದು, ಹೃದಯದಲೊಂದು,
ವಚನದಲೊಂದು ನೋಡಾ.
ಕೂಡಲಸಂಗಮದೇವಾ,
ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯಾ.
290
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು,
ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು,
ಬೇರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆುತ್ತೆನ್ನ ಮತಿ, ಕೂಡಲಸಂಗಮದೇವಾ.
291
ಜನ್ಮ ಹೊಲ್ಲೆಂಬೆನೆ, ಜನ್ಮವ ಬಿಡಲಹೆನು.
ಭಕ್ತರೊಲವ ಪಡೆವೆನೆ, ಭಕ್ತಿಯ ಪಥವನರಿವೆನು.
ಲಿಂಗವೆಂದು ಬಲ್ಲೆನೆ, ಜಂಗಮವೆಂದು ಕಾಬೆನು.
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ, ಕೈಲಾಸವ ಕಾಣಬಲ್ಲೆನು.
ಎನ್ನಲ್ಲಿ ನಡೆುಲ್ಲಾಗಿ, ನಾನು ಭಕ್ತನೆಂತಹೆನಯ್ಯಾ,
ಕೂಡಲಸಂಗಮದೇವಾ.
292
ಉಡುವಿನ ಭಾವದಲ್ಲಿ ಹಡೆದರೆಮ್ಮವರು, ಊಸರವಳ್ಳಿಯಂತೆ ಎನ್ನ ಇರವು,
ಬಾವುಲ ಬಾಳುವೆಯ ತರನಂತೆ ! ಹೊತ್ತಾರೆ ಎದ್ದ ಕುರುಡಂಗೆ ಆಗುಸೆಯಲ್ಲಿ
ಅಸ್ತಮಾನದಂತೆ- ಆನು ಭಕ್ತಿಯ ಬಯಸಿದಡಹುದೆ ಕೂಡಲಸಂಗಮದೇವಾ.
293
ಬಸುರ ಬಾಳುವೆಗೆ, ನಿಮ್ಮಲ್ಲಿ ಮಸಿಯ ಹೂಸಿ ನೇರಿಲಹಣ್ಣ ಮಾರುವಂತೆ, ಕಾಲ ಸಾಲ
ದಾರಿದ್ರ್ಯಕ್ಕಂಜಿ ನಿಮ್ಮ ಮರೆಹೊಕ್ಕೆನಯ್ಯಾ. ಆವುದ ಹುಸಿಯೆಂಬೆ ಆವುದ
ಕಿರಿದೆಂಬೆ ಇದ ನೀನೆ ಬಲ್ಲೆಯಯ್ಯಾ, ಕೂಡಲಸಂಗಮದೇವಾ, ನಾನು
ಉದರಪೋಷಕನಯ್ಯಾ.
294
ಮೂಗ ಕಂಡ ಕನಸಿನಂತಾುತೆನ್ನ ಭಕ್ತಿ;
ಗುಣವ ಹೇಳಬಾರದಾರಿಗೆಯೂ, ಕೇಳಲೆಂತೂ ಬಾರದು.
ಎನ್ನ ಹೇಗತನವ ಮಾಣಿಸು, ಕೂಡಲಸಂಗಮದೇವಾ.
295
ಕಾಣಿಯ ಲೋಭ ಕೋಟಿಯ ಲಾಭವ ಕೆಡಿಸಿದುದ ನಾನರಿಯೆನಯ್ಯಾ.
ಭಕ್ತಿಯ ಕುಳವನರಿಯದೆ ಮತಿಗೆಟ್ಟ ಪರಿಯ ನಾನರಿಯೆನಯ್ಯಾ.
ಕೂಡಲಸಂಗನ ಶರಣರ ಸಂಗದಿಂದ ಅರಿದಡೆ
ನಾನು ಬದುಕುವೆನಯ್ಯಾ.
296
ಏನನೋದಿ, ಏನ ಕೇಳಿ, ಏನ ಮಾಡಿಯೂ ಫಲವೇನು,
ನಿಮ್ಮವರೊಲಿಯದನ್ನಕ್ಕ
ಶಿವ ಶಿವ, ಮಹಾದೇವಾ,
ಬಾಳಿಲ್ಲದವಳ ಓಲೆಯಂತಾುತ್ತೆನಗೆ,
ಕೂಡಲಸಂಗಮದೇವಾ.
297
ಮುನ್ನೂರರುವತ್ತು ದಿನ ಶ್ರವವ ಮಾಡಿ,
ಕಳನೇರಿ ಕೈಮರೆದಂತಾುತ್ತೆನ್ನ ಭಕ್ತಿ.
ಎನಿಸು ಕಾಲ ಲಿಂಗಾರ್ಚನೆಯ ಮಾಡಿ,
ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ
ಕೊಡನ ತುಂಬಿದ ಹಾಲ ಕೆಡಹಿ,
ಉಡುಗಲೆನ್ನಳವೆ, ಕೂಡಲಸಂಗಮದೇವಾ.
298
ಶಬ್ದಸುಖಕ್ಕೆ ಮಚ್ಚಿ, ಮಾತಿಂಗೆ ಮಾತನೆ ಕೊಟ್ಟು, ಕೆಟ್ಟೆನಯ್ಯಾ !
ಅನುಭಾವದ ಅಕ್ಕವೆಯಾಗದೆ, ಬಿಬ್ಬನೆ ಬಿರಿದೆನಯ್ಯಾ !
ಅಮೃತದ ಕೊಡನ ತುಂಬಿ, ಒಡೆಯ ಹೊಯ್ದು, ಅರಸಲುಂಟೇ
ಸ್ವಾಮಿಭೃತ್ಯಸಂಬಂಧವೇ ಎನ್ನ ಭಕ್ತಿ, ಪ್ರತ್ಯುತ್ತರ ನಾಯಕನರಕ
ಕೂಡಲಸಂಗಮದೇವಾ.
299
ಅಂಕವೋಡಿದಡೆ ತೆತ್ತಿಗಂಗೆ ಭಂಗವಯ್ಯಾ,
ಕಾದಿ ಗೆಲಿಸಯ್ಯಾ ಎನ್ನನು.
ಕಾದಿ ಗೆಲಿಸಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ತನು ಮನ ಧನದಲ್ಲಿ ವಂಚನೆುಲ್ಲದೆ.
300
ಹೇಡಿ ಬಿರಿದ ಕಟ್ಟಿದಂತೆ ಆುತೆನ್ನ ವೇಷ:
ಕಾದಬೇಕು, ಕಾದುವಡೆ ಮನವಿಲ್ಲ-
ಆಗಳೆ ಹೋುತ್ತು ಬಿರಿದು,
ಹಗರಣ ನಗೆಗೆಡೆಯಾುತ್ತು.
ಮಾರಂಕ ಜಂಗಮ ಮನೆಗೆ ಬಂದಡೆ
ಕಾಣದಂತಡ್ಡ ಮುಸುಡಿಟ್ಟಡೆ
ಕೂಡಲಸಂಗಮದೇವ ಜಾಣ, ಹಲುದೋರೆ ಮೂಗ ಕೊಯ್ವ.
301
ಅಚ್ಚ ಶರಣರು ನಿಮ್ಮ ನಿಚ್ಚ ನೆನೆವರು,
ಬಚ್ಚ ಬರಿಯ ಮಾತನಾಡುವೆನು.
ಒಪ್ಪಚ್ಚಿ ಅರೆಭಕ್ತಿ, ನೆನೆಯಲೀಯದು ನಿಮ್ಮ.
ಮೆಚ್ಚರು ನಿಮ್ಮವರು ಎನ್ನನು ಕೂಡಲಸಂಗಮದೇವಾ.
302
ಆಡುವುದಳವಟ್ಟಿತ್ತು, ಹಾಡುವುದಳವಟ್ಟಿತ್ತು,
ಅರ್ಚನೆಯಳವಟ್ಟಿತ್ತು, ಪೂಜನೆಯಳವಟ್ಟಿತ್ತು,
ನಿತ್ಯಲಿಂಗಾರ್ಚನೆ ಮುನ್ನವೆಯವಳವಟ್ಟಿತ್ತು.
ಕೂಡಲಸಂಗನ ಶರಣರು ಬಂದಡೆ,
ಏಗುವುದು, ಏ ಬೆಸೆನೆಂಬುದು ಒಪ್ಪಚ್ಚಿ ಅಳವಡದು.
303
ಒಡೆಯರಿಗೆ ಒಡವೆಯನೊಪ್ಪಿಸಲಾರದೆ
ಮೊರೆುಡುವ ಮನವ ನಾನೇನೆಂಬೆ
ನೆತ್ತಿಯಲ್ಲಿ ಆಲಗ ತಿರುಹುವಂತಪ್ಪ
ವೇದನೆಯಹುದೆನಗೆ.
ಕೊಯ್ದ ಮೂಗಿಂಗೆ ಕನ್ನಡಿಯ ತೋರುವಂತಪ್ಪ
ವೇದನೆಯಹುದೆನಗೆ.
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವಂತಪ್ಪ
ವೇದನೆಯಹುದೆನಗೆ.
ಕೂಡಲಸಂಗಮದೇ[ವಾ] ನೀ ಮಾಡಿ ನೋಡುವ ಹಗರಣವ
ನಾ ಮಾಡಿಹೆನೆಂದಡೆ, ಮನಕ್ಕೆ ಮನ ನಾಚದೆ ಅಯ್ಯಾ.
304
ಹೊರಿಸಿಕೊಂಡು ಹೋದ ನಾು, ಮೊಲನನೇನ ಹಿಡಿವುದಯ್ಯಾ
ಇರಿಯದ ವೀರ, ಇಲ್ಲದ ಸೊಬಗುವ ಹೇಳುವುದೆ ನಾಚಿಕೆ.
ಆನು ಭಕ್ತನೆಂತೆಂಬೆನಯ್ಯಾ, ಕೂಡಲಸಂಗಮದೇವಾ.
305
ಎನ್ನ ಭಕ್ತನೆಂದೆಂಬರು:
ಎನ್ನ ಹೊರಹಂಚೆ, ಒಳಬೊಳ್ಳೆತನವನರಿಯರಾಗಿ.
ಎನ್ನ ಮಾನಾಪಮಾನವೂ ಶರಣರಲ್ಲಿ, ಜಾತಿವಿಜಾತಿಯೂ ಶರಣರಲ್ಲಿ,
ತನುಮನಧನ[ವೂ] ಶರಣರಲ್ಲಿ.
ವಂಚನೆಯುಳ್ಳ ಡಂಭಕ ನಾನು.
ತಲೆಯೊಡೆಯಂಗೆ ಕಣ್ಣ ಬೈಚಿಡುವೆ
ಕೂಡಲಸಂಗಮದೇವಾ.
306
ನೋಡುವರುಳ್ಳಡೆ ಮಾಡುವೆ ದೇಹಾರವ.
ಎನಗೊಂದು ನಿಜವಿಲ್ಲ, ಎನಗೊಂದು ನಿಷ್ಪತ್ತಿುಲ್ಲ.
ಲಿಂಗವ ತೋರಿ ಉದರವ ಹೊರೆವ ಭಂಗಗಾರ ನಾನು,
ಕೂಡಲಸಂಗಮದೇವಾ.
307
ಭಕ್ತಿ ಎಳ್ಳನಿತಿಲ್ಲ, ಯುಕ್ತಿಶೂನ್ಯನಯ್ಯಾ ನಾನು.
ತನುವಂಚಕ, ಮನವಂಚಕ, ಧನವಂಚಕ ನಾನಯ್ಯಾ.
ಕೂಡಲಸಂಗಮದೇವಾ, ಒಳಲೊಟ್ಟೆ ಎನ್ನ ಮಾತು.
308
ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಒಡಲೊಡವೆ ಹಡೆದರ್ಥ ನಿಮ್ಮದೆಂದರಿಯದೆ
ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ.
309
ಊರ ಸೀರೆಗೆ ಅಸಗ ಬಡಿ ಹಡೆದಂತೆ
ಹೊನ್ನೆನ್ನದು, ಮಣ್ಣೆನ್ನದು ಎಂದು ಮರುಳಾದೆ,
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ,
ಕೂಡಲಸಂಗಮದೇವಾ.
310
ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ,
ಮತ್ತೆಯೂ ಆಸೆ ಬಿಡದನ್ನಕ್ಕ ಭಕ್ತನೆಂತಪ್ಪೆನಯ್ಯಾ
ಶರಣನೆಂತೆನಿಸುವೆನಯ್ಯಾ,
ಕೂಡಲಸಂಗನ ಶರಣರ ಸಕಲರತಿಗೆ ಸಲ್ಲದನ್ನಕ್ಕ.
311
ನಿಮ್ಮ ಭಕ್ತಿಯಲ್ಲಿ ಧರಧುರನೆಂಬೆ.
ದಿಟಕ್ಕೆ ಬಂದಡೆ ಅಡ್ಡ ಮುಖವನಿಕ್ಕುವೆ-
ಗರುಡಂಗೆ ಘಟಸರ್ಪನ ತೋರುವಂತೆ !
ಶಿವಶರಣೆಂದಡೆ ಕಿವಿ ಕೇಳದಂತಿಹೆನು,
ಮನಕ್ಕೆ ಮನವೇ ಸಾಕ್ಷಿಯಯ್ಯಾ, ಕೂಡಲಸಂಗಮದೇವಾ.
312
ಆದ್ಯರ ವಚನ ಪರುಷವೆಂಬೆನು,
ಆ ಪರುಷವೆನಗೆಂತು ದೊರೆಕೊಂಬುದಯ್ಯಾ
ತನು ಮನ ಧನವ ವಿವರಿಸಿ ನುಡಿವೆ
ಸೋಂಕಿಂಗೆ ಸೈರಿಸಲಾರೆ,
ಹೊಲೆಯರ ಮದ್ದಳೆಯಂತೆ ನುಡಿವ ಡಂಬಕ ನಾನಯ್ಯಾ,
ಕೂಡಲಸಂಗಮದೇವಾ.
313
ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯಾ.
ಕಾಂಚನಕ್ಕೆ ವೇಳೆಯಲ್ಲದ ಲಿಂಗಕ್ಕೆ ವೇಳೆ[ಯ]ಲ್ಲ.
ಹಡಿಕೆಗೆ ಮಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ.
314
ಒಲಿದ ಗಂಡನೊಮ್ಮೆ ಒಲ್ಲದಿಪ್ಪ ಕಂಡವ್ವಾ.
ತಪ್ಪೆನ್ನದು, ತಪ್ಪೆನ್ನದು !
ತನು ಮನ ಧನದಲ್ಲಿ ಮಾಟಕೂಟವೆಂದರಿಯದ
ತಪ್ಪೆನ್ನದು, ತಪ್ಪೆನ್ನದು !
ಕಡೆುಲ್ಲದ ಹುಸಿ ಎನ್ನದು, ಕೂಡಲಸಂಗಮದೇವಾ.
315
ಕಾಣುತ್ತ ಕಡೆಗಣಿಸಿ, ಕೆಡಿಸಿ, ಅರಸುವ ಮತಿಭ್ರಷ್ಟ ನಾನು ಲಿಂಗಯ್ಯಾ.
ತನುಲೋಭ ಮನಲೋಭ ಧನಲೋಭ ಮುಂದುಗೆಡಿಸಿ ಕಾಡಿಹವೆನ್ನ.
ತನು ಮನ ಧನವ ನಿವೇದಿಸಿದವರ ಮನೆಯ ಮಗ ನಾನಯ್ಯಾ,
ಕೂಡಲಸಂಗಮದೇವಾ.
316
ಹಗಹದಲ್ಲಿ ಬಿದ್ದವರ ಮೇಲೆ ಒರಳ ನೂಕುವರೆ
ಕೋಳದ ಮೇಲೆ ಸಂಕೋಲೆಯನಿಕ್ಕುವರೆ
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ
ಕೂಡಲಸಂಗಯ್ಯ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೆ.
317
ಸೋಲಬಲ್ಲರು ಅವರು, ಗೆಲಲರಿಯರಯ್ಯಾ.
ತನು ಮನ ಧನದಲ್ಲಿ ವಂಚನೆಯನರಿಯರಯ್ಯಾ,
ದಾಸ ಸಿರಿಯಾಳನವರು.
ಕೂಡಲಸಂಗ ಶರಣರು ಉಪಚಾರವನರಿಯರಯ್ಯಾ.
318
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ
ಮಾಡುವ ಸತ್ಕ್ರಿಯೆುಂದ ಭಕ್ತನೆನಿಸಲು ಬಾರದು.
ಅರ್ಥಪ್ರಾಣಾಭಿಮಾನವಾರಿಗೆಯೂ ಸಮನಿಸದು,
ಲಿಂಗಮುಖದಲುದಯವಾದ ಶರಣಂಗಲ್ಲದೆ ಅಯ್ಯಾ.
ಕೂಡಲಸಂಗನ ಶರಣರ ಭಕ್ತಿಭಂಡಾರವು
ಎನಗೆಂತು ಸಾಧ್ಯವಪ್ಪುದು ಹೇಳೆನ್ನ ತಂದೆ.
319
ಬಾಣ ಮಯೂರನಂತೆ ಬಣ್ಣಿಸಬಲ್ಲೆನೆ
ಸಿರಿಯಾಳನಂತೆ ಊಣಲಿಕ್ಕಬಲ್ಲೆನೆ
ದಾಸಿಮಯ್ಯನಂತೆ ಉಡಕೊಡಬಲ್ಲೆನೆ
ಉಂಡು ಉಟ್ಟು, ಕೊಟ್ಟಡೆ ಮು್ಯುಗೆ ಮುಯ್ಯೆನಿಸಿತ್ತು,
ಎನಗೆ ಕೊಟ್ಟಡೆ ಧರ್ಮವೆನಿಸಿತ್ತು,
ಕೂಡಲಸಂಗಮದೇವಾ.
320
ದಾಸಿದೇವ ತನ್ನ ವಸ್ತ್ರವನಿತ್ತು ತವನಿದ್ಥಿಯ ಪ್ರಸಾದವ ಪಡೆದ.
ಸಿರಿಯಾಳ ತನ್ನ ಮ ಗನನಿತ್ತು ಪ್ರಾಣಪ್ರಸಾದವ ಪಡೆದ.
ಬಲ್ಲಾಳದೇವ ತನ್ನ ವಧುವನಿತ್ತು ಸಮತೆಪ್ರಸಾದವ ಪಡೆದ.
ಇವರೆಲ್ಲರೂ ತಮತಮಗೆ ಮಾಡಿ ಹಡೆದರು ಸಮ್ಯಕ್‍ಪದವಿಯನು.
ನಾನೇನನೂ ಅರಿಯದ ಭಕ್ತಿಯ ಬಡವಂಗೆ ಕರುಣಿಸು
ಕೂಡಲಸಂಗಮದೇವಾ.
321
ತ್ರಿವಿಧ ತ್ರಿವಿಧದಲ್ಲಿ ತಪ್ಪಿದ ತಪ್ಪುಕ ನಾನಯ್ಯಾ,
ಒಮ್ಮಿಂಗೆ ಕರುಣಿಸಯ್ಯಾ.
ಇದನರಿದು ಇನ್ನು ತಪ್ಪಿದೆನಾದಡೆ
ನೀವು ಮಾಡಿತ್ತೆ ಸಲುವುದು, ಕೂಡಲಸಂಗಮದೇವಾ.
322
ಎನ್ನ ತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ,
ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ.
ಕೂಡಲಸಂಗಮದೇವಯ್ಯಾ,
ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣ ಸಾಕ್ಷಿ.
323
ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ.
ಬಡವನೆಂದೆನ್ನ ಕಾಡದಿರಯ್ಯಾ.
ಎನಗೆ ಒಡೆಯರುಂಟು ಕೂಡಲಸಂಗನ ಶರಣರು.
324
ಭಕ್ತಿವಿಶೇಷವ ಮಾಡುವಡೆ ಹತ್ತು ಬೆರಳುಂಟು,
ಹಾಸಿ ದುಡಿವಡೆ ತನಗುಂಟು, ತನ್ನ ಪ್ರಮಥರಿಗುಂಟು.
ಮಾರಿತಂದೆಗಳಂತೆ ಎನಗೇಕಹುದಯ್ಯಾ
ರತ್ನದ ಸಂಕಲೆಯನಿಕ್ಕಿ ಕಾಡಿಹ ಕೂಡಲಸಂಗಮದೇವ,
ಶಿವಧೋ ಶಿವಧೋ !
325
ಮನೆ ನೋಡಾ ಬಡವರು:ಮನ ನೋಡಾ ಘನ.
ಸೋಂಕಿನಲ್ಲಿ ಶುಚಿ:ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ :ಬಂದ ತತ್‍ಕಾಲಕೆ ಉಂಟು,
ಕೂಡಲಸಂಗನ ಶರಣರು ಸ್ವತಂತ್ರಧೀರರು.
326
ತತ್ವವನರಿದೆಹೆನೆಂದು ಮೃತ್ಯುವ ಕರೆಕೊಂಡೆನಯ್ಯಾ.
ನಾನೆತ್ತ ಬಲ್ಲೆ ನಿಮ್ಮ ಶರಣರಂತುವನು
ನಾನೆತ್ತ ಬಲ್ಲೆ ನಿಮ್ಮ ಪ್ರಮಥರಂತುವನು
ಸರ್ವಾಪರಾಧಿ ನಾನು.
ಎನ್ನ ಮನದ ಕೊನೆಯ ಸೂತಕ ಹಿಂಗದು,
ಕೂಡಲಸಂಗಮದೇವಾ.
327
ಆ ಮಿಹಿಲಾಳು ಭೋಜ ದೇವುಲಾಳು.
ಆನು ಸೂಳೆ, ನಮ್ಮಕ್ಕ ಸೂಳೆ.
ಬೆಳ್ಳಿಗೆಯಾವಿನ ಕರುವೆಂದಡೆ ಬಳ್ಳವಾಲ ಕರೆವುದೆ
ಕೂಡಲಸಂಗನ ಶರಣರ ಮುಂದೆ ನಾನು ಕಾದಿಹೆ, ಬಾ ಬಿಸಿಲೆ.
328
ಆನೆಯೂ ಆ ದಾರಿಯಲ್ಲಿ ಹೋುತ್ತೆಂದಡೆ,
ಆಡೂ ಆ ದಾರಿಯಲ್ಲಿ ಹೋುತ್ತೆನ್ನಬಹುದೆ
ಸಂಗನ ಶರಣರಿಗೆ ಆನು ಸರಿಯೆಂದು ಗಳಹಲಿಬಹುದೆ
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ
ಹೇಳಾ, ಕೂಡಲಸಂಗಮದೇವಾ?
329
ಆ ಕರಿಯಾಕೃತಿಯ ಸೂಕರನ ಹೋಲಿಸಿದಡೆ
ಆ ಕರಿಯಾಗಲರಿವುದೆ
ಭೂನಾಗನಾಕೃತಿಯನು ವ್ಯಾಳೇಶನ ಹೋಲಿಸಿದಡೆ
ವ್ಯಾಳೇಶನಾಗಲರಿವುದೆ
ನಾನು ಭಕ್ತನಾದಡೇನಯ್ಯಾ,
ನಮ್ಮ ಕೂಡಲಸಂಗಮದೇವನ ಸದ್ಭಕ್ತರ ಹೋಲಲರಿವೆನೆ.
330
ಮೋಟನ ಮೌಳಿ, ಮೂಕೊರತಿಯ ಶೃಂಗಾರ,
ಬೇಟ ಕುರುಡಂಗೆ ನಗೆಗೆಡೆಯಾಯಿತ್ತು.
ನಮ್ಮ ಕೂಡಲಸಂಗನ ಶರಣರ ಮುಂದೆ
ನಾನು ಭಕ್ತನೆಂಬ ನಾಚಿಕ್ಕೆ ಸಾಲದೆ.
331
ಮೂಗಿಲ್ಲದ ಮುಖಕ್ಕೆ ಶೃಂಗಾರವೆ
ವಿಕೃತವೇಷಧಾರಿಯಾನು, ಭಂಡನು ! ಲಜ್ಜೆಭಂಡನು !
ಕೂಡಲಸಂಗನ ಶರಣರಲ್ಲಿ
ಹಾವ ತೋರಿ ಹವಿಯ ಬೇಡುವಂತೆ.
332
ಮಾವಿನಕಾಯೊಳಗೆ ಒಂದು ಎಕ್ಕೆಯ ಕಾಯಿ ನಾನಯ್ಯಾ.
ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ.
333
ಮರದ ನೆಳಲಲಿದ್ದು ತನ್ನ ನೆಳಲನರಸಬಹುದೆ
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯಾ
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯಾ
ಆನು ಭಕ್ತನೆಂಬ ನುಡಿ ಸುಡದೆ, ಕೂಡಲಸಂಗಮದೇವಾ.
334
ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ.
ಕೂಡಲಸಂಗಮದೇವಾ, ಎನಗಿದೇ ದಿಬ್ಯ.
335
ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ.
ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು.
ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ
336
ಡಂಬೂ ಡಳುಹೂ ಎನ್ನದಯ್ಯಾ, ಡಂಬಕನೆಂಬವ ನಾನಯ್ಯಾ.
ನಿಮ್ಮ ನಂಬಿದ ಶರಣರ [ನಂಬದ] ಡಿಂಗರಿಗ ನಾನು,
ಕೂಡಲಸಂಗಮದೇವಾ.
337
ಚೆನ್ನ ಚೇರಮನ ಬಂಟ ನಾನಯ್ಯಾ,
ಎನ್ನ ಚಾಗುಬೊಲ್ಲನ ಕಾವ ಗೋವನೆಂಬರು.
ಕೂಡಲಸಂಗನ ಶರಣರೊಡೆಯರಾಗಿ
ತಮ್ಮ ತೊತ್ತಿನ ಮಗನೆಂದು ಒಲಿದಂತೆ ನುಡಿವರು.
338
ಕಾಲಲೊದೆದು ಬಡಿದು ಜಡಿವರಯ್ಯಾ, ಭಕ್ತಿಯೆಯ್ದದೆಂದೆನ್ನ.
ಜರೆವರಯ್ಯಾ, ನುಡಿವರಯ್ಯಾ,
ಕೂಡಲಸಂಗನ ಶರಣರೊಡೆಯರಾಗಿ.
339
ನಡೆವರಯ್ಯಾ ಒಡೆಯರು ತನು-ಮನ-ಧನದ ಮೇಲೆ,
ನುಡಿವರಯ್ಯಾ ಒಂದು ನಿಮಿಷ ಬಾರದಿರ್ದಡೆ,
ಜರೆವರಯ್ಯಾ ಒಡೆಯರು ಮನಬಂದ ಪರಿಯಲು.
ಶಿವಾ ಶಿವಾ ! ಅಣಿವರಯ್ಯಾ ಮಂಡೆಯನೂರಿ.
ಪ್ರಾಣದ ಒಡೆಯರಯ್ಯಾ,
ಕೂಡಲಸಂಗಮದೇವಾ, ನಿಮ್ಮ ಶರಣರು.
340
ಅರ್ಥ ಪ್ರಾಣ ಅಬ್ಥಿಮಾನಕ್ಕೆ ಒಡೆಯರು ಸದ್‍ಭಕ್ತರಲ್ಲದೆ
ಎನಗಾರೂ ಇಲ್ಲಯ್ಯಾ.
`ಭೃತ್ಯಾಪರಾಧಃ ಸ್ವಾಮಿನೋ ದಂಡಃ
ಕೂಡಲಸಂಗಮದೇವಾ, ನೀವೇ ಪ್ರಮಾಣು.
341
ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ.
ಕಪ್ಪಡಿವೇಷದಿಂದಾನು ಬಂದಾಡುವೆ, ಕಪ್ಪಡಿವೇಷದಿಂದ.
ಈಶ ನಾ ನಿಮ್ಮ ದಾಸರ ದಾಸಿಯ ದಾಸನಯ್ಯಾ,
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯಾ,
ಕೂಡಲಸಂಗಮದೇವಾ
ನಿಮ್ಮ ಲಾಂಛನ ಧರಿಸಿಪ್ಪ ಉದರಪೋಷಕ ನಾನಯ್ಯಾ.
342
ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ
ಮತ್ತಾ ಶ್ವಪಚಯ್ಯನ ಸನ್ನಿಧಿುಂದ
ಭಕ್ತಿಯ ಸದ್‍ಗುಣವ ನಾನು ಅರಿವೆನಯ್ಯಾ.
ಕಷ್ಟಜಾತಿ ಜನ್ಮದಲಿ ಜನಿುಸಿದೆ ಎನ್ನ,
ಎನಗಿದು ವಿಧಿಯೆ ಕೂಡಲಸಂಗಮದೇವಾ.
343
ಉತ್ತಮಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸದಿರಯ್ಯಾ,
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯಾ,
ದಾಸಯ್ಯಾ ಶಿವದಾನವನೆರೆಯ ನೋಡಯ್ಯಾ,
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತ ಮಹಿಮ,
ಕೂಡಲಸಂಗಮದೇವಾ, ಶಿವಧೋ ಶಿವಧೋ !
344
ಸೆಟ್ಟಿಯೆಂದೆನೆ ಸಿರಿಯಾಳನ
ಮಡಿವಾಳನೆಂಬೆನೆ ಮಾಚಯ್ಯನ
ಡೋಹರನೆಂಬೆನೆ ಕಕ್ಕಯ್ಯನ
ಮಾದಾರನೆಂಬೆನೆ ಚೆನ್ನಯ್ಯನ
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.
345
ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.
346
 347
ಹರನು ಮೂಲಿಗನಾಗಿ, ಪುರಾತರೊಳಗಾಗಿ,
ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯಾ.
ಕಳೆದ ಹೊಲೆಯನೆಮ್ಮಯ್ಯ, ಜಾತಿಸೂತಕ.
ಮಾದಾರನ ಮಗ ನಾನಯ್ಯಾ.
ಪನ್ನಗಭೂಷಣ ಕೂಡಲಸಂಗಯ್ಯಾ,
ಚೆನ್ನಯ್ಯನೆನ್ನ ಮುತ್ತಯ್ಯನಜ್ಜನಪ್ಪನಯ್ಯಾ.
348
ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ.
349
ಭಕ್ತಿುಲ್ಲದ ಬಡವ ನಾನಯ್ಯಾ:
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ,
ದಾಸಯ್ಯನ ಮನೆಯಲ್ಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
350
ಹಿರಿಯಯ್ಯ ಶ್ವಪಚಯ್ಯ,
ಕಿರಿಯಯ್ಯ ಡೋಹರ ಕಕ್ಕಯ್ಯ,
ಅಯ್ಯಗಳಯ್ಯ ನಮ್ಮ ಮಾದಾರ ಚೆನ್ನಯ್ಯ.
ಕೂಡಲಸಂಗಮದೇವಾ,
ನಿಮ್ಮ ಶರಣರು ಎನ್ನ ಸಲಹುವರಾಗಿ.
351
ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,
ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೇರುವ.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ,
ಕೂಡಲಸಂಗಮದೇವಾ.
352
ಎನಗಾರೂ ಇಲ್ಲ, ಎನಗಾರೂ ಇಲ್ಲವೆಂಬರು.
ಬಾಣನವ ನಾನು, ಮಯೂರನವ ನಾನು,
ಕಾಳಿದಾಸನವ ನಾನು.
ಕಕ್ಕಯ್ಯ ಹಿರಿಯಯ್ಯ, ಚಿಕ್ಕಯ್ಯ ಚೆನ್ನಯ್ಯ
ಎತ್ತಿ ಮುದ್ದಾಡಿಸಿದರೆನ್ನ, ಕೂಡಲಸಂಗಯ್ಯಾ.
353
ಅಯ್ಯಾ, ನಿಮ್ಮ ವಂಶವಳಿಯಲು ಒಬ್ಬ ತೊತ್ತಿನ ಮಗ ಹುಟ್ಟಿದ.
ಆತನ ತೊತ್ತಿನ ಮಗ ನಾನಯ್ಯಾ,
ಬಳಿದೊತ್ತು, ಬಳಗದೊತ್ತು, ವಂಶದೊತ್ತು ನಾನಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಒಡೆತನಕ್ಕೆ ಕೇಡಿಲ್ಲವಾಗಿ, ಎನ್ನ ತೊತ್ತುತನಕ್ಕೆ ಕೇಡಿಲ್ಲ.
354
ಕೈಯ ಬೋಹರಿಗೆ, ಮಂಡೆಯ ಮೇಲೆ ಸಿಂಬೆ,
ಸಿಂಬಕನ ಮನೆಯ ಮಗ ನಾನಯ್ಯಾ.
ಕೂಡಲಸಂಗಮದೇವರ ಮಂಚದ ಕೋಡೇರಿ ಬಂದ
ತೊತ್ತಿನ ಮಗ ನಾನಯ್ಯಾ.
355
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ,
ಭಕ್ತರ ಮನೆಯ ತೊತ್ತಾಗಿಪ್ಪುದು ಕರ ಲೇಸಯ್ಯಾ.
`ತಾರೌ ಅಗ್ಘವಣಿ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು.
`ಕೂಡಲಸಂಗನ ಮಹಾಮನೆಯಲ್ಲು
ಒಕ್ಕುದನುಣೌ ತೊತ್ತೇ ಎಂಬರು.
356
ಆನು ನಿಮ್ಮ ಶರಣರಿಗೆ, ಮಂಡೆಯ ಬೋಳಿಸಿಕೊಂಡು
ಗಂಡುದೊತ್ತಾದೆನಯ್ಯಾ.
ಕೂಡಲಸಂಗಮದೇವಯ್ಯಾ, ನಿಮ್ಮ ಶರಣರಿಗೆ.
357
ಅನುದಿನ ಮನಮುಟ್ಟಿ ಧನ್ಯನಯ್ಯಾ, ದಮ್ಮಯ್ಯಾ! ದಮ್ಮಯ್ಯಾ!
ನಿಮ್ಮ ಧರ್ಮದ ಕವಿಲೆಯಾನಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರ ಮನೆಯ ಮಗ ನಾನಯ್ಯಾ.
358
ಕಾಮವ ತೊರೆದಾತ, ಹೇಮವ ಜರೆದಾತ,
ಭಾನುವಿನ ಉದಯಕ್ಕೆ ಒಳಗಾಗದ ಶರಣನು.
ಆಗಳೂ ನಿಮ್ಮ ಮಾಣದೆ ನೆನೆವರ ಮನೆಯಲು ಶ್ವಾನನಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ.
359
ಮೇಲಾಗಲೊಲ್ಲೆನು ಕೀಳಾಗಲಲ್ಲದೆ,
ಕೀಳಿಂಗಲ್ಲದೆ ಹಯನು ಕರೆವುದೆ
ಮೇಲಾಗಿ ನರಕದಲೋಲಾಡಲಾರೆನು.
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು,
ಮಹಾದಾನಿ ಕೂಡಲಸಂಗಮದೇವಾ.
360
ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,
ರುದ್ರಪದವಿಯನೊಲ್ಲೆ.
ನಾನು ಮತ್ತಾವ ಪದವಿಯನೊಲ್ಲೆನಯ್ಯಾ.
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ.
361
ಕಾಗೆ ವ್ಟಿಸುವ ಹೊನ್ನಕಳಸವಹುದರಿಂದ
ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ.
ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ.
ಕರ್ಮಾವಲಂಬಿನಃ ಕೇಚಿತ್ ಕೇಚಿತ್ ಜ್ಞಾನಾವಲಂಬಿನಃ
ವಯಂ ತು ಶಿವಭಕ್ತಾನಾಂ ಪಾದರಕ್ಷಾವಲಂಬಿನಃ
ಕೂಡಲಸಂಗಮದೇವಾ,
ನಿಮ್ಮ ಸೆರಗೊಡ್ಡಿ ಬೇಡುವುದೊಂದೇ ವರವ ಕರುಣಿಸಯ್ಯಾ.
362
ಆವಾವ ಭಾವದಲ್ಲಿ ಮಾಡಿ ಕೂಡಿಹೆನೆಂಬವರ
ಬಾಗಿಲ ತೋರಯ್ಯಾ.
ತನುವನೊಪ್ಪಿಸಿದವರ, ಮನವನೊಪ್ಪಿಸಿದವರ, ಧನವನೊಪ್ಪಿಸಿದವರ
ಬಾಗಿಲ ತೋರಯ್ಯಾ.
ಇವೆಲ್ಲವನೊಪ್ಪಿಸಿ ಜಂಗಮವೆನ್ನವರೆನ್ನವರೆಂಬವರ
ಕೆರಹ ಹೊತ್ತಿರಿಸೆನ್ನನು, ಕೂಡಲಸಂಗಮದೇವಾ.
363
ಆಯತ, ಸ್ವಾಯತದನುಭಾವವ ನಾನೆತ್ತ ಬಲ್ಲೆನು
ಲಿಂಗ ಜಂಗಮಕ್ಕೆ ಮಾಡಿ ನೀಡುವ
ಅಚ್ಚ ಶರಣರ ಮನೆಯಲು ಭೃತ್ಯನಾಗಿಪ್ಪೆನಯ್ಯಾ.
ಇದು ಕಾರಣ ಕೂಡಲಸಂಗನ ಶರಣರಲ್ಲದೆ ಅನ್ಯವನರಿಯೆನಾಗಿ.
364
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕೆ ಭಾನುವಿನ ಉದಯದ ಚಿಂತೆ,
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲಸಂಗನ ಶರಣರ ನೆನೆವುದೆ ಚಿಂತೆ.
365
ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು.
ಬಯಸುತ್ತಿರ್ದೆನಯ್ಯಾ ನಿಮ್ಮ ಭಕ್ತರ ಬರವನು.
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು, ಕೂಡಲಸಂಗಮದೇವಾ.
366
ಸೂರ್ಯನ ಉದಯ ತಾವರೆಗೆ ಜೀವಾಳ,
ಚಂದ್ರಮನುದಯ ನೆ್ದುಲೆಗೆ ಜೀವಾಳ.
ಕೂಪರಠಾವಿನಲ್ಲಿ ಕೂಟ ಜೀವಾಳವಯ್ಯಾ,
ಒಲಿದ ರಾವಿನಲ್ಲಿ ನೋಟ ಜೀವಾಳವಯ್ಯಾ.
ಕೂಡಲಸಂಗನ ಶರಣರ
ಬರವೆನಗೆ ಪ್ರಾಣ ಜೀವಾಳವಯ್ಯಾ.
367
ಜಲವ ತಪ್ಪಿದ ಮತ್ಸ್ಯ ಬದುಕುವುದೇ ಸೋಜಿಗ,
ಗಣತಿಂತಿಣಿಯೊಳಗಿರಿಸೆನ್ನ ಲಿಂಗವೆ.
ಶಿವ ಶಿವಾ, ಕೂಡಲಸಂಗª Àುದೇವಾ,
ಸೆರಗೊಡ್ಡಿ ಬೇಡುವೆನು.
368
ಅಯ್ಯಾ, ನಿಮ್ಮ ಮಹಾವ್ರತಿಗಳನಗಲಿ ಬದುಕಲಾರೆನು.
ಶಿವಧೋ ಶಿವಧೋ ! ಕಂಗಳಶ್ರುಗಳಲ್ಲಿ ಮುಂದುಗಾಣೆನು.
ಲಿಂಗಸಂಗಿಗಳನಗಲಿ ಆನೆಂತು ಬದುಕುವೆ,
ಕೂಡಲಸಂಗಮದೇವಾ.
369
ಜಜ್ಜನೆ ಜರಿದೆನು, ಜಜ್ಜನೆ ಜರಿದೆನು, ಜಜ್ಜನೆ ಜರಿದೆ ನೋಡಯ್ಯಾ,
ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆನು, ಬಿಬ್ಬನೆ ಬಿರಿದೆ ನೋಡಯ್ಯಾ.
ನಾನೊಬ್ಬನೆ ಉಳಿದೆನು, ನಾನೊಬ್ಬನೆ ಉಳಿದೆನು,
ನಾನೊಬ್ಬನೆ ಉಳಿದೆ ನೋಡಯ್ಯಾ.
ಕೂಡಲಸಂಗಮದೇವಾ, ನಿಮ್ಮ ಶರಣರನಗಲಿದ ಕಾರಣ.
370
ಕಂಡರೆ ಮನೋಹರವಯ್ಯಾ, ಕಾಣದಿದ್ದರೆ ಅವಸ್ಥೆ ನೋಡಯ್ಯಾ.
ಹಗಲಿರುಳಹುದು, ಇರುಳು ಹಗಲಹುದು.
ಎಂತದನು ಆಳವಾಡಿ ಕಳೆವೆನು
ಒಂದು ಜುಗ ಮೇಲೆ ಕೆಡೆದಂತೆ ಇಹುದು.
ಕೂಡಲಸಂಗನ ಶರಣರನಗಲುವ ದಾವತಿುಂದ
ಮರಣವೇ ಲೇಸು ಕಂಡಯ್ಯಾ.
371
ಅಂಗೈ ತಿಂದುದೆನ್ನ, ಕಂಗಳು ಕೆತ್ತಿಹವಯ್ಯಾ,
ಬಂದಹರಯ್ಯಾ ಪುರಾತರೆನ್ನ ಮನೆಗೆ,
ಬಂದಹರಯ್ಯಾ ಶರಣರೆನ್ನ ಮನೆಗೆ.
ಕಂಡ ಕನಸು ದಿಟವಾಗಿ ಜಂಗಮ ಮನೆಗೆ ಬಂದರೆ,
ಶಿವಾರ್ಚನೆಯ ಮಾಡುವೆ,
ಕೂಡಲಸಂಗಮದೇವಯ್ಯಾ, ನಿಮ್ಮ ಮುಂದೆ.
372
ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ
ಸುಖವ ಕೊಡು, ಕಂಡಾ ಲಿಂಗವೆ,
ಪರಮಸುಖವ ಕೊಡು, ಕಂಡಾ ಲಿಂಗವೆ.
ಕೂಡಲಸಂಗಮದೇವಾ, ಇದೇ ವರವ ನಿಮ್ಮಲ್ಲಿ ಬೇಡುವೆ.
373
ಮನೆದೈವ, ಕುಲದೈವ ಎನಗೆ ನಿಮ್ಮವರಯ್ಯಾ.
ತನು ವಿೂಸಲು, ಮನ ಮೀಸಲು, ನಯನ ವಿೂಸಲು ಎನ್ನ,
ಕೂಡಲಸಂಗಮದೇವಾ, ನಿಮ್ಮ ಶರಣರಿಗೆ.
374
ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು, ಬತ್ತಿಯನಿಕ್ಕಿ
ಬರವ ಹಾರುತ್ತಿದ್ದೆನೆಲೆಗವ್ವಾ.
ತರಗೆಲೆ ಗಿರಿಕೆಂದಡೆ ಹೊರಗನಾಲಿಸುವೆ;
ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವಾ.
ಕೂಡಲಸಂಗಮದೇವನ ಶರಣರು ಬಂದು, ಬಾಗಿಲ ಮುಂದೆ ನಿಂದು
`ಶಿವಾ' ಎಂದಡೆ, ಸಂತೋಷ ಪಟ್ಟೆನೆಲೆಗವ್ವಾ.
375
 376
ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು
ಗುಡಿ ತೋರಣವ ಕಟ್ಟಿ, ಷಡುಸಮ್ಮಾರ್ಜನೆಯ ಮಾಡಿ,
ರಂಗವಾಲಿಯನಿಕ್ಕಿ `ಉಘೇ, ಚಾಂಗು ಭಲಾ' ಎಂದೆಂಬೆ.
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.
377
 378
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ,
ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ,
ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ,
ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ,
ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ
ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ.
379
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನು,
ಅರಸರಿಯದ ಬಿಟ್ಟಿ ಮಾಡುವೆನು.
ಎನ್ನ ತಾಗಿದ ಸುಖವ ಜಂಗಮಕ್ಕರ್ಪಿಸಲರಿಯದ ಉಪಚಾರಿಯಾನು.
ಸ್ಥಾವರ ಜಂಗಮವನರಿಯದ ಪೂಜಕ ನಾನು.
ಮತ್ತೆ ನಾಚದೇ ಕೂಡಲಸಂಗಮದೇವಯ್ಯಾ,
ಜಂಗಮವೆನ್ನ ಪ್ರಾಣಲಿಂಗವೆಂಬೆನು.
380
ಆವಗೆಯಲೊದಗಿದ ಕರ್ಪಿನಂತೆ,
ಅಮೃತದೊಳಗಿರ್ದ ಸರ್ಪನ ತನುವಿನಂತೆ,
ಇರ್ದೆನಯ್ಯಾ, ಹೊರಗೆ ನುಂಪಾಗಿ.
ಸಿಂಹಕ್ಕೊಲಿದ ಮದಕರಿಯಂತೆ
ಆನು ಜಂಗಮಕ್ಕೊಲಿದೆನಯ್ಯಾ, ಕೂಡಲಸಂಗಮದೇವಾ.
381
ಸ್ಥಾವರ ಜಂಗಮ ಒಂದೆಯೆಂದು ಇದಿರ ನುಡಿದು ನಾನೆಡಹುತಿಪ್ಪೆ.
ಸಹಜನಲ್ಲಯ್ಯಾ,
ಆನು ಸಮ್ಯಕ್ಕನಲ್ಲಯ್ಯಾ.
ಆನುಭಯಲಿಂಗಸಂಗಿಯೆಂಬೆನು,
ಈ ನುಡಿ ಸುಡದಿಹುದೆ, ಕೂಡಲಸಂಗಮದೇವಾ.
382
ಮಸಿಯನೇಸುಕಾಲ ಬೆಳಗಿದರೆ, ಬಿಳಿದಾಗಬಲ್ಲುದೆ
ಕರ್ಮಸ್ಥಿತಿ ಬೆನ್ನ ಬಿಡದು.
ಅನಂತಕೋಟಿ ಸನ್ಮಾನವ ಮಾಡಿದರೇನು
ನಿಮಿಷದ ಉದಾಸೀನ ಕೆಡಿಸಿತ್ತು.
ಕೂಡಲಸಂಗಮದೇವಾ
ನಿಮ್ಮ ನಂಬಿಯೂ ನಂಬದ ಡಂಬಕ ನಾನಯ್ಯಾ.
383
ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾುತ್ತೆನ್ನ ಭಕ್ತಿ.
ಉಪ್ಪ ಅಪ್ಪುವಿನಲ್ಲಿ ಅದ್ದಿ ಮೆಲಿದಂತಾುತ್ತೆನ್ನ ಭಕ್ತಿ.
ಕೂಡಲಸಂಗಮದೇವಾ,
ಆನು ಮಾಡದೆನೆಂಬ ಕಿಚ್ಚು ಸಾಲದೆ.
384
ಅಷ್ಟವಿಧಾರ್ಚನೆ ಷೋಡಶೋಪಚಾರವ
ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ.
ಲಿಂಗವೆಂದರಿಯದೆ, ಜಂಗಮವೆಂದರಿಯದೆ,
ಪ್ರಸಾದವೆಂದರಿಯದೆ ಆನು ಬೆಂದೆನಯ್ಯಾ.
ಕೂಡಲಸಂಗಮದೇವಾ, ಆನು ಮಾಡುವುದೆಲ್ಲವೂ
ಉಪಚಾರವಯ್ಯಾ.
385
 386
ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ,
ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ-
ಅಯ್ಯೋ, ನೊಂದೆನು, ಸೈರಿಸಲಾರೆನು !
ಅಯ್ಯಾ, ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ-
ಅಯ್ಯೋ ನೊಂದೆನು, ಸೈರಿಸಲಾರೆನು.
ಕೂಡಲಸಂಗಮದೇವಾ,
ನೀನೆನಗೆ ಒಳ್ಳಿದನಾದಡೆ
ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ !
387
ಎನ್ನವರೆನಗೊಲಿದು ಹೊನ್ನಶೂಲವನಿಕ್ಕಿದರಯ್ಯಾ.
ಅಹಂಕಾರಪೂರಾಯ ಘಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ
ಜಂಗಮವಾಗಿ ಬಂದು ಜರೆದು, ಸೂಲವನಿಳುಹಿ,
ಪ್ರಸಾದದ ಮದ್ದನಿಕ್ಕಿ,
ಸಲಹು ಕೂಡಲಸಂಗಮದೇವಾ.
388
ಎಡದ ಕೈಯಲು ಹಾಲ ಬಟ್ಟಲು, ಬಲದ ಕೈಯಲು ಓಜುಗಟ್ಟಿಗೆ,
ಆವಾಗ ಬಂದಾನೆಮ್ಮಯ್ಯ,
ಬಡಿದು ಹಾಲ ಕುಡಿಸುವ ತಂದೆ.
ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ
ಅತಿಭಕ್ತ್ಯಾ ಲಿಂಗತ್ಟುರಪಹಾಸ್ಯಾದ್ಯಮದಂಡನಮ್!
ಎಂದುದಾಗಿ, ಕೂಡಲಸಂಗಮದೇವಯ್ಯ, ತಾನೆ
ಭಕ್ತಿಯ ಪಥವ ತೋರುವ ತಂದೆ.
389
ಎನ್ನ ಆಪತ್ತು, ಸುಖ-ದುಃಖವನಿನ್ನಾರಿಗೆ ಹೇಳುವೆ
ಶರಣಸ್ಥಲದವರಿಗೆ ಹೇಳಿದಡೆ ಮಚ್ಚರ !
ಸವತಿ-ಸಕ್ಕರೆ, ಬೇವು-ಬೆಲ್ಲ ಉಂಟೆ! ಇನ್ನಾರಿಗೆ ಹೇಳುವೆ!
ಕೂಡಲಸಂಗಮದೇವಾ, ಜಂಗಮವಾಗಿ ಬಂದು
ಎನ್ನ ಮನದ ಸೂತಕವ ಕಳೆಯಾ.
390
ನಾನಾಸ್ಥಾನಂಗಳಲ್ಲಿ ಬಂದು ಕುಳ್ಳಿರ್ದುದು ತೆರಳುವುದೆ, ಅಯ್ಯಾ;
ಉಭಯಕುಳಕ್ಕಲ್ಲದೆ ತೆರಳದು.
ಬೀದಿಯಲ್ಲಿ ಬಿದ್ದ ಶಿಶುವನು
ಹೆತ್ತ ತಾು ಹತ್ತಿರೆ ಬಂದು ಎತ್ತುವಂತೆ,
ಎನ್ನನಾರು ಜನ್ಮಕ್ಕೆ ತಂದು ಅಘೋರನರಕದಲ್ಲಿಕ್ಕಿದುದ ನಾನು ಬಲ್ಲೆ.
ಕೂಡಲಸಂಗಮದೇವಾ ನಿಮ್ಮ ಹಂಗೇನು ಹರಿಯೇನು
ಉಭಯ ಲಿಂಗ ಜಂಗಮದ ಮೊರೆಹೊಕ್ಕು ಬದುಕಿದೆನು.
391
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಮೀನಜ, ರೋಮಜ ಮಹಾಮುನಿಗಳ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ನವಕೋಟಿಬ್ರಹ್ಮರಿಗೆ
ಪ್ರಳಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ದಶಕೋಟಿ ನಾರಾಯಣರಿಗೆ
ಮರಣವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಅನಂತಕೋಟಿರುದ್ರರಿಗೆ
ಲಯವ ಮಾಡುವುದ ನಾ ಬಲ್ಲೆನಾಗಿ.
ಅಯ್ಯಾ, ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ :
ಎನ್ನನೇಳೇಳು ಭವಕ್ಕೆ ತಂದಲ್ಲಿ,
ಆನುಭಯಲಿಂಗಜಂಗಮದ ಮೊರೆಹೊಕ್ಕು
ಭವಂ ನಾಸ್ತಿಯಾಗಿ ಬದುಕಿದೆನಯ್ಯಾ,
ಕೂಡಲಸಂಗಮದೇವಾ.
392
ಲಿಂಗದರ್ಶನ ಕರಮುಟ್ಟಿ, ಜಂಗಮದರ್ಶನ ಶಿರಮುಟ್ಟಿ,
ಆವುದ ಘನವೆಂಬೆ, ಆವುದ ಕಿರಿದೆಂಬೆ
ತಾಳಸಂಪುಟಕ್ಕೆ ಬಾರದ ಘನವ ಅರ್ಪಿಸ ಹೋದಡೆ.
393
ಶಿವಭಕ್ತರೆ ಅದ್ಥಿಕರು ನೋಡಯ್ಯಾ.
ಇದಕ್ಕೆ ಅದ್ಥಿಕವಾಗಿ ಜಂಗಮವ ಕಂಡೆ.
ಈ ದ್ವಿವಿಧವನೊಂದೆ ಎಂದು ನಂಬಿದೆ,
ಕೂಡಲಸಂಗಮದೇವಾ.
394
ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ,
ತ್ರೇತಾಯುಗದಲ್ಲಿ ವಾರಣಾಸಿಯೆಂಬ ಮೂಲಸ್ಥಾನ,
ದ್ವಾಪರದಲ್ಲಿ ವಿರೂಪಾಕ್ಷನೆಂಬ ಮೂಲಸ್ಥಾನ,
ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ-
ಈ ನಾಲ್ಕು ಮೂಲಸ್ಥಾನ.
ನಾನಾ ಸ್ಥಾನವ ಮುಟ್ಟದೆ ಜಂಗಮವೆ ಲಿಂಗವೆಂದು ನಂಬಿದೆ,
ಕೂಡಲಸಂಗಮದೇವಾ.
395
ಭಕ್ತದೇಹಿಕನಪ್ಪ ದೇವನು ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ,
ಆಳ್ದನು ಬರಲಾಳು ಮಂಚದ ಮೇಲಿಪ್ಪುದು ಗುಣವೇ ಹೇಳಾ.
ಕೂಡಲಸಂಗಮದೇವಾ,
ಜಂಗಮರೂಪಾಗಿ ಸಂಗಯ್ಯ ಬಂದಾನೆಂದು
ಎಂದೆಂದೂ ನಾನು ಮಂಚವನೇರದ ಭಾಷೆ.
396
ಜಂಗಮದ ಸನ್ನಿಧಿಯಲ್ಲಿ ವಾಹನವನೇರಲಮ್ಮೆ :
ಏರಿದರೆ ಭವ ಹಿಂಗದು.
ಏನು ಕಾರಣ ಮುಂದೆ ಸೂಲವನೇರುವ ಪ್ರಾಪ್ತಿಯುಂಟಾದ ಕಾರಣ,
ಜಂಗಮ ಬರಲಾಸನದಲ್ಲಿ ಇರಲಮ್ಮೆ :
ಇದ್ದರೆ ಭವ ಹಿಂಗದು.
ಏನು ಕಾರಣ ಮುಂದೆ ಕಾಯ್ದ ಇಟ್ಟಿಗೆಯ ಮೇಲೆ
ಕುಳ್ಳಿರುವ ಪ್ರಾಪ್ತಿಯುಂಟಾದ ಕಾರಣ.
ಜಂಗಮದ ಮುಂದೆ ದಿಟ್ಟತನದಲ್ಲಿ ಬೆರೆತು ನಿಂದಿರಲಮ್ಮೆನು
ನಿಂದಡೆ ಭವ ಹಿಂಗದಾಗಿ.
ಏನು ಕಾರಣ:ಮುಂದೆ ಹೆಡಗುಡಿಯ ಕಟ್ಟಿ
ಕುಳ್ಳಿರಿಸುವ ಪ್ರಾಪ್ತಿಯುಂಟಾದ ಕಾರಣ.
ಇಂತೀ ಬಾಧೆ ಭವಂಗಳಿಗಂಜುವೆನಯ್ಯಾ.
ನಿಮ್ಮವರ ಸುಳುಹು ನೀವೆಂದೇ ಭಾವಿಸಿ,
ತೊತ್ತು-ಭೃತ್ಯನಾಗಿಪ್ಪೆನಯ್ಯಾ, ಕೂಡಲಸಂಗಮದೇವಾ.
397
ಜಂಗಮವಿರಹಿತ ಲಿಂಗಾರ್ಚನೆ :ಓಡ ಬಿಲಲೆರೆದ ಜಲದಂತೆ.
ಜಂಗಮಸನ್ನಿಹಿತ ಲಿಂಗಾರ್ಚನೆ :ಇದೆ ಭಕ್ತಿಗೆ ಪಥವಯ್ಯಾ
ಜಂಗಮಪ್ರಸಾದಭೋಗೋಪಭೋಗವು :ಎನಗಿದೇ ಲಿಂಗಾರ್ಚನೆ.
ಬೇರೆ ಮತ್ತೊಂದನರಿದೆನಾದಡೆ,
ಕೂಡಲಸಂಗಮದೇವ ನರಕದಲ್ಲಿಕ್ಕುವ.
398
ಭಿತ್ತಿುಲ್ಲದೆ ಬರೆಯಬಹುದೆ ಚಿತ್ತಾರವ
ಬಿತ್ತಿ ಬೆಳೆಯಬಹುದೆ ಧರೆುಲ್ಲದೆ
ಜಂಗಮವಿಲ್ಲದೆ ಲಿಂಗಾರ್ಚನೆಯ ಮಾಡಬಹುದೆ
ರೂಡ್ಥೀಶ್ವರನ ಭೇದಿಸಬಹುದೆ ! ಒಡಲಿಲ್ಲ[ದೆ].
ನಿರಾಳಕರ್ತೃ ಕೂಡಲಸಂಗಮದೇವ
ಜಂಗಮಮುಖವಾದನಾಗಿ ಮತ್ತೊಂದನರಿಯೆನಯ್ಯಾ.
399
ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು.
ಮಾಡಿದಡೆ ಮಾಡಲಿ, ಮಾಡಿದಡೆ ತಪ್ಪೇನು
ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದಡೆ
ಅದು ಪ್ರಸಾದವಲ್ಲ, ಕಿಲ್ಬಿಷ.
ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ
ಪ್ರಸಾದಕ್ಕೆ ಕೈದೆಗೆದಡೆ, ಅದು ಲಿಂಗಕ್ಕೆ ಬೋನ.
ಇದು ಕಾರಣ, ಕೂಡಲಸಂಗಮದೇವಾ,
ಇಂತಪ್ಪ ಸದಾಚಾರಿಗಳನೆನಗೆ ತೋರಾ.
400
ಉತ್ತಮ ಮಧ್ಯಮ ಕನಿಷ್ಟವೆಂದು, ಬಂದ ಜಂಗಮವನೆಂದೆನಾದಡೆ
ನೊಂದೆನಯ್ಯಾ, ಬೆಂದೆಯಯ್ಯಾ, ಎನ್ನ ಕಿಚ್ಚು ಎನ್ನ ಸುಟ್ಟಿತ್ತು.
ಸುಖಿಜಂಗಮ, ಸಾಮಾನ್ಯಜಂಗಮ ಉಂಟೆ,
ಕೂಡಲಸಂಗಮದೇವಾ.
401
ಲಾಂಛನವ ಕಂಡು ನಂಬುವೆ, ಅವರಂತರಂಗವ ನೀನೇ ಬಲ್ಲೆ.
ತೊತ್ತಿಂಗೆ ತೊತ್ತುಗೆಲಸವಲ್ಲದೆ, ಅರಸರ ಸುದ್ದಿ ಎಮಗೇಕಯ್ಯಾ
ರತ್ನಂವಕ್ತಿಕದಚ್ಚು,
ಕೂಡಲಸಂಗಮದೇವಾ ನಿಮ್ಮ ಶರಣರು.
402
ಆರಾರ ಮನದಲ್ಲಿ ಏನೇನಿಹುದೆಂದರಿಯೆ.
ಒಳ್ಳಿಹರೆಂದೆನಲಮ್ಮೆ, ಹೊಲ್ಲಹರೆಂದೆನಲಮ್ಮೆ, ಶಿವಭಕ್ತರಾದ ಕಾರಣ.
ಜಂಗಮವೆ ಲಿಂಗ ಕೂಡಲಸಂಗಮದೇವಾ.
403
ಸಂಗಸಹಿತ ಶರಣರು ಬಂದರೆ
ನಂಬುವುದೆನ್ನ ಮನವು, ನಚ್ಚುವುದೆನ್ನ ಮನವು.
ಹಾವು ನೇಣೆಂಬ ಭ್ರಾಂತುಳ್ಳನ್ನಕ್ಕ ನಾನು ಭಕ್ತನೆಂತಪ್ಪೆನು
ಅಂಗಲಿಂಗ ಸನ್ನಿಹಿತವಾಗಿ ಬಂದಡೆ, ಸಂಗ ನೀನೆಂದು,
ಮತ್ತೆ ಮನದಲ್ಲಿ ಸಂದೇಹ ಹೊಳೆದಡೆ
ಬೆಂದೆನಲ್ಲಾ ನಾನು, ಕೂಡಲಸಂಗಮದೇವಾ.
404
ಕೆಂಡದಲ್ಲಿಟ್ಟಡೆ ಮೆರ್ಐ ಬೆಂದುದೆಂಬರು.
ಕೊಂಡಿಟ್ಟವನ ಕೈ ಮುನ್ನವೆ ಬೆಂದೂದು.
ನೊಂದೆ, ನಾನು ನೊಂದೆನಯ್ಯಾ. ಬೆಂದೆ, ನಾನು ಬೆಂದೆನಯ್ಯಾ.
ಕೂಡಲಸಂಗನ ಶರಣರ ಕಂಡು ಕಾಣದಂತಿದ್ದಡೆ
ಅಂದೇ ಬೆಂದೆನಯ್ಯಾ.
405
ಎಡದ ಕೈಯಲು ನಿಗಳವನಿಕ್ಕಿ
ಬಲದ ಕೈಯ ಕಡಿದುಕೊಂಡಡೆ ನೋಯದಿಪ್ಪುದೆ
ಪ್ರಾಣವೊಂದಾಗಿ ದೇಹ ಬೇರಿಲ್ಲ.
ಲಿಂಗವ ಪೂಜಿಸಿ ಜಂಗಮವನುದಾಸೀನವ ಮಾಡಿದಡೆ
ಬೆಂದೆನಯ್ಯಾ ನಾನು, ಕೂಡಲಸಂಗಮದೇವಾ.
406
ತನುವ ನೋುಸಿ, ಮನವ ಬಳಲಿಸಿ,
ನಿಮ್ಮ ಪಾದವಿಡಿದವರೊಳರೆ ಈ ನುಡಿ ಸುಡದಿಹುದೆ
ಕೂಡಲಸಂಗಮದೇವಾ,
ಶಿವಭಕ್ತರ ನೋವೇ ಅದು ಲಿಂಗದ ನೋವು.
407
ಆತ್ಮಸ್ತುತಿ ಪರನಿಂದೆಯ ಕೇಳಿಸದಿರಯ್ಯಾ, ನಿಮ್ಮ ಧರ್ಮ
ಆನು ಭಕ್ತನೆನ್ನಲ್ಲಿ ಲೇಸುಂಟೆಂದು ಪರಿಣಾಮಿಸಿದಡೆ
ನಿಮಗಾನು ದ್ರೋಹಿಯಯ್ಯಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಲೇಸೇ ಎನ್ನ ಲೇಸಯ್ಯಾ.
408
ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು ! ಫಲವೇನು !
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.
409
ಬಂಜೆ ಬೇನೆಯನರಿಯದಂತೆ
ಒಬ್ಬರೊಂದ ನುಡಿವಿರಿ, ಕೇಳಿರಯ್ಯಾ.
ಎನಗೆ ಆಯುಷ್ಯ ಭವಿಷ್ಯ, ಎನ್ನ ಭಕ್ತರು.
ಎನಗೆ ಆಯುಷ್ಯ ಭವಿಷ್ಯ, ಎನ್ನ ಪ್ರಮಥರು ಕಂಡಯ್ಯಾ.
ಕೂಡಲಸಂಗನ ಶರಣರು ಮುಖಲಿಂಗಿಗಳಯ್ಯಾ.
410
ಬೇರೂರಲಿದ್ದು ಬಂದ ಜಂಗಮವೆ ಲಿಂಗವೆಂದು,
ಮನೆಯಲಿದ್ದ ಜಂಗಮವನುದಾಸೀನವ ಮಾಡಿದಡೆ
ನಾನು ಬೆಂದೆನಯ್ಯಾ.
ಆನು ಬೆಂದ ಬೇಗೆಯನರಿಯೆ, ಕಾಣಾ
ಕೂಡಲಸಂಗಮದೇವಾ.
411
ಉಟ್ಟು-ತೊಟ್ಟು ಪೂಜ್ಯವಾಗಿ ಬಂದ ಜಂಗಮ ವಿಶೇಷವೆಂದು,
ಕಂತೆ-ಬೊಂತೆಯ ಜಂಗಮ ಬಂದಡೆ ಹೀನವೆಂದು
ಕಂಡೆನಾದಡೆ ಪಂಚಮಹಾಪಾತಕ.
ಇದು ಕಾರಣ, ಅನ್ನ-ವಸ್ತ್ರ-ಧನ ಮಾಟದಲ್ಲಿ
ಎರಡಾಗಿ ಕಂಡೆನಾದಡೆ ನರಕದಲ್ಲಿಕ್ಕುವ,
ಕೂಡಲಸಂಗಮದೇವ.
412
ಅಡ್ಡದೊಡ್ಡ ನಾನಲ್ಲಯ್ಯಾ, ದೊಡ್ಡ ಬಸುರನಲ್ಲಯ್ಯಾ,
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯಾ.
ಹಡೆದುಂಬ ಸೂಳೆಯಂತೆ ಧನವುಳ್ಳವರನರಸಿ ಅರಸಿ
ಬೋದ್ಥಿಸಲು, ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯಾ,
ದೊಡ್ಡತನವೆನಗಿಲ್ಲಯ್ಯಾ, ಅಂಜುವೆನಂಜುವೆ ನಿಮ್ಮ ಪ್ರಮಥರಿಗೆ.
ಅನಾಥ ನಾನಯ್ಯಾ, ಕೂಡಲಸಂಗಮದೇವಾ.
413
ಕುದುರೆ- ಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು,
ಬಡಭಕ್ತರು ಬಂದಡೆ `ಎಡೆುಲ್ಲ, ಅತ್ತ ಸನ್ನಿ' ಎಂಬರು.
ಎನ್ನೊಡೆಯ ಕೂಡಲಸಂಗಯ್ಯನವರ
ತಡಗೆಡಹಿ ಮೂಗ ಕೊಯ್ಯದೆ ಮಾಬನೆ.
414
ದೂರದಿಂದ ಬಂದ ಜಂಗಮವನಯ್ಯಗಳೆಂದು,
ಸಾರಿದ್ದ ಜಂಗಮವ ಪರಿಚಾರಕರೆಂಬ ಕೇಡಿಂಗೆ ಬೆರಗಾದೆನಯ್ಯಾ.
ಸಾರಿದ್ದವರು, ದೂರದವರೆಂದು ಬೇರೆ ಮಾಡಿ ಕಂಡಡೆ,
ಕೂಡಲಸಂಗಮದೇವ ಸಿಂಗಾರದ ಮೂಗ ಕೊಯ್ಯದೆ ಮಾಬನೆ.
415
ಹಿಡಿವೆಡೆಯನೆ ಕಾಸಿ ಹಿಡಿವ,
ಕೈಬೆಂದು ಮಿಡುಮಿಡನೆ ಮಿಡುಕುವ,
ಮರುಳ ಮಾನವನೇ
ಬಡವರೆಂದೆನಬೇಡ ಲಾಂಛನಧಾರಿಯನು,
ಕಡುಸ್ನೇಹದಿಂದವರ ಪೂಜೆಮಾಡುವುದು.
ನಿಜವಡಗಿದ ರೂಪು, ನಿರ್ವಯಲಸ್ಥಾನ,
ನಡೆಲಿಂಗ ಜಂಗಮ ±ಕೂಡಲಸಂಗಮದೇವ.
416
ಹಾಲ ಕಂದಲು, ತುಪ್ಪದ ಮಡಕೆಯ
ಬೋಡು ಮುಕ್ಕೆನಬೇಡ.
ಹಾಲು ಸಿಹಿ, ತುಪ್ಪ ಕಮ್ಮನೆ :ಲಿಂಗಕ್ಕೆ ಬೋನ.
ಕೂಡಲಸಂಗನ ಶರಣರ
ಅಂಗಹೀನರೆಂದಡೆ ನಾಯಕನರಕ.
417
ಆಚಾರವರಿುರಿ, ವಿಚಾರವರಿುರಿ
ಜಂಗಮಸ್ಥಲ ಲಿಂಗ ಕಾಣಿರಯ್ಯಾ.
ಜಾತಿಭೇದವಿಲ್ಲ, ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ.
ನುಡಿದಂತೆ ನಡೆಯದಿದ್ದಡೆ
ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯಾ.
418
ಸ್ಥಾವರಭಕ್ತಂಗೆ ಸೀಮೆಯಲ್ಲದೆ
ಘನಲಿಂಗಜಂಗಮಕ್ಕೆ ಸೀಮೆಯೆಲ್ಲಿಯದು
ಅಂಬುಧಿಗೆ ಸೀಮೆಯಲ್ಲದೆ
ಹರಿವ ನದಿಗೆ ಸೀಮೆಯೆಲ್ಲಿಯದು
ಭಕ್ತಂಗೆ ಸೀಮೆಯಲ್ಲದೆ
ಜಂಗಮಕ್ಕೆ ಸೀಮೆಯುಂಟೆ
ಕೂಡಲಸಂಗಮದೇವಾ.
419
ಎತ್ತಿಕೊಳ್ಳಲೇಕೆ, ಮತ್ತಿಳುಹಲೇಕಯ್ಯಾ
ಧರಧುರ ಭಕ್ತಿಯ ಮಾಡಲೇಕಯ್ಯಾ
ನಿಂದಿಸಲೇಕೆ ಸ್ತುತಿುಸಲೇಕೆ
ಹೋಗಬಿಟ್ಟು ಜಂಗಮವ ಹಿಂದೆಯಾಡುವನ ಬಾಯಲ್ಲಿ
ಮೆಟ್ಟಿ ಹುಡಿಹೊಯ್ಯದೆ ಮಾಬನೆ
ಕೂಡಲಸಂಗಮದೇವ.
420
ಮರಕ್ಕೆ ಬೇರು ಬಾುಯೆಂದು ತಳುಂಕೆ ನೀರನೆರೆದಡೆ
ಮೇಲೆ ಪಲ್ಲವಿಸಿತ್ತು ನೋಡಾ.
ಲಿಂಗದ ಬಾು ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನೀವನು.
ಆ ಜಂಗಮವ ಹರನೆಂದು ಕಂಡು, ನರನೆಂದು ಭಾವಿಸಿದಡೆ
ನರಕ ತಪ್ಪದು, ಕಾಣಾ ಕೂಡಲಸಂಗಮದೇವಾ.
421
ಆರಾಧನೆಯ ಮಾಡಿದಡೆ ಅಮೃತದ ಬೆಳಸು,
ವಿರೋದ್ಥಿಸಿದಡೆ ವಿಷದ ಬೆಳಸು,
ಇದು ಕಾರಣ ಜಂಗಮಕ್ಕೆ ಅಂಜಲೇಬೇಕು.
ಸ್ಥಾವರ ಜಂಗಮ ಒಂದೆಂದರಿದಡೆ
ಕೂಡಲಸಂಗಮದೇವ ಶರಣಸನ್ನಿಹಿತ.
422
ಹೊಸತಿಲ ಪೂಜಿಸಿ ಹೊಡವಂಟು ಹೋದ
ಒಕ್ಕಲಿತಿಯಂತಾುತ್ತೆನ್ನ ಭಕ್ತಿ.
ಜಂಗಮವೆನ್ನೊಡೆಯರೆಂದು ಒಕ್ಕುದ ಕೊಂಡು
ಉದಾಸೀನವ ಮಾಡಿದಡೆ,
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ !
ಕೂಡಲಸಂಗಮದೇವ ಅಘೋರನರಕದಲ್ಲಿಕ್ಕುವ.
423
ಲಿಂಗವ ಪೂಜಿಯ ಮಾಡಿ, ಜಂಗಮವ ಕಂಡು ಉದಾಸೀನವ ಮಾಡಿದಡೆ,
ಆ ಲಿಂಗಪೂಜಕರಿಗೆ ಮಾಡಿದ, ಶಿವದೂತರ ದಂಡವೆಂಬುದ.
ಲೋಕದ ಕರ್ಮಿಗಳಿಗೆ ಮಾಡಿದ, ಯಮದೂತರ ದಂಡವೆಂಬುದ.
ಇದು ಕಾರಣ ಲಿಂಗ ಜಂಗಮವನೊಂದೆಂದರಿಯದವರ ಎನಗೆ
ತೋರದಿರಯ್ಯಾ, ಕೂಡಲಸಂಗಮದೇವಾ.
424
ಜಂಗಮನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ ಆಂಗವಣಿಯೆಂತೊರಿ
ಶಿವಾ ಶಿವಾ ನಿಂದಿಸುವ ಪೂಜಿಸುವ ಪಾತಕವಿದ ಕೇಳಲಾಗದು.
ಗುರುವಿನ ಗುರು ಜಂಗಮ-
ಇಂತೆಂದುದು ಕೂಡಲಸಂಗನ ವಚನ.
425
ಅರಸನ ಕಂಡು ತನ್ನ ಪುರುಷನ ಮರೆದಡೆ
ಮರನನೇರಿ ಕಯ್ಯ ಬಿಟ್ಟಂತಾುತ್ತಯ್ಯಾ.
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ !
ನಮ್ಮ ಕೂಡಲಸಂಗಮದೇವಯ್ಯ
ಜಂಗಮಮುಖ ಲಿಂಗವಾದ ಕಾರಣ.
426
ಜಂಗಮವಿಲ್ಲದ ಮಾಟ ಕಂಗಳಿಲ್ಲದ ನೋಟ,
ಹಿಂಗಿತ್ತು ಶಿವಲೋಕ ಇನ್ನೆಲ್ಲಿಯದಯ್ಯಾ.
ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ,
ಸಮಯೋಚಿತವನರಿಯದೆ ಉದರವ ಹೊರೆವವರ
ನರಕದಲ್ಲಿಕ್ಕದೆ ಮಾಬನೆ ಕೂಡಲಸಂಗಮದೇವ.
427
ಲಿಂಗದಲ್ಲಿ ದಿಟವನರಸುವಡೆ ಜಂಗಮವ ನೆರೆ ನಂಬುವುದು.
ನಡೆಲಿಂಗ, ನುಡಿಲಿಂಗ, ಮುಖಲಿಂಗವೆಂದೆ ನಂಬೋ !
`ಯತ್ರ ಮಾಹೇಶ್ವರಸ್ತತ್ರಸನ್ನಿಹಿತನಾಗಿ
ಅಧರ ತಾಗಿದ ರುಚಿಯನುದರ ತಾಗಿದ ಸುಖವ
ಉಂಬ ಉಡುವ ಕೂಡಲಸಂಗಮದೇವ, ಜಂಗಮಮುಖದಲ್ಲಿ.
428
ಜಂಗಮದ ಮನ-ಭಾವದಲ್ಲಿ ಭಕ್ತನೆ ಭೃತ್ಯನೆಂದು,
ಭಕ್ತನ ಮನ-ಭಾವದಲ್ಲಿ ಜಂಗಮವೆ ಕರ್ತನೆಂದು ಇದ್ದ ಬಳಿಕ,
ಬಂದಿತ್ತು-ಬಾರದು, ಇದ್ದತ್ತು-ಹೋುತ್ತೆಂಬ ಸಂದೇಹವಿಲ್ಲದಿರಬೇಕು.
ಹೋುತ್ತೆಂಬ ಗುಣವುಳ್ಳನ್ನಕ್ಕ
ನಿಮಗೆ ದೂರ, ನಿಮ್ಮವರಿಗೆ ಮುನ್ನವೆ ದೂರ,
ಶಿವಾಚಾರಕ್ಕಲ್ಲಿಂದತ್ತ ದೂರ.
ಜಂಗಮದ ಹರಿದ ಹರಿವು, ಜಂಗಮದ ನಿಂದ ನಿಲವು,
ಜಂಗಮದ ಗಳಗರ್ಜನೆ, ಜಂಗಮದ ಕೋಳಾಟಕ್ಕೆ ಸೈರಿಸದಿದ್ದಡೆ
ನೀನಂದ ಮೂಗ ಕೊಯ್ ಕೂಡಲಸಂಗಮದೇವಾ.
429
ನಯನದಾಹಾರವ ಜಂಗಮವ ನೋಡಿಸುವೆನು,
ಶ್ರೋತ್ರದಾಹಾರವ ಜಂಗಮವ ಕೇಳಿಸುವೆನು,
ಘ್ರಾಣದಾಹಾರವ ಜಂಗಮವ ವಾಸಿಸುವೆನು,
ಜಿಹ್ವೆಯಾಹಾರವ ಜಂಗಮವನೂಡಿಸುವೆನು,
ಕವಚದಾಹಾರವ ಜಂಗಮಕ್ಕೆ ಹೊದ್ದಿಸುವೆನು,
ಅಧಿಕ ಪ್ರೇಮ ಪರಿಣಾ[ಮ]ವ ಮಾಡುವೆನು,
ಸಕಲಪದಾರ್ಥಂಗಳ ನೀಡುವೆನು,
ಕೂಡಲಸಂಗಾ ನಿಮ್ಮ ಶರಣರಿಗೆ.
430
ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೆ ಮುಖವಾಗಿ
ಕಾಡಿ ನೋಡೆನ್ನನು, ಬೇಡಿ ನೋಡೆನ್ನನು,
ಬೇಡದಿದ್ದಡೆ, ಅಯ್ಯಾ, ನಿಮಗೆ ಪ್ರಮಥರಾಣೆ.
ನೀನಾವ ಮುಖದಲ್ಲಿ ಬಂದು ಬೇಡಿದೊಡೀವೆನು.
ಕೂಡಲಸಂಗಮದೇವಾ.
431
ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ,
ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ,
ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ.
ಕಾಡುವ ಬೇಡುವ ಶರಣರ ತಂದು
ಕಾಡಿಸು ಬೇಡಿಸು ಕೂಡಲಸಂಗಮದೇವಾ.
432
ವೇಷ ಅವಿಚಾರದಲ್ಲಿ ನಡೆುತ್ತೆಂದು
ಆಸುರದಲ್ಲಿ ಬಗುಳುವ ಕುನ್ನಿ, ನೀ ಕೇಳಾ :
ಹರಿಯನೆ ದಾಸನ ವಸ್ತ್ರವ:ಉಣ್ಣನೆ ಚೆನ್ನಯ್ಯನ ಸಂಗಾತ
ಪರವಧುವ ಕೊಳ್ಳನೆ ಸಿಂಧುಬಲ್ಲಾಳನ:ಬೇಡನೆ ಸಿರಿಯಾಳನ ಮಗನ
ನಡೆವುದು ನುಡಿವುದು ಅವಿಚಾರವೆಂದು,
ಭಾವ ವಿಭಾವವೆಂದು ಕಂಡೆನಾದಡೆ ತಪ್ಪೆನ್ನದು, ಮೂಗ ಕೊ್ಯು,
ಕೂಡಲಸಂಗಮದೇವಾ.
433
ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳಡೆ
ಸಂಗಾ, ನಿಮ್ಮ ತೊತ್ತುತನಕ್ಕೆ ದೂರವಯ್ಯಾ.
ಕದ್ದು ತಿಂದಡೆ ಕೈಹಿಡಿದೊಮ್ಮೆ ಬಡಿದು
ತುಡುಗುಣಿತನವ ಬಿಡಿಸಯ್ಯಾ.
ಜಂಗಮ ಮನೆಗೆ ಬಂದಲ್ಲಿ ಓಸರಿಸಿದಡೆ
ಹಿಡಿದು ಮೂಗ ಕೊಯ್ಯಯ್ಯಾ
ಕೂಡಲಸಂಗಮದೇವಾ.
434
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ಬಲ್ಲಾಳನ ವಧುವ ಬೇಡಿದಾತನೀ ದೇವ.
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ದಾಸನ ವಸ್ತ್ರವ ಬೇಡಿದಾತನೀ ದೇವ.
ದೇವನಿಂತಹನೆಂದು ತೋರಿಯೆ ಕೊಡುವೆನು ಗಣಂಗಳಿಗೆ;
ಸಿರಿಯಾಳನ ಮಗನ ಬೇಡಿದಾತನೀ ದೇವ.
ಕೂಡಲಸಂಗಮದೇವ ಜಂಗಮಮುಖಲಿಂಗವಾಗಿ
ಕಾಡಿ ನೋಡುವ, ಬೇಡಿ ನೋಡುವ.
435
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣಿ.
ನಿಮ್ಮ ಶರಣರಿಗಲ್ಲದೆಮತೊಂದನರಿಯೆ
ಕೂಡಲಸಂಗಮದೇವಾ.
436
ಆಲುತ್ತಲು ಹರೆಯ ಹೊುಸಿ, ಅಂಕವ ಮಾಡಿದೆನೆಲ್ಲರ ಕಂಡು.
ಆನು ಬೇಡೆಂದಡೆ ಮಾಣೆ, ಕಲಿತನ ಮಾಡಿದೆನೆಲ್ಲರ ಕಂಡು.
ಅಲ್ಲಿ ಹೋುತ್ತು ಗಳೆಯೆಂದಡೆ
ಆಸೆ ಮಾಡೆನು, ಕೂಡಲಸಂಗಮದೇವಾ.
437
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿುಂದ ಕರಕಷ್ಟ
ಕೂಡಲಸಂಗಮದೇವಾ.
438
ಆವನೇವನಾದಡೇನು ಹೇಮವಿಲ್ಲದಂಗೈಸಬಹುದೆ
ಕೊಡಲಿಲ್ಲೆಂಬುದರಿಂದ ಸಾಯಲುಬಹುದು, ಸೈರಿಸಬಾರದು.
ಬೇಡುವವರ ನೋಡಿ ನೋಡಿ, ಈಯಲಿಲ್ಲದ ಜೀವನವದೇಕೆ
ಕೂಡಲಸಂಗಮದೇವಾ.
439
ಹರಗಣಪಙ್ತಯ ನಡುವೆ ಕುಳ್ಳಿರ್ದು
ನಾನು ಒಡೆತನದ ನಾುತೇಜವ ಹೊತ್ತುಕೊಂಡು,
ಮಡದಿಯೆನ್ನಗಲೊಳಗೆ ಸಕಲದೇವಾನ್ನವ
ಒಡೆಯರಿಂದವೂ ಮಿಗಿಲಾಗಿ ಇಕ್ಕಲು, ತೆಗೆದಿರಿಸಿದೆನು.
ಈ ಪರಿಯ ಆಯ ಕಣ್ಗೆ ತೋರಲು ಕಿಲ್ಬಿಷವಾದವು.
ಕರುಣಿ ಚನ್ನಬಸವಣ್ಣಾ, ಮರೆದು ಕೊಂಡೆನಾದಡೆ,
ಒಡೆಯ ಕೂಡಲಸಂಗಯ್ಯ ಕೆಡಹಿ ನರಕದಲ್ಲಿಕ್ಕುವ.
440
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ.
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.
441
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ.
ಓಡಲಾಗದು ಲೆಂಕನು, ಬೇಡಲಾಗದು ಭಕ್ತನು.
ಓಡೆನಯ್ಯಾ, ಬೇಡೆನಯ್ಯಾ,
ಕೂಡಲಸಂಗಮದೇವಾ.
442
ಚಂದ್ರನ ಶೈತ್ಯದಲು ಬೆಳೆವ ಕಾಯಕ್ಕೆ
ಬೆಳುದಿಂಗಳು ಬಯಸುವ ಹಂಗೇಕಯ್ಯಾ
ಶರಣರ ಸಂಗದಲಿರ್ದು ಶಿವನ ಬೇಡುವ ಹಂಗೇಕಯ್ಯಾ
ಕೂಡಲಸಂಗನ ಶರಣರು ಬಂದು ತಮ್ಮವನೆಂದಡೆ ಸಾಲದೆ ಅಯ್ಯಾ.
443
ದಾಸನ ವಸ್ತ್ರವ ಬೇಡದ ಮುನ್ನ
ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ.
ಸಿರಿಯಾಳನ ಮಗನ ಬೇಡದ ಮುನ್ನ
ಕಂಚಿಯಪುರವ ಕೈಲಾಸಕ್ಕೊಯ್ದಡೆ ನಿಮ್ಮ ದೇವರೆಂಬೆ.
ಬಲ್ಲಾಳನ ವಧುವ ಬೇಡದ ಮುನ್ನ
ಸ್ವಯಲಿಂಗವ ಮಾಡಿದಡೆ ನಿಮ್ಮ ದೇವರೆಂಬೆ.
ದೇಹಿ ನೀನು, ವ್ಯಾಪಾರಿಗಳು ನಮ್ಮವರು.
ಬೇಡು, ಕೂಡಲಸಂಗಮದೇವಾ, ಎಮ್ಮವರ ಕೈಯಲು.
444
ಎಲ್ಲರೂ ವೀರರು, ಎಲ್ಲರೂ ದ್ಥೀರರು,
ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು.
ಕಾಳಗದ ಮುಖದಲ್ಲಿ ಕಾಣಬಾರದು,
ಓಡುವ ಮುಖದಲ್ಲಿ ಕಾಣಬಹುದು.
ನಮ್ಮ ಕೂಡಲಸಂಗನ ಶರಣರು ದ್ಥೀರರು,
ಉಳಿದವರೆಲ್ಲರೂ ಅಧೀರರು.
445
ಎಲ್ಲಿ ನೋಡಿದಡಲ್ಲಿ ಮನವೆಳಸಿದಡೆ
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಪರವಧುವನುಮಾದೇವಿಯೆಂಬೆ
ಕೂಡಲಸಂಗಮದೇವಾ.
446
ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ,
ಸುರಗಿಯ ಮೊನೆಗಂಜೆ,
ಒಂದಕ್ಕಂಜುವೆ, ಒಂದಕ್ಕಳುಕುವೆ
ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ.
ಮುನ್ನಂಜದ ರಾವಳನೇವಿಧಿಯಾದ !
ಅಂಜುವೆನಯ್ಯಾ, ಕೂಡಲಸಂಗಮದೇವಾ.
447
ಒಂದಕ್ಕೊಂಬತ್ತ ನುಡಿದು, ಕಣ್ಣ ಕೆಚ್ಚನೆ ಮಾಡಿ, ಗಂಡುಗೆದರಿ
ಮುಡುಹಿಕ್ಕಿ ಕೆ[ಲೆ]ವರ ಕಂಡಡಂಜುವೆ, ಓಸರಿಸುವೆ !
ಓಡಿದೆನೆಂಬ ಭಂಗವಾದಡಾಗಲಿ.
ನಮ್ಮ ಕೂಡಲಸಂಗನ ಶರಣರ ಅನುಭಾವವಿಲ್ಲದವರ
ಹೊಲಮೇರೆಯ ಹೊಂದೆ, ಹೊಲನ ಬಿಟ್ಟೋಡುವೆ.
448
ಒಡೆಯರು ಬಂದಡೆ ಗುಡಿ ತೋರಣವ ಕಟ್ಟಿ,
ನಂಟರು ಬಂದಡೆ ಸಮಯವಿಲ್ಲೆನ್ನಿ.
ಅಂದೇಕೆ ಬಾರರು
ನೀರಿಂಗೆ ನೇಣಿಂಗೆ ಹೊರಗಾದಂದು, ಸಮಯಾಚಾರಕ್ಕೆ ಒಳಗಾದಂದು.
ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು.
ಬಳಿಕ ಬಂಧುಗಳುಂಟೆ, ಕೂಡಲಸಂಗಮದೇವಾ.
449
ಒಡೆಯರಾಡುವ ಮಾತ ಕಡೆಪರಿಯಂತರ ಕೇಳಿ,
ಇದರುವೋಗಿ ಕಿಂಕರನಾಗಿ ನಡುಗುತ್ತ ಬಿನ್ನಹಮಾಡುವ
ಸದ್ಭಕ್ತನ ತೋರಯ್ಯಾ.
ಒಡೆಯರಾಡುವ ಮಾತ ಕಂಡು, ಕರೆದಲ್ಲಿ ಕೆಡೆಮೆಟ್ಟಿ
ಬಾು ಘನವೆಂದು ಆಡುವನ ತೋರದಿರಯ್ಯಾ,
ಅವನ ಸಂಗದಲ್ಲಿರಿಸಯ್ಯಾ,
ಅವನ ಸಹಪಂಕ್ತ್ತಿಯಲ್ಲಿ ಕುಳ್ಳಿರಿಸದಿರಯ್ಯಾ.
ಕೂಡಲಸಂಗಮದೇವಯ್ಯಾ, ನಿಮ್ಮ ಬೇಡುವುದೊಂದೆ ವರವು.
450
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ !
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ !
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ !
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ !
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ
ಕೂಡಲಸಂಗಮದೇವಾ.
451
ಶ್ರೀವಿಭೂತಿ ರುದ್ರಾಕ್ಷಿುದ್ದವರ ಲಿಂಗವೆಂಬೆ,
ಇಲ್ಲದವರ ಭವಿಯೆಂಬೆ.
ಕೂಡಲಸಂಗಮದೇವಾ,
ಸದುಭಕ್ತರ ನೀನೆಂಬೆ.
452
ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ !
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ.
453
ಲಿಂಗಾಂಗಿಗಳಲ್ಲದವರ, ಶರಣಸಂಗವಿಲ್ಲದವರ
ಕಂಡಡೆ ನಾಚುವೆ.
ಅವರ ನುಡಿ ಎನಗೆ ಸಮನಿಸದಯ್ಯಾ ಕೂಡಲಸಂಗಮದೇವಾ,
ನೀನು ಅಲ್ಲಿ ಇಲ್ಲದ ಕಾರಣ.
454
ಶ್ರೀವಿಭೂತಿಯ ಹೂಸದವರ,
ಶ್ರೀರುದ್ರಾಕ್ಷಿಯ ಧರಿಸದವರ,
ನಿತ್ಯಲಿಂಗಾರ್ಚನೆಯ ಮಾಡದವರ,
ಜಂಗಮವೇ ಲಿಂಗವೆಂದರಿಯದವರ,
ಸದ್ಭಕ್ತರ ಸಂಗದಲ್ಲಿರದವರ ತೋರದಿರು.
ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು.
455
ಕೂಪವರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲವ,
ಕೂರದವರಿಗೆ ಹೇಳಿ ನಾನೇವೆನು ಶಿವನೆ
ಕರಲ ಭೂಮಿಯಲ್ಲಿ ಕರೆದ ವ್ಟೃಯ ತೆರನಂತೆ
ಅವರೆತ್ತ ಬಲ್ಲರೆನ್ನ ಸುಖ-ದುಃಖವನು
ಅಂಗತವಿಲ್ಲದ ಸಂಗವು ಅಳಲಿಲ್ಲದ ಹುಯ್ಯಲಂತ,
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ ಬಾುದೆರೆಯೆನು.
456
ಒಡೆದೋಡು ಎನ್ನ ಮನೆಯಲಿಲ್ಲದಂತೆ ಮಾಡಯ್ಯಾ,
ಕೊಡು ದೇವ, ಎನ್ನ ಕೈಯಲೊಂದು ಕರಿಕೆಯನು.
`ಮೃಡದೇವಾ ಶರಣೆಂದು ಭಿಕ್ಷಕ್ಕೆ ಹೋದಡೆ
ಅಲ್ಲಿ, `ನಡೆ ದೇವಾ' ಎಂದೆನಿಸು ಕೂಡಲಸಂಗಮದೇವಾ.
457
ಭವಿರಹಿತ ಭಕ್ತನಾದ ಬಳಿಕ,
ಭಕ್ತಿಭಾಜನದಲ್ಲಿ ಮಾಡಿ ಭವಿಗಿಕ್ಕಲಾಗದಯ್ಯಾ.
ಯುಕ್ತಿಶೂನ್ಯರಿಗೆ ಮುಂದೆ ಪ್ರಸಾದ ದೂರ,
ಮುಕ್ತಿುಲ್ಲ-ಮುಂದೆ ನಾಯ ಬಸುರಲ್ಲಿ ಬಪ್ಪುದು ತಪ್ಪದು ಪೃಥ್ವಿಯೊಳಗೆ.
ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ
ಅನಾಚಾರಕ್ಕೆಲ್ಲಿಯದೊ.
458
ಅಯ್ಯಾ, ನಿಮ್ಮ ಶರಣರ ದಾಸೋಹಕ್ಕೆ
ತನುಮನಧನವಲಸದಂತೆ ಮಾಡಯ್ಯಾ,
ತನು ದಾಸೋಹಕ್ಕೆ ಉಬ್ಬುವಂತೆ ಮಾಡಯ್ಯಾ,
ಮನ ದಾಸೋಹಕ್ಕೆ ಲೀಯವಹಂತೆ ಮಾಡು,
ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ
ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ,
ಪರಿಣಾಮಿಸುವಂತೆ ಮಾಡು ಕೂಡಲಸಂಗಮದೇವಾ.
459
ಹಾರುವ ಹಾರುವನಪ್ಪೆ ನಾನು, ಸದ್ಭಕ್ತರೆನ್ನವರೆನ್ನವರೆಂದು
ಹಾರು[ವೆ] ಹಾರು[ವೆ]ನವ್ವಾ ನಾನು, ಶರಣರು ಎನ್ನವರೆನ್ನವರೆನ್ನವರೆಂದು,
ಕೂಡಲಸಂಗನ ಶರಣರು ಒಕ್ಕುದನಿಕ್ಕಿ ಸಲಹುವರೆಂದು.
460
ಒಕ್ಕುದ ಮಿಕ್ಕುದನುಂಡು ಕಿವಿಕಿವಿದಾಡುವೆ.
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು,
ಕೂಡಲಸಂಗನ ಶರಣರ ಮನೆಯ
ಭಕ್ತಿಯ ಮರುಳ ನಾನು.
461
ಗುರು ಲಿಂಗ ಜಂಗಮದಿಂದ ಪಾದೋದಕ ಪ್ರಸಾದವಾುತ್ತು.
ಆ ಭಾವವೆ ಮಹಾಪ್ರಸಾದವಾಗಿ
ಎನಗೆ ಬೇರೆ ಪ್ರಸಾದವೆಂಬುದಿಲ್ಲ
ಕೂಡಲಸಂಗಮದೇವಾ.
462
ಅಹುದೆಂದರಿಯೆ, ಆಗದೆಂದರಿಯೆ,
ಆದಿಪಥವ ತೋರಲರಿಯೆ,
ಸತ್ಯವನರಿಯೆ, ಸಹಜವನರಿಯೆ,
ಸಜ್ಜನ ಶುದ್ಧವ ಮುನ್ನರಿಯೆ.
ನಿಮ್ಮ ಶರಣರ ಒಕ್ಕುದನುಂಡಿಪ್ಪೆ
ಕೂಡಲಸಂಗಮದೇವಾ.
463
ಆವನಾದಡೇನು ಶ್ರೀಮಹಾದೇವನ ನೆನೆವನ
ಬಾಯ ತಂಬುಲವ ಮೆಲುವೆ, ಬೀಳುಡೆಯ ಹೊದೆವೆ,
ಪಾದರಕ್ಷೆಯ ಕಾಯ್ದು ಬದುಕುವೆ,
ಕೂಡಲಸಂಗಮದೇವಾ.
464
ಒಂದುವನರಿಯದ ಸಂದೇಹಿ ನಾನಯ್ಯಾ,
ನಂಬುಗೆುಲ್ಲದ ಡಂಬಕ ನಾನಯ್ಯಾ,
ನಿಮ್ಮ ನಂಬಿದ ಶರಣರ ಡಿಂಗರಿಗ ನಾನು,
ಕೂಡಲಸಂಗಮದೇವಾ.
465
ಬಿಡದೆ ಬಾಗಿಲ ಎಂಜಲ ಕಾ್ದುಪ್ಪೆನು, ಕಿಂಕರನು.
ಕಿಂಕರರ ಮನೆಯಲ್ಲಿ ಕಿಂಕಿಲವನು ಆನು ಹಾರುತ್ತಿಪ್ಪೆನು,
ನಮ್ಮ ಕೂಡಲಸಂಗನ ಶರಣರ
ಒಕ್ಕುದ ಮಿಕ್ಕುದನುಂಬ ಕಿಂಕರ ನಾನು.
466
ತೊತ್ತಿಂಗೇಕೆ ಲಕ್ಷಣ ಬಂಟಂಗೇಕೆ ಆಚಾರ
ಆಗಮವೇಕೆ ಡಿಂಗರಿಗಂಗೆ
ಒಕ್ಕುದನುಂಬುವಂಗಯ್ಯಾ, ಕೂಡಲಸಂಗಮದೇವಾ
ನಿಮ್ಮ ನಂಬುವುದಾಚಾರವಯ್ಯಾ.
467
ತೊತ್ತಿಂಗೆ ಲಕ್ಷಣವೇಕಯ್ಯಾ
ಅವರೊಕ್ಕುದನುಂಡು ಮಿಕ್ಕುದ ಕಾ್ದುಪ್ಪುದು.
ಸಾರೆ ಹೊರಸೇಕೆ, ಅವಳಿಗೆ ಮಾರುತ್ತರವೇಕೆ
ಕೂಡಲಸಂಗನ ಶರಣರೊಡನೆ
ಇದಿರುತ್ತರವೇಕೆ ಸಿಂಬಕಂಗೆ.
468
 469
ಪಾತಕ ಮಹಾಪಾತಕವ ಮಾಡಿದವನು
ಸದ್ಭಕ್ತರ ಮನೆಗೆ ಹೋಗಿ,
ಅವರೊಕ್ಕ ಪ್ರಸಾದವನಾಯ್ದುಂಡಡೆ,
ಸಕಲ ಬ್ರಹ್ಮಹತ್ಯಾದಿ ಪಾತಕ ಪರಿಹಾರ.
ಒಮ್ಮೆ ಬೇಡಿಕೊಂಡುಂಡಡೆ !
ಪಾತಕೇ ಸಮನುಪ್ರಾಪ್ತೇ ಶಿವಭಕ್ತಗೃಹಂ ವ್ರಜೇತ್
ಯಾಚಯೇದನ್ನಮಮೃತಂ ತದಲಾಭೇ ಜಲಂ ಪಿಬೇತ್
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಸದ್ಭಕ್ತರಿಗೆ ನಮೋ ನಮೋ ಎಂಬೆನು.
470
ನಾನು ಹೊತ್ತ ಹುಳ್ಳಿಯನಂಬಲಿಗೆ ಕೊಂಬುವರಿಲ್ಲ ನೋಡಯ್ಯಾ.
ಆನು ನಿಮ್ಮ ಶರಣರ ಒಕ್ಕುದನುಂಡು ಬದುಕುವೆನಯ್ಯಾ.
ಮೇರುವ ಸಾರಿದ ಕಾಗೆ ಹೊಂಬಣ್ಣವಪ್ಪುದು ತಪ್ಪದು
ಕೂಡಲಸಂಗಮದೇವಾ.
471
ಭವಭವದಲ್ಲಿ ನಿಮ್ಮ ಜಂಗಮವೆ ಶರಣಯ್ಯಾ.
ಅವರುಂಡು ಮಿಕ್ಕುದ ಉಡುಗಿ,
ಒಕ್ಕಪ್ರಸಾದವನಾಯ್ದುಕೊಂಬ ಮರುಳ ನಾನಯ್ಯಾ.
ನಮ್ಮ ಕೂಡಲಸಂಗನ ಶರಣರ ರಿಣವ ನಾ ಹಿಂಗಲಾರೆ.
472
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.
ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ
ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆುತ್ತು.
ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು.
ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು
ಕೂಡಲಸಂಗಮದೇವನು `ಇತ್ತ ಬಾ ಎಂದು ಎತ್ತಿಕೊಂಡನು.
473
ಜನ್ಮ ಜನ್ಮಕ್ಕೆ ಹೊಗಲೀಯದೆ,
ಸೋsಹಂ ಎಂದೆನಿಸದೆ ದಾಸೋsಹಂ ಎಂದೆನಿಸಯ್ಯಾ.
ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ
ಕೂಡಲಸಂಗಮದೇವಾ.
474
ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತುಮಾಡಿ ಸಲಹಿದ ಸುಖವು
ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯದಂತುಟಲ್ಲ_
ಕೇಳಯ್ಯಾ, ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು.
475
ತೊತ್ತಿಂಗೆ ಬಲ್ಲಹನೊಲಿದಡೆ ಪದವಿಯ ಮಾಡದೆ ಮಾಬನೆ
ಜೇಡರ ದಾಸಯ್ಯಂಗೊಲಿದಾತ ಮತ್ತೊಬ್ಬ ದೇವನೆ, ಅಯ್ಯಾ
ಮಾದಾರ ಚೆನ್ನಯ್ಯಂಗೆ, ಡೋಹರ ಕಕ್ಕಯ್ಯಂಗೆ,
ತೆಲುಗು ಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೆ, ಅಯ್ಯಾ
ಎನ್ನ ಮನದ ಪಂಚೇಂದ್ರಿಯ ನಿಮ್ಮತ್ತಲಾದಡೆ
ತನ್ನತ್ತ ಮಾಡುವ ಕೂಡಲಸಂಗಮದೇವಯ್ಯ.
476
ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಿಲ್ಲದನ್ನಕ್ಕ
ಮಣಿಯ ಕಟ್ಟಿ ಏವೆನಯ್ಯಾ, ಮನ ಮುಟ್ಟದನ್ನಕ್ಕ
ನೂರನೋದಿ ಏವೆನಯ್ಯಾ,
ನಮ್ಮ ಕೂಡಸಂಗಮದೇವರ ಮನಮುಟ್ಟದನ್ನಕ್ಕ.
477
ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನ,
ಎಂತಯ್ಯಾ ಎನಗಿನ್ನಾವುದು ಗತಿ
ಎಂತಯ್ಯಾ ಎನಗಿನ್ನಾವುದು ಮತಿ
ಎಂತಯ್ಯಾ ಹರಹರಾ, ಕೂಡಲಸಂಗಮದೇವಾ
ಮನದ ಸಂತೈಸೆನ್ನ.
478
ಅಷ್ಟದಳ ಕಮಲವ ಸುತ್ತುವ ಜೀವಾತ್ಮನ
ಮೆಟ್ಟಿದ ದಳವನರಿಯದೆ,
ಆನು ಭಕ್ತನೆಂತೆಂಬೆ ! ಆನು ಶರಣನೆಂತೆಂಬೆ !
ಆನು ಲಿಂಗೈಕ್ಯನೆಂತೆಂಬೆ ಕೂಡಲಸಂಗಮದೇವಾ
ಎನ್ನ ಮನವು ಸಮಾಧಾನವಾಗದನ್ನಕ್ಕ.
479
ನಾ ನಿಮ್ಮ ನೆನೆವನು, ನೀವೆನ್ನನರಿುರಿ.
ನಾ ನಿಮ್ಮನೋಲೈಸುವೆನು, ನೀವೆನ್ನ ಕಾಣಿರಿ.
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯಾ
ಕೂಡಲಸಂಗಮದೇವಾ,
ಎನಗೆ ನೀವೆ ಪ್ರಾಣ ಗತಿ ಮತಿ, ನೋಡಯ್ಯಾ.
480
ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು.
481
ಎನ್ನ ಆಪತ್ತು-ಸುಖ-ದುಃಖ ನೀನೆ ಕಂಡಯ್ಯಾ,
ಮತ್ತಾರೂ ಇಲ್ಲ, ಹರಹರಾ, ನೀನೆ ಕಂಡಯ್ಯಾ,
ಎನ್ನ ಮಾತಾಪಿತನು ನೀನೆ ಕಂಡಯ್ಯಾ.
ಕೂಡಸಂಗಮದೇವಾ.
482
ಎನ್ನ ಜನ್ಮವ ತೊಡೆದನೀ ಧರ್ಮಿ,
ಎನ್ನ ಜನ್ಮವನತಿಗಳೆದಾ ಸಧರ್ಮಿ.
ಎನ್ನ ಭವಬಂಧನವ ನಿಃಕರಿಸಿದೆಯಾಗಿ,
ಶಿವನೆ ಗತಿಯೆಂದು ನಂಬಿದೆನಯ್ಯಾ.
ಎನ್ನ ಅಷ್ಟಮದಂಗಳ ಸುಟ್ಟುರುಹಿದೆಯಾಗಿ,
ಕಟ್ಟುಗ್ರದಿಂದ ನಿಮ್ಮ ಶ್ರೀಚರಣವ ಕಂಡೆ.
ಸ್ಟೃಪ್ರತಿಪಾಲಕಾ, ನಿಮ್ಮ ನಂಬಿದೆ,
ಕರುಣಿಸು ಕೂಡಲಸಂಗಮದೇವಾ.
483
ಭವರೋಗವೈದ್ಯನೆಂದು ನಾ ನಿಮ್ಮ ಮರೆಹೊಕ್ಕೆ,
ಭಕ್ತಿದಾಯಕ ನೀನು ಕರುಣಿಸು ಲಿಂಗತಂದೆ.
ಜಯ ಜಯ ಶ್ರೀ ಮಹಾದೇವ, ಜಯ ಜಯ ಶ್ರೀ ಮಹಾದೇವ,
ಜಯ ಜಯ ಶ್ರೀ ಮಹಾದೇವ ಎನ್ನುತ್ತಿದ್ದಿತೆನ್ನ ಮನವು.
ಕೂಡಲಸಂಗಮದೇವಂಗೆ ಶರಣೆಂದಿತ್ತೆನ್ನ ಮನವು.
484
ಅಂಗಯ್ಯ ಒಳಗಣ ಲಿಂಗವ ನೋಡುತ್ತ,
ಕಂಗಳು ಕಡೆಗೋಡಿವರಿಯುತ್ತ ಸುರಿಯುತ್ತ ಎಂದಿಪ್ಪೆನೊ
ನೋಟವೆ ಪ್ರಾಣವಾಗಿ ಎಂದಿಪ್ಪೆನೊ
ಕೂಟವೇ ಪ್ರಾಣವಾಗಿ ಎಂದಿಪ್ಪೆನೊ
ಎನ್ನ ಅಂಗವಿಕಾರದ ಸಂಗವಳಿದು,
ಕೂಡಲಸಂಗಯ್ಯಾ, ಲಿಂಗ ಲಿಂಗವೆನುತ್ತ.
485
ಎದೆ ಬಿರಿವನ್ನಕ್ಕ, ಮನ ದಣಿವನ್ನಕ್ಕ,
ನಾಲಗೆ ನಲಿನಲಿದೋಲಾಡುವನ್ನಕ್ಕ
ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ, ಎನಗೆನ್ನ ತಂದೆ.
ಬಿರಿಮುಗುಳಂದದಿ ಎನ್ನ ಹೃದಯ
ನಿಮ್ಮ ಶ್ರೀಚರಣದ ಮೇಲೆ ಬಿದ್ದರಳುಗೆ,
ಕೂಡಲಸಂಗಯ್ಯಾ.
486
ಆಡಿ ಕಾಲು ದಣಿಯವು, ನೋಡಿ ಕಣ್ಣು ದಣಿಯವು,
ಹಾಡಿ ನಾಲಿಗೆ ದಣಿಯದು, ಇನ್ನೇವೆನಿನ್ನೇವೆ.
ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೇವೆ
ಕೂಡಲಸಂಗಮದೇವಾ ಕೇಳಯ್ಯಾ,
ನಿಮ್ಮ ಉದರವ ಬಗಿದಾನು ಹೊಗುವ ಭರವೆನಗೆ.
487
ಕಾಯಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ.
ಮಿಗೆ ಒಲಿದೆನಾಗಿ ಅಗಲಲಾರೆ.
ನಗೆಮೊಗದರಸ, ಅವಧಾರು.
ಕೂಡಲಸಂಗಮದೇವಾ,
ಬಗಿದು ಹೊಗುವೆನು ನಾ ನಿಮ್ಮ ಮನವನು.
488
ನೋಡಿ ನೋಡಿ ಲಿಂಗಧ್ಯಾನವೆನ್ನ ಮನ !
ರಾಗರಂಜನೆಯ ಉತುಪತಿ ಸ್ಥಿತಿಲಯ ನಿನಗೆಂದಾದುವು.
ರಾಗರಂಜನೆಯ ಪೂಜೆ ಎನ್ನ ಮನ !
ಕೂಡಲಸಂಗಮದೇವಾ, ಅಹಾ, ಎನ್ನ ಮನ !
489
ವಾರವೆಂದರಿಯೆ, ದಿನವೆಂದರಿಯೆ,
ಏನೆಂದರಿಯೆನಯ್ಯಾ.
ಇರುಳೆಂದರಿಯೆ, ಹಗಲೆಂದರಿಯೆ,
ಏನೆಂದರಿಯೆನಯ್ಯಾ.
ನಿಮ್ಮ ಪೂಜಿಸಿ ಎನ್ನುವ ಮರೆದೆ
ಕೂಡಲಸಂಗಮದೇವಾ.
490
ನಿಮ್ಮ ನೋಟವನಂತಸುಖ, ನಿಮ್ಮ ಕೂಟ ಪರಮಸುಖ.
ಅವಟುಕೋಟಿ ರೋಮಂಗಳು ಕಂಗಳಾಗಿ ನೋಡುತ್ತಿದ್ದೆನು.
ಕೂಡಲಸಂಗಮದೇವಯ್ಯಾ, ನಿಮ್ಮ ನೋಡಿ ನೋಡಿ
ಮನದಲ್ಲಿ ರತಿಹುಟ್ಟಿ, ನಿಮಿರ್ದವೆನ್ನ ಕಳೆಗಳು.
491
ವಚನದಲ್ಲಿ ನಾಮಾಮೃತ ತುಂಬಿ,
ನಯನದಲ್ಲಿ ಮೂರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ,
ಕಿವಿಯಲ್ಲಿ ಕೀರುತಿ ತುಂಬಿ.
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಗಾನು ತುಂಬಿ.
492
ಅಡಿಗಡಿಗೆ ಲಿಂಗವನಡಿಯಡರಿ ನೋಡಿ ನೋಡಿ,
ಕಂಗಳು ಕಡೆಗೋಡಿವರಿದವೆನಗಯ್ಯಾ, ಎನ್ನ ಅಶ್ರುಜಲಂಗಳು !
ಆಲಿಕಲ್ಲ ರೂಹಿನಂತೆ, ಅರಗಿನ ಪುತ್ಥಳಿಯಂತೆ
ತನು ಪುಳಕಿತವಾದ ಬೆಮರ ಬಿಂದುಗಳೆಲ್ಲಾ !
ಕೂಡಲಸಂಗನ ದರ್ಶನಸ್ಪರ್ಶದಿಂದ
ಮನವೊಲಿದು ನೆರೆವ ಭರವನೇನ ಹೇಳುವೆನಯ್ಯಾ.
493
ತಾಳಮಾನ ಸರಿಸವನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.
494
ವರಂ ಪ್ರಾಣಪರಿತ್ಯಾಗಶ್ಚೇದನಂ ಶಿರಸೋಡಿಪಿ ವಾ±
ನತ್ವನಭ್ಯಚ್ರ್ಯ ಭುಂಜೀಯಾತ್ ಭಗವಂತಂ ತ್ರಿಲೋಚನಂ
ಎಂದುದಾಗಿ, ಧೇಹಧರ್ಮ ತನ್ನ ಆದಂತೆ ಆಗಲಿ,
ಕೂಡಲಸಂಗನ ಪೂಜಿಸಿದಲ್ಲದೆ ನಿಲಲಾರೆನು.
495
ಸುರರು ಕಿನ್ನರರು ಕಿಂಪುರುಷರೆಂಬವರನಾರು ಬಲ್ಲರು
ಎನ್ನ ಚಿತ್ತವು ನಿಮ್ಮ ಮೇಲೆ ಸಂಗಯ್ಯಾ,
ಎನ್ನ ಚಿತ್ತವು ನಿಮ್ಮ ಮೇಲೆ ಲಿಂಗಯ್ಯಾ.
ಕೂಡಲಸಂಗಮದೇವಾ
ಅನ್ಯವೆಂಬುದನರಿಯೆನಯ್ಯಾ.
496
ಮುಂಡೆಯ ಬೋಳಿಸಿಕೊಂಡು ಗಂಡುದೊತ್ತುವೊಕ್ಕೆನಯ್ಯಾ.
ಲಜ್ಜೆಗೆಟ್ಟಾದಡೂ ಲಿಂಗವನೊಲಿಸುವೆ,
ನಾಣುಗೆಟ್ಟಾದಡೂ ಲಿಂಗವನೊಲಿಸುವೆ,
ಕೆಲದ ಸಂಸಾರಿಗಳು ನಗುತಿರ್ದಡಿರಲಿ,
ಕೂಡಲಸಂಗಮದೇವಾ, ಶರಣಗತಿವೊಕ್ಕೆನಯ್ಯಾ.
497
ಎನಗೆ ನಿಮ್ಮ ನೆನಹಾದಾಗ ಉದಯ,
ಎನಗೆ ನಿಮ್ಮ ಮರಹಾದಾಗ ಅಸ್ತಮಾನ.
ಎನಗೆ ನಿಮ್ಮ ನೆನೆಹವೆ ಜೀವನ,
ಎನಗೆ ನಿಮ್ಮ ನೆನಹವೆ ಪ್ರಾಣ, ಕಾಣಾ ತಂದೆ.
ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ,
ವದನದಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ.
498
ಎನ್ನ ಕಾಯವ ದಂಡಿಗೆಯ ಮಾಡಯ್ಯಾ,
ಎನ್ನ ಶಿರವ ಸೋರೆಯ ಮಾಡಯ್ಯಾ,
ಎನ್ನ ನರವ ತಂತಿಯ ಮಾಡಯ್ಯಾ,
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ.
499
ಕುರುಳು ಬೆರಳು ಮುಡುಹು ಮುಂಬಲ್ಲ ಕೊಳ್ಳಾ,
ನಿರಿಯನಿಕ್ಕಿ ದಾಂಟಿದಡೆ ಅಂತೆನ್ನ ನಂಬಾ,
ಪರಪುರುಷರ ಮುಖವ ನೋಡದಂತೆ ಮಾಡಾ,
ಬಳಿಕ ನೀನೆಹಗೆ ಇರಿಸಿದಂತಿರಿಸಾ,
ಎನ್ನ ಉರದಲ್ಲಿ ಕೂಡಲಸಂಗಯ್ಯನೆಂದು ಬರೆಯಾ,
ಹರಿಬ್ರಹ್ಮರಿಗೆ ಎರಗದಂತೆ ಬಳಿನೀರನೆರೆಯಾ.
500
ಕಂಡ ಕನಸು ನಿಧಾನವ ಕಂಡೆನಯ್ಯಾ,
ಬಿಡಲಾರದ ನಿಧಾನವ ಕಂಡೆನಯ್ಯಾ,
ಕೂಡಲಸಂಗಯ್ಯನೆಂಬ ನಿಧಾನವ ಕಂಡು
ಬಿಡಲಾರೆನಯ್ಯಾ.
501
ಹೊನ್ನ ಹಾವುಗೆಯ ಮೆಟ್ಟಿದವನ !
ಮಿಡಿಮುಟ್ಟಿದ ಕೆಂಜೆಡೆಯವನ !
ಮೈಯಲ್ಲಿ ವಿಭೂತಿಯ ಹೂಸಿದವನ !
ಕರದಲ್ಲಿ ಕಪಾಲವ ಹಿಡಿದವನ !
ಅರ್ಧನಾರಿಯಾದವನ !
ಬಾಣನ ಬಾಗಿಲ ಕಾಯ್ದವನ !
ನಂಬಿಗೆ ಕುಂಟಣಿಯಾದವನ !
ಚೋಳಂಗೆ ಹೊನ್ನಮಳೆಯ ಕರೆದವನ !
ಎನ್ನ ಮನಕ್ಕೆ ಬಂದವನ
ಸದ್ಭಕ್ತರ ಹೃದಯದಲಿಪ್ಪವನ !
ಮಾಡಿದ ಪೂಜೆಯಲೊಪ್ಪುವನ !
ಕೂಡಲಸಂಗಯ್ಯನೆಂಬವನ !!
502
ಮನಕ್ಕೆ ಮನೋಹರವಲ್ಲದ ಗಂಡರು
ಮನಕೆ ಬಾರರು, ಕೇಳವ್ವಾ ಕೆಳದೀ,
ಪನ್ನಗಭೂಷಣರಲ್ಲದ ಗಂಡರು
ಇನ್ನೆನಗಾಗದ ಮೊರೆ, ನೋಡವ್ವಾ.
ಕನ್ನೆಯಂದಿನ ಕೂಟ, ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯಾ, ಕೂಡಲಸಂಗಮದೇವಾ.
503
ಜಗವೆಲ್ಲಾ ಅರಿಯಲು ಎನಗೊಬ್ಬ ಗಂಡನುಂಟು,
ಆನು ಮುತ್ತೈದೆ, ಆನು ನಿಟ್ಟೈದೆ.
ಕೂಡಲಸಂಗಮದೇವಯ್ಯಾನಂತಪ್ಪ ಎನಗೊಬ್ಬ ಗಂಡನುಂಟು.
504
 505
ನೀನೊಲಿುತ್ತೆ ಪುಣ್ಯ, ನೀನೊಲ್ಲದುವೆ ಪಾಪ,
ಸಕಲ ಜಗದೊಳಗೆ ಅನುಶ್ರುತನಾಗಿಪ್ಪೆಯಯ್ಯಾ.
ನೀನೊಲಿದವನೆ ನಿಮ್ಮನರಿದವನು.
ಪ್ರಸಾದಾದ್ದೇವತಾಭಕ್ತಿಃ ಪ್ರಸಾದೋ ಭಕ್ತಿಸಂಭವಃ
ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರಃ
ನೀನೊಲಿದವನೆ ಧನ್ಯ, ಜಗಕ್ಕೆ ಪಾವನ ಕೂಡಲಸಂಗಮದೇವಾ.
506
ಅಷ್ಟವಿಧಾರ್ಚನೆ ಷೋಡಶೋಪಚಾರವ
ಅಂದಂದಿನ ಕೃತ್ಯವ ಅಂದಂದಿಗೆ ಆನು ಮಾಡಿ ಶುದ್ಧನಯ್ಯಾ.
ಹಂಗು ಹರಿಯಿಲ್ಲದ ಕಾರಣ,
ಕೂಡಲಸಂಗಮದೇವ ನಿಷ್ಫಲದಾಯಕನಾಗಿ
ಆನು ಮಾಡಿ ಶುದ್ಧನಯ್ಯಾ. 
507
 508
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತ್ತಯ್ಯಾ,
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾಯಿತ್ತಯ್ಯಾ,
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಕರ್ಮಛೇದನವಾಯಿತ್ತಯ್ಯಾ,
ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬೀ ಒಡವೆಯನು
ದಿಟವ ಮಾಡಿ ತೋರಿದರು ಕಾಣಾ, ಕೂಡಲಸಂಗಮದೇವಾ.
509
ಭಕ್ತನೆಂತೆಂಬೆನಯ್ಯಾ ಭವಿಯ ಸಂಗ ಬಿಡದನ್ನಕ್ಕ
ಮಾಹೇಶ್ವರನೆಂತೆಂಬೆನಯ್ಯಾ ಪರಸ್ತ್ರೀ ಪರಧನದಾಸೆ
ಬಿಡದನ್ನಕ್ಕ.ಪ್ರಸಾದಿಯೆಂತೆಂಬೆನಯ್ಯಾ ಆಧಿವ್ಯಾಧಿ ನಷ್ಟವಾಗದನ್ನಕ್ಕ.
ಪ್ರಾಣಲಿಂಗಿಯೆಂತೆಂಬೆನಯ್ಯಾ ಪ್ರಾಣ ಸ್ವಸ್ಥಿರವಾಗದನ್ನಕ್ಕ.
ಶರಣನೆಂತೆಂಬೆನಯ್ಯಾ ಪಂಚೇಂದ್ರಿಯ ನಾಶವಾಗದನ್ನಕ್ಕ.
ಐಕ್ಯನೆಂತೆಂಬೆನಯ್ಯಾ ಜನನ ಮರಣ ವಿರಹಿತವಾಗದನ್ನಕ್ಕ.
ಇಂತಪ್ಪ ಭಾಷೆ ವ್ರತ ನೇಮಂಗಳ ನಾನರಿಯೆನಯ್ಯಾ,
ಅಘಟಿತಘಟಿತ ವರ್ತಮಾನದ ನಾನರಿಯೆನಯ್ಯಾ.
ನಿಮ್ಮ ಶರಣರ ತೊತ್ತು-ಭೃತ್ಯಾಚಾರವ ಮಾಡುವೆ
ಕೂಡಲಸಂಗಮದೇವಾ.
510
ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು,
ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ
ಕೂಡಲಸಂಗಮದೇವಾ.
511
ತನುಸಾರಾಯರ ಮನಸಾರಾಯರ ಜ್ಞಾನಸಾರಾಯರ
ತೋರಯ್ಯಾ, ನಿಮ್ಮ ಧರ್ಮ.
ಭಾವಸಾರಾಯರ ಭಕ್ತಿಸಾರಾಯರ
ತೋರಯ್ಯಾ, ನಿಮ್ಮ ಧರ್ಮ.
ಕೂಡಲಸಂಗಮದೇವಯ್ಯಾ
ನಿಮ್ಮನರಿಯದ ಅವಗುಣಿಗಳ
ತೋರದಿರಯ್ಯಾ, ನಿಮ್ಮ ಧರ್ಮ.
512
ಸಂಚಲವಿಲ್ಲದ, ಭಕ್ತಿವಂಚನೆಯಿಲ್ಲದ ಮಹಾಂತರ ತೋರಾ.
ತನುಶುಚಿ ಮನಶುಚಿಗಳನು ತೋರಾ,
ಇಂತಪ್ಪ ಶಿವಲಿಂಗೈಕ್ಯರ ತೋರಿ ಬದುಕಿಸು,
ಕೂಡಲಸಂಗಮದೇವಾ.
513
ಕಾಮಸಂಗವಳಿದು ಅನುಭಾವಸಂಗದಲುಳಿದವರ ಅಗಲಲಾರೆನು,
ಶಿವಂಗೆ ಮಿಗೆ ಒಲಿದವರನು ನಾನು ಆಗಲಲಾರೆನು ಕಾಣಾ,
ಕೂಡಲಸಂಗಮದೇವಾ.
514
ಭಕುತಿರತಿಯ ವಿಕಳತೆಯ ಯುಕುತಿಯನೇನ ಬೆಸಗೊಂಬಿರಯ್ಯಾ!
ಕಾಮಿಗುಂಟೆ ಲಜ್ಜೆ ನಾಚಿಕೆ
ಕಾಮಿಗುಂಟೆ ಮಾನಾಪಮಾನವು
ಕೂಡಲಸಂಗನ ಶರಣರಿಗೊಲಿದ
ಮರುಳನನೇನ ಬೆಸಗೊಂಬಿರಯ್ಯಾ.
515
ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ.
ಆ ಕೂಸು ಬೀದಿಯಲ್ಲಿ ಒತ್ತೆಗೊಳಲು ನಿಂದಿತ್ತಯ್ಯಾ.
ಇದರ ಸಂಗಸುಖದನುಭಾವವನು
ಕೂಡಲಸಂಗಮದೇವ ತಾನೆ ಬಲ್ಲ.
516
 517
ಕಾಳಿದಾಸಂಗೆ ಕಣ್ಣನಿತ್ತೆ, ಓಹಿಲಯ್ಯನ ನಿಜಪುರಕ್ಕೊಯ್ದೆ,
ನಂಬಿ ಕರೆದಡೋ ಎಂದೆ,
ತೆಲುಗು ಜೊಮ್ಮಯ್ಯಂಗೆ ಒಲಿದೆ ದೇವಾ,
ಕೂಡಲಸಂಗಮದೇವಾ
ಎನ್ನನೇಕೆ ಒಲ್ಲೆಯಯ್ಯಾ.
518
ಪರ ಚಿಂತೆ ಎಮಗೇಕಯ್ಯಾ ನಮ್ಮ ಚಿಂತೆ ನಮಗೆ ಸಾಲದೆ
ಕೂಡಲಸಂಗಯ್ಯ ಒಲಿದಾನೊ ಒಲ್ಲನೊ ಎಂಬ ಚಿಂತೆ
ಹಾಸಲುಂಟು, ಹೊದೆಯಲುಂಟು.
519
ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದು,
ಮನಮಚ್ಚಿ ಮರುಳಾದೆ ನೋಡವ್ವಾ !
ಕೇಳು, ಕೇಳವ್ವಾ ಕೆಳದಿ,
ಸಖಿಯರಿಲ್ಲದೆ ಸುಖವ ಬಯಸಿದಡೆ
ದೊರಕೊಂಬುದೆ ಹೇಳಾ.
ಎನ್ನ ಮುನಿಸು ಎನ್ನಲ್ಲೆ ಅಡಗಿತ್ತು,
ಇನ್ನು ಬಾರಯ್ಯಾ, ಕೂಡಲಸಂಗಯ್ಯಾ.
520
ಲಜ್ಜೆಗೆಟ್ಟೆನು, ನಾಣುಗೆಟ್ಟೆನು.
ಕುಲಗೆಟ್ಟೆನು, ಛಲಗೆಟ್ಟೆನು.
ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯಾ.
ಕೂಡಲಸಂಗಮದೇವಯ್ಯಾ
ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯಾ.
521
ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು;
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದಡೆ
ಒಳಗೆ ಕೆಚ್ಚಿಲ್ಲದಿರಬೇಕು.
ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು.
ಎನಗಿನ್ನಾವ ಭಯವಿಲ್ಲ ಕಾಣಾ,
ಕೂಡಲಸಂಗಮದೇವಾ.
522
ಜಂಗಮವ ಕೂಡಿಕೊಂಡು
ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಭಕ್ತಂಗೆ.
ಆ ಭಕ್ತನ ಕೂಡಿಕೊಂಡು
ಲಿಂಗಾರ್ಚನೆಯ ಮಾಡುವುದು ಲೇಸಯ್ಯಾ ಜಂಗಮಕ್ಕೆ.
ಆ ಜಂಗಮದ ಕರ್ತೃತ್ವವೆ ಭಕ್ತಂಗೆ ದಾಸೋಹ,
ಆ ಭಕ್ತನ ಕಿಂಕಲವೆ ಆ ಜಂಗಮಕ್ಕೆ ದಾಸೋಹ.
ಆ ಭಕ್ತರೊಳಗೆ ಆ ಜಂಗಮವಡಗಿ,
ಆ ಜಂಗಮದೊಳಗೆ ಆ ಭಕ್ತನಡಗಿ,
ಇದನೇನೆಂದು ಹವಣಿಸುವೆನಯ್ಯಾ, ಎರಡೊಂದಾದ ಘನವ ?
ಇದನೇನೆಂದುಪಮಿಸುವೆನಯ್ಯಾ, ತೆರಹಿಲ್ಲದ ಘನವ ?
ಈ ಎರಡಕ್ಕೆ ಭವವಿಲ್ಲೆಂದು ಕೂಡಲಸಂಗಯ್ಯಾ,
ನಿಮ್ಮ ಶ್ರುತಿಗಳು ಹೇಳಿದವಾಗಿ,
ನಿಮ್ಮ ಕರುಣವೆನಗೆ ಆುತ್ತು.
523
ಹರವ ನದಿಯ ತೆರನ ಹೋಲಬಲ್ಲಡೆ ಭಕ್ತಿ,
ಕೂಡೆ ಸಯದಾನವ ನೀಡಬಲ್ಲಡೆ ಭಕ್ತಿ,
ನೀಡಿ ಮಿಕ್ಕುದ ಕಾಯ್ದುಕೊಂಡಿರಬಲ್ಲಡೆ
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.
524
ಏನ ಮಾಡುವೆ ಎನ್ನ ಪುಣ್ಯವ ಫಲವು !
ಶಾಂತಿಯ ಮಾಡಹೋದಡೆ ಬೇತಾಳನಾಯಿತ್ತು.
ಕೂಡಲಸಂಗಮದೇವರ ಪೂಜಿಸಿಹೆನೆಂದಡೆ
ಭಕ್ತಿಯೆಂಬ ಮೃಗ ಎನ್ನನಟ್ಟಿ ಬಂದು ನುಂಗಿತ್ತಯ್ಯಾ.
525
ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬಬೀಜವಂಕುರಿಸಿ,
ಲಿಂಗವೆಂಬ ಎಲೆಯಾುತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾುತ್ತು,
ಆಚಾರವೆಂಬ ಕಾಯಾುತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
526
ಸ್ವಾಮಿ ನೀನು, ಶಾಶ್ವತ ನೀನು,
ಎತ್ತಿದೆಬಿರಿದ ಜಗವೆಲ್ಲರಿಯಲು,
ಮಹಾದೇವ, ಮಹಾದೇವ,
ಇಲ್ಲಿಂದ ಮೇಲೆ ಶಬ್ದವಿಲ್ಲ.
ಪಶುಪತಿ ಜಗಕ್ಕೇಕೋದೇವ
ಸ್ವರ್ಗ ಮತ್ರ್ಯ ಪಾತಾಳದೊಳಗೆ
ಒಬ್ಬನೇ ದೇವ ಕೂಡಲಸಂಗಮದೇವ.
527
ಶ್ರುತಿಗಗಮ್ಯ ದ್ವಾದಶಾದಿತ್ಯನಪ್ರತಿಮಮಹಿಮಂಗೆ ಪ್ರತಿಯುಂಟೆ
`ಸೋಮಃ ಪವತೇ' ಎಂಬ ಶ್ರುತಿಯನರಿತು
`ಶಿವನೇಕೋದೇವ ರುದ್ರನದ್ವಿತೀಯ'ನೆಂದು
ನಂಬುವುದು ಕಾಣಿರಣ್ಣಾ.
ಕೂಡಲಸಂಗಮದೇವನಲ್ಲದೆ ಇಲ್ಲವೆಂದು ಎತ್ತಿದೆ ಬಿರಿದ,
ಜಗವೆಲ್ಲರಿಯಲು.
528
ಉಪ್ಪರಗುಡಿ ನಂದಿವಾಹನ ಸದ್ಯೋಜಾತನ ಬಾಗಿಲ ಮುಂದೆ
ಸಾರುತ್ತೈದಾವೆ, ನೋಡಾ, ಶ್ರುತಿಗಳೂ ನಾಲ್ಕು ವೇದವೂ ಹುಸಿಯಿದೆ
`ಭರ್ಗೋ ದೇವಸ್ಯ ದ್ಥೀಮಹಿ' ಎಂದುದಾಗಿ,
ಕೂಡಲಸಂಗನಲ್ಲದಿಲ್ಲೆಂದುದು ವೇದ.
529
 530
ಶ್ರುತಿತತಿಯ ಶಿರದ ಮೇಲೆ ಅತ್ಯತಿಷ*ದ್ದಶಾಂಗುಲನ ನಾನೇನೆಂಬೆನಯ್ಯಾ
ಘನಕ್ಕೆ ಘನಮಹಿಮನ ಮನಕ್ಕಗೋಚರನ !
`ಅಣೋರಣೀಯಾನ್ ಮಹತೋ ಮಹೀಯಾನ್
ಮಹಾದಾನಿ ಕೂಡಲಸಂಗಮದೇವ.
531
ಸಕಳ ನಿಷ್ಕಳವ ಕೂಡಿಕೊಂಡಿಪ್ಪೆಯಾಗಿ
ಸಕಳ ನೀನೇ, ನಿಷ್ಕಳ ನೀನೇ ಕಂಡಯ್ಯಾ.
`ವಿಶ್ವತಶ್ಚಕ್ಷು' ನೀನೇ ದೇವಾ, `ವಿಶ್ವತೋಮುಖ' ನೀನೇ ದೇವಾ,
`ವಿಶ್ವತೋಬಾಹು' ನೀನೇ ದೇವಾ, ಕೂಡಲಸಂಗಮದೇವಾ.
532
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ,
`ವಿಶ್ವತಶ್ಚಕ್ಷು' ನೀನೆ ದೇವಾ,
`ವಿಶ್ವತೋಮುಖ' ನೀನೆ ದೇವಾ,
`ವಿಶ್ವತೋಬಾಹು' ನೀನೇ ದೇವಾ,
`ವಿಶ್ವತಃಪಾದ' ನೀನೆ ದೇವಾ, ಕೂಡಲಸಂಗಮದೇವಾ.
533
ಜಲ ಕೂರ್ಮ ನಾಗ ಮೇದಿನಿ ಸಪ್ತಸಾಗರ
ಅಜಾಂಡ ಹರಿವಿರಂಚಿಗಳು
ನಿಮ್ಮ ಉದರದ ಕೊನೆಯ ಪ್ರಾಣಿಗಳಯ್ಯಾ.
ಕೂಡಲಸಂಗನ ಮಹಾಮನೆಯಲ್ಲಿ ಅಸ್ತಿಗ್ರಾಹಕನೆಂಬ ಗಣೇಶ್ವರನ
ಇಚ್ಛಾಮಾತ್ರದಿಂದ ಜಗಜುಗವಯ್ಯಾ.
534
ರುದ್ರ ಮುಖದಲ್ಲಿ ವಿಷ್ಣು ಭುಜದಲ್ಲಿ,
ಜಂಘೆಯಲ್ಲಿ ಅಜ ಜನನವೊ.
ಇಂದ್ರ ಪಾದದಲ್ಲಿ ಚಂದ್ರ ಮನದಲ್ಲಿ,
ಚಕ್ಷುವಿನಲ್ಲಿ ಸೂರ್ಯ ಜನನವೊ.
ಮುಖದಲ್ಲಿ ಅಗ್ನಿಯು ಪ್ರಾಣದಲ್ಲಿ ವಾಯು
ನಾಭಿಯಲ್ಲಿ ಅಂತರಿಕ್ಷವೊ.
ಸಿರದಲುದಯ ತೆತ್ತೀಸಕೋಟಿ ದೇವತೆಗಳು
ಪಾದತಳದಲ್ಲಿ ಭೂಮಿ ಜನನವೊ.
ಶ್ರೋತ್ರದಲ್ಲಿ ದಶದಿಕ್ಕುವೊ.
ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ, ಅಕ್ಷಯನಗಣಿತನು.
ಸಾಸಿರ ತಲೆ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ.
ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ.
535
ವಿಶ್ವಾಧಿಕೋ ರುದ್ರನ ಹೊಗಳುವ ಶ್ರುತಿಗಳು
`ವಿಶ್ವರೂಪಾಯ ವೈ ನಮಃ
`ಪರಮರೂಪನೆ ನಮೋ, ಪರತತ್ವನೆ ನಮೋ,
ಆದಿಯಾರೂಢಭಯಂಕರನೆ ನಮೋ,
ಹರಿಯನು ಹರಿಸಿದನೇ' ಎಂದು ಶ್ರುತಿ ಸಾರುತ್ತಿರಲು
ಸಂಹಾರಕಾರಣನೆ ನಮೋ, ನಮ್ಮ ಕೂಡಲಸಂಗ
ಮಹದ್ ಮಹದ್ಭ್ಯೋ ನಮಃ.
536
ಅಯ್ದುದೇ ಬ್ರಹ್ಮನ ಕಪಾಲ ಕರದಲ್ಲಿ,
ಅಯ್ದುದೇ ವಿಷ್ಣುವಿನ ನಯನ ಪಾದದಲ್ಲಿ,
ಅಯ್ದುದೇ ಕಾಮನ ಸುಟ್ಟ ಭಸ್ಮ ಮೈಯ ಮೇಲೆ,
ಮುಖ ಮೂದಲೆಯೇಕಯ್ಯಾ, ಕೂಡಲಸಂಗಮದೇವಾ.
537
ಹರನ ಕೊರಳಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳ ತಂಡಗಳು ಓದಿ ನೋಡಲು,
ಇವನಜ ಇವ ಹರಿ ಇವ ಸುರಪತಿ ಇವ ಧರಣೇಂದ್ರ
ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು,
ಹರ ಮುಕುಳಿತನಾಗಿ ನಕ್ಕ, ನಮ್ಮ ಕೂಡಲಸಂಗಮದೇವ.
538
ಅದುರಿತು ಪಾದಾಘಾತದಿಂದ ಧರೆ,
ಬಿದಿರಿದುವು ಮಕುಟ ತಾಗಿ ತಾರಕೆಗಳು,
ಉದುರಿದವು ಕೈ ತಾಗಿ ಲೋಕಂಗಳೆಲ್ಲಾ !
ಮಹೀಪಾದಾಘಾತಾದ್ ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋಭ್ರ್ರಾಮ್ಯದ್ ಭುಜಪರಿಘರುಗ್ಣಗ್ರಹಗಣಂ
ಮುಹುರ್‍ದ್ಯೌದೌzõ್ರ್ಞಸ್ಥ್ಯಂ ಯಾತ್ಯನಿಭೃತಜಟಾತಾಡಿತತಟಾ
ಜಗದ್ರಕ್ಷಾಯೈ ತ್ವಂ ನಟಸಿ ನನು ವಾಮೈವ ವಿಭುತಾ
ನಮ್ಮ ಕೂಡಲಸಂಗಮದೇವನಿಂದು ನಾಂಟ್ಯವನಾಡೆ.
539
ಆರು ಕೋಟಿ ಬ್ರಹ್ಮರು ಮಡಿವಲ್ಲಿ
ನಾರಾಯಣಗೊಂದು ದಿನವಾಯಿತ್ತು.
ನಾರಾಯಣರೊಂದು ಕೋಟಿ ಮಡಿವಲ್ಲಿ
ರುದ್ರನ ಕಣ್ಣೆವೆ ಹಳಚಿತ್ತು.
ರುದ್ರಾವತಾರ ಹಲವಳಿವಲ್ಲಿ
ಕೂಡಲಸಂಗಮದೇವನೇನೆಂದರಿಯ.
540
ಯುಗ ಜುಗ ಪ್ರಳಯವಹಂದೂ ಕಾಣೆನಿಂದೂ ಕಾಣೆ !
ಧಗಿಲು ಭುಗಿಲು ಎಂದುರಿವಂದೂ ಕಾಣೆನಿಂದೂ ಕಾಣೆ !
ಕೂಡಲಸಂಗಮದೇವನಲ್ಲದೆ ತಲೆದೋರುವ
ದೈವಂಗಳನಂದೂ ಕಾಣೆನಿಂದೂ ಕಾಣೆ.
541
ಒಬ್ಬ ಕೆಂಚ, ಒಬ್ಬ ಕರಿಕ, ಒಬ್ಬ ಶುದ್ಧಧವಳಿತನೆಂತಯ್ಯಾ ಲಿಂಗವೆ
ಒಬ್ಬರಿಗೊಬ್ಬರು ಘನವೆಂಬರು, ಅದೆಂತಯ್ಯಾ
ಒಬ್ಬರಿಗೊಬ್ಬರು ಹಿರಿದೆಂಬರು, ಎಂತಯ್ಯಾ
ಬ್ರಹ್ಮಂಗೆ ಪ್ರಳಯ, ವಿಷ್ಣುವಿಂಗೆ ಮರಣ ಉಂಟು.
ಕೂಡಲಸಂಗಂಗಿಲ್ಲ.
542
ಹರಿ ಹರನೊಂದೆ ಎಂದಡೆ, ಸುರಿಯುವೆ ಬಾಯಲಿ ಬಾಲಹುಳುಗಳು
ಹರಿಗೆ ಹತ್ತು ಪ್ರಳಯ, ಬ್ರಹ್ಮಂಗನಂತ ಪ್ರಳಯ,
ಹರಂಗೆ ಪ್ರಳಯ ಉಂಟೆಂಬುದ ಬಲ್ಲಡೆ ನೀವು ಹೇಳಿರೆ
ಪ್ರಳಯ ಪ್ರಳಯ ಅಂದಂದಿಂಗೆ
ಹಳೆಯ, ನಮ್ಮ ಕೂಡಲಸಂಗಮದೇವ.
543
ವಿಷ್ಣು ಕರ್ಮಿ ರುದ್ರ ನಿಷ್ಕರ್ಮಿ:ಕ್ರಮವನರಿಯದೆ ನುಡಿವಿರೊ !
ವೇದಶ್ರುತಿಗಳ ತಿಳಿಯಲರಿಯದೆ ವಾದುಮಾಡುವರೆಲ್ಲ ಕೇಳಿ:
ವಿಷ್ಣು ನಾನಾಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ,
ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ !
ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ
ಇಂದ್ರಸ್ಯ ಯುಜ್ಯಃ ಸಖಾ
ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ
ದಿವೀವ ಚಕ್ಷುರಾತತಂ
ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂ ಸಃ ಸಮಿಂಧತೇ !
ವಿಷ್ಣೋರ್ಯತ್ಪರಮಂ ಪದಂ
ಎಂಬ ಶ್ರುತಿವಚನವ ತಿಳಿಯಿಂ ಭೋ !
ವರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ;
ನಿಮ್ಮ ಕರ್ಮವು ಅತ್ಯತಿಷ*ದ್ದಶಾಂಗುಲದಿಂದತ್ತತ್ತಲೆ,
ಕೂಡಲಸಂಗಮದೇವಾ.
544
ಅಮೃತಮತಿ ಸೋಮಶಂಭುವಿಂಗೆ ಹುಟ್ಟಿದಾತನಿಂದ್ರ
ಸತ್ಯಋಷಿ ಜೇಷ್ಠಾದೇವಿಗೆ ಹುಟ್ಟಿದಾತ ಬ್ರಹ್ಮ.
ವಸುದೇವ ದೇವಕಿಗೆ ಹುಟ್ಟಿದಾತ ವಿಷ್ಣು.
ನಾಭಿರಾಜ ಮರುತಾದೇವಿಗೆ ಹುಟ್ಟಿದಾತನರುಹ
ಇವರೆಲ್ಲರು ಯೋನಿಜರೆಂಬುದ ತ್ರೈಜಗ ಬಲ್ಲುದು.
ಉತ್ಪತ್ತಿ ಸ್ಥಿತಿ ಪ್ರಳಯಕ್ಕೆ ಹೊರಗಾದ ಕೂಡಲಸಂಗಮದೇವಂಗೆ
ಮಾತಾಪಿತರುಗಳುಳ್ಳಡೆ ಹೇಳಿರೊ !
545
ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ,
ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ.
546
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ,
ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ
ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ
ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ.
547
 548
ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ
ಬೊಮ್ಮನೆಂಬವನ ಕಾಣೆ, ಗಿಮ್ಮನೆಂಬವನ ಕಾಣೆ.
ವಿಷವಟ್ಟಿ ಸುಡುವಲ್ಲಿ, ವೀರಭದ್ರ ಬಡಿವಲ್ಲಿ
ಕೂಡಲಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು.
549
ಅಮೃತವ ಕಡೆವಲ್ಲಿ, ವಿಷವಟ್ಟಿ ಸುಡುವಲ್ಲಿ,
ದೇವರೆಂಬವರೆತ್ತ ಹೋದರೇನಿಂ ಭೋ
ಅಂದೊಮ್ಮೆ ಓಡಿಹೋಗಿ ಆ ಶಿವನ ಮರೆಯ ಹೋಗುವಂದು
ದೇವರೆಂಬವರೆತ್ತ ಹೋದರೇನಿಂ ಭೋ
ಕೂಡಲಸಂಗಯ್ಯ ದೇವರಿಗೆ ದೇವನು,
ಇವರೆಲ್ಲ ಆಳೆಂಬುದನರಿಯಿರಿಂ ಭೋ !
550
ವಿಷ್ಣು ಬಲ್ಲಿದನೆಂಬೆನೆ
ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ.
ಬ್ರಹ್ಮ ಬಲ್ಲಿದನೆಂಬೆನೆ
ಶಿರ ಹೋಗಿ ನಾನಾ ವಿಧಿಯಾದ.
ವೇದ ಬಲ್ಲಿತ್ತೆಂಬೆನೆ
ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ
ಲಿಂಗದ ನಿಲುಕಡೆಯ ಕಾಣದು.
ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ.
ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ.
ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು.
ಇದು ಕಾರಣ ಕೂಡಲಸಂಗಯ್ಯನೆ ನಿತ್ಯ,
ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ.
551
ಮರೆಯಲಾಗದು ಹರಿಯ ಮರೆಯಲಾಗದು ಬ್ರಹ್ಮನ !
ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ !
ನಮ್ಮ ಕೂಡಲಸಂಗಮದೇವರ ಮರೆಯಲಹುದು.
552
ಬಿದಿರೆಲೆಯ ಮೆಲಿದಡೆ ಮೆಲಿದಂತಲ್ಲದೆ,
ರಸವ ಹಡೆಯಲು ಬಾರದು,
ಮಳಲ ಹೊಸೆದಡೆ ಹೊಸೆದಂತಲ್ಲದೆ,
ಸರವಿಯ ಹಡೆಯಲುಬಾರದು.
ನೀರ ಕಡೆದಡೆ ಕಡೆದಂತಲ್ಲದೆ,
ಬೆಣ್ಣೆಯ ಹಡೆಯಲುಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯದೈವಕ್ಕೆರಗಿದಡೆ
ಹೊಳ್ಳ ಕುಟ್ಟಿ ಕೈ ಹೊಟ್ಟೆಯಾದಂತೆ ಆಯಿತ್ತಯ್ಯಾ.
553
ಅಗಳೂ ಲೋಗರ ಮನೆಯ ಬಾಗಿಲ ಕಾಯ್ದುಕೊಂಡಿಪ್ಪವು ಕೆಲವು
ದೈವಂಗಳು.
ಹೋಗೆಂದಡೆ ಹೋಗವು,
ನಾಯಿಗಿಂದ ಕರಕಷ್ಟ ಕೆಲವು ದೈವಂಗಳು.
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವಾ.
554
ಗಾಡಿಗ ಡಿಂಬುಗಂಗೆ
ಚಿಕ್ಕುಮುಟ್ಟಿಗೆ, ಹಸುರಂಬಲಿಮುಟ್ಟಿಗೆ, ಹುರಿಬುತ್ತಿಯ ಬೇಡಿ,
ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ,
ಈಡಾಡಿದ ಕೂಳಂಬಲಿಯನಾಯ್ದು ಕುರುಕುವ
ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ,
ಕೂಡಲಸಂಗಮದೇವರ ನೆರೆನಂಬುವುದೆಲವೊ.
555
ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ
ಕೆರೆ ಬಾವಿ ಹೂಗಿಡು ಮರಂಗಳಲ್ಲಿ
ಗ್ರಾಮಮಧ್ಯಂಗಳಲ್ಲಿ ಜಲಪಥ ಪಟ್ಟಣಪ್ರವೇಶದಲ್ಲಿ
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣಂತಿ
ಕುಮಾರಿ ಕೊಡಗೂಸು ಎಂಬವರ ಹಿಡಿದುಂಬ ತಿರಿದುಂಬ
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರಬೆಂತರ
ಕಾಳಯ್ಯ ಮಾರಯ್ಯ ಮಾಳಯ್ಯ ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದೆ ದಡಿ ಸಾಲದೆ.
556
ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.
557
ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು,
ಸಾಲಬಟ್ಟಡೆ ಮಾರಿಕೊಂಬರಯ್ಯಾ,
ಸಾಲಬಟ್ಟಡೆ ಅವರನೊತ್ತೆಯಿಟ್ಟು ಕೊಂಡುಂಬರಯ್ಯಾ.
ಮಾರುವೋಗನೊತ್ತೆಯೋಗ
ನಮ್ಮ ಕೂಡಲಸಂಗಮದೇವ.
558
ಉಣಲುಡಲು ಮಾರಿಯಲ್ಲದೆ, ಕೊಲಲು ಕಾಯಲು ಮಾರಿಯೆ
ತನ್ನ ಮಗನ ಜವನೊಯ್ದಲ್ಲಿ ಅಂದೆತ್ತ ಹೋದಳು ಮಾರಿಕವ್ವೆ
ಈವಡೆ ಕಾವಡೆ ನಮ್ಮ ಕೂಡಲಸಂಗಯ್ಯನಲ್ಲದೆ
ಮತ್ತೊಂದು ದೈವವಿಲ್ಲ.
559
ಮೊರನ ಗೋಟಿಲಿ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು,
ಕುರಿ ಸತ್ತು ಕಾವುದೆ ಹರ ಮುಳಿದವರ
ಕುರಿ ಬೇಡ ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ.
560
ಬನ್ನಿರೇ ಅಕ್ಕಗಳು, ಹೋಗಿರೇ ಆಲದ ಮರಕ್ಕೆ.
ಕಚ್ಚುವುದೇ ನಿಮ್ಮ, ಚಿಪ್ಪಿನ ಹಲ್ಲುಗಳು.
ಬೆಚ್ಚಿಸುವುವೇ ನಿಮ್ಮ, ಬಚ್ಚಣಿಯ ರೂಹುಗಳು.
ನಮ್ಮ ಕೂಡಲಸಂಗಮದೇವನಲ್ಲದೆ
ಪರದೈವಂಗಳು ಮನಕ್ಕೆ ಬಂದವೆ
ಬಿಕ್ಕನೆ ಬಿರಿವ ದೈವಂಗಳು.
561
ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ !
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ !
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ.
562
 563
ಲಿಂಗಶಿವಾಲಯದ ಮುಂದೆ ಸಿಂಹ ಶೂದ್ರಿಕನಲ್ಲದಿಲ್ಲ,
ನಂದಿಕೇಶ್ವರ ಭೃಂಗಿನಾಂಟ್ಯ ನಮ್ಮ ಲಿಂಗನ ಮುಂದೆ.
ಇದಕ್ಕೆ ದಿಷ್ಟದೀವಿಗೆ, ನಮ್ಮ ಲಿಂಗನ ಮುಂದೆ
ಅನ್ಯದೈವವೆಂಬುದ ತೋರಿಯೂ ಕಾಣಬಾರದು.
ನೊಸಲಕಣ್ಣ ಅಭವನೊಬ್ಬನೆ ದೈವ ಕೂಡಲಸಂಗಮದೇವ.
564
ಗುಡಿಯೊಳಗಿರ್ದು ಗುಡಿಯ ನೇಣ ಕೊಯಿದಡೆ,
ಗುಡಿಯ ದಡಿಗೆ ಬಿದ್ದು ಹಲ್ಲು ಹೋಹುದು, ನೋಡಾ,
ಪೊಡವಿಗೀಶ್ವರನ ಗರ್ಭಾವಾಸದೊಳಗಿರ್ದು ನುಡಿವರು
ಮತ್ತೊಂದು ದೈವವುಂಟೆಂದು.
ತುಡುಗುಣಿನಾಯನು ಪಿಡಿತಂದು ಸಾಕಿದಡೆ
ತನ್ನೊಡೆಯಂಗೆ ಬಗಳುವಂತೆ ಕಾಣಾ
ಕೂಡಲಸಂಗಮದೇವಾ.
565
ಅಸಮಾಕ್ಷಲಿಂಗಕ್ಕೆ ಅನ್ಯದೈವವ ಸರಿಯೆಂಬವನ ಬಾಯಲ್ಲಿ
ಮಸೆದ ಕೂರಲಗನಿಕ್ಕದೆ ಮಾಬನೆ
ಹುಸಿಯಾಗಿ ನುಡಿವವನ ನಾಯಾಗಿ ಬಗುಳಿಸನೆ
ಹಿರಿಯರುತ್ತಮರೆನ್ನದವರ ಕುದುರೆಯಾಗಿ ಕಟ್ಟಿಸನೆ
ಗುರುಲಘುವೆನ್ನದವರ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ
ಪರಸ್ತ್ರೀಗಳುಪಿದವರ ಗಾಣದಲಿಕ್ಕಿ ಹಿಳಿಯನೆ
ಪರಧನಕ್ಕಳುಪಿದವರ ಹಿಡಿ ಖಂಡವ ಕೊಯ್ಯನೆ
ಎಲೆ ಕೂಡಲಸಂಗಮದೇವಾ, ನಿಮ್ಮ ಹೇಳಿದ ಹೇಳಿಕೆಯಿಂದ
ಪಿಂಬೇರ ಮೈ[ಲುಗ] ಮೇಳವಾಡುತ ಇದ್ದ ಕಾಣಾ, ತೃಜಗದೊಳಗೆ.
566
ಶಿವಮಯ ವಿಷ್ಣುವಲ್ಲ, ವಿಷ್ಣುಮಯ ಶಿವನಲ್ಲ, ನುಡಿಯದಿರಿಂ ಭೋ !
ನಾರಾಯಣ ಹರನಲ್ಲ ನುಡಿಯದಿರಿಂ ಭೋ !
ಶಿವನು ವಿಷ್ಣುವಲ್ಲ ನುಡಿಯದಿರಿಂ ಭೋ !
ನಮ್ಮ ಕೂಡಲಸಂಗಯ್ಯನನರಿಯದ ಸೂನೆಗಾರರೆಲ್ಲ
ನುಡಿಯದಿರಿಂ ಭೋ !
567
ಅವಲಕ್ಷಣ ನಾಯನುಡಿಯ ನಾಲಗೆಯ ಸಡಗರ
ಡೊವಿಗೆ ಮೃತ್ಯುವಿನ ನುಡಿಗೊಳಗಾಯಿತ್ತು.
ಬೇಡವೋ ಪರವಾದಿ ಗಳುಹದಿರು.
ಬೇಡವೊ ದೂಷಕ ಬಗುಳದಿರು.
ಭಕ್ತಿಗೆಯೂ ಬೋಟ್ಟಕ್ಕೆಯೂ ಜಾತಿಸೂತಕವುಂಟೆ
ಪರುಷ ಮುಟ್ಟಲು ಕಬ್ಬುನ ಹೊನ್ನಾಯಿತ್ತು, ಕಾಣಾ.
ನಮ್ಮ ಕೂಡಲಸಂಗನ ಶರಣರನವರಿವರೆಂದಡೆ
ಕುಂಭಿಪಾತಕ ನಾಯಕನರಕ ತಪ್ಪದು ಕಾಣಾ.
568
ವಿಷ್ಣುವ ಪೂಜಿಸಿ ಮುಡುಹ ಸುಡಿಸಿಕೊಂಬುದ ಕಂಡೆ,
ಜಿನನ ಪೂಜಿಸಿ ಬತ್ತಲೆಯಿಪ್ಪುದ ಕಂಡೆ,
ಮೈಲಾರನ ಪೂಜಿಸಿ ನಾಯಾಗಿ ಬಗಳುವುದ ಕಂಡೆ,
ನಮ್ಮ ಕೂಡಲಸಂಗನ ಪೂಜಿಸಿ ದೇವಾ,
ಭಕ್ತರೆನಿಸಿಕೂಂಬುದ ಕಂಡೆ.
569
ಬ್ರಾಹ್ಮಣನೆ ದೈವನೆಂದು ನಂಬಿದ ಕಾರಣ
ಗೌತಮಮುನಿಗೆ ಗೋವೇಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಕರ್ಣನ ಕವಚ ಹೋಯಿತ್ತು
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಪರಶುರಾಮ ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ನಾಗಾರ್ಜುನನ ತಲೆ ಹೋಯಿತ್ತು.
ದೇವಾ, ಭಕ್ತನೆಂದು ನಂಬಿದ ಕಾರಣ
ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.
570
ಆದಿ ಪುರಾಣ ಅಸುರರಿಗೆ ಮಾರಿ,
ವೇದಪುರಾಣ ಹೋತಿಂಗೆ ಮಾರಿ,
ರಾಮಪುರಾಣ ರಕ್ಕಸರಿಗೆ ಮಾರಿ,
ಭಾರತಪುರಾಣ ಗೋತ್ರಕ್ಕೆ ಮಾರಿ.
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ.
571
ನಿಮ್ಮ ವಚನವೆನ್ನ ಪುಣ್ಯವೆಂಬುದು.
ಹುಸಿಯಾಯಿತ್ತು ನೋಡಾ ಶಾಸ್ತ್ರದ ವಚನ ಹೋತಿಂಗೆ ಮಾರಿ,
ಎಂತು ನಂಬುವೆನಯ್ಯಾ ?
ನಾನು ಕೊಲ್ಲೆನು, ನೇಣು ಕೊಂದಿತೆಂಬ ಸೂನೆಗಾರರನೇನೆಂಬೆ
ಕೂಡಲಸಂಗಮದೇವಾ.
572
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ !
ವೇದವನೋದಿದವರ ಮುಂದೆ ಅಳು, ಕಂಡಾ !
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
573
ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ ಸುರರೆಲ್ಲ
ನೆರೆದು ಬಂದ ಬಾಯ ನೋಡಾ.
ಬಾಯ ತಪ್ಪಿಸಿ ಉಣಬಂದ ದೈವದ ಬೆಂದ ಬಾಯ ನೋಡಾ.
ಉಣ್ಣದೆ ಉಡದೆ ಹೊಗೆಯ ಕೈಯಲಿ ಸತ್ತ ಅಣ್ಣಗಳ ಕೇಡ ನೋಡಾ
ಕೂಡಲಸಂಗಮದೇವಾ.
574
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ
ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ !
ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ
ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.
575
ಹೊಲೆಯೊಳಗೆ ಹುಟ್ಟಿ ಕುಲವನರಸುವೆ,
ಎಲವೊ, ಮಾತಂಗಿಯ ಮಗ ನೀನು.
ಸತ್ತುದನೆಳೆವನೆತ್ತಳ ಹೊಲೆಯ
ಹೊತ್ತು ತಂದು ನೀವು ಕೊಲುವಿರಿ.
ಶಾಸ್ತ್ರವೆಂಬುದು ಹೋತಿಂಗೆ ಮಾರಿ,
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು.
ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚಾರಿತ್ರರು.
ಅವರಿಗೆ ತೋರಲು ಪ್ರತಿಯಿಲ್ಲವೋ.
576
ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ
ಹಗಲುಗಾಣದ ಗೂಗೆ ಇರುಳಾಯಿತ್ತೆಂದಡೆ,
ಜಗಕ್ಕೆ ಇರುಳಪ್ಪುದೆ ಮರುಳೆ
ಹೋಮದ ನೆವದಲ್ಲಿ ಹೋತನು ಕೊಂದು ತಿಂಬ
ಅನಾಮಿಕರೊಡನಾಡಿ ಗೆಲಿವುದೇನು
ಕೂಡಲಸಂಗಮದೇವಾ.
577
ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲಿದ್ದು
ಮೂಗ ಹಿಡಿದು ಧ್ಯಾನಮಾಡುವರಯ್ಯಾ.
ಬಿಟ್ಟ ಮಂಡೆವೆರಸಿ ಬಾಯ ಮಿಡುಕಿಸುತ
ಕಣ್ಣ ಮುಚ್ಚಿ ಬೆರಳನೆಣಿಸುವರಯ್ಯಾ-
[ತ]ಮ್ಮ ಕೈಯಲಿ ಕಟ್ಟಿದ ದರ್ಭೆಯ ಹುಲ್ಲು
ಕೂಡಲಸಂಗನನರಿಯದೆ ಮೊರೆಯಿಡುವಂತೆ.
578
ಮಾಣದೆ ಅರಳೆಯ ತಿಟ್ಟನೆ ತಿರುಗುವ ಗಾಣದೆತ್ತಿನಂತೆ,
ಪೂರ್ವಲಿಖಿತ ಮುಂದುಗಾಣಲೀಯದು.
ನೀವೆಲ್ಲ ವಾಯಕ್ಕೆ ಕೆಡಬೇಡ, ಮಾಣದೆ ಪೂಜಿಸು ಲಿಂಗವ.
ಹೆರರ ಗೋಣ ಕೊಯ್ದೆನೆಂದು ಮಂತ್ರವನೋದುವ
ನೇಣುಗಾರರ ಮೆಚ್ಚ ಕೂಡಲಸಂಗಮದೇವ.
579
ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ.
ಬತ್ತುವ ಜಲವ, ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ.
580
ಕಣ್ಣ ಮಚ್ಚಿ ಕನ್ನಡಿಯ ತೋರುವಂತೆ,
ಇರುಳು ಹಗಲಿನ ನಿದ್ರೆ ಸಾಲದೆ
ಬೆರಳನೆಣಿಸಿ ಪರಮಾರ್ಥವ ಹಡೆವಡೆ
ಚೋದ್ಯವಲ್ಲವೆ ಹೇಳಾ.
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ,
ಕೂಡಲಸಂಗಮದೇವಾ.
581
ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತ್ವವಡೆದು,
ತಮ್ಮ ವಚನಬ್ರಹ್ಮರೆನಿಸಿಕೊಂಡು ನೆಮ್ಮುವರು ವಿಷ್ಣುವನು-
ತಮ್ಮ ದೈವವ ಬಿಡುವುದಾವುದುಚಿತ
ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು ಹಡೆದನು
ಶಿವಭಕ್ತಿಯಿಂದ.
ಕಷ್ಟಜಾತಿ ಜೀವಿಗಳಿಗೆ ಮಟ್ಟಿ ಎಂತು ಬಂದತ್ತೊ !
ಮುಟ್ಟರೊಂದುವನು ಮೂವಿಧಿಬಟ್ಟರೊ !
ಹುಸಿವನೆ ಹೊಲೆಯನೆಂದು ವಚನವುಂಟು ಲೋಕದಲ್ಲಿ.
ಹುಸಿದಜನ ಶಿರ ಹೋಯಿತ್ತಾದಿಯಲ್ಲಿ,
ಎಸವೋದ ಕಿರುಪಶುವನುಸರಲೀಯದೆ
ವಿ[ದಾರಿ]ಸಿ ತಿಂಬ ಜನ್ಮ ಅದಾವ ಫಲವೋ.
ದಕ್ಷ ಯಾಗವ ಮಾಡಿ ನಿಕ್ಷೇತ್ರ ನೆರೆದ ಅಕಟಕಟಾ,
ಕೇಳಿಯೂ ಏಕೆ ಮಾಣಿರೊ
ಮಮಕರ್ತ ಕೂಡಲಸಂಗನ ಶರಣರು ಅಕ್ಷಯರದ್ಥಿಕರು,
ವಿಪ್ರರು ಕೀಳು ಜಗವೆಲ್ಲರಿಯಲು !
582
ಕುಲದಲ್ಲಿ ಹಾರುವನು ಬ್ರಹ್ಮೇತಿಗೆ ಸಾರುವನು
ಆರೊ ಮಾಡಿದ ಪಾಪಕ್ಕೆ ತಾನೆ ಕೈಯಾನುವನು.
ಸರಿಯೆ ದೇವಭಕ್ತಂಗಿವನು
ಸರಿಯೆ ಲಿಂಗಭಕ್ತಂಗಿವನು
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಹೊನ್ನ ಕಪಿಲೆಯ ರವಣಶಾಖದ ಉಚ್ಛಿಷ್ಟದ ಹಾಲಿನಿಂದ
ಕೂಳನಟ್ಟುಂಬವರನೇನೆಂಬೆ
ಕೂಡಲಸಂಗಮದೇವಾ.
583
ನರಜನ್ಮದಲ್ಲಿ ಹುಟ್ಟಿ ಲಿಂಗಮುಖವನರಿಯದೆ
ಉದಮದ ಸೊಕ್ಕಿ ತಲೆಗೇರಿತ್ತೆ ಅಯ್ಯಾ
`ಜೀವೋ ಜೀವೇನ ಭಕ್ಷ್ಯತೇ ಕರ್ಮಕರ್ಮದಲಿಪ್ಪೆಯಯ್ಯಾ.
ಅಂದೊಮ್ಮೆ ದಕ್ಷನು ಹೋತನ ಕೊಂದಲ್ಲಿ
ಘೋಳಿಡಲಿ ಘೋಳಿಡಲಿ ತಂದಿಕ್ಕಿತ್ತೆ ವೇದ
ಶಾಸ್ತ್ರಂಗಳು ಮೂರುತಿಗೊಂಡಲ್ಲಿ
ಚತುರ್ವೇದಿಗಳಿಗೊಮ್ಮೆ ಅಕ್ಕಿತ್ತೆ ಅಯ್ಯಾ !
ನಮ್ಮ ಕೂಡಲಸಂಗಮದೇವನನರಿಯದ ಕಾರಣ
ನಾಯಕನರಕದಲ್ಲಿಕ್ಕಿತ್ತಯ್ಯಾ.
584
ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ, ಬೀದಿಯ ದೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ.
ಕೂಡಲಸಂಗಮದೇವಾ,
ವಂದನೆಯ ಮರೆದು ನಿಂದಿಸುತ್ತಿದ್ದರು.
585
ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!
`ಭರ್ಗೋ ದೇವಸ್ಯ ಧೀಮಹಿ' ಎಂಬರು,
ಒಬ್ಬರಿಗಾಗಿ ವಿಚಾರವಿಲ್ಲ, ನೋಡಿರೇ
ಕೂಡಲಸಂಗಮದೇವಾ.
586
ಎನಿಸನೋದಿದಡೇನು ! ಎನಿಸ ಕೇಳಿದಡೇನು !
ಚತುರ್ವೇದಪಠ ತೀವ್ರವಾದಡೇನು
ಲಿಂಗಾರ್ಚನೆ ಹೀನವಾದಡೆ, ಶಿವಶಿವಾ !
ಬ್ರಾಹ್ಮಣನೆಂಬೆನೆ ಎನಲಾಗದು.
ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ
ಶ್ರುತೇನ ಶ್ರೋತ್ರಿಯಶ್ಚೈವ ಬ್ರಹ್ಮ ಚರತಿ ಬ್ರಾಹ್ಮಣಾ ಎಂದುದಾಗಿ
ಬ್ರಹ್ಮನಾಸ್ತಿ ಶ್ವಪಚರಧಮರೆಂದುದಾಗಿ,
ಇದು ಕಾರಣ ಕೂಡಲಸಂಗಮದೇವಾ
`ವೇದಭಾರಭರಾಕ್ರಾಂತಾ ಬ್ರಾಹ್ಮಣಾಃ ಗರ್ದಭಾಃ ಎಂಬೆನು.
587
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು !
ನಿಮಗೆರಗದ ಕಾರಣ ಕೊರಳಲ್ಲಿ ನೇಣು !
ಹಿಂಡಲೇಕೋ ತೊಳೆಯಲೇಕೋ !
ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ !
ಕೂಡಲಸಂಗನ ಶರಣರಲ್ಲಿ
ಡೋಹರ ಕಕ್ಕಯ್ಯನಾವ ತೊರೆಯಲಿ ಮಿಂದ.
588
ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ ! ಕುಲದಿಂದ ಮುನ್ನೇನಾದಿರಿಂ ಭೋ !
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ,
Põ್ಞಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ !
ನಮ್ಮ ಕೂಡಲಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ !
589
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ
ಕುಲಜನೆಂಬುದಕ್ಕೆ ಆವುದು ದೃಷ್ಟ
ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
590
ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ
ಕುಲವೇನೊ ಅವದಿರ ಕುಲವೇನೊ !
ಸಕಲಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೆ ಕುಲಜರು.
591
ಹಾರುವನ ಭಕ್ತಿ ಓಡಿನೊಳಗೆ ಅಗೆಯ ಹೊಯ್ದಂತೆ
ಕೆಳಯಿಂಕೆ ಬೇರೂರದು, ಮೇಲೆ ಫಲವಾಗದು.
ಪ್ರಾಣಲಿಂಗದ ಪ್ರಸಾದವ ಮುಂದಿಟ್ಟುಕೊಂಡು
`ಪ್ರಾಣಾಯ ಸ್ವಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ,
ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ ಎಂಬ
ಕರ್ಮಿಗಳನೇನೆಂಬೆ, ಕೂಡಲಸಂಗಮದೇವಾ.
592
 593
ಹೊನ್ನ ನೇಗಿಲಲುತ್ತು ಎಕ್ಕೆಯ ಬೀಜವ ಬಿತ್ತುವರೆ
ಕರ್ಪುರದ ಮರನ ತರಿದು ಕಳ್ಳಿಗೆ ಬೇಲಿಯನಿಕ್ಕುವರೆ
ಶ್ರೀಗಂಧದ ಮರನ ತರಿದು ಬೇವಿಂಗೆ ಅಡೆಯನಿಕ್ಕುವರೆ
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಬೇರೆ ಇಚ್ಛಾಭೋಜನವನಿಕ್ಕಿದಡೆ
ಕಿಚ್ಚಿನೊಳಗೆ ಉಚ್ಚೆಯ ಹೊಯಿದು ಹವಿಯ ಬೇಳ್ದಂತಾಯಿತ್ತು.
594
ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ !
ಇದೇಕೊ ಮರುಳುಮಾನವಾ
ಜಾತಿಯಲ್ಲಿ ಅಧಿಕನೆಂಬೆ !
ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ
`ಭಕ್ತನೆ ಶಿಖಾಮಣ' ಎಂದುದು ವಚನ.
ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,
ಕೆಡಬೇಡ ಮಾನವಾ.
595
ಹೊಲೆಯ ಮಾದಿಗ ಭಕ್ತನಾದಡೆ ಆತನ ಮನೆಯ ಸೊಣಗಂಗೆ
ಪಂಚಮಹಾವಾದ್ಯದಲಿ ಸನ್ಮಾನವ ಮಾಡೆನೆ
ನೆಲನನುಗ್ಘಡಿಸಿ ಉಘೇ ಚಾಂಗು ಭಲಾ ಎಂದು !
ಕುಲಕಧಿಕ ಹಾರುವಂಗೆ ಸಿದ್ಧಿಗೆ ಎಯಿಸಲೆ !
ನಿಮ್ಮ ಶರಣರ ಮಹಿಮೆ ಘನಕ್ಕೆ ಘನ.
ಎಲೆ ಎಲೆ ಕೂಡಲಸಂಗಮದೇವಾ, ನಿಮ್ಮ ನಂಬದವ ಹೊಲೆಯ.
596
ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು-
ತೆರನನರಿಯದೆ ತನಿರಸದ-
ಹೊರಗಣ ಎಲೆಯನೆ ಮೆಲಿದುವು !
ನಿಮ್ಮನರಿವ ಮದಕರಿಯಲ್ಲದೆ
ಕುರಿ ಬಲ್ಲುದೆ ಕೂಡಲಸಂಗಮದೇವಾ.
597
ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ
ಪ್ರಣವಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು.
`ಪ್ರಣವ ಓಂ ನಮಃ ಶಿವಾಯ' ಪ್ರಣವ ಓಂ ನಮಃ ಶಿವಾಯ,
ಪ್ರಣವ ಓಂ ನಮಃ ಶಿವಾಯ' ಎಂದುವು ಶ್ರುತಿಗಳೆಲ್ಲಾ.
`ಪ್ರಣವ ಓಂ ಭರ್ಗೋ ದೇವ' ಎಂದುವು ಶ್ರುತಿಗಳೆಲ್ಲಾ.
ಕೂಡಲಸಂಗಯ್ಯನನರಿಯದ ದ್ವಿಜರೆಲ್ಲಾ ಭ್ರಮಿತರು.
598
ವೇದವನೋದಿದಡೇನು ಶಾಸ್ತ್ರವ ಕೇಳಿದಡೇನಯ್ಯಾ
ಜಪವ ಮಾಡಿದಡೇನು ತಪವ ಮಾಡಿದಡೇನಯ್ಯಾ
ಏನ ಮಾಡಿದಡೇನು
ನಮ್ಮ ಕೂಡಲಸಂಗಯ್ಯನ ಮನಮುಟ್ಟದನ್ನಕ್ಕ.
599
ನೀವು ಹಿರಿಯರೆಂಬಿರಿ, ಕರ್ಮಿಗಳು, ನೀವು ಕೇಳಿರಿ,
ನಿಮ್ಮ ವೇದಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು
`ಓಂ ದ್ಯಾವಾ ಭೂಮೀ ಜನಯನ್ ದೇವ ಏಕಃ'
ಎಂದು ಶ್ರುತಿ ಸ್ಮøತಿಗಳು ಸಾರುತ್ತಿದ್ದಾವು.
`ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬುದು ಹುಸಿ,
`ವರ್ಣಾನಾಂ ಗುರುಃ' ನಮ್ಮ ಕೂಡಲಸಂಗನ ಶರಣರು.
600
ನಿಜಭಾವ ಲಕ್ಷ್ಮಿಸರಸ್ವತಿ ಒಲಿದಡೆ ಕುಲವನರಸಲದೇಕೆ
ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೊ
ಕಾಮಧೇನು ಮನೆಯಲಿರಲು ಬೇರೆ ಹಯನನರಸಲೇಕೆ
ಮೋಹವುಳಠಾವಿನಲ್ಲಿ ಲಜ್ಜೆಯನರಸಲೇಕೆಯೊ
ಮಹಾದಾನಿ ಕೂಡಲಸಂಗಯ್ಯನೊಲಿದು
ಮಾದಾರ ಚೆನ್ನಯ್ಯನ ಮನೆಯಲುಂಡ.
ವೇದವನೋದಿದವರು ಲಿಂಗವನೊಲಿಸಿ ತೋರಿರೋ.
601
ಆದ್ಯರಿಗಲ್ಲದೆ ವೇದ್ಯವಾಗದು; ಮಾಣಿ ಭೋ, ಮಾಣಿ ಭೋ !
ಶಿವಭಕ್ತನೇ ಕುಲಜ,
ಕೈವರ್ತಗರ್ಭಸಂಭೂತಮಾರ್ಕಂಡೇಯಮಹಾಮುನಿಃ
ತಪಸಾ ಜಾಯತೇ ವಿಪ್ರಕುಲಂ ಜಾತಿರ್ನ ವಿದ್ಯತೇ
ಜಾತನಲ್ಲ ಅಜಾತನಲ್ಲ,
ಕೂಡಲಸಂಗನ ಶರಣರು ನಿಸ್ಸೀಮರಯ್ಯಾ.
602
ಎಮ್ಮವರು ಅದ್ಥಿಕರು, ಎಲ್ಲರಿಂದವೂ ಅದ್ಥಿಕರು;
ಪಾಕವ ಮಾಡುವ ಭಾಂಡ ಸೊಣಗನ ಡೊವಿಗೆಯಯ್ಯಾ !
ಕೆರಹಿನಲ್ಲಿ ಮುಚ್ಚುವುದು ಆವ ಆಗಮವಯ್ಯಾ
ಕೂಡಲಸಂಗಮದೇವಾ, ನಿಮ್ಮ ವಚನವಿಂತೆಂದುದು
ಭವಿ ನೋಡಿದ ಓಗರ ಲಿಂಗಾರ್ಪಿತವಾಗದೆಂದೂ.
603
ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ, ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ !
604
ದೇವಾ, ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತು,
ದೇವಾ, ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಿತ್ತು,
ದೇವಾ, ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯನಿಮ್ಮಡಿಯಾದ.
ನೀನೊಲಿದ ಕುಲಕೆ, ನೀನೊಲ್ಲದ ಹೊಲೆಗೆ ಮೇರೆಯುಂಟೆ ದೇವಾ
ಶ್ವಪಚೋಪಿ ಮುನಿಶ್ರೇಷೊ*ೀ ಯಸ್ತು ಲಿಂಗಾರ್ಚನೇ ರತಃ
±ಲಿಂಗಾರ್ಚನವಿಹೀನೋ[s]ಪಿ ಬ್ರಾಹ್ಮಣಃ ಶ್ವಪಚಾಧಮಃ± ಎಂದುದಾಗಿ,
ಜಾತಿ-ವಿಜಾತಿಯಾದಡೇನು ಅಜಾತಂಗೆ ಶರಣೆಂದನ್ನದವನು
ಆತನೇ ಹೊಲೆಯ, ಕೂಡಲಸಂಗಮದೇವಾ.
605
ಚತುರ್ವೇದಿಯಾದಡೇನು! ಲಿಂಗವಿಲ್ಲದವನೆ ಹೊಲೆಯ!
ಶ್ವಪಚನಾದಡೇನು ಲಿಂಗವಿದ್ದವನೆ ವಾರಣಾಸಿ !
ಆತನ ನುಡಿಗಡಣ ಲೇಸು, ಆತ ಜಗಕ್ಕೆ ಪಾವನ,
ಆತನ ಪ್ರಸಾದವೆನಗೆ ಅಮೃತಸೇವನೆ.
ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋಪಿ ವಾ|
ತಸ್ಮೈ ದೇಯಂ ತತೋ ಗ್ರಾಹ್ಯಂ ಸ ಚ ಪೂಜ್ಯೋ ಯಥಾಹ್ಯಹಂ|| ಎಂಬುದಾಗಿ
ಕೂಡಲಸಂಗಮದೇವರನರಿದು ಪೂಜಿಸಿದಾತ
ಷಡುದರುಶನಕ್ಕಧಿಕ, ಜಗಕ್ಕೆ ಪಾವನ ನೋಡಾ.
606
ಭಕ್ತಿಹೀನನ ದಾಸೋಹವ ಸದ್ಭಕ್ತರು ಸವಿಯರು;
ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ ಕೋಗಿಲೆಗೆ ಮೆಲಬಾರದು.
ಲಿಂಗಸಂಬಂಧವಿಲ್ಲದವರ ನುಡಿ
ಕೂಡಲಸಂಗನ ಶರಣರಿಗೆ ಸಮನಿಸದು.
607
ಬಂದು ಬಲ್ಲಹ ಬಿಡಲು ಹೊಲೆಗೇರಿ ಎಂಬ ಹೆಸರೊಳವೆ ಅಯ್ಯಾ
ಲಿಂಗವಿದ್ದವರ ಮನೆ ಕೈಲಾಸವೆಂದು ನಂಬಬೇಕು,
ಚಾಂಡಾಲವಾಟಿಕಾಯಾಂ ವಾ ಶಿವಭಕ್ತಃ ಸ್ಥಿತೋ ಯದಿ
ತತ್‍ಶ್ರೇಣಿಃ ಶಿವಲೋಕಸ್ಯ ತದ್ ಗೃಹಂ ಶಿವಮಂದಿರಮ್ ಎಂದುದಾಗಿ,
ಲೋಕದ ಡಂಬಕರ ಮಾತು ಬೇಡ,
ಕೂಡಲಸಂಗನಿದ್ದುದೇ ಕೈಲಾಸ.
608
ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ ನುಡಿವವರ
-ಲಿಂಗವಿಲ್ಲದೆ ಉಗುಳ ನುಂಗಿದಡೆ
ಅಂದಂದಿಗೆ ಕಿಲ್ಬಿಷವಯ್ಯಾ_
ಏನೆಂಬೆನೇನೆಂಬೆನಯ್ಯಾ
ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ ಮುಟ್ಟಲಾಗದು.
ಲಿಂಗವಿಲ್ಲದೆ ನುಡಿವವರ ಶಬ್ದ ಸೂತಕ ಕೇಳಲಾಗದು.
ಲಿಂಗವಿಲ್ಲದೆ ಗಮನಿಸಿದಡೆ ಆ ನಡೆನುಡಿಗೊಮ್ಮೆ ವ್ರತಗೇಡಿ
ಕೂಡಲಸಂಗಮದೇವಾ.
609
ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ-ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ-ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮಶಿವಪಥವನರಿದಂಗೆ
ಹೋಮ-ನೇಮ-ಜಪ-ತಪದಿಂದ ವೆಗ್ಗಳ,
ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ.
610
ಅಶ್ವಮೇಧಯಾಗವಂತಿರಲಿ,
ಅಜಪೆ ಉಪದೇಶ ಸಮಾಧಿಯಂತಿರಲಿ, ಹೋ !
ಗಾಯತ್ರಿಯ ಜಪವಂತಿರಲಿ, ಹೋ !
ಜನಮೋಹನ ಮಂತ್ರವಂತಿರಲಿ, ಹೋ !
ಕೂಡಲಸಂಗನ ಶರಣರ ನುಡಿಗಡಣ
ಎಲ್ಲಕ್ಕಧಿಕ ನೋಡಾ.
611
ವೇದಶಾಸ್ತ್ರದವರ ಹಿರಿಯರೆನ್ನೆ,
ಮಾಯಾಭ್ರಾಂತಿ ಕವಿದ ಗೀತಜ್ಞರ ಹಿರಿಯರೆನ್ನೆ,
ಇವರು ಹಿರಿಯರುಗಳೇ
ಯಾಗನಟ್ಟುವಿಗಪಾಣರು, ಇವರಿಂದಧಿಕವ ಸಾಧಿಸುವರೇನು [ಕಿ]ರಿಯರೆ
ಇಂತು ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ,
ನಮ್ಮ ಕೂಡಲಸಂಗನ ಶರಣರು ಸಾಧಿಸಿದ ಸಾಧನೆಯನೆ
ಸಾಧಿಸುವುದು.
612
ಹಾರುವರೆಲ್ಲರೂ ನೆರೆದು ಶೂದ್ರನ ಹಾರುವನ ಮಾಡುವಲ್ಲಿ
ನಂದಿಮುಖವಿಲ್ಲದೆ ಮತ್ತೇನನೂ ಮಾಡಲಾಗದು.
ವಿಭೂತಿ[ಯಿ]ಲ್ಲದೆ ಮತ್ತೇನನೂ ಮಾಡಲಾಗದು.
`ಭರ್ಗೋ ದೇವಃ ಎಂಬ ಮಂತ್ರ[ವಿ]ಲ್ಲದೆ ಮತ್ತೇನನೂ ಮಾಡಲಾಗದು.
ನಿಮ್ಮಿಂದ ಕುಲಜರಾಗಿ ಮತ್ತೆ ಅನ್ಯದೈವಕ್ಕೆರಗುವ
ಜಗದನ್ಯಾಯಿಗಳನೇನೆಂಬೆ, ಕೂಡಲಸಂಗಮದೇವಾ !
613
ದೇವನೊಬ್ಬ, ನಾಮ ಹಲವು,
ಪರಮ ಪತಿವ್ರತೆಗೆ ಗಂಡನೊಬ್ಬ.
ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು.
ಹಲವು ದೈವದ ಎಂಜಲ ತಿಂಬವರನೇನೆಂಬೆ,
ಕೂಡಲಸಂಗಮದೇವಾ !
614
ಕರ್ತಾರನ ಪೂಜಿಸಿ ಕುಚಿತ ದೈವಕ್ಕೆರಗುವವ
ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ.
ಭಕ್ತರೆಂತೆಂಬೆ, ಭೃತ್ಯರೆಂತೆಂಬೆ, ಶರಣರೆಂತೆಂಬೆನವರ
ಎರಡುಳ್ಳ ಪ್ರಪಂಚಗಳ ಮೆಚ್ಚ
ಕೂಡಲಸಂಗಮದೇವ.
615
ಕಂಡಕಂಡವರೆಲ್ಲ ಗಂಡನೆಂದೆಂಬ
ದುಂಡೆಯನವಳ ಸಜ್ಜ[ನ] ಎಂದೆನ್ನಬಹುದೆ
ಲಿಂಗಪ್ರಸಾದವನುಂಡು ಅನ್ಯದೈವಂಗಳ ಕೊಂಡಾಡುವವರ
ನಮ್ಮ ಕೂಡಲಸಂಗಮದೇವನು
ಆ ಭಂಡರಿಗೆ ಮಾಡಿದ ಹುಳುಗೊಂಡವ !
616
ನಂಬಿದ ಹೆಂಡತಿಗೆ ಗಂಡನೊಬ್ಬನೆ ಕಾಣಿರೋ,
ನಂಬಬಲ್ಲ ಭಕ್ತಂಗೆ ದೇವನೊಬ್ಬನೆ ಕಾಣಿರೋ.
ಬೇಡ ಬೇಡ, ಅನ್ಯ ದೈವದ ಸಂಗ ಹೊಲ್ಲ !
ಬೇಡ ಬೇಡ, ಪರದೈವದ ಸಂಗ ಹೊಲ್ಲ !
ಬೇಡ ಬೇಡ, ಅನ್ಯ ದೈವವೆಂಬುದು ಹಾದರ ಕಾಣಿರೋ,
ಕೂಡಲಸಂಗಮದೇವ ಕಂಡಡೆ ಮೂಗ ಕೊಯ್ವ ಕಾಣಿರೊ.
617
ಊಡುವ ಉಡಿಸುವ ಗಂಡನಿದ್ದಂತೆ
ಜೋಡೆ, ಮಿಂಡಂಗೆ ಕಣ್ಣ ಚೆಲ್ಲುವಳ
ಕೇಡಿಂಗೆ ಬೆರಗಾದೆ ನಾನು.
ಕೂಡಲಸಂಗಮದೇವನು
ಸಿಂಗಾರದ ಮೂಗ ಬಣ್ಣಿಸಿ, ಹಲುದೋರೆ ಕೊಯ್ವ.
618
ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ
ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ.
ಒಬ್ಬರಿಗಾಳಾಗಿ, ಒಬ್ಬರನೋಲೈಸುವ
ನಿರ್ಬುದ್ಧಿಮನುಜರನೇನೆಂಬೆ,
ಕೂಡಲಸಂಗಮದೇವಾ !
619
ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,
ಎಲವೋ ಎಲವೋ ಬ್ರಹ್ಮೇತಿಯ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ.
ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ.
620
ಹಲವು ಕೊಂಬಿಂಗೆ ಹಾಯಲುಬೇಡ,
ಬರುಕಾಯಕ್ಕೆ ನೀಡಲುಬೇಡ,
ಲೋಗರಿಗೆ ಕೊಟ್ಟು ಭ್ರಮಿತನಾಗಿರಬೇಡ.
ಆಚಾರವೆಂಬುದು ಹಾವಸೆಗಲ್ಲು,
ಭಾವತಪ್ಪಿದ ಬಳಿಕ ಏಗೈದಡಾಗದು.
ಅಂಜದಿರು, ಅಳುಕದಿರು, ಪರದೈವಕ್ಕೆರಗದಿರು,
ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ.
621
ದ್ವಿಜರಿಗೆ ಕೊಟ್ಟು ಹಲಬರು ಕೆಟ್ಟರು,
ಉದ್ಧರಿಸುವನೊಬ್ಬ, ಶಿವಶರಣ ಸಾಲದೆ
ನಾರಾಯಣ ವೃದ್ಧಬ್ರಾಹ್ಮಣನಾಗಿ ಬಂದು ಬಲಿಯ ಭೂಮಿಯ ಬೇಡಿದ,
ಕೊಟ್ಟ ಬಲಿ ಬಂಧನಕ್ಕೆ ಸಿಕ್ಕಿದ.
ಈಶ ಭಕ್ತನಾಗಿ ಬಂದು ದಾಸನ ವಸ್ತ್ರವ ಬೇಡಿದ,
ಕೊಟ್ಟ ದಾಸ ತವನಿಧಿಯ ಪಡೆದ.
ಕಪಟದಿಂದ ನಾರಾಯಣ ಹಾರುವನಾಗಿ ಬಂದು ಕರ್ಣನ ಕವಚವ ಬೇಡಿದ,
ಕೊಟ್ಟ ಕರ್ಣ ಕಳದಲ್ಲಿ ಮಡಿದ.
ಕಾಮಾರಿ ಜಂಗಮವಾಗಿ ಬಂದು ಸಿರಿಯಾಳನ ಮಗನ ಬೇಡಿದ,
ಕೊಟ್ಟ ಸಿರಿಯಾಳಸೆಟ್ಟಿ ಕಂಚಿಯಪುರ ಕೈಲಾಸಕ್ಕೊಯ್ದ.
ನಾರಾಯಣ ಹಾರುವನಾಗಿ ಬಂದು ನಾಗಾರ್ಜುನನ ಶಿರವ ಬೇಡಿದ,
ಕೊಟ್ಟ ನಾಗಾರ್ಜುನನ ಶಿರಹೋಯಿತ್ತು.
ಶಿವನು ಜಂಗಮವಾಗಿ ಬಂದು ಸಿಂಧುಬಲ್ಲಾಳ ವಧುವ ಬೇಡಿದ,
ಕೊಟ್ಟ ಸಿಂಧುಬಲ್ಲಾಳ ಸ್ವಯಲಿಂಗವಾದ.
ಇದು ಕಾರಣ ಇಲ್ಲಿಯೂ ಲೇಸು, ಅಲ್ಲಿಯೂ ಲೇಸು;
ಕೊಡಿರೇ, ನಮ್ಮ ಕೂಡಲಸಂಗನ ಶರಣರಿಗೆ.
622
ಎಚ್ಚು ಬಾಲಿಯ ಕೊಂದ, ಕಟ್ಟಿದನು ಶರಧಿಯನು,
ಹತ್ತು ತಲೆಯ ರಾವಳನ ಒಂದೆ ಅಂಬಿನಲ್ಲಿ ಮಡಿಹಿದ,
ಛಲದಿ ಲಂಕಾದ್ವೀಪವ ನೆಲವಣ್ಣ ಮಾಡಿದ,
ಕಲಿ ವಿಭೀಷಣಂಗೆ ಪಟ್ಟವ ಕಟ್ಟಿದ ರಾಮನ ತೋರಾ.
ಮಾಯದ ಸಂಸಾರವ ನಚ್ಚಿ, ಕೆಟ್ಟು
ಬರುದೊರೆವೊಗಬೇಡ.
ಕರ್ತು ಕೂಡಲಸಂಗಂಗೆ ಶರಣೆನ್ನಿರಯ್ಯಾ.
623
ವಿಪ್ರರ ಕರೆದು `ನೃಪರುಗಳು ಇಪ್ಪರೆ
ತಮ್ಮ ಶಿಶುವಿನೊಡನೆ'ಂದು ಬೆಸಗೊಂಡಡೆ,
`ಇಪ್ಪರು, ಇಪ್ಪರು, ತಾವು ಬಿತ್ತಿದ ಫಲಂಗಳ ತಾವು ಉಣ್ಣದವರುಂಟೆ
ಎಂದು ಕಣ್ಣ ಕಾಣದೆ ಹೇಳಿದರು, ಅಣ್ಣಗಳು, ಕರ್ಮದ ಬಟ್ಟೆಯನು.
ಅಂತೆಂದ ಮಾತ ಶಿಶು ಕೇಳಿ,
ಕೆಟ್ಟೋಡಿ ಬಂದು, ಲಿಂಗದ ಹೊಟ್ಟೆಯ ಹೊಗಲು,
ಅಟ್ಟಿಬಂದು ಖಂಡೆಯವ ಕಳೆದುಕೊಂಡು ಮಂಡೆಯನೊಡೆಯಲು,
ಮಂಡೆ ಒಡೆದು ಭೂಮಂಡಲವರಿಯೆ ನಾಲ್ಕು ಪುರವಾಗಲು,
ಘಟಸರ್ಪನ ತುಡುಕಿ ನಾಗನಾಥನಾಗಿ,
ಇಪ್ಪತ್ತೇಳು ಬಸದಿಯನೊಡೆಯನೆ
ಆಗಳಂತೆ ಎನ್ನ ಮಾಡಿದ ಕರ್ಮ ನಿಮ್ಮ ಕೈಯಲು ಕೆಡಿಸುವರು.
ಮುನ್ನೊಬ್ಬ ಕೆಡಿಸಿಹನೆಂದು ಬಂದು ತುತ್ತನಿಟ್ಟು
ಮರಳಿ ಕೈಯಿಡ ಹೋದಡೆ ತುತ್ತು ಹುಳುಗುಪ್ಪೆಯಾಗದೆ
ಶಿವಧರ್ಮವ ಕೆಡಿಸಿದವನು ಅಧರ್ಮಕ್ಕಿಳಿವನು.
ಕೂಡಲಸಂಗಮದೇವ ಸಾಕ್ಷಿಯಾಗಿ
ಮಕರಭೋಜನವಾಗನೆ ವಿನಾಶಕ್ತಿರಾಯನು.
624
ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ.
ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ.
ಒಬ್ಬ ಜಂಗಮದ ಅಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು,
ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ.
625
ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟಿಯ ಕಟ್ಟಿ,
ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ, ಕಹಿಯಹುದಲ್ಲದೆ
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು,
ಕೂಡಲಸಂಗಮದೇವಾ.
626
ಕರ್ತನನರಿಯದವನು ವಿಪ್ರನಾದಡೇನು ! ಚತುರ್ವೇದಿಯಾದಡೇನು
ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ !
ಭವಿಮಾಡಿದ ಪಾಕವ ತಂದು,
ಲಿಂಗಕ್ಕರ್ಪಿಸುವ ಕಷ್ಟರ ಕಂಡು ನಾಚಿತ್ತೆನ್ನ ಮನವು,
ಕೂಡಲಸಂಗನ ಶರಣರ ಒಕ್ಕುದ ಕೊಂಡು
ಅನ್ಯವನಾಚರಿಸಿದಡೆ ತಪ್ಪದು
ಸೂಕರ ಶುಚಿರ್ಭೂತತೆಯ ಪ್ರಾಣಿಯಂತೆ.
627
ಉಂಬಲ್ಲಿ [ಊ]ಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ
ಎಂತಯ್ಯಾ ಅವರ ಯುಕ್ತರೆಂತೆಂಬೆ
ಕೂಡಲಸಂಗಮದೇವಾ ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ.
628
ಭಕ್ತರನಲ್ಲದೆ ಒಲ್ಲೆವೆಂದೆಂಬಿರಿ,
ಭಕ್ತರಿಗಲ್ಲದೆ ಕೈಯಾನೆವೆಂಬಿರಿ,
ಇದೇನ ಮಾಡುವಿರಿ ಇದೆಲ್ಲಿಗೊಯ್ಯುವಿರಿ
ಪಾವನವಾದುದನು ಲಿಂಗಕ್ಕೆ ಮಾಡುವುದೆ ಆಚಾರ.
ವಿಷಯಕ್ಕೆ ಇಕ್ಕಿ, ಅಸುಗತಿಗಿಳಿಯದಿರಿ
ಕೂಡಲಸಂಗನಶರಣರ ಒಡೆವೆಯ.
629
ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ.
ಮಾರಿಯೆಂಬುದೇನು
ಕಂಗಳು ತಪ್ಪಿ ನೋಡಿದಡೆ ಮಾರಿ,
ನಾಲಗೆ ತಪ್ಪಿ ನುಡಿದಡೆ ಮಾರಿ,
ನಮ್ಮ ಕೂಡಲಸಂಗಮದೇವರ ನೆನಹ ಮರೆದಡೆ ಮಾರಿ.
630
ಆಯುಧವಿಕ್ಕಿದವಂಗೆ ವೀರದ ಮಾತೇಕೆ
ಲಿಂಗವು ಅಂತರಿಸಿದವಂಗೆ ಒಳುನುಡಿ ಏಕೆ
ಐದೆ ಅಣಚಿಯಿಲ್ಲದವಳಿಗೆ ¸õ್ಞಭಾಗ್ಯದ ಹೂವಿನ ಬೊಟ್ಟೇಕೆ
ಸತ್ಯವಿಲ್ಲದವಂಗೆ ನಿತ್ಯನೇಮವೇಕೆ
ಕರ್ತಾರ, ನಿಮ್ಮ ಒಲವಿಲ್ಲದವಂಗೆ ಶಂಭುವಿನ ಬಂಧುಗಳೇಕೆ
ಕೂಡಲಸಂಗಮದೇವಯ್ಯಾ,
ನೀವಿಲ್ಲದವಂಗೆ ಶಿವಾಚಾರದ ಮಾತೇಕೆ.
631
ಇರುಳೆಂದೇನೋ ಕುರುಡಂಗೆ, ಹಗಲೆಂದೇನೋ ಕುರುಡಂಗೆ !
ತಾಳವಬಾರಿಸಿದಡೇನೋ,ಪಂಚಮಹಾಶಬುದವ
ಬಾರಿಸಿದಡೇನೋ ಕಿವುಡಂಗೆ ! ಕೂಡಲಸಂಗಮದೇವಯ್ಯನ
ಪಥವಿನ್ನಾವುದೆಂದರಿಯದವಂಗೆ !
632
ಸಿಂಗದ ನಡು ಮುರಿಯಲಾ ಸಿಂಗವೇನು ಬಾತೆ
ಸುಂಡಿಲು ಮುರಿಯಲು ಗಜವೇನು ಬಾತೆ
ಸಂಗ್ರಾಮದಲ್ಲಿ ವೀರನುಳಿಯಲದೇನು ಬಾತೆ
ಶೃಂಗಾರದ ಮೂಗು ಹೋದಡೆ ಶೃಂಗಾರವೇನು ಬಾತೆ
ನಿಜ ತುಂಬಿದ ಭಕ್ತಿ ತುಳುಕಾಡದವರ ಸಂಗವೇನು ಬಾತೆ
ಕೂಡಲಸಂಗಮದೇವಾ.
633
ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ.
ಬಲ್ಲೆನಾಗಿ ಒಲ್ಲೆನು ಅವರ, ಸಲ್ಲರು ಶಿವಪಥಕ್ಕೆ.
ಒಳ್ಳಿಹ ಮೈಲಾರನ ಸಿಂಗಾರದಂತೆ,
ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ,
ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ.
634
ಗೀಜಗನ ಗೂಡು, ಕೋಡಗದಣಲ ಸಂಚ,
ಬಾದುಮನ ಮದುವೆ, ಬಾವಲ ಬಿದ್ದಿನಂತೆ ಜೂಜುಗಾರನ ಮಾತು.
ಬೀದಿಯ ಗುಂಡನ ಸೊಬಗು
ಓಡಿನೊಳಗಗೆಯ ಹೊಯ್ದಂತೆ ಕಾಣಿರೋ.
ಶಿವನಾದಿ ಅಂತುವನರಿಯದವನ ಭಕ್ತಿ
ಸುಖಶೋಧನೆಗೆ ಮದ್ದ ಕೊಂಡಂತೆ, ಕೂಡಲಸಂಗಮದೇವಾ.
635
ತೊತ್ತಿನ ಕೊರಳಲ್ಲಿ ಹೊಂಬಿತ್ತಾಳೆಯ ಸಿಂಗಾರವ ಮಾಡಿದಂತೆ
ಕುಚಿತರ ಸಂಗ, ಸುಸಂಗಿಗೆ ಸಂಗಡವಿಲ್ಲ !
ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ,
ಕೂಡಲಸಂಗಮದೇವಾ.
636
ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ
ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ
ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ
ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ !
ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ
ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ.
637
ಆನೆಯನೇರಿಕೊಂಡು ಹೋದಿರೇ ನೀವು,
ಕುದುರೆಯನೇರಿಕೊಂಡು ಹೋದಿರೇ ನೀವು,
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ !
ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ !
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ !
ನಮ್ಮ ಕೂಡಲಸಂಗಮದೇವನರಿಯದೆ
ನರಕಕ್ಕೆ ಭಾಜನವಾದಿರಲ್ಲಾ !
638
ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು,
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯವರು
ಸತಿಪತಿರತಿಸುಖಭೋಗೋಪಭೋಗವ, ವಿಳಾಸವ
ಬಿಟ್ಟನೆ ಸಿಂಧುಬಲ್ಲಾಳನು
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳಸಿದಡೆ
ನಿಮ್ಮಾಚಾರಕ್ಕೆ ದೂರ, ಕೂಡಲಸಂಗಮದೇವಾ.
639
ಲಿಂಗ ಜಂಗಮ ಒಂದೆ ಎಂದು ನಂಬಿದ ಬಳಿಕ
ಅವರಂಗನೆಯರು ಲಿಂಗದ ರಾಣಿವಾಸ.
ಅಲ್ಲಿಯೂ ಮೇಳ, ಇಲ್ಲಿಯೂ ಮೇಳ,
ಚೌಡೇಶ್ವರಿಯಲ್ಲಿಯೂ ಮೇಳವೇ
ಮೊಲೆಯುಂಬ ಭಾವ ತಪ್ಪಿ ಅಪ್ಪಿದವರ
ತಲೆಯ ಕೊಂಬ ಕೂಡಲಸಂಗಮದೇವ.
640
ಒಡೆಯರು ತಮ್ಮ ಮನೆಗೆ ಒಡಗೊಂಡು ಹೋದಡೆ,
ತುಡುಗುಣಿತನದಲ್ಲಿ ಪರವಧುವ ನೋಡುವ ಸರಸ ಬೇಡ.
ಕಾಣಿರಣ್ಣಾ ! ಒಡೆಯನರಸಿಯ ಸರಸಬೇಡ.
ಕೂಳ ಸೊಕ್ಕು ತಲೆಗೇರಿ ರಾಣಿವಾಸದೊಡನೆ ಸರಸ ಬೇಡ.
ಕೂಡಲಸಂಗಮದೇವ ಕರ ಸಿತಗನಯ್ಯಾ.
641
ನೋಡಲಾಗದು ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ.
ತಗರ ಬೆನ್ನಲಿ ಹರಿವ ಸೊಣಗನಂತೆ, ಬೇಡ ಕಾಣಿರೋ.
ಒಂದಾಸೆಗೆ ಸಾಸಿರ ವರುಷ ನರಕದಲದ್ದುವ
ಕೂಡಲಸಂಗಮದೇವ.
642
ತೊರೆಯ ಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ
ತೊರೆಯಿಂ ಭೋ, ತೊರೆಯಿಂ ಭೋ
ಪರನಾರಿಯರ ಸಂಗವ ತೊರೆಯಿಂ ಭೋ !
ಪರಧನದಾಮಿಷವ ತೊರೆಯಿಂ ಭೋ !
ಇವ ತೊರೆಯದೆ ಹೋಗಿ ತೊರೆಯ ಮಿಂದಡೆ
ಬರುದೊರೆ ಹೋಹುದು, ಕೂಡಲಸಂಗಮದೇವಾ.
643
ಸತ್ಯ ಶೌಚ ನಿತ್ಯನೇಮವ ತಪ್ಪದೆ ಮಾಡಬಲ್ಲಡೆ ಅದು ಲೇಸು.
ಮತ್ಸ್ಯ ಕೂರ್ಮ ಮಂಡೂಕ ಜಲದೊಳಗಿರ್ದಲ್ಲಿ ಫಲವೇನು
ಚಿತ್ತಮಂತರ್ಗತಂ ದೃಷ್ಟ್ವಾ ತೀರ್ಥಸ್ನಾನಾನ್ನ ಶುಧ್ಯತಿ
ಶತಕುಂಭಜಲೇ ಶೌಚಂ ಸುರಾಭಾಂಡಮಿವಾ[s] ಶುಚಿಃ
ಆಗಡವ ಮಾಡಿ ಮಾಗುಡವ ಮಿಂದಡೆ,
ತಾ [ಕೂ]ಡಬಲ್ಲನೆ ಕೂಡಲಸಂಗಮದೇವ.
644
ಕುಳ್ಳಿರ್ದು ಲಿಂಗವ ಪೂಜಿಸಿ ಅಲ್ಲದಾಟವನಾಡುವರಯ್ಯಾ;
ಬೆಳ್ಳೆ ಎತ್ತಿನ ಮರೆಯಲಿರ್ದು ಹುಲ್ಲೆಗಂಬ ತೊಡುವಂತೆ
ಕಳ್ಳ ಹಾದರಿಗರ ಕೈಯಲು ಪೂಜೆಯ ಕೊಳ್ಳ
ನಮ್ಮ ಕೂಡಲಸಂಗಮದೇವ.
645
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ.
ನುಡಿಯಲೂ ಬಾರದು, ನಡೆಯಲೂ ಬಾರದು,
ಲಿಂಗದೇವನೆ ದಿಬ್ಯವೊ ಅಯ್ಯಾ.
ಬಡವನ ಕೋಪವು ಅವುಡಿಗೆ ಮೃತ್ಯುವಾದಂತೆ
ಕಡೆಗೆ ದಾಂಟದು ಕಾಣಾ, ಕೂಡಲಸಂಗಮದೇವಾ.
646
ತನು ಶುಚಿಯಿಲ್ಲದವನ ದೇಹಾರವೇಕೆ
ದೇವರು ಕೊಡನೆಂಬ ಭ್ರಾಂತದೇಕೆ
ಮನಕ್ಕೆ ಮನವೆ ಸಾಕ್ಷಿ, ಸಾಲದೆ ಲಿಂಗ ತಂದೆ
ಹೇಂಗೆ ಮನ ಹಾಂಗೆ ಘನ ತಪ್ಪದು,
ಕೂಡಲಸಂಗಮದೇವಾ.
647
ಶರಣ, ನಿಚ್ಚನಿಚ್ಚ ಪೂಜಿಸುವಂಗೆ ಇದಕ್ಕಿದೆ ದೃಷ್ಟದೀವಿಗೆ-
ಪಾದೋದಕ; ಕೋಶಪಾನವಲ್ಲದೆ ಏನೂ ಇಲ್ಲವಯ್ಯಾ.
ಮಜ್ಜನಕ್ಕೆರೆವುದು ಲಿಂಗ; ಕರಸ್ಥಲದಿಬ್ಯ.
ಗುರುವಚನ; ಭಾಷಾಪತ್ರ ಶಿವಕರದಲ್ಲಿ.
ಸತ್ಯದಿಂದ ನಡೆವಂಗೆ ನಿತ್ಯನೇಮವಾಗಿ ಸಲಿಸುವನಲ್ಲದೆ
ಹುಸಿವಂಗೆ ಮಡಿಲ ಕಿಚ್ಚಾಗಿ ಸುಡುವ.
ಲಿಂಗವ ಪೂಜಿಸಿ ಮರಳಿ ಅನ್ಯಾಯಕ್ಕೆರಗಿದಡೆ
ಕೂಡಲಸಂಗಮದೇವನವರ ಹಲ್ಲ ಕಳೆವ.
648
ಪಾಪಿಗೆ ಕೋಪಿಗೆ ಭಕ್ತಿಯಾಗೆಂದಡಪ್ಪುದೆ
ನಾರಿವಾಣವಕ್ಕುದೆ ನಾಯಿಗೆ
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಭಕರಿಗೆ.
649
ಕೋಪಿ ಮಜ್ಜನಕ್ಕೆರೆದಡೆ ರಕ್ತದ ಧಾರೆ,
ಪಾಪಿ ಹೂವನೇರಿಸಿದಡೆ ಮಸೆದಡ್ಡಾಯುಧದ ಗಾಯ.
ಕೂಪವರನಾರನೂ ಕಾಣೆನು ಮಾದಾರ ಚೆನ್ನಯ್ಯನಲ್ಲದೆ,
ಕೂಪವರನಾರನೂ ಕಾಣೆನು ಡೋಹರ ಕಕ್ಕಯ್ಯನಲ್ಲದೆ,
ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ.
ನಿನ್ನಪತ್ತಿಗರಿವರಯ್ಯಾ, ಕೂಡಲಸಂಗಯ್ಯಾ.
650
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ,
ಅವರಾರಾಧನೆ ದಂಡ.
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು ಒಲ್ಲ
ಕೂಡಲಸಂಗಮದೇವ, ಭೂಮಿಭಾರಕರ.
651
ನೂರನೋದಿ ನೂರ ಕೇಳಿ ಏನು
ಆಸೆ ಬಿಡದು, ರೋಷ ಪರಿಯದು.
ಮಜ್ಜನಕ್ಕೆರೆದು ಫಲವೇನು
ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ
ನಗುವ ನಮ್ಮ ಕೂಡಲಸಂಗಮದೇವ.
652
ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತರಿಗೆ ಬುದ್ಧಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಪಥವ ಹೇಳಿದಡೆ
ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.
653
ಕೇಳಿರೆ ಕೇಳಿರೆ ಹಿರಿಯರು, ಗುರುವಿನ ಉಪದೇಶವನು;
ಒಂದು ಗೀಜಗನ ಉಪದೇಶದಿಂದ
ಪೌಲಸ್ತ್ಯನಂದು ಹಡೆಯನೆ ದಶಮುಖನ
ಶಿರವ ಹರಿದಿಕ್ಕೆ ಪರಮನಿದ್ದೆಡೆಯು ಕಾಣದೇನಿಳೆಯಲ್ಲಿ
ಕರುಳ ತಂತಿಯ ಉಪದೇಶದಿಂದ
ಅಸುರನಂದು ಹಡೆಯನೆ ಸುರಪದವ
ತರುಣಿ ಹರಿಣಿಯ ಹಿತೋಪದೇಶದಿಂದ ಗತಿಮುಕ್ತಿಯ ಪಡೆದು
ಬಟ್ಟೆಯ ಹತ್ತನೆ ವಿನಾಶಕ್ತಿರಾಯನು
ರಂಭೆಯ ಉಪದೇಶದಿಂದ
ಶಂಭುವಿನೋಲಗದಲ್ಲಿ ಕುಳ್ಳಿರನೆ ಶ್ವೇತನು
ನಮ್ಮ ಕೂಡಲಸಂಗನ ಶರಣರ ಉಪದೇಶವ ಕೇಳಿದವರಿಗೆ
ದುರಿತ ಪಾಪಂಗಳು ಬಿಟ್ಟುಹೋಗಿ,
ಮನ ನಿರುತರಾಗಿಪ್ಪರಾ ಲಿಂಗದಲ್ಲಿ.
654
ಗುರು ಉಪದೇಶ ಮಂತ್ರವೈದ್ಯ, ಜಂಗಮ ಉಪದೇಶ ಶಸ್ತ್ರವೈದ್ಯ ನೋಡಾ,
ಭವರೋಗವ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ.
654
ಶಿವಚಿಂತೆ ಶಿವಜ್ಞಾನ ಭ್ರಮೆ ತಿಳಿದವಂಗಲ್ಲದೆ
ಆಚಾರ ಶಿವಚಾರ ತಮತಮಗೆ ಸೂರೆಯೆ
ಕೂಡಲಸಂಗಮದೇವನ ಪೂಜಿಸಿದವಂಗಲ್ಲದೆ.
656
ಶ್ವಪಚನಾದಡೇನು ಲಿಂಗಭಕ್ತನೇ ಕುಲಜನು.
ನಂಬಿ ನಂಬದಿದ್ದಡೆ ಸಂದೇಹಿ, ನೋಡಾ.
ಕಟಿದಡೇನು, ಮುಟಿದಡೇನು, ಹೂಸಿದಡೇನು ಮನಮುಟ್ಟದನ್ನಕ್ಕ
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,
ಕೂಡಲಸಂಗಮದೇವ ಒಲಿದಂಗಲ್ಲದೆ.
657
ಅವರ ನಡೆಯೊಂದು ನುಡಿಯೊಂದಾದಡೆ
ಶಿವಾಚಾರಕ್ಕವರು ಸಲ್ಲರಯ್ಯಾ !
ಬಲ್ಲನು, ಸಾತ್ವಿಕರಲ್ಲದವರನೊಲ್ಲನು.
ಶಿವಾಚಾರವ ಬಲ್ಲನು, ಅಲ್ಲಿ ನಿಲ್ಲನು.
ಪ್ರಪಂಚಿಯ ಮನವನೊಲ್ಲನು ಕೂಡಲಸಂಗಮದೇವನು.
658
ನಿಧಾನವನರಸಿಹೆನೆಂದು ಹೋದಡೆ, ವಿಘ್ನಬಪ್ಪುದು ಮಾಬುದೆ
ಸದಾಶಿವನೆಂದಡೆ, ಬೆದರಟ್ಟಿ ಸುಡುವುದು ಮಾಬುದೆ
ಹದುಳಿಗನಾಗಿ ಉಳಿದಡೆ ಪದವನೀವ ಕಾಣಾ
ಕೂಡಲಸಂಗಮದೇವ.
659
ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ,
ಅಡಿಗಡಿಗೆ ಗುರುವಿನಾಣೆ ಎಂಬ ವಚನವೆ ಹೊಲ್ಲ !
ಮುಂದೆ ಪಥಕ್ಕೆ ಸಲ್ಲರು.
ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದಡೆ,
ನಗುತಲಿರಿದುಕೊಂಡಡೆ ಅಲಗು ನೆಡದಿಹುದೆ
ಕೂಡಲಸಂಗಮದೇವಾ.
660
ಅರಗಿನ ಪುತ್ಥಳಿಯನುರಿಯ ನಾಲಗೆ ಹೊಯಿದು
ಮಾತಾಡುವ ಸರಸ ಬೇಡ !
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ
ಚಲ್ಲವಾಡಿದಡೆ ಹಲ್ಲು ಹೋಹುದು !
ಕೂಡಲಸಂಗನ ಶರಣರೊಡನೆ ಸರಸವಾಡಿದಡೆ
ಅದು ವಿರಸ ಕಾಣಿರಯ್ಯಾ.
661
ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ,
ಉರಿಯ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದಡೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ.
662
ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡುರಿವುದು ಮಾಬುದೆ
ಕಲ್ಲು ಗುಗ್ಗರಿಯ ಮೆಲಿದಡೆ ಹಲ್ಲು ಹೋಹುದು ಮಾಬುದೆ
ಶರಣರೊಡನೆ ಸರಸವಾಡಿದಡೆ ನರಕ ತಪ್ಪದು ಕಾಣಾ
ಕೂಡಲಸಂಗಮದೇವಾ.
663
ಕೋಣನ ಹೇರಿಂಗೆ ಕುನ್ನಿ ಬಸುಕುತ್ತಬಡುವಂತೆ
ತಾವೂ ನಂಬರು, ನಂಬುವರನೂ ನಂಬಲೀಯರು,
ತಾವೂ ಮಾಡರು, ಮಾಡುವರನೂ ಮಾಡಲೀಯರು.
ಮಾಡುವ ಭಕ್ತರ ಕಂಡು ಸೈರಿಸಲಾರದವರ,
ಕೂಗಿಡೆ ಕೂಗಿಡೆ, ನರಕದಲ್ಲಿಕ್ಕುವ ಕೂಡಲಸಂಗಮದೇವ.
664
ಚೇಳಿಂಗೆ ಬಸುರಾಯಿತ್ತೆ ಕಡೆ ! ಬಾಳೆಗೆ ಫಲವಾಯಿತ್ತೆ ಕಡೆ !
ರಣರಂಗದಲ್ಲಿ ಕಾದುವ ಓಲೆಕಾರಂಗೆ ಓಸರಿಸಿತ್ತೆ ಕಡೆ !
ಮಾಡುವ ಭಕ್ತಂಗೆ ಮನಹೀನವಾದಡೆ ಅದೇ ಕಡೆ
ಕೂಡಲಸಂಗಮದೇವಾ.
665
ಹುಲಿಯ ಹಾಲು ಹುಲಿಗಲ್ಲದೆ ಹೊಲದ ಹುಲ್ಲೆಗುಣಬಾರದು,
ಕಲಿಯ ಕಾಲ ತೊಡರು ಛಲದಾಳಿಗಲ್ಲದೆ ಇಕ್ಕಬಾರದು.
ಅಳಿಮನದಾಸೆಯವರ ಮೂಗ ಹಲುದೋರೆ ಕೊಯ್ವ
ಕೂಡಲಸಂಗಮದೇವ.
666
 667
ಅಲಗಲಗು ಮೋಹಿಸಿದಲ್ಲದೆ ಕಲಿತನವ ಕಾಣಬಾರದು.
ನುಡಿದ ನುಡಿ ಜಾರಿದಡೆ ಮನಕ್ಕೆ ಮನ ನಾಚಬೇಕು,
ಶಬ್ದಲೊಟ್ಟೆಯತನದಲ್ಲಿ ಎಂತಪ್ಪುದಯ್ಯಾ ಭಕ್ತಿ,
ಪಾಪಿಯ ಕೂಸನೆತ್ತಿದಂತೆ.
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯಾ.
668
ಹರಬೀಜವಾದಡೆ ಹಂದೆ ತಾನಪ್ಪನೆ
ಒರೆಗಟ್ಟಿ ಇರಿಯದವರ ಲೋಕ ಮೆಚ್ಚುವುದೆ
ಉಟ್ಟ ಚಲ್ಲಣ ಕೈಯ ಪಟ್ಟೆಯವಿಡಿದು,
ಗರುಡಿಯ ಕಟ್ಟಿ ಶ್ರವವ ಮಾಡುವಂತೆ
ತನ್ನ ತಪ್ಪಿಸಿಕೊಂಡಡೆ ಶಿವ ಮೆಚ್ಚುವನೆ
ಅರಿಯದವರಿಗೆ ಒಳ್ಳೆ ಹೆಡೆಯನೆತ್ತಿಯಾಡುವಂತೆ
ಬೊಳ್ಳೆಗನ ಭಕ್ತಿ ಕೂಡಲಸಂಗಮದೇವಾ.
669
ಮೊನೆ ತಪ್ಪಿದ ಬಳಿಕ ಅಲಗೇನ ಮಾಡುವುದು
ವಿಷ ತಪ್ಪಿದ ಬಳಿಕ ಹಾವೇನ ಮಾಡುವುದು
ಭಾಷೆ ತಪ್ಪಿದ ಬಳಿಕ ದೇವಾ, ಬಲ್ಲಿದ ಭಕ್ತನೇನ ಮಾಡುವನಯ್ಯಾ
ಭಾಷೆ ತಪ್ಪಿದ ಬಳಿಕ ಪ್ರಾಣದಾಸೆಯನು ಹಾರಿದಡೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವಾ.
670
ಶರಣ ಸಂಬಂಧವನರಿದ ಬಳಿಕ
ಮರಳಿ ಭವಿಯ ಬೆರಸಲಾಗದು.
ಬ್ರಹ್ಮೇತಿ ಭ್ರೂಣಹತ್ಯ ವೈತರಣಿ ದುರ್ಗತಿ
ಪಂಚಮಹಾಪಾತಕದಿಂದದ್ಥಿಕ ನೋಡಾ.
ಅಳುಪಿ ಭವಿಯೊಡನುಂಡಡೆ ಭಕ್ತನಲ್ಲ
ಕೂಡಲಸಂಗಮದೇವಾ.
671
ವೀರವ್ರತಿ ಭಕ್ತನೆಂದು ಹೊಗಳಿಕೊಂಬಿರಿ ಕೇಳಿರಯ್ಯಾ;
ವೀರನಾದಡೆ ವೈರಿಗಳು ಮೆಚ್ಚಬೇಕು,
ವ್ರತಿಯಾದಡೆ ಅಂಗನೆಯರು ಮೆಚ್ಚಬೇಕು,
ಭಕ್ತನಾದಡೆ ಜಂಗಮವೆ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.
672
ಕಲಿತನ ತನಗುಳ್ಳಡೆ ಸೂಜಿ ಬಾಳು ಮೊದಲಾಗಿ ಕಾದಲೆಬೇಕು.
ಶರಣಪಥ ತನಗುಳ್ಳಡೆ ಶಿವಭಕ್ತರ ಮನೆಯಲ್ಲಿ ಶಿವರಸವ
ಪಂಚಾಮೃತವ ಮಾಡಿಕೊಳ್ಳಬೇಕು.
ಭ್ರಾಂತುವಿಡಿದು ಲಿಂಗಕ್ಕೋಗರವನರಸುವ
ಪಾತಕರ ಮೆಚ್ಚ ಕೂಡಲಸಂಗಮದೇವ.
673
ಕಟ್ಟಿ ಬಿಡುವನೆ ಶರಣನು ಬಿಟ್ಟು ಹಿಡಿವನೆ ಶರಣನು
ನಡೆದು ತಪ್ಪುವನೆ ಶರಣನು ನುಡಿದು ಹುಸಿವನೆ ಶರಣರನು
ಸಜ್ಜನಿಕೆ ತಪ್ಪಿದಡೆ, ಕೂಡಲಸಂಗಯ್ಯ ಮೂಗ ಹಲುದೋರೆ
ಕೊಯ್ವ.
674
ಹುಟ್ಟುವಲ್ಲಿ ಭವಿ, ಮರಳಿ ಭಕ್ತನ ಮಾ[ಡೆ] , ಪೂರ್ವಾಶ್ರಯವ ಕಳೆದು,
ಹೊಂದುವಲ್ಲಿ ಭವಿಯಾಗಿ ಹೋಹರ ಮುಟ್ಟಲಾಗದು.
ಅವನ ಮುಟ್ಟಿದವ ಮುನ್ನವೆ ವ್ರತಗೇಡಿ.
ಅವನ ಶ್ರಾದ್ಧಕಾಲವೆ ಶ್ವಾನಮಾಂಸ,
ಕ್ರಿಯಾಕಾಲವೆ ಕ್ರಿಮಿಗಳು, ತದ್ದಿನವೆ ಮದ್ಯಮಾಂಸ.
ಇದು ಕಾರಣ, ಕೂಡಲಸಂಗಮದೇವಾ,
ಅವನ ಮನೆಯ ವಿಚಾರಿಸದೆ ಹೊಕ್ಕವಂಗೆ ನಾಯಕನರಕ.
675
ಒಡನೆ ಹುಟ್ಟಿದುದಲ್ಲ, ಒಡನೆ ಬೆಳೆದುದಲ್ಲ,
ಎಡೆಯಲಾದ ಒಂದು ಉಡುಗೆಯನುಟ್ಟು
ಸಡಿಲಿದಡೆ ಲಜ್ಜೆ ನಾಚಿಕೆಯಾಯಿತ್ತೆಂಬ ನುಡಿ
ದಿಟವಾಯಿತ್ತು ಲೌಕಿಕದಲ್ಲಿ.
ಹಡೆದ ಗುರುಕರುಣವ, ಒಡನೆ ಹುಟ್ಟಿದ ನೇಮವನು ಬಿಡದಿರೆಲವೊ.
ಬಿಟ್ಟಡೆ ಕಷ್ಟ, ಕೂಡಲಸಂಗಮದೇವನಡಸಿ
ಕೆಡಹುವ ನಾಯಕನರಕದಲ್ಲಿ.
676
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.
677
ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.
678
ಮುನ್ನಿನ ಕಲಿ ವೀರಧೀರರು ಕಾದಿದ ರಣಗಳನು
ಪರಿಪರಿಯಲಿ ಬಣ್ಣಿಸಿ ಹೇಳಲುಬಹುದಲ್ಲದೆ
ಆ ದಳವಿದಿರಾದಲ್ಲಿ ಬಿರಿದ ಪಚಾರಿಸಿ, ಕಾದಿ ತೋರಲುಬಾರದು.
ಮುನ್ನಿನ ಪುರುಷಬ್ರತಿಯರು ಒಲಿಸಿದ ಆಯತವ
ಪರಿಪರಿಯಲು ಬಣ್ಣಿಸಲು ಬಹುದಲ್ಲದೆ
ಪುರುಷನಿರ್ವಾಣಕ್ಕುರಿವಗ್ನಿಯ
ಬಂದು ಹೊಕ್ಕು ತೋರಲುಬಾರದು.
ಮುನ್ನಿನ ಪುರಾತನರೆಲ್ಲರು ತನುಮನಧನವನ್ನಿತ್ತು
ಮಾಡಿ, ನೀಡಿ ಲಿಂಗವ ಕೂಡಿದ ಪರಿಗಳನು
ಅನುಭವದಲರ್ಥೈಸಿ ಹೇಳಬಹುದಲ್ಲದೆ
ಮಾಡಿ, ನೀಡಿ ತೋರಲುಬಾರದು.
ಇಂತೀ ಅರೆಬಿರಿದಿನ ಬಂಟರು, ಪುರುಷಬ್ರತಿಯರು, ಪುರಾತನರು
ಬರಿಯ ಮಾತನಾಡಿ ಹೊರಗೆ ಮೆರೆವರಲ್ಲಾ !
ಪರೀಕ್ಷೆಯುಂಟಾಗಿಯಿದ್ದಡೆ ಒಳಗಣವರ ಹೆಸರ ಹಿಡಿದು
ಪರಿಪರಿಯಲು ಹೊಗಳುವರು.
ಶರೀರಮರ್ಥಪ್ರಾಣ ಗುರುಲಿಂಗಜಂಗಮಕ್ಕೆ ಪರೀಕ್ಷೆಯುಂಟಾಗಿಯೆ
`ಆತ ಮಹೇಶ್ವರ ಪುರಾತವಳಿ'ಯೆಂಬ
ಪರಮಬಂಧುಗಳಾತನ ನೆನೆನೆನೆದು ಬದುಕುವರು.
ಇಂತೀ ಅನುಭಾವದಲೋದಿ, ಅಕ್ಷರಾಭ್ಯಾಸವ ಸಾಧಿಸಿ
ತರ್ಕಿಸಿ ನಿಂದಿಸಲಾಗದು,
ಕೂಡಲಸಂಗನ ಶರಣರಿಗಲ್ಲದನುಭಾವವಿಲ್ಲ.
679
ಕಬ್ಬಿನ ಹಣಿದವನಾಡುವರಲ್ಲದೆ, ಕಾಯದ ಹಣಿದವನಾಡುವರೆ
ಮೇಲೊಡ್ಡವಾಯಿತ್ತೆಂದು ಕೂಡಲಸಂಗಮದೇವಾ,
ನೀನಿಕ್ಕಿದ ಜೂಜಿಂಗೆ ಹೊಯಿದು ಗೆದ್ದ ಸಿರಿಯಾಳ.
680
ಅರ್ಥ ಪ್ರಾಣ ಅಭಿಮಾನವ ಕೊಟ್ಟೆನೆಂಬರಲ್ಲದೆ
ಕೊಟ್ಟ ಭಕ್ತರನಾರನೂ ಕಂಡುದಿಲ್ಲ;
ದಾಸ ತನ್ನ ವಸ್ತ್ರವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ,
ಸಿರಿಯಾಳ ತನ್ನ ಮಗನ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ,
ಬಲ್ಲಾಳ ತನ್ನ ವಧುವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ.
ಇವೆಲ್ಲ ಹೊರಗಣ ಮಾತು,
ಕೂಡಲಸಂಗಮದೇವರಲ್ಲಿ ತನ್ನ ಕೊಟ್ಟ ಸಿಂಧುಮರಾಳ.
681
 682
ಭಕ್ತರೇ ಸಮರ್ಥರು, ಅಸಮರ್ಥರೆಂದನಲುಂಟೆ
ಚೆನ್ನನೆತ್ತ, ಚೋಳನೆತ್ತ !
ಚೆನ್ನನೊಡನುಂಡ ಶಿವ ಆಹಾ ! ಅಯ್ಯಾ !
ಚೆನ್ನ, ಚೋಳನ ಮನೆಯ ಕಂಪಣಿಗನಯ್ಯಾ !
ಕೂಡಲಸಂಗಮದೇವ ಭಕ್ತಿಲಂಪಟನಯ್ಯಾ !
683
ನಿಸ್ಸೀಮ ಗುಗ್ಗುಳವನಿಕ್ಕಿದವನೊಬ್ಬ ಶರಣ,
ಉಘೇ ಚಾಂಗು ಭಲಾ ಎಂಬ ಹೊಗೆ ಗಗನವ ತೀವೆ.
ಓಹಿಲನ ಮೆರೆದ ಸೌರಾಷ್ಟ್ರಮಂಡಲದಲ್ಲಿ,
ಕೂಡಲಸಂಗಮದೇವ ಭಕ್ತಿವತ್ಸಲನಾಗಿ.
684
ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು,
ಲಿಂಗವಂತರು ತಾವು ಅಂಜಲದೇಕೆ
ಲಿಂಗವಿರಿಸಿದಂತಿಪ್ಪುದಲ್ಲದೆ,
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ.
685
ಶಿವಭಕ್ತನಾಗಿ ತನ್ನ ಹಿಡಿದೆಹೆನೆಂದು ಹೋದಡೆ;
ನುಗ್ಗು ಮಾಡುವ, ನುಸಿಯ ಮಾಡುವ,
ಮಣ್ಣ ಮಾಡುವ, ಮಸಿಯ ಮಾಡುವ.
ಕೂಡಲಸಂಗಮದೇವರ ನೆರೆ ನಂಬಿದನಾದಡೆ;
ಕಡೆಗೆ ತನ್ನಂತೆ ಮಾಡುವ.
686
ಅರೆವನಯ್ಯಾ ಸಣ್ಣವಹನ್ನಕ್ಕ,
ಒರೆವನಯ್ಯಾ ಬಣ್ಣಗಾಬನಕ್ಕ.
ಅರೆದಡೆ ಸಣ್ಣವಾಗಿ, ಒರೆದಡೆ ಬಣ್ಣವಾದಡೆ
ಕೂಡಲಸಂಗಮದೇವನೊಲಿದು ಸಲಹುವನು.
687
ಅಂಜಿದಡೆ ಮಾಣದು, ಅಳುಕಿದಡೆ ಮಾಣದು,
ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.
ಕಕ್ಕುಲತೆಗೆ ಬಂದಡೆ ಆಗದು ನೋಡಾ.
ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,
ಕೂಡಲಸಂಗಮದೇವಾ.
688
ಹುಟ್ಟಿದ ಬಳಿಕ ಕೊಟ್ಟ ಭೋಗಂಗಳ ತಪ್ಪಿಸಿಹೆನೆಂದಡೆ
ತಪ್ಪದು ನೋಡಯ್ಯಾ.
ಎನಗಿನ್ನೆಂತೊ, ಎನಗಿನ್ನೆಂತೊ, ಎನಗಿನ್ನೆಂತೆಂದೆನಬೇಡಯ್ನಾ.
`ನಾ[s]ಭುಕ್ತಂ ಕ್ಷೀಯತೇ ಕರ್ಮ' ಎಂಬ ಶ್ರುತಿ ತಪ್ಪದು,
ಕೂಡಲಸಂಗಮದೇವಾ.
689
ಆಯುಷ್ಯ ತೀರಿದಲ್ಲದೆ ಮರಣವಿಲ್ಲ,
ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲದೇಕೋ ಲೋಕ ವಿಗರ್ಭಣೆಗೆ
ಅಂಜಲದೇಕೋ, ಕೂಡಲಸಂಗಮದೇವಾ ನಿಮ್ಮಾಳಾಗಿ.
690
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ
ನಚ್ಚು ಮಚ್ಚು ಪಾರವೈದುವುದೆ
ಶಿರ ಹರಿದಡೇನು, ಕರುಳು ಕುಪ್ಪಳಿಸಿದಡೇನು
ಇಂತಪ್ಪ ಸಮಸ್ತವಸ್ತುವೆಲ್ಲವೂ ಹೋದಡೇನು
ಚಿತ್ತ ಮನ ಬುದ್ಧಿ ಒಂದಾದ ಮಚ್ಚು, ಬಿಚ್ಚಿ ಬೇರಾಗದಿದ್ದಡೆ
ಮೆಚ್ಚುವ ನಮ್ಮ ಕೂಡಲಸಂಗಮದೇವ.
691
ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ.
ಎಲುದೋರಿದಡೆ, ನರ ಹರಿದಡೆ, ಕರುಳು ಕುಪ್ಪಳಿಸಿದಡೆ
ನಾ ಧೃತಿಗೆಡೆನಯ್ಯಾ.
ಶಿರಹರಿದು ಅಟ್ಟೆ ನೆಲಕ್ಕೆ ಬಿದ್ದಡೆ
ನಾಲಗೆ ಕೂಡಲಸಂಗಾ ಶರಣೆನುತ್ತಿದ್ದಿತ್ತಯ್ಯಾ.
692
ಒಣಗಿಸಿ ಎನ್ನ ಘಣಘಣಲನೆ ಮಾಡಿದಡೆಯೂ,
ಹರಣವುಳ್ಳನ್ನಕ್ಕ ನಿಮ್ಮ ಚರಣದ ನೆನೆವುದ ಮಾಣೆ, ಮಾಣೆ.
ಶರಣೆಂಬುದ ಮಾಣೆ, ಮಾಣೆ.
ಕೂಡಲಸಂಗಮದೇವಯ್ಯಾ, ಎನ್ನ ಹೆಣನ ಮೇಲೆ
ಕಂಚಿಟ್ಟುಂಡಡೆಯೂ ಮಾಣೆ, ಮಾಣೆ.
693
ಜಾಗ್ರಸ್ವಪ್ನಸುಷುಪ್ತಿಯಲ್ಲಿ ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ !
ಹುಸಿಯಾದಡೆ, ದೇವಾ ತಲೆದಂಡ, ತಲೆದಂಡ !
ಕೂಡಲಸಂಗಮದೇವಾ,
ನೀವಲ್ಲದೆ ಅನ್ಯವ ನೆನೆದಡೆ ತಲೆದಂಡ, ತಲೆದಂಡ !
694
 695
ಕಾಯದ ಕಳವಳಕ್ಕಂಜಿ, `ಕಾಯಯ್ಯಾ' ಎನ್ನೆನು,
ಜೀವನೋಪಾಯಕ್ಕೆ `ಈಯಯ್ಯಾ' ಎನ್ನೆನು.
`ಯದ್ ಭಾವಂ ತದ್ ಭವತಿ' ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯಾ.
ಆ ನಿಮ್ಮ ಹಾರೆನು, ಮಾನವರ ಬೇಡೆನು.
ಆಣೆ ನಿಮ್ಮಾಣೆ, ಕೂಡಲಸಂಗಮದೇವಾ.
696
ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು
`ಜಾತಸ್ಯ ಮರಣಂ ಧ್ರುವಂ' ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ.
697
ಕಳಹೋದಡೆ ಕನ್ನದುಳಿಯ ಹಿಡಿವೆ,
ಬಂದಿವಿಡಿದಡೆ ನಿಮ್ಮಿಂದ ಮುಂದೆ ನಡೆವೆನು.
ಮನಭೀತಿ ಮನಶಂಕೆಗೊಂಡೆನಾದಡೆ
ನಿಮ್ಮಾಣೆ, ನಿಮ್ಮ ಪುರಾತನರಾಣೆ.
ಆಳ್ದರ ನಡೆ ಸದಾಚಾರವೆನ್ನದಿರ್ದಡೆ,
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ,
ಕೂಡಲಸಂಗಮದೇವಾ.
698
ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ.
699
ಕರ್ಮವೆಂಬ ಅಂಕದೊಡನೆ ತೊಡರಿದೆ.
ಬಿನ್ನಪ ಅವಧಾರು ! ನಿಮ್ಮಾಳಿನ ಭಾಷೆಯ;
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋ ಎನಿಸದಡೆ ನಿಮ್ಮಾಳಲ್ಲ.
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬ ಅಲಗಿನಿಂದಿರಿವೆ, ಕೂಡಲಸಂಗಮದೇವಾ.
700
ಕಟ್ಟಿದೆನೊರೆಯ, ಬಿಟ್ಟೆ ಜನ್ನಿಗೆಯರ,
ಮುಟ್ಟಿ ಬಂದಿರಿದಡೆ ಓಸರಿಸುವನಲ್ಲ.
ಓಡದಿರು ಓಡದಿರು,
ನಿಮ್ಮ ಶರಣರ ಮನೆಯ ಬಿರಿದಿನ ಅಂಕಕಾರ.
ಓಡದಿರು, ಓಡದಿರು, ಎಲೆ ಎಲೆ ದೇವಾ,
ಎಲೆ ಎಲೆ ಸ್ವಾಮಿ, ಎಲೆ ಎಲೆ ಹಂದೆ
ಕೂಡಲಸಂಗಮದೇವಾ.
701
ಗರುಡಿಯ ಕಟ್ಟಿ ಅರುವತ್ತುನಾಲ್ಕು ಕೋಲ ಅಭ್ಯಾಸವ ಮಾಡಿದೆನಯ್ಯಾ.
ಇರಿವ ಘಾಯ, ಕಂಡೆಯ ಭೇದವಿನ್ನೂ ತಿಳಿಯದು.
ಪ್ರತಿಗರುಡಿಕಾರ ಬಿರಿದ ಪಾಡಿಂಗೊದನಗೆಫ
ವೀರಪ[ಟ್ಟವ] ಕಟ್ಟಿ, ತಿಗುರನೇರಿಸಿಕೊಂಡು,
ಗುರು ಕಳನನೇರಿ, ಕಠಾರಿಯ ಕೊಂಡಲ್ಲಿ
`ಹೋಯಿತ್ತು ಗಳೆ' ಎಂದಡೆ
ಎನ್ನ ನಿನ್ನಲ್ಲಿ ನೋಡು, ಕೂಡಲಸಂಗಮದೇವಾ.
702
ಶರಣರೊಡನೆ ಶ್ರವವ ಮಾಡಿ, ಮಾರುಗೋಲ ಬಿಡುವೆನಯ್ಯಾ.
ತಾಗಲಿ, ತಪ್ಪಲಿ ಗೆಲವೆನ್ನದೆಂಬೆನಯ್ಯಾ.
ಕಳನಿಂದ ಕಡೆಗಳಕ್ಕೆ ಓಡುವೆ,
ಕೂಡಲಸಂಗಯ್ಯಾ.
703
ಎಲೆ ಗಂಡುಗೂಸೆ ನೀ ಕೇಳಾ, ನಿನಗೊಬ್ಬಗೆಂದುಟ್ಟೆ ಗಂಡುಡಿಗೆಯನು.
ಮತ್ತೊಮ್ಮೆ ಆನು ಗಂಡಪ್ಪೆನಯ್ಯಾ,
ಮತ್ತೊಮ್ಮೆ ನಾನು ಹೆಣ್ಣಪ್ಪೆನಯ್ಯಾ.
ಕೂಡಲಸಂಗಮದೇವಾ,
ನಿಮ್ಮಡಿಗೆ ವೀರನಪ್ಪೆ, ನಿಮ್ಮ ಶರಣರಿಗೆ ವಧುವಪ್ಪೆ.
704
ಕಟ್ಟುವೆನುಪ್ಪರಗುಡಿಯ ಜಗವರಿಯೆ:
ಮಾಡುವೆನೆನ್ನ ಕಾಯ ಕೆಡೆವನ್ನಕ್ಕ,
ಬೇಡುವುದೆನ್ನ ತನುಮನಧನವ.
ಬೇಡಲಾರದ ಹಂದೇ, ನೀ ಕೇಳಾ,
ಈ ಬಿರಿದು ಸಂದಿತ್ತು, ಕೂಡಲಸಂಗಮದೇವಾ.
705
ಹುಟ್ಟುತ್ತ ದ್ರವ್ಯವನರಿಯದವಂಗೆ ಐಶ್ವರ್ಯವಂತ ಮಗನಾದಡೆ
ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷಪಡಿಸುವಂತೆ,
ಕಾಳೆಗಮುಖವಾವುದೆಂದರಿಯದ ಹಂದೆ ನೃಪಂಗೆ
ಒಬ್ಬ ಕ್ಷತ್ರಿಯನಹ ಕುಮಾರ ಹುಟ್ಟಿ, ಕಿಗ್ಗಡಲ ರಕ್ತದ ಹೊನಲಲ್ಲಿ
ಕಡಿದು ಮುಳುಗಾಡುವ ಕೊಳುಗುಳವ ಕಂಡು ಪರಿಣಾಮಿಸುವಂತೆ
ಆನು ಪರಿಣಾಮಿಸುವೆನಯ್ಯಾ, ಕೂಡಲಸಂಗಮದೇವಾ
ನೀವು ಬಂದೆನ್ನ ಬೇಡಿದಡೆ.
706
ಅರ್ಥವನರ್ಥವ ಮಾಡಿ ಕೋಳಾಹಳಂಗೆಯ್ಯುತ್ತಿರಲಿ,
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ,
ಮುಟ್ಟುವ ಸ್ತ್ರೀಯ ಕಣ್ಣಮುಂದೆ
ಅಭಿಮಾನಂಗೊಂಡು ನೆರೆವುತ್ತಿರಲಿ,
ಇಂತೀ ತ್ರಿವಿಧವೂ ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ,
ಇಕ್ಕುವ ಶೂಲ ಪ್ರಾಪ್ತಿಸಲಿ,
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ.
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ, ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದಡೆ
ನೀನಂದೆ ಮೂಗ ಕೊಯಿ, ಕೂಡಲಸಂಗಮದೇವಾ.
707
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ,
ಬೇಡು, ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ,
ಕೂಡಲಸಂಗಮದೇವಾ, ನಿಮಗಿತ್ತು ಶುದ್ಧನಾಗಿಪ್ಪೆ,
ನಿಮ್ಮ ಪುರಾತರ ಮನೆಯಲ್ಲಿ.
708
ನಾನು ಆರಂಭವ ಮಾಡುವೆನಯ್ಯಾ, ಗುರುಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ, ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನಯ್ಯಾ, ಜಂಗಮದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು.
ನಿಮ್ಮಾಣೆ ಕೂಡಲಸಂಗಮದೇವಾ.
709
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ,
ಎನ್ನ ಒಡಲಿಂಗೆ, ಎನ್ನ ಒಡವೆಗೆಂದು ಎನ್ನ ಮಡದಿ-ಮಕ್ಕಳಿಗೆಂದು,
ಕುದಿದೆನಾದಡೆ ಎನ್ನ ಮನಕ್ಕೆ ಮನವೆ ಸಾಕ್ಷಿ.
ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಎಂಬ ಶ್ರುತಿಯ ಬಸವಣ್ಣನೋದುವನು,
ಭವಿ ಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹನೆಂದು ನುಡಿವರಯ್ಯಾ ಪ್ರಮಥರು.
ಕೊಡುವೆನೆ ಉತ್ತರವನವರಿಗೆ ಕೊಡಲಮ್ಮೆ.
ಹೊಲೆಹೊಲೆಯರ ಮನೆಯ ಹೊಕ್ಕಾದಡೆಯೂ
ಸಲೆ ಕೈಕೂಲಿಯ ಮಾಡಿಯಾದಡೆಯೂ,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ, ಎನ್ನ ಒಡಲವಸರಕ್ಕೆ ಕುದಿದೆನಾದಡೆ
ತಲೆದಂಡ ಕೂಡಲಸಂಗಮದೇವಾ !
710
ದೇವ, ದೇವಾ ಬಿನ್ನಹ ಅವಧಾರು;
ವಿಪ್ರ ಮೊದಲು, ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲನೊಂದೆ ಎಂಬೆ.
ಹಾರುವ ಮೊದಲು, ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನೊಂಬೆ ಎಂಬೆ.
ಹೀಂಗೆಂದು ನಂಬೂದೆನ್ನ ಮನ.
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ
ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ.
711
ಒಲ್ಲೆನಯ್ಯಾ, ಒಲ್ಲೆನಯ್ಯಾ, ನಿಮ್ಮವರಲ್ಲದವರ,
ಒಲ್ಲೆನಯ್ಯಾ, ಒಲ್ಲೆನಯ್ಯಾ, ಜಗವೆಲ್ಲರಿಯಲು,
ಒಲ್ಲೆನಯ್ಯಾ, ಒಲ್ಲೆನಯ್ಯಾ, ನೀ ಮುನಿದಡೆ ಮುನಿ.
ಕೂಡಲಸಂಗಮದೇವಾ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
712
ಆದಿಯಲಾಗಲಿ, ವೇದದಲಾಗಲಿ, ಶಾಸ್ತ್ರದಲಾಗಲಿ, ಸಮಯದಲಾಗಲಿ.
ಎನ್ನವರೆನ್ನೆನು, ಎನ್ನವರೆನ್ನೆನು.
ಎನ್ನವರೆಂದಡೆ ಸಂಗಾ ನಿಮ್ಮಲ್ಲಿಗೆ ದೂರ.
ಎನ್ನವರೆಂದಡೆ ಜನ್ನಕ್ಕೆ ನಡೆವರೆ
ಎನ್ನವರಲ್ಲ, ಕೂಡಲಸಂಗಾ ನಿಮ್ಮಾಣೆ.
713
ಅಣ್ಣ, ತಮ್ಮ, ಹೆತ್ತಯ್ಯ ಗೋತ್ರವಾದಡೇನು
ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ.
ನಂಟುಭಕ್ತಿ ನಾಯಕನರಕ,
ಕೂಡಲಸಂಗಮದೇವಾ.
714
ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹುಗುವಂತೆ,
ನೀನಿಲ್ಲದವರ ಮನೆಯ ಹೊಗೆನು, ಸಂಗಯ್ಯಾ,
ಶ್ವಪಚೋಪಿಗಳಾಗಲಿ, ಕೂಡಲಸಂಗಯ್ಯಾ
ನೀನಿದ್ದವನೆ ಕುಲಜನು.
715
ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ,
ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯಾ ಭಕ್ತರ ಬರವ ಗುಡಿಗಟ್ಟಿ,
ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ,
ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ,
ಅಶುದ್ಧನ ಶುದ್ಧನ ಮಾಡಿದನಾಗಿ.
716
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
717
ಆವ ಕುಲವಾದಡೇನು ಶಿವಲಿಂಗವಿದ್ದವನೆ ಕುಲಜನು,
ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ
ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಿತಃ±
ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಲಮೇವ ಚ± ಎಂದುದಾಗಿ,
ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ.
ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು.
718
ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ,
ಬಂಟನೋಲೆಯಕಾರನೆಂದೆನಾದಡೆ,
ನೀ ಮುಂತಾಗಿ ಬಂದ ಭಕ್ತರ ನೀನೆಂದೆನ್ನದಿದ್ದಡೆ ಅದೇ ದ್ರೋಹ.
ನಡೆನುಡಿ ಹುಸಿಯುಂಟಾದಡೆ,
ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ.
719
ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
ಅವರ ಲಿಂಗನೆಂಬೆ, ಸಂಗನೆಂಬೆ,
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.
720
ಗುಮ್ಮಡಿಯಂತಪ್ಪ ತಾಯಿ ನೋಡೆನಗೆ,
ಕಲಕೇತನಂತಪ್ಪ ತಂದೆ ನೋಡೆನಗೆ.
ಮೋಟನಂತಪ್ಪ ಗಂಡ ನೋಡೆನಗೆ,
ಮರಗಾಲಲಟ್ಟಟ್ಟಿ ಸದೆದ ನೋಡಯ್ಯಾ.
ಇಂದೆನ್ನ ಒಕ್ಕತನ ಹೋದಡೆ ಹೋಗಲಿ
ಮರಗಾಲ ಬಿಟ್ಟಡೆ, ಸಂಗಾ ನಿಮ್ಮಾಣೆ.
721
ತನುವ ಬಂದು ಅಲೆವರಯ್ಯಾ ಎನ್ನ,
ಮನವ ಬಂದು ನೋಡುವರಯ್ಯಾ ಎನ್ನ,
ಧನವ ಬಂದು ಸೂರೆಗೊಂಬರಯ್ಯಾ ಜಂಗಮವನವರತ.
ಕೂಡಲಸಂಗಮದೇವಾ,
ನಿಮ್ಮ ಬಯ್ಕೆಯ ಭಂಡಾರಕ್ಕೆ ನಾನು ಶುದ್ಧನಯ್ಯಾ.
722
ಒಡೆಯರೊಡವೆಯ ಕೊಂಡಡೆ ಕಳ್ಳಂಗಳಲಾಯಿತ್ತೆಂಬ
ಗಾದೆ ಎನಗಿಲ್ಲಯ್ಯಾ.
ಇಂದೆನ್ನ ವಧುವ, ನಾಳೆನ್ನ ಧನವ,
ನಾಡಿದ್ದೆನ್ನ ತನುವ ಬೇಡರೇಕಯ್ಯಾ
ಕೂಡಲಸಂಗಮದೇವಾ, ಆನು ಮಾಡಿದುದಲ್ಲದೆ
ಬಯಸಿದ ಬಯಕೆ ಸಲುವುದೆ ಅಯ್ಯಾ.
723
ಕಲಿ ಕರುಳ ತಕ್ಕೈಸಿ ಹರಿಯಬಲ್ಲನಲ್ಲದೆ
ಸಾಯ ಕಾದಿಸುವಡೆ, ಎಡೆಗೋಲನಿಕ್ಕುವಡೆ, ದಾತಾರನಾಧೀನವಲ್ಲ[ವೆ!].
ಕೂಡಲಸಂಗಮದೇವಾ ನೀ ಮಾಡಿದಂತಹುದಯ್ಯಾ,
ತನುಮನಧನದಲ್ಲಿ ವಂಚನೆಯ
ಆನು ಬಯಸಿದಡೆಂತಹುದಯ್ಯಾ.
724
ಬಾಲಾಭ್ಯಾಸವ ಮಾಡಹೋದಡೆ ಎನ್ನ ಸುರಗಿ ಎನ್ನ ನಟ್ಟಿತು,
ಎಂತಯ್ಯಾ ಕಲಿಯೊಡನೆ ಶ್ರವವ ಮಾಡುವೆನು
ರಾಯ ರಾಜಗುರು ಜಗದ ಬಿನ್ನಾಣಿಯ ತೊಡಕ ಬಿಡಿಸಬಾರದು.
ಸರಸದ ಮೇಲೆ ಹಿಡಿಯ ಹೋದಡೆ
ಚದುರಂಗದ ಮೇಲೆ ಮಸಿಯ ತೋರಿದ ಕೂಡಲಸಂಗಮದೇವ.
725
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು,
ಶಿವಚಿತ್ತವೆಂಬ ಕೂರಲಗ ಕೊಂಡು,
ಶರಣಾರ್ಥಿಯೆಂಬ ಶ್ರವಗಲಿತಡೆ,
ಆಳುತನಕ್ಕೆ ದೆಸೆಯಪ್ಪೆ ನೋಡಾ.
ಮಾರಂಕ ಜಂಗಮ ಮನೆಗೆ ಬಂದಲ್ಲಿ ಇದಿರೆತ್ತಿ ನಡೆವುದು,
ಕೂಡಲಸಂಗಮದೇವನನೊಲಿಸುವಡಿದು ಚಿಹ್ನ !
726
ಅಟ್ಟಟ್ಟಿಕೆಯ ಮಾತನಾಡಲದೇಕೋ
ಮುಟ್ಟಿ ಬಂದುದಕ್ಕಂಜಲದೇಕೋ
ಕಾದಿದಲ್ಲದೆ ಮಾಣೆನು, ಓಡಿದಡೆ ಭಂಗ ಹಿಂಗದಾಗಿ,
ಕೂಡಲಸಂಗಮದೇವಾ, ಎನ್ನ ಭಂಗ ನಿಮ್ಮದಾಗಿ.
727
ಲಿಂಗಕ್ಕಲ್ಲದೆ ಮಾಡೆನೀ ಮನವನು,
ಜಂಗಮಕ್ಕಲ್ಲದೆ ಮಾಡೆನೀ ಧನವನು,
ಪ್ರಸಾದಕ್ಕಲ್ಲದೆ ಮಾಡೆನೀ ತನುವನು,
ಲಿಂಗಜಂಗಮಪ್ರಸಾದಕ್ಕಲ್ಲದೆ ಬಾಯ್ದೆರೆಯೆನೆಂಬುದೆನ್ನ ಭಾಷೆ.
ಅನರ್ಪಿತವಾದಡೆ ತಪ್ಪೆನ್ನದು,
ಮೂಗ ಕೊಯಿ, ಕೂಡಲಸಂಗಮದೇವಾ.
728
ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ
ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ
ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ
ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ
ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.
729
ನೀವಿರಿಸಿದ ಮನದಲ್ಲಿ ನಾನಂಜೆನಯ್ಯಾ,
ಮನವು ಮಹಾಘನಕ್ಕೆ ಶರಣುಗತಿವೊಕ್ಕುದಾಗಿ.
ನೀವಿರಿಸಿದ ಧನದಲ್ಲಿ ನಾನಂಜೆನಯ್ಯಾ,
ಧನವು ಸತಿಸುತಮಾತಾಪಿತರಿಗೆ ಸವೆಯದಾಗಿ.
ನೀವಿರಿಸಿದ ತನುವಿನಲ್ಲಿ ನಾನಂಜೆನಯ್ಯಾ,
ತನುವು ಸರ್ವಾರ್ಪಿತದಲ್ಲಿ ನಿಯತಪ್ರಸಾದಭೋಗಿಯಾಗಿ.
ಇದು ಕಾರಣ, ವೀರಧೀರಸಮಗ್ರನಾಗಿ
ನಿಮಗಾನಂಜೆ, ಕೂಡಲಸಂಗಮದೇವಾ.
730
ಹಲ್ಲು ಹತ್ತಿ ನಾಲಗೆ ಹೊರಳದಿದ್ದಲ್ಲಿ
ಮನವೆರಡಾದಡೆ ಆಣೆ, ನಿಮ್ಮಾಣೆ.
ಮಾಡುವ ನೇಮಕ್ಕೆ ಛಲವಿಲ್ಲದಿದ್ದಡೆ ಆಣೆ, ನಿಮ್ಮಾಣೆ.
ಕೂಡಲಸಂಗಮದೇವ ಎನ್ನ ಮನವ ನೋಡಲೆಂದಟ್ಟಿದಡೆ
ಪ್ರಸಾದವಲ್ಲದೆ ಕೊಂಡೆನಾದಡೆ ಆಣೆ, ನಿಮ್ಮಾಣೆ !
731
ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ !
ದೇವಾ ನೀನೊಲಿದವನ, ಸ್ವಾಮೀ ನೀ ಹಿಡಿದವನ ಕುಲವೇನೋ !
ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ,
ನಿಮ್ಮಿಂದಧಿಕ ಕೂಡಲಸಂಗಮದೇವಾ.
732
ಹುಟ್ಟಿದ ಮಕ್ಕಳೆಲ್ಲ ಅರ್ಥ ಪ್ರಾಣ ಅಭಿಮಾನಕ್ಕೆ
ಒಡೆಯರಾದ ಪರಿಯ ನೋಡಾ.
ಅಟ್ಟ ಅಡಿಗೆಯ ವಿಷವನು ನಿಮಗೆ ಕೊಟ್ಟಲ್ಲದೆ ಉಣ್ಣೆನೆಂಬ ಭಾಷೆ !
ಕೂಡಲಸಂಗಮದೇವಯ್ಯಾ, ನಿಮಗೆಂದಟ್ಟಡಿಗೆಯ
ನೀಡ ಕಲಿಸಿದಾತ ಕೆಂಭಾವಿಯ ಭೋಗಯ್ಯ.
733
ಅಂಗದ ಮೇಲಣ ಲಿಂಗ ಹಿಂಗಿ ಬಂದ ಸುಖವನಾರಿಗರ್ಪಿಸುವೆ
ಹಿಂಗಲಾಗದು, ಭಕ್ತಿಪಥಕ್ಕೆ ಸಲ್ಲದಾಗಿ,
ಹಿಂಗಲಾಗದು, ಶರಣಪಥಕ್ಕೆ ಸಲ್ಲದಾಗಿ,
ಕೂಡಲಸಂಗಮದೇವರ ಹಿಂಗಿ ನುಂಗಿದುಗುಳು ಕಿಲ್ಬಿಷ.
734
ಬತ್ತೀಸಾಯುಧದಲಿ ಅಭ್ಯಾಸವ ಮಾಡಿದಡೇನು
ಹಗೆಯ ಕೊಲುವಡೆ, ಒಂದಲಗು ಸಾಲದೆ
ಲಿಂಗವ ಗೆಲುವಡೆ, `ಶರಣಸತಿ ಲಿಂಗವತಿಯೆಂಬಲಗು ಸಾಲದೆ
ಎನಗೆ ನಿನಗೆ ಜಂಗಮಪ್ರಸಾದವೆಂಬ ಅಲಗು ಸಾಲದೆ
ಕೂಡಲಸಂಗಮದೇವಾ.
735
ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ,
ಒಲ್ಲೆನಯ್ಯಾ ಪರಸತಿಯರ ಸಂಗವ,
ಬಲ್ಲೆನಯ್ಯಾ ಮುಂದೆ ತೊಡಕುಂಟೆಂಬುದ.
ಬಳ್ಳದ ಬಾಯಂತೆ ಒಂದೆ ಮನ ಮಾಡಿ
ನಿಲ್ಲೆಂದು ನಿಲಿಸಯ್ಯಾ, ಕೂಡಲಸಂಗಮದೇವಾ.
736
ಆನೆ ಅಂಕುಶಕ್ಕೆ ಅಂಜುವುದೆ ಅಯ್ಯಾ
ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ.
ಆನೀ ಬಿಜ್ಜಳಂಗಜುವೆನೆ ಅಯ್ಯಾ
ಕೂಡಲಸಂಗಮದೇವಾ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ.
737
ಬಂದೆಹೆನೆಂದು ಬಾರದೆ ಇದ್ದಡೆ, ಬಟ್ಟೆಗಳ ನೋಡುತ್ತಿದ್ದೇನಯ್ಯಾ.
ಇನ್ನಾರನಟ್ಟುವೆ, ಇನ್ನಾರನಟ್ಟುವೆ, ಇನ್ನಾರ ಪಾದವ ಹಿಡಿವೆನಯ್ಯಾ
ಕೂಡಲಸಂಗನ ಶರಣರು ಬಾರದಿದ್ದಡೆ
ಅಟ್ಟುವೆನೆನ್ನ ಪ್ರಾಣವನು.
738
ಅರಸರು ಮಂಚಕ್ಕೆ ಬರಿಸಿ, ಎನ್ನ ಬೆರಸಿದ ಬಳಿಕ
ಆನು ಅಂಜುವಳೇ ಆನು ಸಿರಿಯಕ್ಕನೇ.
ಪರುಷ ಮುಟ್ಟಿದ ಬಳಿಕ ಲೋಹವೇ
ಕೂಡಲಸಂಗಮದೇವ, ಎನ್ನನೊಲ್ಲದಡಾನು ಬದುಕುವೆನೆ.
739
ಎಲ್ಲಿ ಹೊಕ್ಕಲ್ಲಿ ನಿನ್ನ ವಿಕಾರವ ಬಿಡೆ, ಮಾಣೆ, ಗರುವತನವೆ
ದಾಸನ ವಸ್ತ್ರವ ಸೀಳುವುದೊಂದು ಗರುವತನವೆ
ಸಿರಿಯಾಳನ ಮಗನ ಬೇಡುವುದೊಂದು ಗರುವತನವೆ
ಬಲ್ಲಾಳನ ವಧುವ ಬೇಡುವುದೊಂದು ಗರುವತನವೆ
ಕೋಡಗವ ಹುಲ್ಲಲಿ ಮುಸುಕಿದಂತೆ
ಕೂಡಲಸಂಗಮದೇವಾ, ನಿನ್ನ ಪರಿ.
740
ಸಿರಿಯಾಳನ ಮಗನ ಬಾಣಸವ ಮಾಡಿಸಿ ಉಣಲೊಲ್ಲದೆ, ಕಾಡಿದೆ.
ಚೋಳನ ಮನೆಯಲು ಉಣಲೊಲ್ಲದೆ, ಚೆನ್ನನ ಮನೆಯಲುಂಡೆ.
ಒಬ್ಬರಿಗೊಂದು ಪರಿಯ ಮಾಡಿದೆ, ಕೂಡಲಸಂಗಮದೇವಾ.
741
ಒಬ್ಬನ ಮನೆಯಲುಂಡು ಹೊತ್ತುಗಳೆದೆ,
ಒಬ್ಬನ ಮನೆಯಲುಡಲೊಂದ ಗಳಿಸಿದೆ,
ಗರ್ವ ಬೇಡ ಬೇಡ ನಿನಗೆ.
ಚೆನ್ನಯ್ಯನ ಮನೆಯಲಂಬಲಿಯನುಂಡು ಬದುಕಿದೆ.
ಗರ್ವ ಬೇಡ ಬೇಡ.
ಕೂಡಲಸಂಗಯ್ಯಾ, ಸಿರಿಯಾಳನಿಂದ ಮಾನಿಸಲೋಕಗಂಡೆ.
742
ಹರಿಯಜ ಮುನಿಗಳೆಲ್ಲರು, ನಿಚ್ಚ ನಿಮ್ಮ ಬಾಗಿಲ ಕಾಯ್ದಿಹರು,
ಏನು ಕಾರಣ ನೀವು ಬಾಣನ ಬಾಗಿಲ ಕಾಯ್ದಿರಿ
ಡಿಂಗರಿಗನ ಮನೆಗೆ ಅಂಗಜಾಹವಕ್ಕೆ ಹೋಗಿ ಇದ್ದವರೊಳರೆ
ಕೂಡಲಸಂಗಮದೇವಾ.
743
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
744
ಗೋತ್ರನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ
ಗೋತ್ರನಾಮ, ಮಾದಾರ ಚೆನ್ನಯ್ಯ, ಡೋಹರ
ಕಕ್ಕಯ್ಯನೆಂಬುದೇನು,ಕೂಡಲಸಂಗಯ್ಯಾ.
745
ನಿಷೆ*ಯಿಂದ ಲಿಂಗವ ಪೂಜಿಸಿ
ಮತ್ತೊಂದು ಪಥವನರಿಯದ ಶರಣರು
ಸರ್ಪನ ಹೆಡೆಯ ಮಾಣಿಕದಂತೆ ಇಪ್ಪರು, ಭೂಷಣರಾಗಿ !
ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು
ಕೂಡಲಸಂಗಮದೇವಾ, ನಿಮ್ಮ ಶರಣರು.
746
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ,
ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ.
ಜಗಕ್ಕೆ ಇಕ್ಕಿದೆ ಮುಂಡಿಗೆಯನೆತ್ತಿಕೊಳ್ಳಿ;
ಕೂಡಲಸಂಗಯ್ಯನೊಬ್ಬನೆ ದೈವವೆಂದು.
747
 748
 749
ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ !
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ !
ಆಗಮ ಹೆರತೊಲಗಿ ಅಗಲಿದ್ದಿತಯ್ಯಾ !
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
750
ಚಿಕ್ಕ ಒಂದು ಹೊತ್ತಗೆ, ಬೆನಕನ ಕರಡಗೆಯಯ್ಯಾ,
ನೀ ಡುಂಡುಟಿ ಗೊರವನಯ್ಯಾ,
ಪುಣ್ಯವೇನಾದಡಾಗಲಿ ಡಕ್ಕೆಯ ಮೇಲೆ ಅಕ್ಕಿಯ ತಳೆದೆನು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯದೈವ ಉಂಟೆನ್ನದಿರು ಕಂಡಾ !
751
ನೀನಲ್ಲದನ್ಯದೈವವುಂಟೆಂಬವನ ಬಾಯ,
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ.
ಎನ್ನ ಕೋಪವಡಗದಯ್ಯಾ.
ಎನ್ನ ಬಿನ್ನಪವನವಧರಿಸು ಕೂಡಲಸಂಗಮದೇವಾ.
752
ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು
ನಮ್ಮ ಕುನ್ನಿಗೆ ಕೂಸ ಕೊಡಬೇಡ.
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ.
753
ನ್ಯಾಯನಿಷು*ರಿ:ದಾಕ್ಷಿಣ್ಯಪರ ನಾನಲ್ಲ,
ಲೋಕವಿರೋಧಿ:ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.
754
ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ
ಲಜ್ಜೆಗೆಡಲೇಕೆ ನಾಣುಗೆಡಲೇಕೆ
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ.
755
ಹೋಗಬಿಟ್ಟು, ಮರಳಿ ಹಿಂದೆ ನೋಡಿ,
ಮತ್ತಾಗಬೇಕೆಂಬ ಸಂದೇಹವುಳ್ಳನ್ನಕ್ಕ
ಅದೆ ಪರದ್ವಾರ ನಾಯಕನರಕ, ತಪ್ಪದು.
ಅನ್ಯವಧುವೆಂಬುದು ನಿಮ್ಮ ರಾಣಿವಾಸ,
ಇದೇ ದಿಬ್ಯ ಕೂಡಲಸಂಗಮದೇವಾ.
756
ಕಂಡುದಕ್ಕೆಳಸೆನೆನ್ನ ಮನದಲ್ಲಿ, ನೋಡಿ ಸೋಲೆನೆನ್ನ ಕಂಗಳಲ್ಲಿ,
ಆಡಿ ಹುಸಿಯೆನೆನ್ನ ಜಿಹ್ವೆಯಲ್ಲಿ.
ಕೂಡಲಸಂಗಮದೇವಾ,
ನಿಮ್ಮ ಶರಣನ ಪರಿ ಇಂತುಟಯ್ಯಾ.
757
ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ.
ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ
ಕೂಡಲಸಂಗಮದೇವಾ,
ನೀ ಸಾಕ್ಷಿಯಾಗಿ ಛೀ ಎಂಬೆನು.
758
ಮಾಡುವ ನೀಡುವ ಭಕ್ತನ ಕಂಡಡೆ
ನಿದ್ಥಿ ನಿಧಾನವ ಕಂಡಂತಾಯಿತ್ತು,
ಪಾದೋದಕ ಪ್ರಸಾದಜೀವಿಯ ಕಂಡಡೆ
ಹೋದ ಪ್ರಾಣ ಬಂದಂತಾಯಿತ್ತು.
ಅನ್ಯರ ಮನೆಗೆ ಹೋಗಿ, ತನ್ನ ಉದರವ ಹೊರೆಯದ
ಅಚ್ಚ ಶರಣರ ಕಂಡಡೆ
ನಿಶ್ಚಯವಾಗಿ ಕೂಡಲಸಂಗಯ್ಯನೆಂಬೆನು.
759
ಗುರುಭಕ್ತಿಯ ಮಾಡಬಹುದಲ್ಲದೆ, ಲಿಂಗಭಕ್ತಿಯ ಮಾಡಬಾರದು.
ಲಿಂಗಭಕ್ತಿಯ ಮಾಡಬಹುದಲ್ಲದೆ, ಜಂಗಮಭಕ್ತಿಯ ಮಾಡಬಾರದು.
ಜಂಗಮಭಕ್ತಿಯ ಮಾಡಬಹುದಲ್ಲದೆ, ಸಮಯಭಕ್ತಿಯ
ಮಾಡಬಾರದು. ಸಮಯಭಕ್ತಿಯ
ಮಾಡಬಹುದಲ್ಲದೆ, ಸಮಯ ಸಂತೋಷವ ಮಾಡಬಾರದು ಇವೆಲ್ಲವನು
ಮಾಡಬಹುದಲ್ಲದೆ, ತನ್ನ ತಾನರಿಯಬಾರದು !
ತನ್ನ ತಾನರಿದೆಹೆನೆಂಬ ಅಹಂಕಾರವುಳ್ಳಡೆ ನಿಮ್ಮವರಿಗೆ ದೂರ.
ಎಲೆ ದೇವಾ, ಅನ್ಯಕ್ಕೆ ಆಸೆ ಮಾಡಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಕೂಡಲಸಂಗಮದೇವಾ.
760
ದಾಸನಂತೆ ತವನಿದ್ಥಿಯ ಬೇಡುವನಲ್ಲ,
ಚೋಳನಂತೆ ಹೊನ್ನಮಳೆಯ ಕರೆಸೆಂಬವನಲ್ಲ,
ಅಂಜದಿರು ಅಂಜದಿರು ಅವರಂದದವ ನಾನಲ್ಲ.
ಎನ್ನ ತಂದೆ, ಕೂಡಲಸಂಗಮದೇವಾ,
ಸದ್ಭಕ್ತಿಯನೆ ಕರುಣಿಸೆನಗೆ.
761
ಲಿಂಗದಲ್ಲಿ ಸಮ್ಯಕ್ಕರು, ಲಿಂಗದಲ್ಲಿ ಸದರ್ಥರು,
ಲಿಂಗದ ಸೊಮ್ಮು ಸಂಬಂಧವರಿತ ಸ್ವಾಮಿಭೃತ್ಯರೆಲ್ಲರು
ನಿಮ್ಮ ಬೇಡೆನಂಜದಿರಿ.
ಎನಗೆ ಮರ್ತ್ಯಲೋಕದ ಮಹಾಗಣಂಗಳುಂಟು.
ಇದು ಕಾರಣ, ಕೂಡಲಸಂಗಮದೇವರ ಲೋಕವ
ಹಂಚಿಕೊಳ್ಳಿ ನಿಮನಿಮಗೆ.
762
ಅಂದಂದಿನ ಹೊದ್ದಿಗೆಯ ಬಿಂದುಮಾತ್ರದಲಾದ
ಅಂದವ ಕೆಡಿಸಲರಿಯದ ಅಂಧಕರ ನೋಡಾ.
ಸಮರಸವಿಲ್ಲದೆ ನೆರಹಿ ಮಾಡಿ, ಭಕ್ತರಾದೆವೆಂಬವರನೇನೆಂಬೆ
ಆಚಾರವಂಚಕರ ಎನಗೆ ತೋರದಿರು
ಕೂಡಲಸಂಗಮದೇವಾ, ನಿಮ್ಮ ಧರ್ಮ !
763
ಕಲಿಯ ಕೈಯ ಕೈದುವಿನಂತಿರಬೇಕಯ್ಯಾ,
ಎಲುದೋರೆ ಸರಸವಾಡಿದಡೆ ಸೈರಿಸಬೇಕಯ್ಯಾ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು
ಬೊಬ್ಬಿಡಲದಕ್ಕೆ ಒಲಿವ ಕೂಡಲಸಂಗಮದೇವ.
764
ಆಸೆ ರೋಷ ಹರುಷಾದಿಗಳೆಂಬ ಕರಣೇಂದ್ರಿಯಂಗಳೆಂಬವ ಮುಟ್ಟಲೀಯದೆ,
ಆಚಾರವ ಶಿವಾಚಾರವ ಮಾಡುವೆ,
ಭಯಭಕ್ತಿಯಿಂದ ತೋರುವೆ.
ಮನದಲ್ಲಿ ವಂಚನೆಯಿಲ್ಲದೆ, ಭಾವಶುದ್ಧಪೂಜೆಯ ಮಾಡುವೆ.
ಎನ್ನ ಪ್ರಾಣಶಕ್ತಿಯಿಂದ ಕೂಡುವೆ
ಕೂಡಲಸಂಗಮದೇವಾ.
765
ಪೂರ್ವಬೀಜ ವಾಯುಪ್ರಾಣಿಯಲ್ಲ,
ಲಿಂಗಪ್ರಾಣಿಯಾ ಶರಣನು.
ಏಕೋಗ್ರಾಹಿ ಭಾವಭೇದವಿಲ್ಲವಾಗಿ
ಮನಃಪ್ರವೇಶಿಯಾ ಶರಣನು.
ನಿಮ್ಮುವ ಪೂಜಿಸಿ ತನುಧರ್ಮವ ಮರೆದು
ನಿಮ್ಮ ಪ್ರತಿಬಿಂಬದಂತಿಪ್ಪ
ಕೂಡಲಸಂಗಮದೇವಾ, ನಿಮ್ಮ ಶರಣನು.
766
ಹಸಿವಾಯಿತ್ತೆಂದು ಅರ್ಪಿತವ ಮಾಡುವರಯ್ಯಾ,
ತೃಷೆಯಾಯಿತ್ತೆಂದು ಮಜ್ಜನಕ್ಕೆರೆವರಯ್ಯಾ,
ಹಸಿವು ತೃಷೆ ವಿಷಯಕ್ಕೆ ಬಳಲುವರಯ್ಯಾ.
ಹಸಿವಾಯಿತ್ತೆಂದು ಅರ್ಪಿತವ ಮಾಡಲಿಲ್ಲ,
ತೃಷೆಯಾಯಿತ್ತೆಂದು ಮಜ್ಜನಕ್ಕೆರೆಯಲಿಲ್ಲ,
ಇದು ಕಾರಣ ಕೂಡಲಸಂಗಮದೇವ ಪೂಜಿಸಿ,
ಪ್ರಸಾದವ ಹಡೆವರೊಬ್ಬರೂ ಇಲ್ಲ.
767
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ
ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ,
ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ
ಆಚಾರದ್ರೋಹ ಪ್ರಸಾದದ್ರೋಹ.
ಇಂತೀ ಪಂಚಮಹಾಪಾತಕಂಗಳು
ಭಕ್ತಂಗಲ್ಲದೆ ಭವಿಗೆಲ್ಲಿಯದೊ
ಗುರುವಿದು, ಲಿಂಗವಿದು, ಜಂಗಮವಿದು
ಆಚಾರವಿದು, ಪ್ರಸಾದವಿದೆಂದರಿಯದಿದ್ದಡೆ
ಕುಂಭಿಪಾತಕ ನಾಯಕನರಕ
ಕೂಡಲಸಂಗಮದೇವಾ.
768
ಸೂಳೆಗೆ ಮಚ್ಚಿ ಸೂಳೆಯ ಬಂಟರೆಂಜಲ ತಿಂಬುದೀ ಲೋಕ.
ಅಡಗ ಮಚ್ಚಿ ಸೊಣಗನೆಂಜಲ ತಿಂಬುದೀ ಲೋಕ.
ಲಿಂಗವ ಮಚ್ಚಿ ಜಂಗಮಪ್ರಸಾದವ ಕೊಂಬವರ ನೋಡಿ ನಗುವವರ
ಕುಂಭಿಪಾತಕ ನಾಯಕನರಕದಲ್ಲಿಕ್ಕುವ
ಕೂಡಲಸಂಗಮದೇವ.
769
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ
ಕುಲವುಂಟೆ ಜಂಗಮವಿದ್ದೆಡೆಯಲ್ಲಿ
ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ,
ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದಿಲ್ಲ. 
770
ಬಾರದು ಬಾರದು, ಭಕ್ತಂಗೆ ಪರಧನ ಪರಸತಿ,
ಬಾರದು ಬಾರದು, ವಿಷಯಿಗೆ ಪಶುಪತಿಬ್ರತವು,
ಬಾರದು ಬಾರದು, ಭವಭಾರಿಗೆ
ಕೂಡಲಸಂಗಮದೇವನ ಒಕ್ಕುದ ಕೊಳಬಾರದು.
771
ಹುತ್ತದ ಮೇಲಣ ರಜ್ಜು ಮುಟ್ಟಿದಡೆ ಸಾವರು ಶಂಕಿತರಾದವರು,
ದರ್ಪದಷ್ಟವಾದಡೆಯೂ ಸಾಯರು ನಿಶ್ಯಂಕಿತರಾದವರು.
ಕೂಡಲಸಂಗಮದೇವಯ್ಯಾ,
ಶಂಕಿತಂಗೆ ಪ್ರಸಾದ ಸಿಂಗಿ, ಕಾಳಕೂಟವಿಷವು.
772
ನಂಬಿದಡೆ ಪ್ರಸಾದ; ನಂಬದಿದ್ದಡೆ ವಿಷವು.
ತುಡುಕಬಾರದು ನೋಡಾ, ಲಿಂಗನ ಪ್ರಸಾದ,
ಕೂಡಲಸಂಗನ ಪ್ರಸಾದ ಸಿಂಗಿ, ಕಾಳಕೂಟ ವಿಷವು.
773
ಪಂಡಿತನಾಗಲಿ, ಮೂರ್ಖನಾಗಲಿ ಸಂಚಿತಕರ್ಮ ಉಂಡಲ್ಲದೆ ಮಾಣದು,
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದೆಂದು
ಶ್ರುತಿ ಸಾರುತ್ತೈದಾವೆ ನೋಡಾ.
ತಾನಾವಾವ ಲೋಕದೊಳಗಿದ್ದಡೆಯೂ ಬಿಡದು,
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೆ ಧನ್ಯ.
774
ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು.
775
ಒಪ್ಪವ ನುಡಿವಿರಯ್ಯಾ ತುಪ್ಪವ ತೊಡೆದಂತೆ,
ಶರಣ ತನ್ನ ಮೆರೆವನೆ ಬಿನ್ನಾಣಿಯಂತೆ
ಕೂಡಲಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೆ.
776
ಗುರುವಿಂಗೆ ಕೊಡುವುದು ಅರ್ಪಿತವೆ
ಅರ್ಪಿತ ಅರ್ಪಿತವೆಂದೆನುತ್ತಿಹಿರಿ
ಸವಿಸವಿದು ಕೊಡಬೇಕಲ್ಲದೆ.
ಅರ್ಪಿತ ಅರ್ಪಿತವೆಂದೆನುತ್ತಿಹಿರಿ
ಲಿಂಗಕ್ಕೆ ಕೊಡುವುದು ಅರ್ಪಿತವೆ
ಸವಿಸವಿದು ಕೊಡಬೇಕಲ್ಲದೆ.
ಅರ್ಪಿತ ಅರ್ಪಿತವೆನುತ್ತಿಹರೆಲ್ಲರು
ಅರ್ಪಿತಮುಖವನರಿಯರು ನೋಡಾ.
ಜಂಗಮಕ್ಕೆ ನೀಡಿ ಜಂಗಮಪ್ರಸಾದವ ಕೊಂಡಡೆ
ನಿನಗರ್ಪಿತ ಕಾಣಾ, ಕೂಡಲಸಂಗಮದೇವಾ.
777
ಗುರುಲಿಂಗಜಂಗಮದಿಂದ ಪಾದೋದಕ ಪ್ರಸಾದವಾಯಿತ್ತು.
ಆ ಭಾವವೇ ಮಹಾನುಭಾವವಾಗಿ,
ಎನಗೆ ಮತ್ತೆ ಬೇರೆ ವ್ರಸಾದವೆಂಬುದಿಲ್ಲ,
ಕೂಡಲಸಂಗಮದೇವಾ.
778
ದಾಸೋಹವೆಂಬ ಸೋಹೆಗೊಂಡು ಹೋಗಿ,
ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪ್ರಸಾದವ ಕಂಡೆ.
ಇಂತೀ ಚತುರ್ವಿಧಸಂಪನ್ನನಾದೆ ಕಾಣಾ,
ಕೂಡಲಸಂಗಮದೇವಾ.
779
 780
ಕಿವಿಯ ಸೂತಕ ಹೋಯಿತ್ತು, ಸದ್ಗುರುವಿನ ವಚನದಿಂದ,
ಕಂಗಳ ಸೂತಕ ಹೋಯಿತ್ತು, ಸದ್ಭಕ್ತರ ಕಂಡೆನಾಗಿ.
ಕಾಯದ ಸೂತಕ ಹೋಯಿತ್ತು, ನಿಮ್ಮ ಚರಣವ ಮುಟ್ಟಿದೆನಾಗಿ.
ಬಾಯ ಸೂತಕ ಹೋಯಿತ್ತು. ನಿಮ್ಮ ಒಕ್ಕುದ ಕೊಂಡೆನಾಗಿ.
ನಾನಾ ಸೂತಕ ಹೋಯಿತ್ತು, ನಿಮ್ಮ ಶರಣರ ಅನುಭಾವಿಯಾಗಿ.
ಕೂಡಲಸಂಗಮದೇವಾ ಕೇಳಯ್ಯಾ
ಎನ್ನ ಮನದ ಸೂತಕ ಹೋಯಿತ್ತು, ನೀವಲ್ಲದಿಲ್ಲೆಂದರಿದೆನಾಗಿ.
781
ಲಿಂಗಪ್ರಸಾದಿಗಳಲ್ಲದವರ ಸಂಗ
ಭಂಗವೆಂದುದು ಗುರುವಚನ.
ಲಿಂಗಪ್ರಸಾದಿಗಳಲ್ಲದವರ ಸಂಗಗ
ಪಂಚಮಹಾಪಾತಕವೆಂದುದು ಲಿಂಗವಚನ.
ಆಸನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ
ಇಂತೆಂದುದಾಗಿ ಕೂಡಲಸಂಗಮದೇವಾ,
ನಿಮ್ಮ ಶರಣರಿಗೆ ಶರಣೆಂದು ಶುದ್ಧನಯ್ಯಾ.
782
 783
ಶುದ್ಧವ ಗುರುವಿಂಗೆ ಕೊಟ್ಟು, ಶುದ್ಧವಾಯಿತ್ತೆಂಬೆನಯ್ಯಾ,
ಸಿದ್ಧವ ಲಿಂಗಕ್ಕೆ ಕೊಟ್ಟು, ಸಿದ್ಧವಾಯಿತ್ತೆಂಬೆನಯ್ಯಾ,
ಪ್ರಸಿದ್ಧವ ಜಂಗಮಕ್ಕೆ ಕೊಟ್ಟು, ಪ್ರಸಿದ್ಧವಾಯಿತ್ತೆಂಬೆನಯ್ಯಾ.
ಗುರುಲಿಂಗಜಂಗಮವ ಏಕತ್ರಯವಾಗಿ ಕಾಣಲರಿಯದಿದ್ದಡೆ
ಶುದ್ಧ ಸಿದ್ಧ ಪ್ರಸಿದ್ಧ ಒಡನೆ ನಗುತ್ತೈದಾವೆ.
ತನುಮನಧನವ ನಿವೇದಿಸಲರಿಯೆನಾಗಿ
ಕೂಡಲಸಂಗಮದೇವ, ಒಲಿ ಎಂದಡೆಂತೊಲಿವ.
784
ಒಡಲ ಕಳವಳಕ್ಕೆ, ಬಾಯ ಸವಿಗೆ,
ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗನಲ್ಲ.
ಬೇಡೆ, ಬೇಡೆ, ನಿಮ್ಮ ನಂಬಿದ ಸದ್ಭಕ್ತರ.
ಅವರೊಕ್ಕುದನುಂಬೆನೆಂದಂತೆ ನಡೆವೆ.
ಎನ್ನೊಡೆಯ ಕೂಡಲಸಂಗಮದೇವನೊಲ್ಲದವರ ಹಿಡಿದೆನಾದಡೆ
ನಿಮ್ಮ ಪಾದದಾಣೆ.
785
ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ ಕೊಂಡೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಲಿಂಗಾರ್ಪಿತವಲ್ಲದೆ ಉದಕವ ಮುಕ್ಕುಳಿಸಿದಡೆ
ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ.
ಲಿಂಗಾರ್ಪಿತವಲ್ಲದೆ ಹಲ್ಲುಕಡ್ಡಿಯ ಕೊಂಡಡೆ
ಬಲ್ಲೆ, ಮುಂದೆ ಭವ ಘೋರನರಕವೆಂಬುದ.
ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು.
ಅಳವರಿಯದೆ ನುಡಿದೆನು.
ಕಡೆ ಮುಟ್ಟಿ ಸಲೆಸದಿದ್ದಡೆ ತಲೆದಂಡ, ತಲೆದಂಡ,
ಕೂಡಲಸಂಗಮದೇವಾ.
786
ಮೌನದಲುಂಬುದು ಆಚಾರವಲ್ಲ.
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡಡೆ.
787
ಕಾಯದ ಕರಣದ ಕೈಯಲು ಪದಾರ್ಥವ ಹಿಡಿವಲ್ಲಿ
ನಿಮಗೆ ಕೊಡುವ ಭರದ ಭೀತಿಯಿಂದ ಆನರಿಯದಿಪ್ಪೆನಾಗಿ,
ಎನ್ನ ನೀನರಿದು ಸಲಹುತ್ತಿಯಯ್ಯಾ,
ಕೂಡಲಸಂಗಮದೇವಾ.
788
ಆಳಿಕಾರನೆನಗೊಬ್ಬ ಮಗ ಹುಟ್ಟಿದನೆಂದು
ಆಳಿಕೆಯ ಕೆಡಲೀಸದೆ ನಡೆಸುವ ನಮ್ಮಯ್ಯ.
ಪಂಚಭೂತಕಾಯವ ಭವಿಯೆಂದೆನಿಸಲೀಯದೆ
ಪ್ರಸಾದಕಾಯವ ಮಾಡಿ ಸಲಹುವ ನಮ್ಮಯ್ಯ.
ಆಳಿ ಸವೆವಲ್ಲಿ ಅವಧಾನಿಯಾಗಿದ್ದಡೆ
ಆಳ್ದನು ನಮ್ಮ ಕೂಡಲಸಂಗಮದೇವ.
789
ಶಿವಾಚಾರವೆಂಬುದೊಂದು ಬಾಳಬಾಯ ಧಾರೆ;
ಲಿಂಗ ಮೆಚ್ಚಬೇಕು, ಜಂಗಮ ಮೆಚ್ಚಬೇಕು,
ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು.
ಬಿಚ್ಚಿ ಬೇರಾದಡೆ ಮೆಚ್ಚ ನಮ್ಮ ಕೂಡಲಸಂಗಮದೇವ.
790
ತ್ರಿವಿಧಪ್ರಸಾದವೆಂದೆಂಬರು, ಅದೆಂತಹುದೋ
ಶುದ್ಧಪ್ರಸಾದ ಗುರುವಿನದು, ಸಿದ್ಧಪ್ರಸಾದ ಲಿಂಗದದು,
ಪ್ರಸಿದ್ಧಪ್ರಸಾದ ಜಂಗಮದದು.
ಇಂತೀ ತ್ರಿವಿಧ ಒಂದಾದವರ ತೋರಾ
ಕೂಡಲಸಂಗಮದೇವಾ.
791
 792
ಉರೆ ತಾಗಿದ ಮೃಗವು ಒಂದಡಿಯನಿಡುವುದೆ
ತನುವ ತಾಗಿದ ಸುಖವು ಅಗಲುವುದೆ
ಕೂಡಲಸಂಗನ ಶರಣರ ಅನುಭಾವವರಿದವರ
ಮರಳಿ ಮತ್ರ್ಯರೆಂದೆನಬಹುದೆ.
793
 794
ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದಡಲ್ಲಿ ಚೆನ್ನ,
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ.
ಸವಿದು ನೋಡಿ ಅಂಬಲಿ
ರುಚಿಯಾಯಿತ್ತೆಂದು
ಕೂಡಲಸಂಗಮದೇವಂಗೆ ಬೇಕೆಂದು
ಕೈದೆಗೆದ ನಮ್ಮ ಚೆನ್ನ.
795
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ,
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ,
ಪ್ರಸಾದವಿಕಾರಿಗೆ ಮನೋವಿಕಾರವೆಂಬುದಿಲ್ಲ.
ಇಂತೀ ತ್ರಿವಿಧ ಗುಣವನರಿದಾತನು
ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ.
796
 797
ಹತ್ತುಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು
ಮುಟ್ಟುವ ತೆರನನರಿಯದನ್ನಕ್ಕ
ಕಟ್ಟಿದಡೇನು ಬಿಟ್ಟಡೇನು
ಮನವು ಲಿಂಗದಲ್ಲಿ ಮುಟ್ಟದನ್ನಕ್ಕ
ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆಹೆನೆಂಬ
ಪಾತಕರ ಮೆಚ್ಚ ನಮ್ಮ ಕೂಡಲಸಂಗಮದೇವ.
798
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇನಾದುವು
ಕೂಡಲಸಂಗಮದೇವಾ
ನಿಮ್ಮನರಿಯದ ಜ್ಞಾನವೆಲ್ಲಾ ಅಜ್ಞಾನ.
799
 800
 801
ಅಹಂಕಾರ ಮನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಿಪ್ಪುದೊ
ಅಹಂಕಾರಕ್ಕೆ ಎಡೆಗೊಡದೆ ಲಿಂಗತನುವಾಗಿರಬೇಕು.
ಅಹಂಕಾರರಹಿತವಾದಲ್ಲಿ ಸನ್ನಹಿತ ಕಾಣಾ
ಕೂಡಲಸಂಗಮದೇವ.
802
ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ.
803
ಮನದ ಕೊನೆಯ ಮೊನೆಯ ಮೇಲೆ
ಮನೆಯ ಮಾಡಿಕೊಂಡಿಪ್ಪನೊಬ್ಬ ದಾಸೋಹಿ.
ಆದಿವಿಡಿದು ಬಂದಾತನೆ ಭಕ್ತ,
ಆದಿವಿಡಿದು ಬಂದಾತನೆ ಜಂಗಮ.
ಆದಿ ಗುರು, ಅನಾದಿ ಶಿಷ್ಯ.
ಈ ಉಭಯ ಕುಳಸ್ಥಳವ ಬಲ್ಲಡೆ ಆತ ಲಿಂಗಸಂಬಂಧಿ
ಕೂಡಲಸಂಗಮದೇವಾ.
804
ಅರಿದರಿದರಿದು !
ಸಮಗಾಣಿಸಬಾರದು, ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದಡೆ
ಈಶ್ವರನು ಒಡೆಯಿಕ್ಕದೆ ಮಾಣುವನೆ
ಪಾತ್ರ ಅಪಾತ್ರವೆಂದು ಕಂಡಡೆ ಶಿವನೆಂತು ಮೆಚ್ಚುವನು
ಜೀವ ಜೀವಾತ್ಮವ ಸರಿಯೆಂದು ಕಂಡಡೆ
ಸಮವೇದಿಸದಿಪ್ಪನೆ ಶಿವನು
ತನ್ನ ಮನದಲ್ಲಿ `ಯತ್ರ ಜೀವಃ ತತ್ರ ಶಿವ'ನೆಂದು
ಸರ್ವಜೀವದಯಾಪಾರಿಯಾದಡೆ, ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ.
805
ಸ್ಥಾವರ ಜಂಗಮವೆಂಬ ಉಭಯ ಪಕ್ಷ ಒಂದೆ;
ಆವ ಮುಖದಲಿ ಬಂದಡೂ ತೃಪ್ತಿಯೊಂದೆ,
ಕೂಡಲಸಂಗಮದೇವರ ಆಪ್ಯಾಯನವೊಂದೆ.
806
ಮುತ್ತು ಉದಕದಲಾಗದು, ಉದಕ ಮುತ್ತಿನಲಾಗದು,
ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ,
ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕ್ಕಲ್ಲದೆ.
ಕರ್ತೃ ಕೂಡಲಸಂಗಮದೇವರ ಒಲವಿನ ದಯದ
ಚಿತ್ತವಿಡಿದಂಗಲ್ಲದೆ, ಶಿವತತ್ತ್ವ ಸಾಹಿತ್ಯವಾಗದು.
807
ಕಾಯದ ಗಡಣ ಕೆಲಬರಿಗುಂಟು,
ಜೀವದ ಗಡಣ ಕೆಲಬರಿಗುಂಟು,
ಭಾವದ ಗಡಣ ಕೆಲಬರಿಗುಂಟು,
ವಚನದ ಗಡಣ ಕೆಲಬರಿಗುಂಟು.
ಪ್ರಾಣಲಿಂಗದ ಗಡಣ ಆರಿಗೂ ಇಲ್ಲ,
ಕೂಡಲಸಂಗನ ಶರಣರೊಳಗೆ
ತಂಗಟೂರ ಮಾರಯ್ಯಂಗಲ್ಲದೆ.
808
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ್ಕ
ಶೈತ್ಯವ ತೋರುವ ಪರಿಯೆಂತೋ
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ್ಕ
ಉಷ್ಣವ ತೋರುವ ಪರಿಯೆಂತೋ
ಶರಣಂಗೆ ಭಕ್ತಿಕಾಯವಿಲ್ಲದನ್ನಕ್ಕ
ಕೂಡಲಸಂಗಯ್ಯನನರಿವ ಪರಿಯೆಂತೋ.
809
ಮುನ್ನೂರ ಅರುವತ್ತು ನಕ್ಷತ್ರಕ್ಕೆ ಬಾಯಿಬಿಟ್ಟುಕೊಂಡಿಪ್ಪುದೆ ಸಿಂಪು
ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳು, ಕೇಳು ತಂದೆ.
ಎಲ್ಲವಕ್ಕೆ ಬಾಯ ಬಿಟ್ಟಡೆ ತಾನೆಲ್ಲಿಯ ಮುತ್ತಪ್ಪುದು
ಪರಮಂಗಲ್ಲದೆ ಹರುಷತಿಕೆಯಿಲ್ಲೆಂದು
ಕರಣಾದಿ ಗುಣಂಗಳ ಮರೆದರು,
ಇದು ಕಾರಣ, ಕೂಡಲಸಂಗನ ಶರಣರು ಸಪ್ತವ್ಯಸನಿಗಳಲ್ಲಾಗಿ.
810
 811
ಮನವಂಚನೆಯೆ ಅನ್ಯಲಿಂಗಾರ್ಚನೆ.
ಅದು ನಿಜವಲ್ಲ ನಿಜವಲ್ಲ,
ಕೂಡಲಸಂಗಮದೇವನು ಮನದಂತರ್ಯಾಮಿ ತಾನಾಗಿ.
812
 813
 814
 815
ಸುನಾದ ಬಿಂದು ಪ್ರಣವಮಂತ್ರದಗ್ರದ ಕೊನೆಯಲೈದುವುದೆ
ಸೋಡಿಹಂ ಸೋಡಿಹಂ ಎಂದೆನ್ನುತ್ತಿದ್ದಿತ್ತು.
ಕೋ[s]ಹಂ ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ
ಇಂತೆಂದುದಾಗಿ,
ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲ.
816
ಬೆಳಗಿನೊಳಗಣ ಬೆಳಗು ಮಹಾಬೆಳಗು !
ಶಿವ ಶಿವಾ ! ಪರಮಾಶ್ರಯವೆ ತಾನಾಗಿ
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತಃಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ.
817
ಆಚಾರ ಶಿವಾಚಾರವೆಂದರಿಯದ ಕಾರಣ,
ಷಡುದರುಶನಂಗಳೆಲ್ಲಾ ತಮತಮಗೆ ಶರಣೆನುತ್ತಿದ್ದುವು.
ಮಹತ್ವದ ಸಮಯಾದಿ ಶೈವಂಗಳೆಂಬುವೆಲ್ಲಾ, ಶರಣು ಶರಣೆನುತ್ತಿದ್ದುವು.
ನಮ್ಮ ಕೂಡಲಸಂಗನ ಶರಣರು ಮಾಡಿದ ವಿನಿಯೋಗ
ಬಹಿರಂಗದಲ್ಲಿ ವರ್ತಿಸುವವರಿಗೆ ಎಲ್ಲಿಯದೊ.
818
ತಮತಮಗೆಲ್ಲ ನೊಸಲಕಣ್ಣವರು, ತಮತಮಗೆಲ್ಲ ನಂದಿವಾಹನರು,
ತಮತಮಗೆಲ್ಲ ಖಟ್ವಾಂಗಕಪಾಲತ್ರಿಶೂಲಧರರು.
ದೇವರಾರು ಭಕ್ತರಾರು ಹೇಳಿರಯ್ಯಾ !
ಕೂಡಲಸಂಗಮದೇವಾ, ನಿಮ್ಮ ಶರಣರು ಸ್ವತಂತ್ರರು,
ಎನ್ನ ಬಚ್ಚಬರಿಯ ಬಸವನೆನಿಸಯ್ಯಾ.
819
ಗುರುವಿನಲ್ಲಿ ಸದಾಚಾರ; ಲಿಂಗದಲನುದಿನ ವೇಳೆ.
ಜಂಗಮದಲ್ಲನುಭಾವ ಸಮಯಾಚಾರ; ಲಿಂಗದಲನುದಿನ ವೇಳೆ.
ಈ ಉಭಯಾಚಾರದಿಂದ ತಿಳಿದ ತಿಳಿವು ಲಿಂಗದಲ್ಲಿ ಅನುದಿನ ವೇಳೆ.
ಬೇರೆ ತೋರಲಿಲ್ಲ.
ಲಿಂಗಜಂಗಮದಲ್ಲಿ ಲೀಯವಾದಾಚಾರ ಸಮಯಾಚಾರ.
ಇದು ಕಾರಣ ಕೂಡಲಸಂಗಮದೇವಾ.
ಲಿಂಗದಲನುದಿನ ವೇಳೆ.
820
ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
821
ಅಷ್ಟದಳಕಮಳಾತ್ಮದೊಳಗೆ
ನೆಟ್ಟನೆ ಮನಃಪ್ರೇರಕನೆಂದು ನಂಬಿದೆ, ಮತ್ತೊಂದನರಿಯದೆ,
ನಿತ್ಯಸ್ವತಂತ್ರನು ನೀನೆ,
ದೃಷ್ಟಲಿಂಗ ಜಂಗಮ ಒಂದೆ ಎಂದು ಇಪ್ಪೆನು,
ಪ್ರಭುವೆ ಕೂಡಲಸಂಗಮದೇವಾ.
822
ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ
ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೆ ರೂಪಾದೆ.
ಇನ್ನು ಜಂಗಮವೆ ಲಿಂಗವೆಂದು ನಂಬಿದೆ,
ಕೂಡಲಸಂಗಮದೇವಾ.
823
ಗುರು ಮುನಿದಡೆ ಒಂದು ದಿನ ತಾಳುವೆ,
ಲಿಂಗ ಮುನಿದಡೆ ದಿನವರೆ ತಾಳುವೆ.
ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ,
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ.
824
ಅರಸು ಮುನಿದಡೆ ನಾಡೊಳಗಿರಬಾರದಯ್ಯಾ,
ಗಂಡ ಮುನಿದಡೆ ಮನೆಯೊಳಗೆ ಇರಬಾರದಯ್ಯಾ.
ಕೂಡಲಸಂಗಮದೇವಾ
ಜಂಗಮ ಮುನಿದಡೆ ನಾನೆಂತು ಬದುಕುವೆ.
825
ರಚ್ಚೆಯ ನೆರವಿಗೆ ನಾಣುನುಡಿ ಇಲ್ಲದಿಹುದೆ
ಅದರಂತೆನಬಹುದೆ ಸಜ್ಜನ ಸ್ತ್ರೀಯ
ಅದರಂತೆನಬಹುದೆ ಭಕ್ತಿರತಿಯ
ಕರುಳಕಲೆ ಪ್ರಕಟಿತವುಂಟೆ,
ಕೂಡಲಸಂಗಮದೇವಾ.
826
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ ಆತ್ಮನ ಗುಣವುಂಟೆ
ಗುರುಕಾರುಣ್ಯವಾಗಿ ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೆ ಗತಿಯಾಗಿ ಇದ್ದೆ,
ಕೂಡಲಸಂಗಮದೇವಾ.
827
ಹಸಿವು, ತೃಷೆ, ನಿದ್ರೆ, ವಿಷಯಂಗಳ ಮರೆದೆ,
ನೀವು ಕಾರಣ !
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳ ಮರೆದೆ,
ನೀವು ಕಾರಣ !
ಪಂಚೇಂದ್ರಿಯ, ಸಪ್ತಧಾತು, ಅಷ್ಟಮದಂಗಳ ಮರೆದೆ.
ನೀವು ಕಾರಣ !
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರಿಗೆ ಅಪ್ಯಾಯನವಾದಡೆ
ಎನಗೆ ತೃಪ್ತಿಯಾಯಿತ್ತು.
828
 829
ಆಕಳ, ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ, ನಿಮ್ಮ ಧರ್ಮ !
ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ !
ಅರರಸಾಡದಿರಿಂ ಭೋ, ನಿಮ್ಮ ಧರ್ಮ !
ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ,
ಕೂಡಲಸಂಗಮದೇವ ಏಕೋಭಾವ.
830
 831
ಮಾಡುವಾತ ನಾನಲ್ಲಯ್ಯಾ, ನೀಡುವಾತ ನಾನಲ್ಲಯ್ಯಾ,
ಬೇಡುವಾತ ನಾನಲ್ಲಯ್ಯಾ, ನಿಮ್ಮ ಕಾರುಣ್ಯವಲ್ಲದೆ.
ಎಲೆ ದೇವಾ, ಮನೆಯ ತೊತ್ತು ಅಲಸಿದಡೆ ಒಡತಿ ಮಾಡಿಕೊಂಬಂತೆ,
ನಿನಗೆ ನೀ ಮಾಡಿಕೊ, ಕೂಡಲಸಂಗಮದೇವಾ.
832
 833
ಜನ್ಮ ಜನ್ಮಕ್ಕೆ ಹೋಗಲೀಯದೆ,
`ಸೋ[s]ಹಂ ಎಂದೆನಿಸದೆ `ದಾಸೋ[s]ಹಂ ಎಂದೆನಿಸಯ್ಯಾ.
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ,
ಕೂಡಲಸಂಗಮದೇವಾ, ನಿಮ್ಮ ಧರ್ಮ.
834
ಆಶೆಯಾಮಿಷ ತಾಮಸದಿಂದ ಭವಬಂಧನವಾದುದನರಿಯಾ !
ತ್ರಿವಿಧ ತ್ರಿವಿಧಾವಸ್ಥೆಯ ಮರೆಯಾ !
ಓಂ ನಮಃ ಶಿವಾಯ, ಶರಣೆಂಬುದ ಬಿಡದೆ ನೆನೆ ಮನವೆ !
ಮಹತಃ ಶಿವಲಿಂಗಸ್ಯ ಮಹತೋ ಜಂಗಮಸ್ಯ ಚ
ತತ್ ಪ್ರಸಾದೋ ಮಹಾನೇವ ಮಹದ್ಭಿರಿದಮೀರಿತಂ||
ಕೂಡಲಸಂಗಮದೇವನ ಪ್ರಸಾದಸಾನ್ನಿಧ್ಯದಿಂದ
ಭವಜನ್ಮಕರ್ಮ ಪಂಚಭೂತಪೂರ್ವನಾಸ್ತಿ.
835
ಬೆಟ್ಟಕ್ಕೆ ಬೆಳ್ಳಾರ ಸುತ್ತಿತಯ್ಯಾ,
ಪಾಪದ ಬಲೆಯ ತಂದು ಮುಂದೆ ಒಡ್ಡಿದಿರಯ್ಯಾ,
ಬೇಟೆಗಾರನು ಮೃಗವನಟ್ಟಿ ಬರಲು ಮೃಗವು ಗೋರಿಗೊಳಗಾಗದಯ್ಯಾ.
ಹರನೊಡ್ಡಿದ ಬಲೆಯಲ್ಲಿ ಸಿಲುಕಿದ ಮೃಗವು
ಕೂಡಲಸಂಗಮದೇವಂಗೆ ಓಗರವಾಯಿತ್ತು.
836
ಪರಿಯಾಣವೆ ಭಾಜನವೆಂಬರು; ಪರಿಯಾಣ ಭಾಜನವಲ್ಲ,
ಲಿಂಗಕ್ಕೆ ತನ್ನ ಮನವೆ ಭಾಜನ.
ಪ್ರಾಣವನು ಬೀಸರವೋಗಲೀಯದೆ ಮೀಸಲಾಗರ್ಪಿಸಬಲ್ಲಡೆ
ಕೂಡಿಕೊಂಡಿಪ್ಪ, ನಮ್ಮ ಕೂಡಲಸಂಗಮದೇವ.
837
ಆತ್ಮ ಲಿಂಗ, ಪರಮಾತ್ಮ ಜಂಗಮ,
ತನು ಮಧ್ಯೆ ಪ್ರಸಾದವಾಯಿತ್ತು,
ನಿಶ್ಚಿಂತ ನಿವಾಸವಾಯಿತ್ತು.
ಕೂಡಲಸಂಗನ ಶರಣರ ಸಂಗದಿಂದ
ನಿಶ್ಚಿಂತ ನಿವಾಸವಾಯಿತ್ತು.
838
ಲೋಹ ಪರುಷವ ಮುಟ್ಟುವುದಲ್ಲದೆ
ಪರುಷ ಪರುಷವ ಮುಟ್ಟುವುದೆ ಅಯ್ಯಾ
ಅಂಗವಿಡಿದಂಗೆ ಲಿಂಗವುಂಟಲ್ಲದೆ, ಲಿಂಗವಿಡಿದಂಗೆ ಲಿಂಗವುಂಟೆ
`ಆಣೋರಣೀಯಾನ್ ಮಹತೋ ಮಹೀಯಾನ್
ಹಿರಿದಕ್ಕೆ ಹಿರಿದು, ಕಿರಿದಿಂಗೆ ಕಿರಿದು, ವಾಙ್ಮನಕ್ಕಗೋಚರ
ಕೂಡಲಸಂಗಮದೇವಾ
ಸ್ವರೂಪು ಪ್ರಸಾದ, ನಿರೂಪು ಲಿಂಗೈಕ್ಯ.
839
 840
ಅಯ್ಯಾ ! ನೀನೆಂದಡೆ ಏನೆಂಬೆನು
ನಿನ್ನ ಹಂಗೇನು ಹರಿಯೇನು
ನಿನ್ನ ಮುಖದಲ್ಲಿ ಒಂದಗುಳು ಸವೆಯದು.
ನಿನ್ನ ಪ್ರಸಾದವ ಕೊಂಡೆನ್ನ ಭವಕ್ಕೆ ಬೀಜವಾಯಿತ್ತು.
ಜಂಗಮವೆ ಲಿಂಗವೆಂದು ಒಕ್ಕುದ ಕೊಂಡಡೆ
ಎನ್ನ ಭವಂ ನಾಸ್ತಿಯಾಯಿತ್ತು ಕೂಡಲಸಂಗಮದೇವಾ.
841
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ.
842
ಆದ್ಯರ ವಚನ ಆದ್ಯರಿಗಾಯಿತ್ತು,
ವೇದ್ಯರಿಗಲ್ಲದೆ ಸಾಧ್ಯವಾಗದು.
ಕೂಡಲಸಂಗಮದೇವಾ
ನಿಮ್ಮ ಅನುಭಾವದಿಂದ ಎನ್ನ ಭವಂ ನಾಸ್ತಿಯಾಯಿತ್ತು.
843
 844
ಶರಣಸನ್ನಿಹಿತ ಐಕ್ಯವಹಲ್ಲಿ
ಹರಿಬ್ರಹ್ಮಾದಿಗಳು ಮೊದಲಾದ ತೆತ್ತೀಸಾದಿ ದೇವರ್ಕಳುಘೇ ಉಘೇ ಎನ್ನುತ್ತಿರಲು
ಐಕ್ಯ ಬಸವಣ್ಣಂಗೆಠಾವಾವುದಯ್ಯಾ ಎಂದಡೆ;
ಅಂಗದ ಬಲದಲ್ಲಿ ಬ್ರಹ್ಮನ ಸ್ಥಾನ,
ಎಡದಲ್ಲಿ ನಾರಾಯಣನ ಸ್ಥಾನ, ಒಲ್ಲೆನಯ್ಯಾ.
ಕೊರಳು ಗರಳದ ಸ್ಥಾನ, ಬಾಯಿ ಅಪ್ಪುವಿನ ಸ್ಥಾನ,
ನಾಸಿಕ ವಾಯುವಿನ ಸ್ಥಾನ, ಕಣ್ಗಳು ಅಗ್ನಿಯ ಸ್ಥಾನ,
ಜಡೆ ಗಂಗೆಯ ಸ್ಥಾನ, ನೊಸಲು ಚಂದ್ರನ ಸ್ಥಾನ,
ಹಿಂದು ಸೂರ್ಯನ ಸ್ಥಾನ, ಚರಣಂಗಳು ಅಷ್ಟದಿಕ್ಪಾಲಕರ ಸ್ಥಾನ,
ಗುಹ್ಯ ಕಾಮನ ಸ್ಥಾನ,
ಹಸ್ತಂಗಳು ಕಪಾಲ ಖಟ್ವಾಂಗ ತ್ರಿಶೂಲ ಡಮರುಗ ಸ್ಥಾನ,
ದೇಹ ರುಂಡಮಾಲೆಯ ಸ್ಥಾನ, ಕರ್ಣ ನಾಗೇಂದ್ರನ ಸ್ಥಾನ,
ಇಂತೀ ಸ್ಥಾನಂಗಳ ನಾನೊಲ್ಲೆನಯ್ಯಾ.
ಹೃದಯಮಧ್ಯದ ಅಂತರಾಳದ
ಏಕಪೀಠದ ಸಿಂಹಾಸನವ ತೆರಪ ಕೊಡು
ಕೂಡಲಸಂಗಮದೇವಾ.
845
ನೀನೊಲಿದಡೆ ಒಲಿ, ಒಲಿಯದಿದ್ದಡೆ ಸಮವೇದಿಸಿಕೊಳ್ಳಯ್ಯಾ,
ಲಿಂಗದ ಬೆಳಗನೊಳಕೊಂಡು ಸಮವೇದಿಸಿಕೊಳ್ಳಯ್ಯಾ.
ಕೂಡಲಸಂಗಮದೇವನಲ್ಲಿ ತದ್ಗತನಾದೆನಯ್ಯಾ.
846
ಮಾಡುವರಿಲ್ಲ, ನೀ ಮಾಡದೆ ನಿಲ ಸಾಲೆ.
ಬೇಡುವರಿಲ್ಲ, ನೀ ಬೇಡದೆ ನಿಲ ಸಾಲೆ.
ಕೂಡುವರಿಲ್ಲ, ನೀ ಕೂಡದೆ ನಿಲ ಸಾಲೆ.
ಕೂಡಲಸಂಗಮದೇವ
ತಾನು ತಾನಾಗಿ ನೀ ನೋಡದೆ ನಿಲ ಸಾಲೆ.
847
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ, ಸಾಲದೆ ಅಯ್ಯಾ
ಮಾಲೆಗಾರನ ಕೇಳಿ ನನೆಯರಳುವುದೆ
ಆಗಮವನಿದಿರಿಂಗೆ ತೋರುವುದು ಆಚಾರವೆ ಅಯ್ಯಾ
ನಮ್ಮ ಕೂಡಲಸಂಗನ ಕೂಡಿದ ಕೂಟದ ಕರುಳ ಕಲೆಯನಿದಿರಿಂಗೆ
ತೋರುವುದು ಆಚಾರವೆ ಅಯ್ಯಾ.
849
ಪಂಚಬ್ರಹ್ಮವ ಕೆಡಿಸಿತ್ತು, ಪ್ರಣವಮಂತ್ರವನೀಡಾಡಿತ್ತಲ್ಲಾ.
ಕರ್ಮಂಗಳನೆ ಕಳೆಯಿತ್ತು, ಕ್ರೀಗಳನೆ ಮೀರಿತ್ತಲ್ಲಾ.
ಆಗಮದ ಹಲ್ಲನೆ ಕಳೆಯಿತ್ತು
ಕೂಡಲಸಂಗಯ್ಯನ ಭಕ್ತಿಗಜ ಹೋ !
849
ಎಲ್ಲರ ಗಂಡರ ಪರಿಯಂತಲ್ಲ ನೋಡವ್ವಾ.
ನಮ್ಮ ನಲ್ಲ ಸುಳಿಯಲಿಲ್ಲ, ಸುಳಿದು ಸಿಂಗಾರವ ಮಾಡಲಿಲ್ಲ,
ಕೂಡಲಸಂಗಮದೇವನು ತನ್ನೊಳಗೆ ಬೈಚಿಟ್ಟನಾಗಿ.
850
 851
ಕಾಯವೆಂಬ ಘಟಕ್ಕೆ ಚೈತನ್ಯವೆ ಸಯದಾನ,
ಸಮತೆ ಎಂಬ ಜಲ ಕರಣಾದಿಗಳೆ ಶ್ರಪಣ.
ಜ್ಞಾನವೆಂಬ ಅಗ್ನಿಯನಿಕ್ಕಿ
ಮತಿಯೆಂಬ ಸಟ್ಟುಕದಲ್ಲಿ ಘಟ್ಟಿಸಿ, ಪಾಕಕ್ಕೆ ತಂದು,
ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ
ನೀಡಿದಡೆಕೂಡಲಸಂಗಮದೇವಂಗಾರೋಗಣೆಯಾಯಿತ್ತು.
852
ಕಂಗಳು ತುಂಬಿದ ಬಳಿಕ ನೋಡಲಿಲ್ಲ,
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ,
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,
ಮನ ತುಂಬಿದ ಬಳಿಕ ನೆನೆಯಲಿಲ್ಲ,
ಮಹಂತ ಕೂಡಲಸಂಗಮದೇವನ.
853
ಅಡಿಗಡಿಗೆ ಸ್ಥಾನನಿಧಿ, ಅಡಿಗಡಿಗೆ ದಿವ್ಯಕ್ಷೇತ್ರ,
ಅಡಿಗಡಿಗೆ ನಿಧಿಯು ನಿಧಾನ ನೋಡಯ್ಯಾ !
ಆತನ ಇರವೆ ವಾರಣಾಸಿ, ಅವಿಮುಕ್ತಿ ಕ್ಷೇತ್ರ,
ಕೂಡಲಸಂಗನ ಶರಣ ಸ್ವತಂತ್ರನಾಗಿ.
854
 855
ಶರಣಸನ್ಮತವಪ್ಪ ನಿಜಗುಣಭರಿತನಪ್ಪಡೆ,
ಸತ್ವ ರಜ ತಮ ಕ್ರೋಧ ಬಿಡದನ್ನಕ್ಕ
ಅನುಭಾವವೆಲ್ಲಿಯದೊ
ಆತ್ಮಸ್ತುತಿ ಪರನಿಂದೆಯ ಬಿಡದನ್ನಕ್ಕ,
ಅರಿಷಡ್ವರ್ಗ ದಶವಾಯು ಬೆರೆಸಿಪ್ಪ
ಕಳಂಕವಪ್ಪ ತನುವ ಬಿಡದನ್ನಕ್ಕ.
ಸಂಸಾರ ಮಾದಲ್ಲದೆ
ಶರಣಸಜ್ಜನಿಕೆ, ಸಮಯಾಚಾರ, ನಿಜವ್ರತವು
ದುರಾಚಾರಿಗಳಿಗಳವಡದು,
ನಮ್ಮ ಕೂಡಲಸಂಗನ ಶರಣರಿಗಲ್ಲದೆ.
856
ಹಲಬರ ನುಂಗಿದ ಹಾವಿಂಗೆ ತಲೆ ಬಾಲವಿಲ್ಲ ನೋಡಾ;
ಕೊಲುವುದು ತ್ರೈಜಗವೆಲ್ಲವ, ತನಗೆ ಬೇರೆ ಪ್ರಳಯವಿಲ್ಲ.
ನಾಕಡಿಯನೈದೂದು, ಲೋಕದ ಕಡೆಯನೆ ಕಾಬುದು,
ಸೂಕ್ಷ್ಮಪಥದಲ್ಲಿ ನಡೆವುದು, ತನಗೆ ಬೇರೆ ಒಡಲಿಲ್ಲ.
ಅಹಮೆಂಬ ಗಾರುಡಿಗನ ನುಂಗಿತ್ತು
ಕೂಡಲಸಂಗನ ಶರಣರಲ್ಲದುಳಿದವರ.
857
ಆದಿತ್ಯ ಸೋಮರು ಆಗಿ ಹೋಗುತ್ತ ಇದ್ದಾರು.
ಬ್ರಹ್ಮ ಪ್ರಳಯಕ್ಕೊಳಗಾದ, ಹರಿಯ ಸಿಂಹಾಸನವಡಗಿತ್ತು.
ಆತೋ ನಾಸ್ತಿ, ಇತೋ ನಾಸ್ತಿ.
ರೋಮಜರೆಂಬವರು ಸಿಟ್ಟುಗುಟ್ಟಿ ತರುಮರನಡಿಯಲ್ಲಿದ್ದರು.
ಮಾರ್ಕಂಡೇಯಮಹಾಮುನಿ ಸ್ವೇಚ್ಛಾಮರಣಿ ಎನಿಸಿಕೊಂಡನಲ್ಲದೆ
ಲಿಂಗದ ನಿಜವನರಿಯನು.
ಇದು ಕಾರಣ ಕೂಡಲಸಂಗಮದೇವಾ,
ನೀವು ಮಾಡಿದ ಬಯಲು ಭಕ್ಷಿಸಿತ್ತು, ಅನಂತ ಹಿರಿಯರನು.
858
ಆದಿಯಲ್ಲಿ ಶಿವಬೀಜವಲ್ಲದವರಿಗೆ ವೇದ್ಯವಾಗದು ಶಿವಜ್ಞಾನ,
ಶಿವಭಕ್ತಿ,ಲಿಂಗಸ್ಥಲವಳವಡದು, ಜಂಗಮಸ್ಥಲವಳವಡದು,
ಪಾದೋದಕ ಪ್ರಸಾದಸ್ಥಲವಳವಡದು.
ನರಕದಲ್ಲಿ ಬೀಳುವ ಕರ್ಮಿಗಳಿಗೆ
ಕೂಡಲಸಂಗನ ಶರಣರ ಅನುಭಾವ ನೆಲೆಗೊಳ್ಳದು.
859
ಮರುಳ ಕಂಡ ಕನಸಿನ ಪರಿಯಂತೆ ಶಿವಾಚಾರ,
ಕರಿಯು ಕನ್ನಡಿಯೊಳಗಡಗಿದಂತಯ್ಯಾ !
ಗುಣಿ ಅವಗುಣಿಯೊಡನಾಡಿದಡೆ
ಅದೆ ಆತನ ಕರ್ಮದ ಫಲ ನೋಡಾ !
ಕೂಡಲಸಂಗನ ಶರಣರ ಅನುಭಾವ
ಭವದುಃಖಿಗಳಿಗೆ ವೇದ್ಯವಾಗದಯ್ಯಾ.
860
ಉಂಬ ಬಟ್ಟಲು ಬೇರೆ ಕಂಚಲ್ಲ, ನೋಡುವ ದರ್ಪಣ ಬೇರೆ ಕಂಚಲ್ಲ,
ಭಾಂಡ ಒಂದೆ ಭಾಜನ ಒಂದೆ, ಬೆಳಗೆ ಕನ್ನಡಿಯೆನಿಸಿತ್ತಯ್ಯಾ.
ಅರಿದಡೆ ಶರಣ, ಮರೆದಡೆ ಮಾನವ,
ಮರೆಯದೆ ಪೂಜಿಸು ಕೂಡಲಸಂಗನ.
861
 862
 863
 864
 865
ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು,
[ಜಂಗಮ]ನಿಷ್ಠೆ ತ್ಯಾಗದಲ್ಲಿ ಬೀಯವಾಯಿತ್ತು,
ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಗಿತ್ತು.
ಒಂದೊಂದರ ನಿಷ್ಠೆ ಅಂದಂದಿಗೆ ಬೀಯವಾಗಿತ್ತು,
ಕೂಡಲಸಂಗಮದೇವನ ಭಕ್ತಿ ತ್ರಿಜಗವನಾಳಿಗೊಂಡಿತ್ತು.
866
 867
 868
ಕುಲಮದವಳಿಯದನ್ನಕ್ಕ ಶರಣನಾಗಲೇಕೆ
ವಿಧಿವಶ ಬಿಡದನ್ನಕ್ಕ ಭಕ್ತನಾಗಲೇಕೆ
ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು
ಕಿಂಕಿಲ ಕಿಂಕಿಲ ಕಿಂಕಿಲನಾಗಿರಬೇಕು.
ಹೆಪ್ಪನೆರೆದ ಹಾಲು ಕೆಟ್ಟು ತುಪ್ಪವಪ್ಪಂತೆ ಇಪ್ಪರು
ಕೂಡಲಸಂಗಮದೇವಾ ನಿಮ್ಮ ಶರಣರು.
869
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು,
ಬೆಣ್ಣೆ ಕರಗಿ ತುಪ್ಪವಾಗಿ ಮರಳಿ ಬೆಣ್ಣೆಯಾಗದು ಕ್ರೀಯಳಿದು,
ಹೊನ್ನ ಕಬ್ಬುನವಾಗದು ಕ್ರೀಯಳಿದು,
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು,
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗ ಕ್ರೀಯಳಿದು.
870
 871
 872
 873
ಉಪಮಿಸಬಾರದ ಉಪಮಾತೀತರು,
ಕಾಲಕರ್ಮರಹಿತರು, ಭವವಿರಹಿತರು,
ಕೂಡಲಸಂಗಮದೇವಾ, ನಿಮ್ಮ ಶರಣರು.
874
ಭವಕ್ಕೆ ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ,
ಆಕಾರ ನಿರಾಕಾರನಲ್ಲ ನೋಡಯ್ಯಾ.
ಕಾಯವಂಚಕನಲ್ಲ, ಜೀವವಂಚಕನಲ್ಲ,
ಶಂಕೆಯಿಲ್ಲದ ಮಹಾಮಹಿಮ ನೋಡಯ್ಯಾ.
ಕೂಡಲಸಂಗನ ಶರಣನುಪಮಾತೀತ, ನೋಡಯ್ಯಾ.
875
ಬ್ರಹ್ಮಂಗೆ ವಾಕ್ಪರುಷ, ವಿಷ್ಣುವಿಂಗೆ ನಯನಪರುಷ,
ರುದ್ರಂಗೆ ಹಸ್ತಪರುಷ,
ನಮ್ಮ ಕೂಡಲಸಂಗನ ಶರಣಂಗೆ ಪಾದವೇ ಪರುಷ !
876
 877
ಆಚಾರಲಿಂಗವಿಡಿದು ಅನುಭಾವಲಿಂಗಸಿದ್ಧಿ,
ಅನುಭಾವಲಿಂಗವಿಡಿದು ಮಾರ್ಗಕ್ರೀಲಿಂಗಸಿದ್ಧಿ,
ಮಾರ್ಗಕ್ರೀಲಿಂಗವಿಡಿದು ಮೀರಿದಕ್ರೀಲಿಂಗಸಿದ್ಧಿ,
ಮೀರಿದ ಕ್ರೀಲಿಂಗವಿಡಿದು ಕ್ರಿಯಾನಿಷ್ಪತ್ತಿಲಿಂಗಸಿದ್ಧಿ,
ಇದು ಕಾರಣ, ಕೂಡಲಸಂಗಮದೇವಾ ಲಿಂಗವಿಡಿದು ಲಿಂಗಸಿದ್ಧಿ.
878
ನೆಲನೊಂದೆ:ಹೊಲಗೇರಿ ಶಿವಾಲಯಕ್ಕೆ,
ಜಲವೊಂದೆ:ಶೌಚಾಚಮನಕ್ಕೆ,
ಕುಲವೊಂದೆ:ತನ್ನ ತಾನರಿದವಂಗೆ,
ಫಲವೊಂದೆ:ಷಡುದರುಶನ ಮುಕ್ತಿಗೆ,
ನಿಲವೊಂದೆ:ಕೂಡಲಸಂಗಮದೇವಾ, ನಿಮ್ಮನರಿದವಂಗೆ.
879
 880
ಪರಮತತ್ವದ ನಿಜಸಂಯುಕ್ತರ,
ಆನು ನೀನೆಂಬ ಶಬ್ದಸುಖಿಗಳ ತೋರಾ ಎನಗೆ.
ಮಹಾನುಭಾವರ ತೋರಾ ಎನಗೆ.
ಲಿಂಗೈಕ್ಯರ, ಲಿಂಗಸುಖಿಗಳ, ಲಿಂಗಗೂಡಾಗಿಪ್ಪರ,
ಲಿಂಗಾಭಿಮಾನಿಗಳ ತೋರಾ ಎನಗೆ.
ಅಹೋರಾತ್ರಿ ನಿಮ್ಮ ಶರಣರ ಸೇವೆಯಲ್ಲಿರಿಸು
ಕೂಡಲಸಂಗಮದೇವಾ.
881
 882
 883
ಅರಿದುದ ಅರಿಯಲೊಲ್ಲದು, ಅದೆಂತಯ್ಯಾ !
ಮರೆದುದ ಮರೆಯಲೊಲ್ಲದು, ಅದೆಂತಯ್ಯಾ !
ಅರಿದು ಮರೆದ ಮನವ
ಕೂಡಲಸಂಗಯ್ಯ ಬಲ್ಲ.
884
ಮೀಸಲು ಬೀಸರವಾಗದ ಪರಿಯ ನೋಡಾ:
ಕಾಲು ತಾಗಿದ ಅಗ್ಘವಣಿ, ಕೈಮುಟ್ಟಿದ ಅರ್ಪಿತ,
ಮನಮುಟ್ಟಿದ ಆರೋಗಣೆಯನೆಂತು ಘನವೆಂಬೆನಯ್ಯಾ
ಬಂದ ಪರಿಯಲಿ ಪರಿಣಾಮಿಸಿ, ನಿಂದ ಪರಿಯಲಿ ನಿಜಮಾಡಿ,
ಆನೆಂದ ಪರಿಯಲಿ ಕೈಕೋ ಕೂಡಲಸಂಗಮದೇವಾ.
885
ಹಾಲೆಂಜಲು ಪೆ[ಯ್ಯ]ನ, ಉದಕವೆಂಜಲು ಮತ್ಸ್ಯದ,
ಪುಷ್ಪವೆಂಜಲು ತುಂಬಿಯ,
ಎಂತು ಪೂಜಿಸುವೆ ಶಿವಶಿವಾ, ಎಂತು ಪೂಜಿಸುವೆ
ಈ ಎಂಜಲನತಿಗಳೆವಡೆ ಎನ್ನಳವಲ್ಲ.
ಬಂದುದ ಕೈಕೋ ಕೂಡಲಸಂಗಮದೇವಾ.
886
ಶುದ್ಧವಾಯಿತ್ತೆಂಬೆನೆ ಸುಯಿಧಾನಿ ನಾನಲ್ಲ,
ಅನುವಾಯಿತ್ತೆಂಬೆನೆ ಅವಧಾನಿ ನಾನಲ್ಲ,
ಸುಯಿಧಾನ ಅವಧಾನ ಅರ್ಪಿತವ ನಾನರಿಯೆ.
ಇದ್ದ ಪರಿಯಲಿ ನೀಡಿದಡೆ, ಬಂದ ಪರಿಯಲಿ ಕೈಕೋ
ಕೂಡಲಸಂಗಮದೇವಾ.
887
ಪಾದಾರ್ಚನೆಯ ಮಾಡುವೆನಯ್ಯಾ, ಪಾದೋದಕದ ಹಂಗಿಗೆ.
ಶರಣಾರ್ಥಿಯೆಂಬೆನಯ್ಯಾ ಒಕ್ಕುದ ಕೊಂಬ ಹಂಗಿಗೆ.
ಎಡೆಯಾಟ ಕಡಬಡ್ಡಿಯ ಕೊಟ್ಟು ಕೆಟ್ಟಿತ್ತು ನೋಡಾ, ಭಕ್ತಿ.
ಕೂಡಲಸಂಗನ ಶರಣರ ನಿಲವನರಿಯದೆ,
ಮುಯ್ಯಿಗೆ ಮುಯ್ಯಾಗಿ ಕೆಟ್ಟಿತ್ತಯ್ಯಾ ಎನ್ನ ಭಕ್ತಿ.
888
 889
 890
 891
ಎಂಬತ್ತೆಂಟು ಪವಾಡವ ಮೆರೆದು
ಹಗರಣದ ಚೋಹದಂತಾಯಿತೆನ್ನ ಭಕ್ತಿ.
ತನುವಿನೊಳಗೆ ಮನ ಸಿಲುಕದೆ
ಮನದೊಳಗೆ ತನು ಸಿಲುಕದೆ
ತನು ಅಲ್ಲಮನಲ್ಲಿ ಸಿಲುಕಿತ್ತು,
ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು.
ನಾನೇತರಲ್ಲಿ ನೆನೆವೆನಯ್ಯಾ, ಕೂಡಲಸಂಗಮದೇವಾ.
892
ಭಕ್ತನೆನಿಸುವೆನಯ್ಯಾ ಮೆಲ್ಲಮೆಲ್ಲನೆ,
ಯುಕ್ತನೆನಿಸುವೆನಯ್ಯಾ ಮೆಲ್ಲಮೆಲ್ಲನೆ,
ಸಾರಿ ಶರಣನೆನಿಸುವೆನಯ್ಯಾ ಮೆಲ್ಲಮೆಲ್ಲನೆ,
ಎಡಹುಗುಳಿಗಳ ದಾಂಟಿ ಬರಬರ ಲಿಂಗೈಕ್ಯನೆನಿಸುವೆನಯ್ಯಾ.
ಕೂಡಲಸಂಗಮದೇವಾ, ನಿಮ್ಮಿಂದಧಿಕನೆನಿಸುವೆನಯ್ಯಾ.
893
 894
ಪರಮಪ್ರಭುವೇ, ನೀ ಮುನಿದೆನ್ನ ಮತ್ರ್ಯಲೋಕದೊಳಗಿರಿಸಿದಡೆ
ಆನು ಸೈರಿಸಿದೆನಯ್ಯಾ,
ಕುಲಮದ ಛಲಮದವಿದೇನಯ್ಯಾ
ದರುಶನಭ್ರಾಂತಿಯಿದೇನಯ್ಯಾ !
ಕ್ರಿಯಾಕರ್ಮಸೂತಕವಿದೇನಯ್ಯಾ
ಯದ್ಯಪಿ ಸ್ಯಾತ್ ತ್ರಿಕಾಲಜ್ಞಃ ತ್ರೈಲೋಕ್ಯಾಕರ್ಷಣಕ್ಷಮಃ
ತಥಾಪಿ ಲೌಕಿಕಾಚಾರಂ ಮನಸಾಪಿ ನ ಲಂಘಯೇತ್
ಇಂತೆಂಬುದ ಮೀರಿದೆನಾಗಿ, ಲಿಂಗಯ್ಯಾ ನಿಮ್ಮ ನಂಬಿದೆನಯ್ಯಾ.
ಇನ್ನು ಕಲಿಯುಗದಲ್ಲಿ ಬಳಸಿದಡೆ
ಕೂಡಲಸಂಗಮದೇವಾ, ನಿಮ್ಮ ರಾಣಿವಾಸದಾಣೆ.
895
ತನುಮನಧನವೆಂಬ ಕನ್ನಡಿ ನೋಡಿಯ್ಯಾ,
ಎನ್ನದೂ ಅಲ್ಲ, ನಿನ್ನದೂ ಅಲ್ಲ, ಬರಿಯ ಭ್ರಮೆಯ ಮಾತು.
ಆ ಭ್ರಮೆಗೊಳಗಾಗೆ, ನಿಮ್ಮ ಶ್ರೀಚರಣವ ಬಿಡೆ,
ಕೂಡಲಸಂಗಮದೇವಾ.
896
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣನೈಕ್ಯನು
ಮೆಲ್ಲ ಮೆಲ್ಲನೆ ಆದೆಹೆನೆಂಬನ್ನಬರ ನಾನು ವಜ್ರದೇಹಿಯೆ
ನಾನೇನು ಅಮೃತವ ಸೇವಿಸಿದೆನೆ
ಆನು ಮರುಜವಣಿಯ ಕೊಂಡೆನೆ
ನುಡಿದ ನುಡಿಯೊಳಗೆ ಷಡುಸ್ಥಲ ಬಂದು
ಎನ್ನ ಮನವನಿಂಬುಗೊಳ್ಳದಿದ್ದಡೆ,
ಸುಡುವೆನೀ ತನುವ ಕೂಡಲಸಂಗಮದೇವಾ.
897
ಕುಲಗೆಟ್ಟಡೆ ಕೆಡಬಹುದಲ್ಲದೆ ಛಲಗೆಡಬಾರದು,
ಛಲಗೆಟ್ಟಡೆ ಕೆಡಬಹುದಲ್ಲದೆ ಭಕ್ತಿಯ ಅನು ಕೆಡಬಾರದು,
ಭಕ್ತಿಯ ಅನು ಕೆಟ್ಟಡೆ ಕೆಡಬಹುದಲ್ಲದೆ ಆಯತ ಕೆಡಬಾರದಯ್ಯಾ,
ಆಯತ ಕೆಟ್ಟಡೆ ಕೆಡಬಹುದಲ್ಲದೆ ಸ್ವಾಯತ ಕೆಡಬಾರದಯ್ಯಾ.
ಎಲೆ ಕೂಡಲಸಂಗಮದೇವಯ್ಯಾ, ಮುನ್ನ ಮುಟ್ಟಿತ್ತೆ ಮುಟ್ಟಿತ್ತು,
ಇನ್ನು ಮುಟ್ಟಿದೆನಾದಡೆ ನಿಮ್ಮ ರಾಣಿವಾಸದಾಣೆ.
898
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ
ನಿಮ್ಮ ಮುಟ್ಟಲರಿಯದರ ಕಂಡಡೆ, ಅಯ್ಯ ಎಂತೆಂಬೆನವರ
ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ
ಅರಿವವರದಾರಯ್ಯಾ ಏನೆಂಬೆ
ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು,
ಕೂಡಲಸಂಗಮದೇವಾ, ಅವರನಯ್ಯ ಎಂಬೆನು.
899
ಮರನ ಹೂವ ಕೊಯಿದು ಮರಕ್ಕೇರಿಸಿ,
ನದಿಯುದಕವ ನದಿಗರ್ಪಿತವ ಮಾಡಿ,
ಕರುವನಗಲಿಸಿ, ತಾಯ ಮರುಗಿಸಿ
ಮೊಲೆವಾಲ ಕರೆದುಣಬೇಡವೋ !
ಕೂಡಲಸಂಗಮದೇವ ಮಾಡಿದ ಮಾಯೆ,
ಹಲಬರ ಬಾಯ ಟೊಣೆದೇ ಹೋಯಿತ್ತು.
900
 901
ಈ ಲೋಕದ ಭೀತರು, ಆ ಲೋಕದ ಕಲಿಗಳು,
ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯರೆಲ್ಲರು
ಅಜನಿತಂಗೆ ಸರಿಯೆ
ಮೂಜಗದಲ್ಲಿ ನಿ[ರು]ತರು ಕೂಡಲಸಂಗನ ಶರಣರು
ತ್ರಿವಿಧವನರಿಯರು.
902
 903
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ.
ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ ಬಲ್ಲಿದನು, ಕಂಡಯ್ಯಾ.
ಕರಿಯು ಕನ್ನಡಿಯೊಳಗಡಗಿದಂತಯ್ಯಾ,
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ.
904
 905
ಶುದ್ಧಾತ್ಮ ಪರಮಾತ್ಮರಿಬ್ಬರೂ
ಒಂದು ರತ್ನಕ್ಕೆ ಹೆಣಗಾಟವನಾಡಿಹರು.
ಅವರ ಹೆಣಗಾಟವ ನೋಡಿ ಆ ರತ್ನವ ಸೆಳೆದುಕೊಂಡಡೆ
ಕೂಡಲಸಂಗಮದೇವಂಗಾರೋಗಣೆಯಾಯಿತ್ತು.
906
 907
ಎಲ್ಲರ ಗಂಡರು ಬೇಂಟೆಯ ಹೋದರು,
ನೀನೇಕೆ ಹೋಗೆ, ಎಲೆ ಗಂಡನೆ
ಸತ್ತುದ ತಾರದಿರು, ಕೈ ಮುಟ್ಟಿ ಕೊಲ್ಲದಿರು.
ಅಡಗಿಲ್ಲದ ಮನೆಗೆ ಬಾರದಿರು.
ದೇವರ ಧರ್ಮದಲೊಂದು ಬೇಂಟೆ ದೊರೆಕೊಂಡಡೆ
ಕೂಡಲಸಂಗಮದೇವಂಗರ್ಪಿತ ಮಾಡುವೆ, ಎಲೆ ಗಂಡನೆ.
908
ಕಣ್ಣೊಳಗೆ ಕಣ್ಣಿದ್ದು ಕಾಣಲೇಕರಿಯರಯ್ಯಾ
ಕಿವಿಯೊಳಗೆ ಕಿವಿಯಿದ್ದು ಕೇಳಲೇಕರಿಯರಯ್ಯಾ
ಘ್ರಾಣದೊಳಗೆ ಘ್ರಾಣವಿದ್ದು ವಾಸಿಸಲೇಕರಿಯರಯ್ಯಾ
ಜಿಹ್ವೆಯೊಳಗೆ ಜಿಹ್ವೆಯಿದ್ದು ರುಚಿಸಲೇಕರಿಯರಯ್ಯಾ
ಸ್ಪರ್ಶನದೊಳಗೆ ಸ್ಪರ್ಶನವಿದ್ದು ಮುಟ್ಟಲೇಕರಿಯರಯ್ಯಾ
ಪ್ರಾಣದೊಳಗೆ ಪ್ರಾಣವಿದ್ದು ನೆನೆಯಲೇಕರಿಯರಯ್ಯಾ
ಕಾಯದೊಳಗೆ ಕಾಯವಿದ್ದು ಬಿಡದು, ಬೇರಾಗದು.
ಕೂಡಲಸಂಗಮದೇವಾ,
ನೀನಿಕ್ಕಿದ ಅಣಕದ ಭೇದವ ಭೇದಿಸಬಾರದಯ್ಯಾ.
909
 910
 911
 912
ಅಳಿಯನ ಕಂಡಡೆ ನಾಚೆಂಬೆ ಮಗಳೆ,
ಅಳಿಯನ ಕಂಡಡೆ ತೊಲಗೆಂಬೆ ಮಗಳೆ,
ನಾಚುವಡೆ ಮೊರೆಯಿಲ್ಲ, ತೊಲಗುವಡೆ ನೆಲನಿಲ್ಲ.
ಇಬ್ಬರಿಗೊಬ್ಬ ಗಂಡನಾದ ಬಳಿಕ
ಇನ್ನೆಲ್ಲಿಯ ಮೊರೆ ಮಗಳೆ
ಕೂಡಲಸಂಗಮದೇವಯ್ಯನೆಂಬ ಗಂಡನಾದ ಬಳಿಕ
ಇನ್ನೆಲ್ಲಿಯ ಮೊರೆ ಮಗಳೆ.
913
 914
ಸಿನೆ ಬಂಜೆಯರಿಬ್ಬರಿಗೊಬ್ಬ ಮಗ ಹುಟ್ಟಿ, ಅವನೆನ್ನ ರಿಣಕ್ಕೊಡೆಯನಾದ, 
ಅವನೆನ್ನ ಧನಕ್ಕೊಡೆಯನಾದ, ಆನು ಗಳಿಸಿದ ಒಮ್ಮನಕ್ಕೆ ಅಗಲದೆ ಮೋಹಿತನಾದ. 
ಕೂಡಲಸಂಗಮದೇವನಂತಪ್ಪ ಮಗ ಹುಟ್ಟಿದಡೆ, 
ಇದ್ದನಯ್ಯಾ ಕಾಯ ಮಾತೆಯಾಗಿ, ಜೀವ ಪಿತನಾಗಿ ನಾನಿರಿಸಿದಂತೆ.
915
ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ,
ಮಾಟವುಳ್ಳನ್ನಬರ ಜಂಗಮವ ಹಾಡಿದೆ,
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ.
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ,
ಕೂಡಲಸಂಗಮದೇವಾ.
916
 917
ಮರುಳುತಲೆ ಹುರುಳುತಲೆ ನೀನೆ ದೇವಾ,
ಹೆಂಗೂಸು ಗಂಡುಗೂಸು ನೀನೇ ದೇವಾ,
ಎಮ್ಮಕ್ಕನ ಗಂಡ ನೀನೇ ದೇವಾ.
ಕೂಡಲಸಂಗಮದೇವಾ,
ಭ್ರಾಂತಳಿದು ಭಾವನಿಂದುದಾಗಿ.
918
 919
 920
ಉಮಾಧಿನಾಥರು ಕೋಟಿ, ಪಂಚವಕ್ತ್ರರು ಕೋಟಿ,
ನಂದಿವಾಹನರೊಂದು ಕೋಟಿ ನೋಡಯ್ಯಾ.
ಸದಾಶಿವರು ಕೋಟಿ, ಗಂಗೆವಾಳುಕ ಸಮರುದ್ರರಿವರೆಲ್ಲರು
ಕೂಡಲಸಂಗನ ಸಾನ್ನಿಧ್ಯರಲ್ಲದೆ
ಸಮರಸವೇದ್ಯರೊಬ್ಬರೂ ಇಲ್ಲ.
921
 922
 923
 924
ಮಾತಿಲ್ಲ ನುಡಿಯಿಲ್ಲ, ಏತಕ್ಕೆ ಮುನಿದಿರಿ
ಮಾತಾಡಿದಡೆ ಕೆಯ್ಯ ಬೆಳಸೆಂಬುದನರಿಯಿರೆ ಅಯ್ಯಾ
ಮಾತು ಕೆಟ್ಟಲ್ಲದೆ ತಾನಾಗಬಾರದು.
ಕೂಡಲಸಂಗಮದೇವಯ್ಯಾ
ಮಾತಿಂದ ಬರ್ಕು ಭವಭಾರಘೋರ.
925
ಏನನಾದಡೆಯೂ ಸಾಧಿಸಬಹುದು,
ಮತ್ತೇನನಾದಡೆಯೂ ಸಾಧಿಸಬಹುದಯ್ಯಾ
ತಾನಾರೆಂಬುದ ಸಾಧಿಸಬಾರದು,
ಕೂಡಲಸಂಗಮದೇವರ ಕರುಣವುಳ್ಳವಂಗಲ್ಲದೆ.
926
 927
 928
 929
ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ
ಲಿಂಗವ ಪೂಜಿಸಿ ಫಲವೇನಯ್ಯಾ,
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ.
930
ಒಲೆಯಡಿಯನುರುಹಿದಡೆ
ಗೋಳಕನಾಥನ ಕೊರಳ ಸುತ್ತಿತ್ತು,
ಮಹೀತಳನ ಜಡೆ ಸೀಯಿತ್ತು, ಮರೀಚಿಕನ ಶಿರ ಬೆಂದಿತ್ತು,
ರುದ್ರನ ಹಾವುಗೆ ಉರಿಯಿತ್ತು, ದೇವಗಣಂಗಳು ನಿವಾಟವಾದರು,
ಮಡದಿಯರೈವರು ಮುಡಿಯ ಹಿಡಿದುಕೊಂಡು ಹೋದರು,
ಕೂಡಲಸಂಗಮದೇವ ಭಸ್ಮಧಾರಿಯಾದ.
931
ಆ ಭಸ್ಮತಾಗಿ ಬ್ರಹ್ಮ ತನ್ನ ಕಪಾಲವಿಡಿದನು.
ಗಣನಾಥನ ಐವತ್ತೆರಡು ಸರ ಹರಿದು ಬಿದ್ದವು.
ಆ ಭಸ್ಮತಾಗಿ ಅಂಡಜಮುಗ್ಧೆಯ ಮೂರು ಮೊಲೆ ಹರಿದು ಬಿದ್ದವು.
ನಾದಪ್ರಿಯ ನಂದಿಯನೇರಿಕೊಂಡು
ಅತೀತನ ಮೇಲೆ ಆನಂದಸಿಂಹಾಸನವನಿಕ್ಕಿ ಕುಳ್ಳಿತ್ತ,
ಕೂಡಲಸಂಗಮದೇವರ ದೇವತ್ವ ಕೆಟ್ಟಿತ್ತು.
932
 933
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು.
`ಸಂಬೋಳಿ ಸಂಬೋಳಿ ಎನುತ್ತ ಇಂಬಿನಲ್ಲಿ ಇದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು.
934
ಶಿವಶಿವಾ ಮೂರ್ತಿಗೆ ಸತ್ಯಶುದ್ಧ ಉಂಟೆಂಬಿರಿ.
ಸತ್ಯ[ಶುದ್ಧ]ವುಳ್ಳವಂಗೆ ಗುರುವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಲಿಂಗವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಜಂಗಮವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಪ್ರಸಾದವಿಲ್ಲ,
ಸತ್ಯ[ಶುದ್ಧ]ವುಳ್ಳವಂಗೆ ಗಣತ್ವವಿಲ್ಲ ಕೇಳಿರೆ.
ಸತ್ಯಶುದ್ಧ ದೇವರಿಗೆ ಉಪಚಾರವುಂಟು,
ಸತ್ಯಶುದ್ಧ ದೇವರಿಗೆ ಧ್ಯಾನಮೌನ ಅನುಷಾ*ನವುಂಟು,
ಸತ್ಯಶುದ್ಧ ಉಪದೇಶಕ್ಕೆ ಜಪ ತಪ ಸಂಜೆ ಸಮಾಧಿ
ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರವುಂಟು.
ಸತ್ಯಶುದ್ಧ ದೇವರಿಗೆ ಉಪಚಾರವುಂಟಾದ ಕಾರಣ
ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಜಂಗಮಕ್ಕೆ ಶರಣೆನ್ನೆ,
ಇಂತಪ್ಪ ಸತ್ಯಶುದ್ಧ ಪ್ರಸಾದಕ್ಕೆ ಕೈಯಾನೆ.
ಇವರೆಲ್ಲರು ಬ್ರಹ್ಮನ ಮಕ್ಕಳು.
ಎನಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.
ಆವ ಸಹಜವೂ ಇಲ್ಲದ ಲಿಂಗೈಕ್ಯ ಕಾಣಾ
ಕೂಡಲಸಂಗಮದೇವಾ.
935
ಭಕ್ತನಾಯಿತ್ತೆ ಭಕ್ತಿದಾಸೋಹ, ಯುಕ್ತನಾಯಿತ್ತೆ ಯುಕ್ತಿದಾಸೋಹ,
ಐಕ್ಯನಾಯಿತ್ತೆ ಮಮಕಾರ ದಾಸೋಹ,
ಸರ್ವದಲೆ ದಾಸೋಹವೇ ಬೇಕು.
ಈ ದಾಸೋಹದ ಅನುವ ಕೂಡಲಸಂಗಯ್ಯ ತಾನೆ ಬಲ್ಲ.
936
ಜಲವ ನುಂಗಿತ್ತಯ್ಯಾ ಎನ್ನ ಕರವು,
ಪತ್ರೆಯ ನುಂಗಿತ್ತಯ್ಯಾ ಎನ್ನ ಶಿಖೆ,
ಎನ್ನಯ ಮಂತ್ರ ಬ್ಥಿನ್ನವಾಯಿತ್ತು.
ಇಂತೀ ದ್ವಿವಿಧ ಒಂದಾಗದ ಮುನ್ನ
ಕೂಡಲಸಂಗಮದೇವರು ಪೂಜೆಗೊಂಡರು.
937
ಎಲ್ಲವ ಬೇಡಿದರೆಮ್ಮವರು, ಒಂದ ಬೇಡ ಮರೆದರಯ್ಯಾ,
ಮತ್ರ್ಯಲೋಕದ ಗಣಂಗಳು ಒಂದ ಬೇಡ ಮರೆದರು.
ಕೂಡಲಸಂಗಮದೇವಾ, ಎನ್ನ ಬೇಡ ಮರೆದರು.
938
 939
 940
 941
ದಶದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯಾ,
`ಲಿಂಗಮಧ್ಯೇ ಜಗತ್ ಸರ್ವಂ' ಎಂಬುದ ನಾನರಿಯೆನಯ್ಯಾ,
ಲಿಂಗಸೋಂಕಿನ ಸುಖದೊಳಗೆ.
ಕೂಡಲಸಂಗಮದೇವಯ್ಯಾ, ಅಂಬುಧಿಯೊಳಗೆ ಬಿದ್ದಾಲಿಕಲ್ಲಿನಂತೆ
ಭಿನ್ನಭಾವವನರಿಯದೆ `ಶಿವಶಿವಾ' ಎನುತ್ತಿದ್ದೆ ನಾನು.
942
ಮಿಥ್ಯವನಳಿದುಳಿದ ಸತ್ಯಪ್ರಸಾದಿ,
ರಂಜನವಿಲ್ಲದ ನಿರಂಜನ ಪ್ರಸಾದಿ,
ದುಃಖವನಳಿದ ಘನಾನಂದಪ್ರಸಾದಿ,
ಅನಿತ್ಯವಿಲ್ಲದ ನಿತ್ಯಪ್ರಸಾದಿ,
ಖಂಡಿತವಿಲ್ಲದ ಅಖಂಡಿತಪ್ರಸಾದಿ,
ಕೂಡಲಸಂಗಮದೇವರಲ್ಲಿ ತಾನೆ ಪ್ರಸಾದಿ.
943
 944
ಬೆಳಗಿನೊಳಗಣ ಬೆಳಗು ಮಹಾಬೆಳಗೆಂಬ
ಪ್ರಸಾದದಲ್ಲಿ ಒದಗಿದ ಪ್ರಸಾದಿಯ ಪರಿಣಾಮದ
ಪರಮಾನಂದವನೇನೆಂದುಪಮಿಸುವೆನಯ್ಯಾ
ಪರಮಾಶ್ರಯವೇ ತಾನಾಗಿ, ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನೆಂಬ ಮಹಾಪ್ರಸಾದಿ
ಎನ್ನ ವಾಙ್ಮನಕ್ಕಗೋಚರನಾ[ಗೆ], ನಾನೇನೆಂಬೆನಯ್ಯಾ.
945
ಆಯತವೆಂಬುದು ಭಂಗ, ಸ್ವಾಯತವೆಂಬುದು ಭವ.
ಆಯತವರಿಯೆ, ಸ್ವಾಯತವರಿಯೆ,
ಭಾವದಲ್ಲಿ ವ್ರತಗೆಟ್ಟುದಾಗಿ.
ಆ ಭಾವದಲ್ಲಿ ಜೀವಸಂಹಾರಿ,
ಕೂಡಲಸಂಗಮದೇವ ಸರ್ವನಿವಾಸಿಯಾಗಿ.
946
ಸ್ವಯಲಿಂಗದನುಭಾವ ತನಗೆ ದೊರೆಕೊಂಡ ಬಳಿಕ
ದೇವಲೋಕವೆಂಬುದೇನೋ
ಮತ್ರ್ಯಲೋಕವೆಂಬುದೇನೋ ಆವುದರಲ್ಲಿಯೂ ಭೇದವೇನಯ್ಯಾ,
ಕೂಡಲಸಂಗಮದೇವನೊಲಿದ ಬಳಿಕ ಆಲಸ್ಯವುಂಟೆ.
947
ಏನೆಂಬೆ, ಏನೆಂಬೆ ಒಂದೆರಡಾದುದ
ಏನೆಂಬೆ, ಏನೆಂಬೆ ಎರಡೊಂದಾದುದ
ಏನೆಂಬೆ, ಏನೆಂಬೆ ಅವಿರಳ ಘನವ
ಮಹಾದಾನಿ ಕೂಡಲಸಂಗಮದೇವಯ್ಯ ತಾನೆ ಬಲ್ಲ.
948
 949
ಭೂ ತೋಯ ಪಾವಕ ಸಮೀರಣ ಅಂಬರಾದಿಗಳೆಲ್ಲ
ಆದಿಯಾಧಾರದ ಪರಮಾತ್ಮಲಿಂಗದಲ್ಲಿ !
ಆದಿ ಮಧ್ಯ ಅವಸಾನವನರಿಯದ
ಅಗಮ್ಯ ವೇದಾದಿಸಕಲಶಾಸ್ತ್ರಪ್ರಮಾಣರು
ಅದನಂತಿಂತೆಂದುಪಮಿಸಲಿಲ್ಲ,
ಮಹಾಂತ ಕೂಡಲಸಂಗಮದೇವಾ.
950
ಮಹಾಲಿಂಗದ ಸ್ಥಾನಂಗಳು ಮಹಾಲಿಂಗದ ಹೆಸರಲ್ಲದೆ,
ಲಿಂಗ ಬೇರೆ ರೂಪುನಿರೂಪನಲ್ಲ,
ಲಿಂಗ ಬೇರೆ ಕಾಯಸಂಬಂಧಿಯಲ್ಲ,
ಲಿಂಗ ಬೇರೆ ಮಹಾಘನದಿಂದತ್ತತ್ತಲೆ.
ಕೂಡಲಸಂಗಮದೇವರ ನಿಲವು ಆರಿಗೆಯೂ ಅಳವಡದು.
951
 952
 953
 954
 955
ಸಹಸ್ರಶೀರ್ಷನಾದಿಪುರುಷನು. 
ವೇದಪುರುಷನೊಬ್ಬ ಪುರುಷನು. 
ತ್ರಿಪಾದ ಊಧ್ರ್ವನೊಬ್ಬ ಪುರುಷನು. 
ಉದನ್ಮುಖನೊಬ್ಬ ಪುರುಷನು. 
ಉದಯಪುರುಷನೊಬ್ಬ ಪುರುಷನು. 
ವಿರಾಟ್ಪುರುಷನೊಬ್ಬ ಪುರುಷನು. 
ಆದಿಪುರುಷನೊಬ್ಬ ಪುರುಷನು. 
ವಿಯತ್ಪುರುಷನೊಬ್ಬ ಪುರುಷನು. 
ತದ್ವಿಯತ್ಪುರುಷ ಪುರುಷರಿಲ್ಲದ ಪ್ರಭೆ ನೋಡಿದರೆ, 
ವೇದನಾದಾತೀತ ತೂರ್ಯಪರಮಾನಂದ ನಿರವಯ 
ಷಟ್‍ತ್ರಿಂಶತ್‍ಪ್ರಭಾಪಟಲಪ್ರಭೆಯ ಬೆಳಗಿದೆ ನೋಡಿರೆ. 
ಬೆಳಗಿನೊಳಗಣ ಮಹಾಬೆಳಗಿನ ಬೆಳಗು ಕೂಡಲಸಂಗಯ್ಯ.
956
ಅಷ್ಟತನುಮೂರ್ತಿ ಲಿಂಗವೆಂದೆಂಬರು ಕೇಳಿರಯ್ಯಾ:
ಆದಿಯ ಮಗ ಅತೀತ, ಅತೀತನ ಮಗ ಆಕಾಶ,
ಆಕಾಶನ ಮಗ ವಾಯು, ವಾಯುವಿನ ಮಗ ಅಗ್ನಿ,
ಅಗ್ನಿಯ ಮಗ ಅಪ್ಪು, ಅಪ್ಪುವಿನ ಮಗ ಪೃಥ್ವಿ,
ಪೃಥ್ವಿಯಿಂದ ಸಕಲ ಜನನವು.
ಮನಸಿನ ಮಗ ಚಂದ್ರ, ನಯನದ ಮಗ ಸೂರ್ಯ,
ದೇಹದ ಮಗನಾತ್ಮ,
ಇಂತೀ ಅಷ್ಟತನುವೆಲ್ಲಕ್ಕೆಯು ಉತ್ಪತ್ಯವುಂಟು.
ಉತ್ಪತ್ಯರಹಿತ ಅಯೋನಿಜ ಶೂನ್ಯನಿರಾಳ
ನಮ್ಮ ಕೂಡಲಸಂಗಮದೇವಂಗೆ ಮಾತಾಪಿತರಿಲ್ಲ.
957
 958
ಸಮಸ್ತ ಕತ್ತಲೆಯ ಮಸಕವ ಕಳೆದಿಪ್ಪ ಇರವ ನೋಡಾ !
ಬೆಳಗಿಗೆ ಬೆಳಗು ಸಿಂಹಾಸನವಾಗಿ,
ಬೆಳಗು ಬೆಳಗ ಕೂಡಿದ ಕೂಟವ
ಕೂಡಲಸಂಗಯ್ಯ ತಾನೆ ಬಲ್ಲ !
959
ಅಂತರಂಗ ಬಹಿರಂಗ ಆತ್ಮಸಂಗ ಒಂದೆ ಅಯ್ಯಾ !
ನಾದಬಿಂದುಕಳಾತೀತ, ಆದಿಯಾಧಾರ ನೀನೆ ಅಯ್ಯಾ !
ಆರೂಢದ ಕೂಟದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ !
960
ಅಂಗದ ಮೇಲೆ ಲಿಂಗ ಆಯತವಾಗಿ
ಲಿಂಗಾರ್ಚನೆಯ ಮಾಡಿದಡೆ ಭವ ಹಿಂಗದೆಂದು,
ಪ್ರಾಣದ ಮೇಲೆ ಲಿಂಗ[ಸ್ವಾ]ಯತವ ಮಾಡಿ
ಎನ್ನಂತರಂಗ ಶುದ್ಧವ ಮಾಡಿ
ಲಿಂಗೈಕ್ಯದ ಹೊಲಬ ತೋರಿದನಯ್ಯಾ, ಚೆನ್ನಬಸವಣ್ಣನು. ಕಾಯದ
ಕಳವಳವು
ದಾಸೋಹದ ಮುಖದಲ್ಲಿ ಅಲ್ಲದೆ ಹರಿಯದೆಂದು
ಜಂಗಮಮುಖಲಿಂಗವಾಗಿ ಬಂದು
ಎನ್ನ ಶಿಕ್ಷಿಸಿ ರಕ್ಷಿಸಿ
ಎನ್ನ ಸಂಸಾರದ ಪ್ರಕೃತಿಯ ಹರಿದನಯ್ಯಾ, ಪ್ರಭುದೇವರು.
ಕೂಡಲಸಂಗಮದೇವರಲ್ಲಿ
ಪ್ರಭುದೇವರ ಚೆನ್ನಬಸವಣ್ಣನ
ಕರುಣದಿಂದಲಾನು ಬದುಕಿದೆನು.
961
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಸ್ಥಾವರದೈವಕ್ಕೆರಗಲಾಗದು.
ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ ರಿ
ಕರಸ್ಥಲದ ದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ಕೂಡಲಸಂಗಮದೇವ.
962
 963
ಅಂಗದಲ್ಲಿ ಅರ್ಪಿತವಾದ ಸುಖವು
ಲಿಂಗದಲ್ಲಿ ಲೀಯವಾಯಿತ್ತೆಂದಡೆ
ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ
ಕಾರಣವೇಕಯ್ಯಾ ಶರಣಂಗೆ
ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ
ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ
ಕೂಡಲಸಂಗಮದೇವಾ,
ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ
ಹೇಳಯ್ಯಾ ನಿಮ್ಮ ಧರ್ಮ.
964
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ,
ಸಂದು ಭೇದವಳಿವ ಪರಿ ಎಂತು ಹೇಳಾ
ಅಂಗದಲ್ಲಿ ಸಂಗವ ಮಾಡಿಹೆನೆಂದಡೆ,
ಮುಂದುಗೆಡಿಸಿ ಕಾಡುವನು ಶಿವನು.
ಕಾಮವೆಂಬ ಬಯಕೆಯಲ್ಲಿ
ಅಳಲಿಸುವ ಬಳಲಿಸುವ ಶಿವನು.
ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ,
ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು.
ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು.
ಕೂಡಲಸಂಗಮದೇವರ ಬೆರಸುವಡೆ,
ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.
965
ಅಂಗಲಿಂಗಸಂಗಸುಖಸಾರಾಯದನುಭಾವ
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ.
ಏಕಲಿಂಗಪರಿಗ್ರಾಹಕನಾದ ಬಳಿಕ,
ಆ ಲಿಂಗನಿಷೆ* ಗಟ್ಟಿಗೊಂಡು,
ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,
ವೀರಶೈವಸಂಪನ್ನನೆನಿಸಿ ಲಿಂಗವಂತನಾದ ಬಳಿಕ
ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷೆ*ಯನುಳ್ಳ
ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ
ಆತನೀಗ ಏಕಲಿಂಗನಿಷಾ*ಚಾರಯುಕ್ತನಾದ
ವೀರಮಾಹೇಶ್ವರನು.
ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ
ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ
ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ,
ಕೂಡಲಸಂಗಮದೇವಾ.
966
ಅಂಗವಿಕಾರವಳಿದು ಸತಿಯ ಸಂಗವರಿಯ ನೋಡಾ,
ದೇಹಗುಣಂಗಳಿಲ್ಲಾಗಿ ನಿರ್ದೇಹಪ್ರಸಾದಿ ನೋಡಯ್ಯಾ,
ಅಶನವ್ಯಸನಾದಿಗಳೆಲ್ಲವು ಬೆಂದವು ನೋಡಯ್ಯಾ.
ಈ ಎಲ್ಲ ಗುಣಂಗಳಳಿದು ಕೂಡಲಸಂಗಮದೇವರಲ್ಲಿ
ಸಾವಧಾನಿ ಪ್ರಸಾದಿ ಚೆನ್ನಬಸವಣ್ಣನು.
967
ಅಂಗುಲ ಹನ್ನೆರಡು ಕೂಡಲು ಒಂದು ಗೇಣು,
ಗೇಣು ಎರಡು ಕೂಡಲು ಒಂದು ಮೊಳ,
ಮೊಳವೆರಡು ಕೂಡಲು ಒಂದು ಹಸ್ತ,
ಹಸ್ತವೆರಡು ಕೂಡಲು ಒಂದು ಮಾರು,
ಮಾರೆರಡು ಕೂಡಲು ಒಂದು ಜಂಘೆ,
ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ,
ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ,
ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ,
ಹರದಾರಿ ನಾಲ್ಕು ಕೂಡಲು ಒಂದು ಯೋಜನ,
ಅಂಥ ಯೋಜನ ನಾಲ್ಕು ಚೌಕಕ್ಕು ಹನ್ನೆರಡು ಹನ್ನೆರಡು ಕೂಡಲು
ಬಳಸಿ ನಾಲ್ವತ್ತೆಂಟು ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು.
ಇಂತಪ್ಪ ಕಟ್ಟಳೆಯಾಗಿದ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ
ಕೂಡಲಸಂಗಯ್ಯಾ
ನಿಮ್ಮೊಳು ಕಂಡು ಸುಖಿಯಾಗಿರ್ದೆನು.
968
ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ,
ಆಳಿನಾಳು ಕೀಳಾಳು ಬಹರೆ
ಹೋಗದಿರು, ಹೋಗದಿರು, ಕೂಡಲಸಂಗಮದೇವಾ.
969
ಅಂಜದಿರು ಅಳುಕದಿರು,
ಅಂಜದಿರು ಅಳುಕದಿರು, ಕುಂದದಿರು ಕುಸಿಯದಿರು.
ಏನೊ ಎಂತೊ ಎಂದು ಚಿಂತಿಸದಿರು,
ನಿನ್ನ ನಾನೇನುವನೂ ಬೇಡೆ, ಕೂಡಲಸಂಗಮದೇವಾ.
970
ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ.
971
ಅಂದಾ ತ್ರಿಪುರವನುರುಹಿದಾತ ವೀರ,
ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ,
ಕಡುಗಲಿ ನರಸಿಂಹನನುಗಿದಾತ ವೀರ,
ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ,
ನಮ್ಮ ಕೂಡಲಸಂಗನಲ್ಲಿ ಮಡಿವಾಳ ವೀರ.
972
ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ,
ವೀರರ ನಿಗ್ರಹಿಸಿ ನೀರು ಮಾಡಿ, ದ್ಥೀರರ ಧೃತಿಗೆಡಿಸಿ,
ಶಾಪಾನುಗ್ರಹಸಮರ್ಥರ ಸತ್ತಂತಿರಿಸಿ,
ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಾ,
ಕೂಡಲಸಂಗಮದೇವಾ.
973
ಅಗ್ಫವಣಿಯವಸರ ಸದಾಚಾರ ಸತ್ಕ್ರೀಯೆಂಬ ಭೂಮಿಯ ಮೇಲೆ
ಸರ್ವಶುದ್ಧವೆಂಬ ಗೋಮಯವ ತಂದು,
ವಿನಯಾರ್ಥವೆಂಬ ಉದಕದಿಂದ ಸಮ್ಮಾರ್ಜನೆಯಂ ಮಾಡಿ
ತನುವಿನ ಅವಗುಣಂಗಳಂ ಹುಡಿಗುಟ್ಟಿ ರಂಗವಾಲೆಯನಿಕ್ಕಿ,
ಅಕ್ಷಯವೆಂಬ ಬಿಂದಿಗೆಯಲ್ಲಿ ಪರಮಾನಂದವೆಂಬ ಅಗ್ಫವಣಿಯ ತುಂಬಿ,
ಸಮರಸದಿಂದ ಮಜ್ಜನಕ್ಕೆರೆಯಲು
ಹೃದಯಕಮಲವೆಂಬ ಪುಷ್ಪಮಂ ಸಲಿಸಿ,
ಸೌಖ್ಯತರ ಶಾಂತಿಯೆಂಬ ಗಂಧವನಿಟ್ಟು,
ಅಕ್ಷಯವೆಂಬ ಅಕ್ಷತೆಯನಳವಡಿಸಿ,
ಸದ್ಭಾವವೆಂಬ ಧೂಪಮಂ ಬೀಸಿ, ಸುಜ್ಞಾನವೆಂಬ ನಿವಾಳಿಯನೆತ್ತಿ
ನಿತ್ಯನಿರಂಜನವೆಂಬ ನೀರಾಜನಮಂ ಬೆಳಗಲು,
ಬ್ರಹ್ಮನಾದವೆಂಬ ಘಂಟೆಯಂ ಬಾರಿಸಲು
ನಿತ್ಯಲಿಂಗಾರ್ಚನೆಗೆಡೆಮಾಡಲು,
ಇದರ ವರ್ಮಕರ್ಮಸ್ಥಿತಿಯನರಿದು ಶಿವಲಿಂಗಾರ್ಚನೆಯ ಮಾಡಬಲ್ಲಡೆ,
ಮತ್ರ್ಯದಲ್ಲಿ ನಾನಾರನೂ ಕಾಣೆನು.
ಕೂಡಲಸಂಗಮದೇವಾ,
ಪ್ರಭು ಶಿವಲಿಂಗಾರ್ಚನೆಯಂ ಮಾಡಲು, ನಾನೆ ಪರಿಚಾರಕನು.
974
 975
ಅಜ್ಞಾನ ಹಿಂಗಿತ್ತು, ಅಹಂಕಾರವಡಗಿತ್ತು,
ಅರಿಷಡ್ವರ್ಗಂಗಳು ಹರಿಹಂಚಾದವು,
ಅಷ್ಟಮದಂಗಳು ಪಟ್ಟಪರಿಯಾದವು,
ದಶವಾಯುಗಳು ವಶವರ್ತಿಯಾದವು,
ಇಂದ್ರಿಯಂಗಳು ಬಂಧನವಡೆದವು,
ಮನೋವಿಕಾರ ನಿಂದಿತ್ತು.
ಕೂಡಲಸಂಗಮದೇವಾ,
ನಿಮ್ಮಲ್ಲಿ ನಮ್ಮ ಮಹಾದೇವಿಯಕ್ಕಗಳ
ನಿರ್ವಾಣದ ಸಹಜ ನಿಲವ ಕಂಡು,
ನಮೋ ನಮೋ ಎನುತಿರ್ದೆನಯ್ಯಾ, ಪ್ರಭುವೆ.
976
ಅದ್ವೈತವ ಅಂತರಂಗದಲ್ಲಿ ಅರಿದು
ಹೊರಗೆ ದಾಸೋಹವ ಮಾಡದಿರ್ದಡೆ
ಎಂತಯ್ಯಾ ಉಭಯ ಸಂದೇಹದಲ್ಲಿ ನಿಜವಪ್ಪುದು
ನಿಮ್ಮ ಶರಣರ ಮನ ನೊಂದಲ್ಲಿ
ನಾನು ಸೈರಿಸಿಕೊಂಬೆನೆಂತಯ್ಯಾ
ಕೂಡಲಸಂಗಮದೇವಾ,
ಹಾವು ಸಾಯದೆ ಕೋಲು ನೋಯದಂತೆ ಮಾಡಾ, ನಿಮ್ಮ ಧರ್ಮ.
977
ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು.
ನೀರನೊಲ್ಲದು, ಬೋನವ ಬೇಡದು, ಕರೆದಡೆ ಓ ಎನ್ನದು.
ಸ್ಥಾವರ ಪೂಜೆ, ಜಂಗಮದ ಉದಾಸೀನ-
ಕೂಡಲಸಂಗಯ್ಯನೊಲ್ಲ ನೋಡಾ.
978
ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು,
ಅನುಭಾವವಿಲ್ಲದ ಲಿಂಗ ಸಮರಸಸುಖಕ್ಕೆ ನಿಲುಕದು,
ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು,
ಅನುಭಾವವಿಲ್ಲದ ಏನನೂ ಅರಿಯಬಾರದು.
ತನ್ನಲ್ಲಿ ತಾ ಸನ್ನಿಹಿತವುಳ್ಳಡೆ
ಶಿವಶರಣರ ಸಂಗವೇತಕ್ಕೆನಲುಂಟೆ
ಕೂಡಲಸಂಗಮದೇವಯ್ಯಾ,
ನಿಮ್ಮ ಅನುಭಾವ
ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ.
979
ಅನ್ಯದೈವವ ಬಿಟ್ಟುದಕಾವುದು ಕ್ರಮವೆಂದಡೆ;
ಅನ್ಯದೈವದ ಮಾತನಾಡಲಾಗದು,
ಅನ್ಯದೈವದ ಪೂಜೆಯ ನೋಡಲಾಗದು,
ಸ್ಥಾವರಲಿಂಗಕ್ಕೆರಗಲಾಗದು,
ಆ ಲಿಂಗದ ಪ್ರಸಾದವ ಕೊಳಲಾಗದು,
ಇಷ್ಟು ನಾಸ್ತಿಯಾದಡೆ
ಅನ್ಯದೈವವ ಬಿಟ್ಟು ಭಕ್ತನೆನಿಸುವನು.
ಇವರೊಳಗನುಸರಣೆಯ ಮಾಡಿದನಾದಡೆ,
ಕುಂಭೀಪಾಕ ನಾಯಕನರಕದಲ್ಲಿಕ್ಕುವ
ನಮ್ಮ ಕೂಡಲಸಂಗಮದೇವರು.
980
ಅನ್ಯವಿಚಾರವ ಮರೆದು ನಿಮ್ಮ ವಿಚಾರವೆಡೆಗೊಂಡಿತ್ತಾಗಿ,
ಪ್ರಾಣದ ನೆಲೆಗೆಟ್ಟಿತ್ತಯ್ಯಾ,
ದಶವಾಯುಗಳ ಸಂಚ ತಪ್ಪಿತ್ತಯ್ಯಾ,
ಕರಣಂಗಳ ಲಿಂಗಕಿರಣಂಗಳು ನುಂಗಿದವಯ್ಯಾ,
ಒಳಗೆ ಕರತಳಾಮಳಕಗೊಂಡೆನಯ್ಯಾ,
ಹೊರಗೆ ಅದೆಂತೆಂದರಿಯದೆ ನೀನೆ ಗತಿಯಾಗಿದ್ದೆ,
ಕೂಡಲಸಂಗಮದೇವಾ.
981
ಅಮೂಲ್ಯನಪ್ರಮಾಣನಗೋಚರಲಿಂಗ,
ಆದಿಮಧ್ಯಾವಸಾನಗಳಿಲ್ಲದ ಸ್ವತಂತ್ರಲಿಂಗ,
ನಿತ್ಯನಿರ್ಮಳಲಿಂಗ,
ಅಯೋನಿಸಂಭವ ನಮ್ಮ ಕೂಡಲಸಂಗಮದೇವರು.
982
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ,
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು.
ಅಯ್ಯಾ ನಿಮ್ಮ ಪಂಚವಕ್ತ್ರಂಗಳೆ
ಪಂಚಮುಖದ ರುದ್ರಾಕ್ಷಿಗಳಾದವಾಗಿ,
ಅಯ್ಯಾ ಕೂಡಲಸಂಗಮದೇವಯ್ಯಾ,
ಎನ್ನ ಮುಕ್ತಿಪಥಕ್ಕೆ ಶ್ರೀಮಹಾರುದ್ರಾಕ್ಷಿಯೆ ಸಾಧನವಯ್ಯಾ.
983
ಅಯ್ಯಾ, ಎನ್ನ ಕಾಯದಲ್ಲಿ ಮಡಿವಾಳನ ತೋರಿದ,
ಎನ್ನ ಮನದಲ್ಲಿ ತನ್ನ ನಿಲವ ತೋರಿದ,
ಎನ್ನ ಅರಿವಿನಲ್ಲಿ ನಿಮ್ಮ ತೋರಿದ,
ಇಂತೀ ತ್ರಿವಿಧಸ್ವಾಯತವನು
ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ ತೋರಿದ.
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನ ಕರುಣದಿಂದ
ಮಡಿವಾಳನೆಂಬ ಪರುಷ ಸಾಧ್ಯವಾಯಿತ್ತೆನಗೆ.
984
ಅಯ್ಯಾ, ಎನ್ನ ಕೈಯ ದರ್ಪಣ [ಸಂದಿತ್ತು],
ಆಸ್ಥಾನದ ಜ್ಯೋತಿ ನಂದಿತ್ತು,
ಸರಸ್ವತಿಯ ಭಂಡಾರ ಸೂರೆಹೋಯಿತ್ತು,
ನಮ್ಮಯ್ಯ ಕಿನ್ನರಿಬೊಮ್ಮಣ್ಣ ಹೋದನು.
ತಾರಾಮಂಡಲದಲ್ಲಿ ಕೇಳಿಸುವ ತಂದೆ ಹೋದನು, ನಾನೆಲ್ಲಿ
ಅರಸುವೆನು ಕೂಡಲಸಂಗಮದೇವಯ್ಯ
ತನ್ನಾಳು ಕಿನ್ನರಿಬೊಮ್ಮಣ್ಣನನೊಯ್ದಡೆ ನಾನೆಲ್ಲಿ ಅರಸುವೆನು.
985
ಅಯ್ಯಾ, ಎನ್ನ ಹೃದಯದಲ್ಲಿ ವ್ಯಾಪ್ತವಾಗಿಹ ಪರಮ ಚಿದ್ಬೆಳಗ
ಹಸ್ತಮಸ್ತಕ ಸಂಯೋಗದಿಂದೊಂದುಗೂಡಿ
ಮಹಾಬೆಳಗ ಮಾಡಿದಿರಲ್ಲಾ.
ಅಯ್ಯಾ, ಎನ್ನ ಮಸ್ತಕದೊಳಗೊಂದುಗೂಡಿದ ಮಹಾಬೆಳಗ ತಂದು
ಭಾವದೊಳಗಿಂಬಿಟ್ಟಿರಲ್ಲಾ,
ಅಯ್ಯಾ, ಎನ್ನ ಭಾವದೊಳಗೆ ಕೂಡಿದ ಮಹಾಬೆಳಗ ತಂದು
ಮನಸಿನೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಮನಸಿನೊಳು ಕೂಡಿದ ಮಹಾಬೆಳಗ ತಂದು
ಕಂಗಳೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕಂಗಳೊಳು ಕೂಡಿದ ಮಹಾಬೆಳಗ ತಂದು
ಕರಸ್ಥಲದೊಳಗಿಂಬಿಟ್ಟಿರಲ್ಲಾ.
ಅಯ್ಯಾ, ಎನ್ನ ಕರಸ್ಥಲದಲ್ಲಿ ಥಳಥಳಿಸಿ ಬೆಳಗಿ ಹೊಳೆಯುತ್ತಿಪ್ಪ
ಅಖಂಡತೇಜವನೆ ಇಷ್ಟಲಿಂಗವೆಂಬ ದೃಷ್ಟವ ತೋರಿ
ನಿಶ್ಚಯವ ಶ್ರೋತ್ರದಲ್ಲಿ ಸೃಜಿಸಿದಿರಲ್ಲಾ.
ಅಯ್ಯಾ, ಎನ್ನ ಶ್ರೋತ್ರದಲ್ಲಿ ಸೃಜಿಸಿದ ಸುಮಂತ್ರದೊಳಗೆ
ನೀವು ನಿಮ್ಮ ಮಹತ್ವವ ಹುದುಗಿದಿರಲ್ಲಾ,
ಅಯ್ಯಾ, ಎನ್ನ ಆರಾಧ್ಯ ಕೂಡಲಸಂಗಮದೇವಾ,
ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣಿಸುತ್ತಿರ್ದಿರಲ್ಲಾ.
986
ಅಯ್ಯಾ, ಎಳಗರು ತಾಯನರಸಿ ಬಳಲುವಂತೆ
ನಾ ನಿಮ್ಮನರಸಿ ಬಳಲುತ್ತಿದ್ದೇನೆ.
ಅಯ್ಯಾ, ನೀವೆನ್ನ ಮನಕ್ಕೆ ಪ್ರಸನ್ನವಾಗಿ ಕಾರುಣ್ಯವ ಮಾಡು.
ಅಯ್ಯಾ, ನೀವೆನ್ನ ಮನಕ್ಕೆ ನೆಲೆವನೆಯಾಗಿ
ಕಾರುಣ್ಯವ ಮಾಡು, ಕಾರುಣ್ಯವ ಮಾಡು.
ನೀನಿನಿತು ಲೇಸನೀಯಯ್ಯಾ,
ಅಂಬೇ ಅಂಬೇ ಕೂಡಲಸಂಗಮದೇವಾ.
987
ಅಯ್ಯಾ, ಕೊಟ್ಟ ಲಿಂಗವ ಮರಳಿ ಕೊಂಡು ಬಾ ಎಂದು
ಎನ್ನನಟ್ಟಿದನಯ್ಯಾ ಶಶಿಧರನು ಮತ್ರ್ಯಕ್ಕೆ.
ನಿಮ್ಮ ಮುಖದಿಂದ ಎನ್ನ ಭವ ಹರಿವುದೆಂದು
ಹರಹಿಕೊಂಡಿದ್ದೆನಯ್ಯಾ ದಾಸೋಹವನು.
ನಿಮ್ಮ ಬರವ ಹಾರಿ ಸವೆದವು ಒಂದನಂತ ದಿನಗಳು,
ಇಂದೆನ್ನ ಪುಣ್ಯದ ಫಲದಿಂದ ಎನಗೆ ಗೋಚರವಾದಿರಿ,
ಹಿಂದಣ ಸಂದೇಹ ಸೂತಕ ಹಿಂಗಿತ್ತು.
ಎನ್ನ ಪ್ರಾಣಲಿಂಗವು ನೀವೇ ಆಗಿ, ಎನ್ನ ಸರ್ವಾಂಗಲಿಂಗದಲ್ಲಿ ಸನ್ನಿಹಿತವಾಗಿ,
ಎನ್ನ ಚಿಂತೆಯ ನಿಶ್ಚಿಂತೆಯ ಮಾಡಾ ಕೂಡಲಸಂಗಮದೇವ ಪ್ರಭುವೆ.
988
ಅಯ್ಯಾ, ನಾನು ದಾಸೋಹವ ಮಾಡುವೆನಲ್ಲದೆ, ಸಮಯವನರಿಯೆ,
ಅಯ್ಯಾ, ನಾನು ಭಕ್ತಿಯ ಮಾಡುವೆನಲ್ಲದೆ, ಭಾವವನರಿಯೆ.
ಸ್ಥಳಕುಳವ ವಿಚಾರಿಸಿದಡೆ, ಎನ್ನಲ್ಲಿ ಏನೂ ಹುರುಳಿಲ್ಲ,
ನಿಮ್ಮ ಶರಣರ ಸೋಂಕಿನಲ್ಲಿ ಶುದ್ಧನಾದೆನು.
ಕೂಡಲಸಂಗಮದೇವರು ಸಾಕ್ಷಿಯಾಗಿ,
ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು.
989
 990
ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು
ಪೂರ್ವಾಚಾರಿಯಾದೆನಯ್ಯಾ.
ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು
ವೃಷಭನಾದೆನಯ್ಯಾ.
ಅಯ್ಯಾ, ನಿಮ್ಮ ಮುಟ್ಟಿದ ಗುಣದಿಂದಲಾನು ಸಂಗನಬಸವಣ್ಣನಾಗಿ,
ಗೊಹೇಶ್ವರನ ಶರಣನ ಮಹಾಬಸುರೊಳಗೆ ಕಂದನಾಗಿರ್ದೆ
ಕಾಣಾ, ಕೂಡಲಸಂಗಮದೇವಾ.
991
ಅಯ್ಯಾ, ನಿಮ್ಮ ಶರಣರ ಕಂಡ ಕಡು ಸುಖವನೇನೆಂಬೆನಯ್ಯಾ
ಅದು ಸಾಲೋಕ್ಯದಂತುಟಲ್ಲ, ಸಾಮೀಪ್ಯದಂತುಟಲ್ಲ,
ಸಾರೂಪ್ಯದಂತುಟಲ್ಲ, ಸಾಯುಜ್ಯದಂತುಟಲ್ಲ.
ಕೂಡಲಸಂಗಯ್ಯಾ, ನಿಮ್ಮ ಶರಣರ ಚರಣದ
ದರುಶನ ಸ್ಪರುಶನದಿಂದಾನು ಧನ್ಯನಾದೆನು.
992
ಅಯ್ಯಾ, ನಿಮ್ಮ ಶರಣರ ಕಂಡರೆ ಕಡು ಸುಖವೆನಗಯ್ಯಾ,
ಕಾಣದಿರೆ ಅವಸ್ಥೆ ನೋಡಯ್ಯಾ.
ತವಕದ ಸ್ನೇಹ ದರುಶನದಲ್ಲಿ ತರಹರವಾಯಿತ್ತು,
ಕೂಡಲಸಂಗಮದೇವಾ,
ನಿಮ್ಮ ಶರಣರ ಶ್ರೀಪಾದವ ಕಂಡು ಧನ್ಯನಾದೆನು.
993
 994
ಅಯ್ಯಾ, ನಿಮ್ಮ ಶರಣರ ಸಂಗವೆನಗೆ ಪರಮಸುಖವಯ್ಯಾ,
ಅಯ್ಯಾ, ನಿಮ್ಮ ಶರಣರ ಅಗಲಿಕೆ
ಎನ್ನ ಪ್ರಾಣವಿಯೋಗವಯ್ಯಾ,
ಶಿವಶಿವಾ ಸಂತವಿಡುವೆನು, ಇನ್ನೆಂತಯ್ಯಾ
ಎನಗೇನು ಗತಿ, ಕೂಡಲಸಂಗಮದೇವಾ
ನಿಮ್ಮ ಶರಣರ ಮುನಿಸು ಎನಗೆ ಬಿಡಿಸಬಾರದ ತೊಡಕು.
995
ಅಯ್ಯಾ, ನಿಮ್ಮ ಶರಣರ ಸಂಗಸುಖವ ಏನೆಂದುಪಮಿಸುವೆನಯ್ಯಾ,
ನಿಮ್ಮ ಶರಣರ ಕೂಡೆ ಸಮಗೋಷಿ*ಯ
ಮಾಡುವುದನುಪಮಿಸಲಮ್ಮೆನಯ್ಯಾ.
ಕೂಡಲಸಂಗಾ, ನಿಮ್ಮ ಪ್ರಮಥರೆಲ್ಲರೂ
ನೆರೆದ ಗಣತಿಂಥಿಣಿಯೊಳಗೆನ್ನನೇನೆಂದರಿಯದೆ
ಅಗಲದಂತಿರಿಸಯ್ಯಾ, ನಾ ನಿಮ್ಮ ಧರ್ಮದ ಕವಿಲೆ.
996
ಅಯ್ಯಾ, ನಿಮ್ಮ ಶರಣರು ಪರಮಸುಖಿಗಳಯ್ಯಾ.
ಅಯ್ಯಾ, ನಿಮ್ಮ ಶರಣರು ಕಾಯವೆಂಬ ಕರ್ಮಕ್ಕೆ
ಹೊದ್ದದ ನಿಷ್ಕರ್ಮಿಗಳಯ್ಯಾ.
ಅಯ್ಯಾ, ನಿಮ್ಮ ಶರಣರು ಮನದಲ್ಲಿ ನಿರ್ಲೇಪಜ್ಞಾನಿಗಳಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರ ಘನವನೆನಗೆ ಹೇಳಲು, ನಾನು ಕೇಳಲಮ್ಮದೆ
ನಮೋ ನಮೋ ಎನುತಿರ್ದೆನು ಕಾಣಾ, ಪ್ರಭುವೆ.
997
 998
ಅಯ್ಯಾ, ನಿಮ್ಮ ಶರಣರೆನ್ನ ಪಾವನವ ಮಾಡಿ,
ತಿಳುಹಿ ತಮ್ಮಂತೆ ಎನ್ನ ಮಾಡಿದ ಬಳಿಕ,
ನಾನು ಅವರು ಮಾಡಿದಂತಾದೆನಯ್ಯಾ.
ನಾನೊಬ್ಬನು ನಿಮ್ಮ ಶರಣರ ಬಳಿಬಳಿಯವನು.
ಕೂಡಲಸಂಗನ ಶರಣರು ಮೆಚ್ಚಿ ಎನಗೊಲಿದಡೆ
ನಾನು ಬದುಕಿದೆನಲ್ಲದೆ, ಸಮರಸ ಸಂಗಕ್ಕೆ ಸರಿಯೆ
ಹೇಳಾ ಚೆನ್ನಬಸವಣ್ಣಾ.
999
ಅಯ್ಯಾ, ನೀ ಒಲಿದಡೆ ತಿರಿವಂತೆ ಮಾಡುವಿರಿ,
ತಿರಿದಡೆ ನೀಡದಂತೆ ಮಾಡುವಿರಿ,
ನೀಡಿದಡೆ ಅಕ್ಕಿ ಬೀಳುವಂತೆ ಮಾಡುವಿರಿ,
ಬಿದ್ದಡೆ ನಾಯಿ ತಿಂಬಂತೆ ಮಾಡುವಿರಿ,
ನಿಮ್ಮ ಧ್ಯಾನದಲಿ ನಾನಿಪ್ಪಂತೆ ಮಾಡುವಿರಿ
ಕೂಡಲಸಂಗಮದೇವಾ.
1000
ಅಯ್ಯಾ ನೀ ಒಲಿದಡೆ
ಹುಚ್ಚನೆಂದೆನಿಸಿ ಕಲ್ಲಲಿಡಿಸಿ,
ಎಲ್ಲರ ಕೈಯ್ಯಲು ಸುಡಿಸಿ,
ನಿನ್ನ ನಚ್ಚಿದವರನ್ನೆಲ್ಲ [ಬ]ಡಿಸು
ಕೂಡಲಸಂಗಮದೇವಾ.
1001
ಅಯ್ಯಾ, ನೀ ಮಾಡಲಾದ ಜಗತ್ತು, ಅಯ್ಯಾ ನೀ ಮಾಡಲಾದ ಸಂಸಾರ,
ಅಯ್ಯಾ, ನೀ ಮಾಡಲಾದ ಮರವೆ, ಅಯ್ಯಾ, ನೀ ಮಾಡಲಾದ ದುಃಖ,
ಅಯ್ಯಾ, ನೀ ಬಿಡಿಸಿದಡೆ ಬಿಟ್ಟಿತ್ತು ತಾಮಸ.
ಅಯ್ಯಾ ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿನ್ನೇಕೆ
ಕೂಡಲಸಂಗಮದೇವಾ.
1002
ಅಯ್ಯಾ, ನೀವೆನ್ನ ಬಲ್ಲಿರಲ್ಲದೆ ನಾ ನಿಮ್ಮ ಬಲ್ಲೆನೆ
ನಿಮ್ಮ ನಿಲವ ನೋಡಿಹೆನೆಂದಡೆ
ನಿಮ್ಮ ಘನವೆನ್ನ ಮನಕ್ಕೆ ಸಾಧ್ಯವಾಗದ ಕಾರಣ,
ಅಂತಿಂತೆಂದುಪಮಿಸಲಮ್ಮದೆ ಇದ್ದೆ ನೋಡಯ್ಯಾ,
ನಿತ್ಯತೃಪ್ತಮಹಿಮಾ, ನಿಮಗೆಂದಳವಡಿಸಿದ ಪದಾರ್ಥವ
ಸುಚಿತ್ತದಿಂದವಧರಿಸಿ ಸಲಹಯ್ಯಾ ಪ್ರಭುವೆ,
ಕೂಡಲಸಂಗಮದೇವಾ.
1003
 1004
 1005
ಅಯ್ಯಾ, ಶ್ರೀಮಹಾವಿಭೂತಿಯಿಂದ ಕಂಡೆ
ಆ ನಿಮ್ಮ ದಿವ್ಯ ಬೆಳಗಿನ ಹೊಳಹ, ಈ ಎನ್ನ ಕರಸ್ಥಲದೊಳಗೆ.
ಅಯ್ಯಾ, ಶ್ರೀಮಹಾರುದ್ರಾಕ್ಷಿಯಿಂದ ಕಂಡೆ
ಆ ನಿಮ್ಮ ದಿವ್ಯಮೂರ್ತಿಯ ಗೂಢವ, ಈ ಎನ್ನ ಕರಸ್ಥಲದೊಳಗೆ.
ಅಯ್ಯಾ, ಶ್ರೀಮಹಾಪಂಚಾಕ್ಷರಿಯಿಂದ ಕಂಡೆ
ಆ ನಿಮ್ಮ ದಿವ್ಯವಕ್ತ್ರಂಗಳ, ಈ ಎನ್ನ ಕರಸ್ಥಲದೊಳಗೆ.
ನಾ ಬಯಸುವ ಬಯಕೆ ಕೈಸಾರಿತ್ತಿಂದು
ಕೂಡಲಸಂಗಮದೇವಾ.
1006
 1007
ಅರತುದಯ್ಯಾ ಅಂಗಗುಣ, ಒರತುದಯ್ಯಾ ಭಕ್ತಿರಸ,
ಆವರಿಸಿತ್ತಯ್ಯಾ ಲಿಂಗವಂಗವನು,
ಏನೆಂದರಿಯೆನಯ್ಯಾ ಲೋಕ¯õ್ಞಕಿಕವ.
ಲಿಂಗಭ್ರಾಂತನಾದೆನಯ್ಯಾ ಕೂಡಲಸಂಗಯ್ಯಾ,
ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ.
1008
ಅರಸುವ ಬಳ್ಳಿ ಕಾಲ ತೊಡರಿದಂತಾಯಿತ್ತು,
ಬಯಸುವ ಬಯಕೆ ಕೈಸಾರಿದಂತಾಯಿತ್ತು,
ಹಲವು ದಿವಸಕೆ ನಂಟರ ಕಂಡಂತಾಯಿತ್ತು.
ಅಂದೊಮ್ಮೆ ಅನಿಮಿಷಂಗೆ ಕೋಳುಹೋದ ಲಿಂಗವೆಂದು
ಉಮ್ಮಹದಿಂದ ಮಂಗಳಾರತಿಯ ಬೆಳಗಿ,
ನವರತ್ನದ ಹಾರ ತೋರಣವ ಕಟ್ಟಿ,
ಸಂತೋಷದಿಂದೆನ್ನ ಮನವು ತೊಟ್ಟನೆ ತೊಳಲಿ,
ತಿಟ್ಟನೆ ತಿರುನಗೆಫ, ದೃಷ್ಟವ ಕಂಡೆನಯ್ಯಾ.
ಬಿಟ್ಟು ಹಿಂಗಿದವೆನ್ನ ಭವಮಾಲೆಗಳು,
ಗೋಹೇಶ್ವರನ ಶರಣ ಪ್ರಭುದೇವರ ಕರಸ್ಥಲದೊಳಗೆ,
ಕೂಡಲಸಂಗಮದೇವರೆಂಬ ಲಿಂಗವ ಕಂಡೆನಾಗಿ.
1009
ಅರಿದರಿದು ಎನಗಿಂದು ಕಣ್ಗೆ ಮಂಗಳವಾಯಿತ್ತು,
ಒಂದಹುದು ಒಂದಾಗದೆಂಬ ಭ್ರಮೆಯವನಲ್ಲ,
ಬೇಕು ಬೇಡೆಂಬ ಜಂಜಡದವನಲ್ಲ,
ಎಡೆವರಿಯದ ನೋಟ, ನುಡಿಯ ಸಡಗರವರತು
ಎಡೆಯಾಟ ಕೋಟಲೆಯ ಕಳೆಯ ಬಂದನು,
ನೋಡುವರ ಮನದ ಸುಖದ ಸಾಗರನಿಧಿಯನೇನೆಂದುಪಮಿಸುವೆನು
ಎನ್ನ ಉಭಯಕರ್ಮವ ಕಳೆದು ತನ್ನೊಳಗೆ ಇಂಬಿಟ್ಟುಕೊಳಬಂದನು,
ಕೂಡಲಸಂಗಮದೇವ, ಕೃಪಾಮೂರ್ತಿ.
1010
 1011
ಅರಿಯಲಿಲ್ಲದ ಅರಿವು ಅವಗ್ರಹಿಸಿತ್ತಾಗಿ,
ಅರಿಯಲಿಲ್ಲದ ಮರೆಯಲಿಲ್ಲದ ನಿಜವು ನಿಂದಿತ್ತಾಗಿ,
ನಿರ್ನಾಮವಾಯಿತ್ತು, ನಿಃಪತಿಯಾಯಿತ್ತು,
ಅಗಮ್ಯದಲ್ಲಿ ಗಮನ ಕೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತ್ತು,
ಕೂಡಲಸಂಗಮದೇವರಲ್ಲಿ ಶಬ್ದಮುಗ್ಧವಾಯಿತ್ತು.
1012
ಅರಿವನ್ನಕ್ಕರ ಅರ್ಚಿಸಿದೆ ಅರಿವನ್ನಕ್ಕರ ಪೂಜಿಸಿದೆ,
ಅರಿವನ್ನಕ್ಕರ ಹಾಡಿ ಹೊಗಳಿದೆ.
ಅರಿವುಗೆಟ್ಟು ಮರಹು ನಷ್ಟವಾಗಿ,
ಭಾವ ನಿರ್ಭಾವವಾಗಿ ನಿಜವೊಳಕೊಂಡಿತ್ತಾಗಿ,
ಕೂಡಲಸಂಗಯ್ಯನಲ್ಲಿ
ಸರ್ವನಿವಾಸಿಯಾಗಿರ್ದೆನು.
1013
ಅರಿವಿಂದರಿದು ಏನುವ ತಟ್ಟದೆ ಮುಟ್ಟದೆ ಇದ್ದೆನಯ್ಯಾ,
ಅಂತರಂಗ ಸನ್ನಿಹಿತ, ಬಹಿರಂಗ ನಿಶ್ಚಿಂತನಾಗಿದ್ದೆನಯ್ಯಾ.
ಸ್ವಾತಿಯ ಬಿಂದುವ ಬಯಸುವ ಚಿಪ್ಪಿನಂತೆ
ಗುರುಕಾರುಣ್ಯವ ಬಯಸುತ್ತಿದ್ದೆ, ಕೂಡಲಸಂಗಮದೇವಾ.
1014
 1015
ಅರಿವಿನ ಆಪ್ಯಾಯನಕ್ಕೆ ಅನುಭಾವವೆ ತೃಪ್ತಿ,
ಅರಿವು ನೆರೆ ಕೂಡಿ, ಆ[ಚಾ]ರವೆ ಪ್ರಾಣವಾಗಿ ವಿಶ್ರಮಿಸಿದ ಬಳಿಕ,
ಶ್ರೀಗುರು ಕೃಪೆಯ ಮಾಡಿದ ಪ್ರಾಣಲಿಂಗದ ಘನವೆಂತೆಂದಡೆ:
ಮತ್ಸ್ಯನುಂಗಿದ ಮಾಣಿಕ್ಯದಂತೆ,
ಮುತ್ತುನುಂಗಿದ ನೀರಿನಂತೆ,
ಕಣ್ಣಾಲಿ ನುಂಗಿದ ನೋಟದಂತೆ,
ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ
ಸ್ವಯಾನುಭಾವಿಗಳ ಅನುಭಾವವ ತೋರಿ ಬದುಕಿಸಾ,
ಕೂಡಲಸಂಗಮದೇವಾ.
1016
 1017
ಅರಿವಿಲ್ಲದ ಕಾಯವುಂಟೆ ಅರಿವಿಲ್ಲದ ಪ್ರಾಣವುಂಟೆ
ಅರಿವಿಲ್ಲದ ನಿಲವುಂಟೆ ಭಾವವಿಲ್ಲದ ಭಕ್ತಿಯುಂಟೆ
ಕೂಡಲಸಂಗಮದೇವಾ, ನೀವು ಪರಿಪೂರ್ಣರಾಗಿಪ್ಪಿರಾಗಿ,
ಅವಗುಣಕ್ಕೆ ತೆರಹಿಲ್ಲ.
1018
ಅರಿವು ಮರವೆಯೊಳಡಗಿ, ಮರವೆ ಅರಿವಿನೊಳಡಗಿ,
ತೆರಹಿಲ್ಲದಿರ್ದೆನೆಂಬ ಹಮ್ಮಿದೇನೋ, ಹಮ್ಮಿದೇನೋ
ಬ್ರಹ್ಮಾದ್ ಬ್ರಹ್ಮವ ನುಂಗಿ, ಮತ್ತಾ ಪರಬ್ರಹ್ಮನು ತಾನೆಂದೆಂಬ
ಹಮ್ಮಿದೇನೊ, ಹಮ್ಮಿದೇನೊ
ಆದಿ ಶೂನ್ಯವು ಶೂನ್ಯ, ಮಧ್ಯ ಶೂನ್ಯವು ಶೂನ್ಯ,
ಅಂತ್ಯ ಶೂನ್ಯವು ಶೂನ್ಯ,
ಶೂನ್ಯವಾದ ಬಳಿಕ ಅಲ್ಲಿಂದತ್ತ ನಿಂದ ನಿಲವನಾರು ಬಲ್ಲರು ಹೇಳಾ
ಬಯಲು ಚಿತ್ರಿಸಿದ ಚಿತ್ರವನಾ ಬಯಲರಿಯದಂತೆ
ಕೂಡಲಸಂಗಮದೇವಾ, ನಿಮ್ಮ ಶರಣರ ನಿಲವು.
1019
ಅರಿವುವಿಡಿದು, ಅರಿವನರಿದು,
ಅರಿವೆ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ,
ಮರಹುವಿಡಿದು, ಮರಹ ಮರೆದು,
ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ.
ದೇಹ ಪ್ರಾಣಂಗಳ ಹಿಂಗಿ, ದೇಹವಿಡಿದು,
ದೇಹ ನಿಮ್ಮದೆಂಬ ಭ್ರಾಂತುಸೂತಕಿ ನಾನಲ್ಲವಯ್ಯಾ.
ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ
ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.
1020
 1021
ಅರ್ಪಿತವ ಮಾಡುವ ಅವಧಾನವು, ಅನ್ಯವ ಸೋಂಕದ ಅವಧಾನವು,
ಅರಿಷಡ್ವರ್ಗಂಗಳ ಮುಟ್ಟಲೀಯದವಧಾನದ ಪರಿಯ ನೋಡಾ,
ಪಂಚಭೂತವೆಂಬ ಭವಿಯ ಕಳೆದು ಪ್ರಸಾದಿಯಾಗಿಪ್ಪ ಪರಿಯ ನೋಡಾ,
ಪಂಚೇಂದ್ರಿಯಂಗಳ ಗುಣವಳಿದು ಪಂಚವಿಂಶತಿತತ್ವದಲ್ಲಿ ಪರಿಣಾಮಿ
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
1022
ಅರ್ಪಿತವೆಂಬೆನೆ
ದೇವರೊಂದಿಲ್ಲವಾಗಿ, ಅರ್ಪಿಸುವ ಭಕ್ತ ಮುನ್ನವೆ ಇಲ್ಲ.
ಅರ್ಪಿತ ಅನರ್ಪಿತ ನೀನೆ ಎಂಬೆ,
ಕೂಡಲಸಂಗಮದೇವಾ.
1023
 1024
ಅಲ್ಲಾ ಎನಬಾರದು, ಅಹುದೆನಬಾರದು,
ಕೂಡಲಸಂಗನ ಶರಣರ ಸಂಗ
ಕರಗಸದ ಬಾಯಿಧಾರೆಯಂತೆ ಅತಿ ಬಿರಿದಯ್ಯಾ.
1025
 1026
ಅಷ್ಟಷಷ್ಟಿಯಾದವರೆಲ್ಲ ತೀರ್ಥವಾಸಿಗಳಪ್ಪರೆ ?
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವರೆಲ್ಲ
ಲಿಂಗಾರ್ಚಕರಪ್ಪರೆ, ಅಯ್ಯಾ ?
ವೇಷವ ಹೊತ್ತು ಗ್ರಾಸಕ್ಕೆ ತಿರುಗುವ
ಈ ವೇಷ ದುರಾಚಾರಿಗಳ ಮೆಚ್ಚುವನೆ
ಕೂಡಲಸಂಗಮದೇವ ?
1027
ಅಸುರನೈಶ್ವರ್ಯವನೆಣಿಸುವಡೆ,
ಸೀತೆಗೆ ಸರಿಮಿಗಿಲೆನಿಸುವ ಸತಿಯರೆಂಟು ಕೋಟಿ,
ಮತಿವಂತ ಶಿರಃಪ್ರಧಾನರೆಂಟು ಕೋಟಿ,
ಲೆಕ್ಕವಿಲ್ಲದ ದಳವು, ಲಕ್ಷ ಕುಮಾರರು,
ದಿಕ್ಪಾಲಕರವನ ಮನೆಯ ಬಂಧನದಲ್ಲಿಪ್ಪರು,
ಸುರಪತಿಯರೆಲ್ಲರನಾತ ಸೆರೆಮಾಡಿ ಆಳಿದ.
ಶಿವನೆ, ನೀನು ಕರುಣಿಸಿದಂತಿರದೆ,
ಪರವಧುವಿನ ಬೇಟವನನ ಪ್ರಾಣ ಕೊಂಡಿತ್ತು.
ಇದನರಿದು ಪರವಧುಗಳಿಗೆಳಸುವರ ಕಂಡು
ಗರುಡನ ಕಂಡ ಸರ್ಪ ಧರೆಗಿಳಿವಂತೆ ಅಡಗಿಪ್ಪೆನಯ್ಯಾ
ಕೂಡಲಸಂಗಮದೇವಾ.
1028
ಅಸ್ತಿ ಭಾತಿಯೆಂಬ ಬ್ಥಿತ್ತಿಯ ಮೇಲೆ,
ಕ್ರೀ ನಾಮ ರೂಪವೆಂಬ ಚಿತ್ರ ಬರೆಯಿತ್ತು.
ಇಲ್ಲದ ಬ್ಥಿತ್ತಿಯ ಮೇಲೆ ಉಂಟೆಂಬ ಚಿತ್ರದಂತಿರ್ದಿತ್ತು.
ಅದೆಂತೆಂದಡೆ;
ಅಸ್ತಿ ಭಾತಿ ಪ್ರಿಯಂ ರೂಪಂ ನಾಮ ಚೇತ್ಯಂಶಪಂಚಕಂ
ಆದ್ಯತ್ರಯಂ ಬ್ರಹ್ಮರೂಪಂ ಮಾಯಾರೂಪಂ ತತೋದ್ವಯಂ
ಎಂದುದಾಗಿ-
ಎನಗಿದೇ ಮಾಯೆಯಾಗಿ ಕಾಡಿತ್ತು, ಕೂಡಲಸಂಗಮದೇವಾ.
1029
ಅಹುದಹುದು;
ಕೆರೆಯ ತಪ್ಪಿ ಬಾವಿಯ ಬಿದ್ದಂತೆ,
ಮುಳ್ಳ ಕಳೆದು ದಸಿಯ ಬೆಟ್ಟಿದಂತೆ,
ಬದುಕಿದ ಹಕ್ಕಿಯ ಕಿಚ್ಚಿನೊಳಗಿಕ್ಕುವರೆ,
ಕೂಡಲಸಂಗಮದೇವಾ.
1030
ಅಳವಡಿಸಿದ ಪದಾರ್ಥ ಅರ್ಪಿತಕ್ಕೆ ಸರಿಯಾಯಿತ್ತು,
ಅಳವಡಿಸದ ಮುನ್ನವೆ ಕೈಕೊಳ್ಳುತ್ತೈದಾನೆ ಶಿವನು,
ಸಂದ ಪದಾರ್ಥ ಸಲ್ಲಲಿ.
ಕೂಡಲಸಂಗಮದೇವರ ಆರೋಗಣೆಯ ಅವಸರಕ್ಕೆ
ಸಂಚಿತ ಸಯದಾನವ ತೆಗೆಸಿರೆ, ಸೊಡ್ಡಳ ಬಾಚರಸೆರೆ.
1031
ಅಳಿವನಲ್ಲ, ಉಳಿವನಲ್ಲ, ಪ್ರಳಯವೆಂಬುದ ಮುನ್ನರಿಯನು,
ಕಳಾಕುಳರಹಿತನು, ಉಭಯಕುಳರಹಿತನು,
ಅರಿವ ಬೈಚಿಟ್ಟು ಮೆರೆವ ಗಮನನಲ್ಲ.
ಕೂಡಲಸಂಗಯ್ಯನೆಂಬ ಶಬ್ದಮುಗ್ಧನ
ಭಾವದ ಬಳಕೆಯಲ್ಲಿ ಗೆಲಬುಹದೆ ಹೇಳಾ.
1032
ಆನೆತ್ತ ಬಲ್ಲೆನಯ್ಯಾ ನಿಮ್ಮ ಭಕ್ತಿಯ ಘನವ
ಆನೆತ್ತ ಬಲ್ಲೆನಯ್ಯಾ ನಿಮ್ಮ ಶ್ರೀಪಾದವ ನಿಲವ
ಕಾಯದ ಕಳವಳದ ಮರೆಯಲಿದ್ದವರಲ್ಲಿ ನಂಬುಗೆಯಳವಡುವುದೆ
ಕೂಡಲಸಂಗಮದೇವಾ
ಎನ್ನವಗುಣವ ನೋಡದೆ ಕರುಣದಿಂದ
ಭಕ್ತಿಯ ನಿಲವ ತೋರಾ ತಂದೆ.
1033
ಆಚಾರದ ಸುಖವನಂಗದಲ್ಲಿ ನೆಲೆಗೊಳಿಸಿ ತೋರಿದ,
ಅನುಭಾವದನುವ ಪ್ರಾಣದಲ್ಲಿ ನೆಲೆಗೊಳಿಸಿ ತೋರಿದ,
ಮಹಾಜ್ಞಾನದ ಸುಖವ ಸರ್ವಾಂಗದಲ್ಲಿ ನೆಲೆಗೊಳಿಸಿ ತೋರಿದ.
ಇಂತೀ ತ್ರಿವಿಧಸ್ಥಲನಿರ್ಣಯವನೆನಗೆ ಅರುಹಿದ ಕಾರಣ
ಕೂಡಲಸಂಗಮದೇವಯ್ಯಾ,
ಮಡಿವಾಳ ಮಾಚಯ್ಯನ ಪಾದಕ್ಕೆ ನಮೋ ನಮೋ ಎನ್ನುತ್ತಿರ್ದೆನು.
1034
 1035
 1036
ಆತ್ಮನ ಸುಳುಹು ನಿಂದ ಮತ್ತೆ
ಕಾಯದ ಅವತಾರವಳಿಯಿತ್ತು.
ನೀನೆಂಬ ಭಾವವರತಲ್ಲಿ,
ಕೂಡಲಸಂಗಮದೇವರ ಭಾವ
ಪ್ರಭುದೇವರಲ್ಲಿ ಐಕ್ಯವಾಯಿತ್ತು.
1037
ಆತ್ಮನೆ ಲಿಂಗವೆಂಬರು, ಆತ್ಮನ ದೇಹರಹಿತವಾಗಿ ಕಾಬವರುಂಟೆ
ಪ್ರಾಣವೆ ಲಿಂಗವೆಂಬರು,
ಪ್ರಾಣವನು ಕಾಯವ ಬಿಟ್ಟು ಬೇರೆ ಕಾಣಬಹುದೆ
ಕಂಡೆಹೆನೆಂದಡೆ ಅದು ನಿರವಯ, ನಿರಾಕಾರವಾದುದು,
ಭಾವಕ್ಕೆ ಬಾರದು.
ಭಾವಕ್ಕೆ ಬಾರದುದ ಪೂಜಿಸಬಹುದೆ
ಅದು ಕಾರಣ, ಕಾಯದ ಕರಸ್ಥಲದಲ್ಲಿ ಕ್ರಿಯಾಲಿಂಗವಿಡಿದು ನೋಡಲು
ಪ್ರಾಣ ಆತ್ಮನೆಂಬವು ಬೇರಿಲ್ಲ.
ಇದು ಕಾರಣ, ಇಷ್ಟವ ಬಿಟ್ಟು ಬಟ್ಟಬಯಲೆ ವಸ್ತುವೆಂಬ
ಮಿಟ್ಟಿಯ ಭಂಡರ ನಮ್ಮ ಕೂಡಲಸಂಗನ ಶರಣರು ಮೆಚ್ಚರು.
1038
ಆದಿ ಅನಾದಿಗಳಿಲ್ಲದಂದು, ಸದಾಶಿವನಿಲ್ಲದಂದು,
ಶಿವನಿಲ್ಲದಂದು, ಏನೆಂಬುದೇನು ತಾನಿಲ್ಲದಂದು,
ಕೂಡಲಸಂಗಯ್ಯ ತನ್ನ ತಾನೇನೆಂದು ಅರಿಯನಂದು.
1039
ಆದಿಪುರುಷನ ಮನವು ಮಹವನಕ್ಕಾಡೆ,
ಮತ್ತಲ್ಲಿಯೆ ಆನಂದದಿಂದ ಆ ನಿರವಯವು ಬೆಸಲಾಯಿತ್ತು.
ಧರೆ, ಅಂಬರ, ವಾರುಧಿ ಸಹಿತ,
ಜಾರೆಯೆಂದಡೆ ಜಗದಲ್ಲಿ ನಿಂದವು Zõ್ಞರಾಸಿಲಕ್ಷ ಜೀವಜಾಲಗಳು.
ಹೋರೆಯೆಂದಡೆ ಆಕಾಶದಲ್ಲಿ ನಿಂದರು
ಗರುಡಗಂಧರ್ವಸಿದ್ಧ ವಿದ್ಯಾಧರದೇವರ್ಕಳು-
ಮೊದಲಾದ ದೇವಸಮೂಹಂಗಳೆಲ್ಲ
ಕೂಡಲಸಂಗಮದೇವಾ,
ನೀವು ಮನದಲ್ಲಿ ಸಂಕಲ್ಪಿಸಿ ಆಗೆಂದಡೆ ಆದವು.
1040
ಆದಿ ಭಕ್ತ, ಅನಾದಿ ಜಂಗಮ,
ಆದಿ ಶಕ್ತಿ, ಅನಾದಿ ಶಿವನು ನೋಡಾ.
ಎನ್ನ ಆದಿಪಿಂಡಕ್ಕೆ ನೀನೆ ಆಧಾರವಾಗಿ ತೋರಿದಡೆ
[ಎನ್ನ] ಹೃದಯಕಮಲದಲ್ಲಿ ನಿಮ್ಮ ಕಂಡೆನು.
ಆ ಕಾಂಬ ಜ್ಞಾನವೆ ಜಂಗಮ,
ಆ ಜಂಗಮವಿಡಿದಲ್ಲದೆ ಲಿಂಗವ ಕಾಣಬಾರದು.
ಆ ಜಂಗಮವಿಡಿದಲ್ಲದೆ ಗುರುವ ಕಾಣಬಾರದು,
ಆ ಜಂಗಮವಿಡಿದಲ್ಲದೆ ಪ್ರಸಾದವ ಕಾಣಬಾರದು.
ಕಾಯ ಭಕ್ತ, ಪ್ರಾಣ ಜಂಗಮವೆಂಬ ವಚನವ ತಿಳಿಯಲು
ಎನ್ನ ಪ್ರಾಣ ನೀವಲ್ಲದೆ ಮತ್ತಾರು ಹೇಳಯ್ಯಾ
ಇದು ಕಾರಣ, ನಿಮ್ಮ ಘನವ ಕಿರಿದು ಮಾಡಿ,
ಎನ್ನನೊಂದು ಘನವ ಮಾಡಿ ನುಡಿವಿರಿ, ಕೂಡಲಸಂಗಮದೇವಾ.
1041
ಆದಿಯನರುಹಿದ, ಅನಾದಿಯ ತೋರಿದ,
ಇಹವ ಕೆಡಿಸಿದ, ಪರವ ನಿಲಿಸಿದ, ಘನವ ತೋರಿದ.
ಮನವ ಸರಿಸವಿಟ್ಟು ಅನುವ ತೋರಿ ಆಯತವ ಮಾಡಿ
ತನುವ ಮರೆಸಿ ಮಹವನರುಪಿದ,
ಹಿಂದಣ ಪೂರ್ವಾಶ್ರಯವ ಹಿಂದುಮಾಡಿ ತೋರಿ,
ಮುಂದಣ ಗತಿಯ ಸಂದೇಹವ ಬಿಡಿಸಿದ.
ಕೂಡಲಸಂಗಮದೇವರಲ್ಲಿ ಪ್ರಭುದೇವರ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.
1042
 1043
ಆದಿಯ ಲಿಂಗವ ತಂದಾತನಲ್ಲಯ್ಯನು.
ಅನಾದಿಯ ಲಿಂಗವ ತಂದಾತನಲ್ಲಯ್ಯನು.
ಭಾಪುರೆ ಜಂಗಮವೆ, ನಿರ್ವಯಲಯನವಗ್ರಹಿಸಿದಿರಿ,
ನಿಮಗೋಸುಗ ಮಾಡುವ ಸಯದಾನವನು
ನಡೆಗೆಟ್ಟು ಮಾಡುವೆನು, ನುಡಿಗೆಟ್ಟು ಮಾಡುವೆನು,
ಸರ್ವಕುಳಕ್ಕೆ ನೀನೆಂದು ಅಲ್ಲಯ್ಯನ ಪ್ರಸಾದಕ್ಕೆ ಕೈಯಾನುವೆನು.
ನವಬ್ರಹ್ಮರ ಕೇರಿಯೊಳಗೆ ಅಲ್ಲಯ್ಯನ ಪರಭೆ,
ರುದ್ರಭೂಮಿಯೊಳಗೆ ಅಲ್ಲಯ್ಯನ ಪ್ರಭೆ,
ಬಂದು ನಿಂದ ನಿಲವಿಂಗೆ ಅಲ್ಲಯ್ಯನ ಪ್ರಭೆ.
ಸಯದಾನವಿಲ್ಲದಡೆ ಎನ್ನ ನೀಡುವೆನು ಕೂಡಲಸಂಗಮದೇವಯ್ಯಾ.
1044
ಆದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ,
ಅನಾದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ,
ಸಾಧ್ಯಾಸಾಧ್ಯವೆಂಬ ಸೂತಕ ಶಬ್ದಕ್ಕತೀತ.
ಆ ಲಿಂಗವೆ ಆಲಿಂಗನವಾಗಿ ಅವಿರಳ ಸಂಪನ್ನನಾದಲ್ಲಿ,
ಭೇದಭಾವವುಂಟೆಂಬೆನೆ ಅದೆ ಭವಕ್ಕೆ ಬೀಜ.
ಎನ್ನ ಪ್ರಾಣಲಿಂಗ ನೀವೆಂದೆ ಇಪ್ಪೆನಯ್ಯಾ
ಕೂಡಲಸಂಗಮದೇವಾ.
1045
ಆದಿ ಲಿಂಗ, ಅನಾದಿ ಜಂಗಮವು,
ಆ ಜಂಗಮಕ್ಕೆ ಮಾಡಿದಡೆ ಪರಮಾನಂದ ಸುಖವಯ್ಯಾ.
ಗುರುವಿಂಗೆ ಪರಮಗುರು ಜಂಗಮವೆಂದುದು
ಕೂಡಲಸಂಗಯ್ಯನ ವಚನ.
1046
ಆದುದನರಿಯೆ, ಹೋದುದನರಿಯೆ,
ಬಂದುದನರಿಯೆ, ನಿಂದುದನರಿಯೆ,
ಒಳಗನರಿಯೆ, ಹೊರಗನರಿಯೆ,
ಇಹವನರಿಯೆ, ಪರವನರಿಯೆ,
ಭಾವವನರಿಯೆ, ನಿರ್ಭಾವವನರಿಯೆ,
ಶೂನ್ಯವನರಿಯೆ, ನಿಃಶೂನ್ಯವನರಿಯೆ.
ಕೂಡಲಸಂಗಮದೇವಯ್ಯಾ,
ಇವೆಲ್ಲವ ಮಾಡಿ ಕೂಡಿದಾತ ಮಡಿವಾಳ ಬಲ್ಲನಾಗಿ,
ನಾನೇನೆಂದೂ ಅರಿಯೆನಯ್ಯಾ.
1047
ಆನು, ನಿಮ್ಮ ಬಂಟರ ಬಂಟ ನಾನಯ್ಯಾ,
ಆನು, ನಿಮ್ಮ ಲೆಂಕರ ಲೆಂಕ ನಾನಯ್ಯಾ,
ಆನು, ನಿಮ್ಮ ತೊತ್ತಿರ ಪಡುಗವ ತೆಗೆವ ಪಡಿದೊತ್ತಯ್ಯಾ.
ಕೂಡಲಸಂಗನ ಶರಣರಿಗೆಲ್ಲಾ ಸಂಗನಬಸವನ ಬಿನ್ನಪ;
ಕವಳಿಗೆಗೆ ಸಂದಿತ್ತು
ನಿಮ್ಮ ನಿಜಪದದಲ್ಲಿ ಬೆರಸೆಂದು ಕೃಪೆಮಾಡಿರಯ್ಯಾ.
1048
ಆನು ನಿಮ್ಮಲ್ಲಿ ಪ್ರಪಂಚಿನುಪಚಾರವನರಿಯೆನಯ್ಯಾ.
ನಿಮ್ಮ ಪಾದದಲ್ಲಿ ತದ್ಗತನಾಗಿಪ್ಪೆ,
ಭಕ್ತಿ ಯುಕ್ತಿ ವಿರಕ್ತಿಯ ಉಪಚಾರವನರಿಯೆನು.
ಕೂಡಲಸಂಗಮದೇವಾ,
ಭಿನ್ನವಿಲ್ಲದ ಭೃತ್ಯಾಚಾರಕ್ಕೆ ಬಂದ ಪದಾರ್ಥವ ನೀನೆಂದೆ ಚಿತ್ತೈಸಯ್ಯಾ.
1049
ಆನು ಭಕ್ತನಲ್ಲ, ಆನು ಯುಕ್ತನಲ್ಲ,
ನೀವು ಮಾಡಿದ ಸೂತ್ರದ ಬೊಂಬೆ ನಾನಯ್ಯ.
ಎನಗೆ ಬೇರೆ ಸ್ವತಂತ್ರವುಂಟೆ
ನೀವೆನ್ನ ಮಾನಾಭಿಮಾನಕ್ಕೊಡೆಯರಾದ ಬಳಿಕ
ಎನ್ನ ತಪ್ಪ ಲೆಕ್ಕಿಸದೆ ಬಿಜಯಂಗೈವುದಯ್ಯಾ,
ಕೂಡಲಸಂಗಮದೇವಾ.
1050
ಆನು ಮಾಡಿದ ತಪ್ಪನೆಣಿಸಿಹೆನೆಂದಡೆ ಗಣನೆಯಿಲ್ಲ.
ನಡೆದು ತಪ್ಪುವೆ, ನುಡಿದು ತಪ್ಪುವೆ,
ಮಾಡಿ ತಪ್ಪುವೆ, ನೀಡಿ ತಪ್ಪುವೆ,
ಅರಿದು ತಪ್ಪುವೆ, ಮರೆದು ತಪ್ಪುವೆ,
ಎನ್ನ ತಪ್ಪನೊಪ್ಪವಮಾಡಿಕೊಂಬುದಲ್ಲದೆ ಚಿತ್ತಕ್ಕೆ ತರಲಾಗದು.
ಕೂಡಲಸಂಗಯ್ಯನೆಂಬ ಗಂಡನೆನ್ನ ಬೆರಸಬೇಕೆಂದು ಕರೆಯಲಟ್ಟಿದನು,
ಶಿವಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆನು.
1051
ಆನೆತ್ತ ಬಲ್ಲೆನಯ್ಯಾ ನಿಮ್ಮ ಭಕ್ತಿಯ ಘನವ
ಆನೆತ್ತ ಬಲ್ಲೆನಯ್ಯಾ ನಿಮ್ಮ ಶ್ರೀಪಾದವ ನಿಲವ
ಕಾಯದ ಕಳವಳದ ಮರೆಯಲಿದ್ದವರಲ್ಲಿ ನಂಬುಗೆಯಳವಡುವುದೆ
ಕೂಡಲಸಂಗಮದೇವಾ
ಎನ್ನವಗುಣವ ನೋಡದೆ ಕರುಣದಿಂದ
ಭಕ್ತಿಯ ನಿಲವ ತೋರಾ ತಂದೆ.
1052
 1053
ಆರತವಡಗಿತ್ತೆನ್ನ, ಬಯಕೆ ಸಮನಿಸಿತ್ತೆನ್ನ,
ಸಂಕಲ್ಪ ಸಮನಿಸಿತ್ತೆನ್ನ, ಸ್ವಯವು ದೊರೆಕೊಂಡಿತ್ತೆನ್ನ.
ನಿಮ್ಮ ನೋಡಿ ಎನ್ನ ಕಂಗೆ ಮಂಗಳಮಯದ ಸುಖಸಂಗವಾಯಿತ್ತು.
ಅಯ್ಯಾ, ಒಳಗು ಹೊರಗು, ಹೊರಗೊಳಗೆಂಬುದ ತಿಳಿದು,
ಪ್ರಭುವಿನ ಕರುಣದಿಂದ ಕೂಡಲಸಂಗಮದೇವರಲ್ಲಿ
ತೆರಹಿಲ್ಲದಿರ್ದೆನು.
1054
 1055
ಆಶೆ ಇಚ್ಛೆಗೆನ್ನ ಗಾಸಿ ಮಾಡದಿರಯ್ಯಾ, 
ದಾಸೋಹಿಯಾಗಿರ್ಪ ದಾಸನಾಗಿರಿಸೆನ್ನ
ಕೂಡಲಸಂಗಮದೇವಾ, ನಿಮ್ಮ ಧರ್ಮ.
1056
ಆಹ್ವಾನವಿಲ್ಲ ಪ್ರಾಣಲಿಂಗವಾಗಿ,
ವಿಸರ್ಜನವಿಲ್ಲ ಲಿಂಗ ನೆಲೆಗೊಂಡಿಪ್ಪುದಾಗಿ.
ಇದು ಕಾರಣ, ಆಹ್ವಾನ ವಿಸರ್ಜನವಿಲ್ಲ, ಶರಣನ ಪರಿ ಬೇರೆ;
ಅಂಗಸಂಗವೆ ಲಿಂಗ, ಲಿಂಗಸಂಗವೆ ಮನ,
ಕೂಡಲಸಂಗನ ಶರಣ ಸುಯಿಧಾನಿ.
1057
ಇಂದ್ರನಾವಾಸ, ಉಪೇಂದ್ರನ ಓಲಗ
ಚಂದ್ರವರಿõ್ಞಳಿಯನರಿಯದೆ ಹೋಯಿತ್ತು,
ಬಂಧಮೋಕ್ಷದ ಭವಬಂಧನ ಬಿಡದನ್ನಕ್ಕರ
ಮತ್ತೊಂದರ ಮುಖ ಜನಿಸಿತಲ್ಲಾ.
ಕೂಡಲಸಂಗಮದೇವಾ,
ಚೆನ್ನಬಸವಣ್ಣನ ಸನ್ನಿಧಿಯಿಂದಲಾನು ಬದುಕಿದೆನು.
1058
 1059
 1060
ಇನ್ನೇವೆನಿನ್ನೇವೆನಯ್ಯಾ
ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು,
ಎನ್ನ ನಿಂದಲ್ಲಿ ನಿಲ್ಲಲೀಯದು,
ಎನ್ನ ಕುಳಿತಲ್ಲಿ ಕುಳ್ಳಿರಲೀಯದು,
ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ.
ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ.
ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ.
ಕೂಡಲಸಂಗಮದೇವಾ
ಈ ಮನವೆಂಬ ಮರ್ಕಟನ ದಾಳಿಯನೆಂದಿಗೆ ನೀಗಿ,
ಎಂದು ನಿಮ್ಮನೊಡಗೂಡುವೆನಯ್ಯಾ.
1061
ಇಷ್ಟಲಿಂಗಕ್ಕರ್ಪಿಸಿ, ಮೃಷ್ಟಾನ್ನವನುಂಡು,
ಇಷ್ಟಾರ್ಥಸಿದ್ಧಿಯ ಪಡೆದೆಹೆವೆಂಬ ಮರಳುಗಳು ನೀವು ಕೇಳಿರೆ;
ಪ್ರಾಣಲಿಂಗಸ್ಥಲ ನಿಮಗೆಲ್ಲಿಯದು ಪ್ರಸಾದಸ್ಥಲ ನಿಮಗೆಲ್ಲಿಯದು
ಓಗರವನುಂಡು ಆಗಾದೆವೆಂದಡೆ,
ಮೂಗಕೊಯ್ಯದೆ ಮಾಣ್ಬನೆ ನಮ್ಮ ಕೂಡಲಸಂಗಮದೇವನು.
1062
ಇಷ್ಟಲಿಂಗವೊಂದು ಪ್ರಾಣಲಿಂಗ[ವೊಂದು, ಭಾವಲಿಂಗ]ವೊಂದೆಂಬ
ಮಿಟ್ಟಿಯ ಭಂಡರ, ಅವರ ಮಾತ ಕೇಳಲಾಗದು.
ಅಂಗಳದೊಳಗೊಬ್ಬ ಗಂಡ, ಮನೆಯೊಳಗೊಬ್ಬ ಗಂಡ,
ಹಿತ್ತಿಲೊಳಗೊಬ್ಬ ಗಂಡನೆಂಬ ಸತಿಯರ
ಲೋಕದ ಮಾನವರು ಮೆಟ್ಟಿ ಮೂಗಕೊಯ್ಯದೆ ಮಾಣ್ಬರೆ, ಅಯ್ಯಾ ?
ಲಿಂಗತ್ರಯವೆಂದು ತೋರಿದವರಾರೊ ?
`ಲಿಂಗಮೇಕಂ ಪರಂ ನಾಸ್ತಿ ಎಂದು ಸದ್ಗುರುಸ್ವಾಮಿ ಅರುಹಿದನಾಗಿ.
ಷಟ್ತ್ರಿಂಶತ್ತತ್ವಕ್ಕೆ ಆಲಯಮಪ್ಪಂತಹ ಮಹಾಘನಲಿಂಗದ ಬೆಳಗು
ಕರಸ್ಥಲದಲ್ಲಿ, ಮನಸ್ಥಲದಲ್ಲಿ, [ಭಾವಸ್ಥಲದಲ್ಲಿ] ವೇದ್ಯವಾದ ಬಳಿಕ
ಸರ್ವಾಂಗಲಿಂಗ, ಕೂಡಲಸಂಗಯ್ಯಾ ನಿಮ್ಮ ಶರಣಂಗೆ.
1063
ಇಹದ ಪೂರ್ವವ ಜರೆದು, ಪರದ ಪೂರ್ವವನರಿದು,
ಗುರುಕಾರುಣ್ಯವ ಪಡೆದು, ಅಂತರ್ಬಾಹ್ಯದ ಭವಿಯ ತೊರೆದು
ಭಕ್ತಿಪರಾಯಣರಾಗಿ ನಿಂದುದೆ ಲಿಂಗದ ನಿಜದಂಗ.
ಅದೆಂತೆಂದಡೆ;
ತ್ರಿಗುಣಂ ಪಂಚಕಂ ಚೈವ ಚತ್ವಾರಿ ಷಡ್ವಿಧೈವ ಚ
ಸಘಾತಂ ವ್ಯಸನಂ ಚೈವ ಇತ್ಯಾದಿ ಭವಿಮಿಶ್ರಿತಂ
ಎಂದುದಾಗಿ, ಅಂತರಂಗದ ಭವಿಯನು ಹಿಂಗಿ,
ಅನೃತಮಸ್ಥಿರಂ ವಾಕ್ಯಂ ವಂಚನಂ ಪಙ್ತಭೇದನಂ
ಔದಾಸೀನಂ ನಿರ್ದಯತ್ವಂ ಷಡ್ವಿಧಂ ಭವಿಮಿಶ್ರಿತಂ
ಎಂಬೀ ಮಾನವರಂಗದ ಭವಿಯನು ಕಳೆದು,
ಅರ್ಚನಾದಿ ಕ್ರಿಯಾಕಾಲೇ ಪ್ರಚ್ಛನ್ನಂ ಪಟಮುತ್ತಮಂ
ಪಾಪೀ ಕೋಪೀ ಪರಿಭ್ರಷ್ಟೋನಾಸ್ತಿಕೋ ವ್ರತದೂಷಕಃ
ದುರ್ಜನಶ್ಚ ದುರಾಚಾರೀ ದುರ್ಮುಖಶ್ಚಾಪ್ಯದೀಕ್ಷಿತಃ
ಪ್ರಮಾದಾದ್ದೃಶ್ಯತೇ ಯೇನ ತಸ್ಯ ಪೂಜಾ ತು ನಿಷ್ಫಲಂ
ಎಂಬೀ ಬಹಿರಂಗದ ಭವಿಯನ್ನು ತೊಲಗಿಸಿ,
ಇಂತೀ ತ್ರಿವಿಧಭವಿಯನು ದೂರಮಾಡಿ,
ಶಿವಭಕ್ತಿಯೆ ಅಂಗವಾದ ಲಿಂಗೈಕ್ಯ ಲಿಂಗಪೂಜಕರಿಗೆ
ಪೂರ್ವವರ್ಣಾಶ್ರಮಾದಿ ಸೂತಕವಿಲ್ಲ, ಕೂಡಲಸಂಗಯ್ಯಾ.
1064
ಈ ಕೈಯಲೆ ಸುಖವು, ಈ ಕೈಯಲೆ ದುಃಖವು.
ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ
ನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗ ನಾನು,
ಕೂಡಲಸಂಗಮದೇವಾ.
1065
 1066
 1067
ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ
ಮಾಡುವ ಕರ್ಮಿ ನೀ ಕೇಳಾ;
ಉದಯವೆಂದೇನೊ ಶರಣಂಗೆ
ಮಧ್ಯಾಹ್ನವೆಂದೇನೊ ಶರಣಂಗೆ
ಅಸ್ತಮಾನವೆಂದೇನೊ ಶರಣಂಗೆ
ಮಹಾಮೇರುವಿನ ಮರೆಯಲ್ಲಿರ್ದು
ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ,
ನಮ್ಮ ಕೂಡಲಸಂಗಮದೇವರು.
1068
 1069
 1070
 1071
 1072
ಎಣಿಕೆಗೆ ಬಂದ ಸಯದಾನ ಕ್ಷಣಕ್ಕೆ ಪಾಕವಾಗಲು,
ಗಣನೆಯಿಲ್ಲದೆ ನೀಡುತ್ತಿರಲು,
ತೋರದ ಮುನ್ನವೆ ಅರ್ಪಿತವಾದವು.
ಇಂತು ಎಣಿಸಿ ನೋಡೆಹೆನೆಂದಡೆ ಮನಕೆ ಸಾಧ್ಯವಲ್ಲ,
ಬಯಲು ಬಾಯಿದೆಗೆದಂತೆ ಉಣ್ಣುತ್ತಿದ್ದಾನು,
ಕೂಡಲಸಂಗಮದೇವನು.
1073
 1074
ಎನಗೆ ಜನನವಾಯಿತ್ತೆಂಬರು ಎನಗೆ ಜನನವಿಲ್ಲವಯ್ಯಾ,
ಎನಗೆ ಮರಣವಾಯಿತ್ತೆಂಬರು ಎನಗೆ ಮರಣವಿಲ್ಲವಯ್ಯಾ.
ಜನನವಾದಡೆ ನಿಮ್ಮ ಪಾದೋದಕ ಪ್ರಸಾದವ ಕೊಂಬೆ,
ಮರಣವಾದಡೆ ನಿಮ್ಮ ಶ್ರೀಚರಣವನೆಯ್ದುವೆ.
ಬಾವನ್ನದ ವೃಕ್ಷವು ಊರೊಳಗಿದ್ದಡೇನು, ಅಡವಿಯೊಳಗಿದ್ದಡೇನು
ಪರಿಮಳ ಒಂದೇ, ಕೂಡಲಸಂಗಮದೇವಾ.
1075
ಎನಗೆ ನಾನೇ ಹಗೆ ನೋಡಯ್ಯಾ,
ಎನಗೆ ನಾನೇ ಕೆಳೆ ನೋಡಯ್ಯಾ.
ನಿಮ್ಮ ಸದ್ಭಕ್ತರೊಡನೆ ವಿರೋಧಮಾಡಿದಡೆ ಎನ್ನ ಕೊಲುವುದಾಗಿ,
ನಿಮ್ಮ ಪುರಾತನರಿಗಂಜಿ ಬೆಸಗೊಂಡಡೆ ಎನ್ನ ಕಾಯ್ವುದಾಗಿ.
ಅನ್ಯ ಹಗೆಯೆಲ್ಲಿ ಕೆಳೆಯೆಲ್ಲಿ
ಬಾಗಿದ ತಲೆಯ ಮುಗಿದ ಕೈಯಾಗಿರಿಸು,
ಕೂಡಲಸಂಗಮದೇವಾ.
1076
ಎನ್ನಂಗದ ಮೇಲಿದ್ದ ಲಿಂಗವ ದಿಟಮಾಡಲರಿಯೆನು,
ಜಂಗಮವೆ ಲಿಂಗವೆಂಬ ಮಾತೆನಗೆ ಕಷ್ಟ.
ಕಲಹ ಕಡುಗೋಪಿ ನಾನಯ್ಯಾ, ದುರಾಚಾರಿ ನಾನು,
ಎನಗೆ ಕರುಣಿಸು ಕೂಡಲಸಂಗಮದೇವಾ.
1077
ಎನ್ನಂತರಂಗದೊಳಗೆ ಅರಿವಾಗಿ,
ಎನ್ನ ಬಹಿರಂಗದೊಳಗೆ ಆಚಾರವಾಗಿ ನೀನೆಡೆಗೊಂಡು,
ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು,
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವೆಂಬ
ಚತುರ್ವಿಧವನೂ ಎನಗೆ ಸ್ವಾಯತವ ಮಾಡಿ ತೋರಿ,
ಪ್ರಾಣಲಿಂಗವೆಂಬ ಹಾದಿಯ ಸೆರಗ ತೋರಿಸಿ,
ಎಲ್ಲಾ ಅಸಂಖ್ಯಾತರನೂ ಪಾವನವ ಮಾಡಿದಿರಾಗಿ-
ಕೂಡಲಸಂಗಮದೇವಾ,
ನಿಮ್ಮಿಂದ ಸಕಲ ಸನುಮತವ ನಾನರಿದೆನಲ್ಲದೆ,
ಎನ್ನಿಂದ ನೀನಾದೆ ಎಂಬುದ ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ.
1078
ಎನ್ನಂತರಂಗ ನೀವಯ್ಯಾ, ಎನ್ನ ಬಹಿರಂಗ ನೀವಯ್ಯಾ,
ಎನ್ನ ಅರಿವು ನೀವಯ್ಯಾ, ಎನ್ನ ಮರಹು ನೀವಯ್ಯಾ,
ಎನ್ನ ಭಕ್ತಿ ನೀವಯ್ಯಾ, ಎನ್ನ ಯುಕ್ತಿ ನೀವಯ್ಯಾ,
ಎನ್ನ ಆಲಸ್ಯ ನೀವಯ್ಯಾ, ಎನ್ನ ಪರವಶ ನೀವಯ್ಯಾ,
ಸಮುದ್ರವ ಹೊಕ್ಕ ಕಾಲುವಳ್ಳದಲ್ಲಿ
ಕೊರತೆಯನರಸುವುದೆ, ಆ ಸಮುದ್ರವು
ಎನ್ನ ಲೇಸು ಹೊಲ್ಲೆಹವೆಂಬುದು ನಿಮ್ಮದೆಂಬುದ ನೀವೆ ಬಲ್ಲಿರಿ,
ಇದಕ್ಕೆ ನಿಮ್ಮ ಪಾದವೆ ಸಾಕ್ಷಿ, ಎನ್ನ ಮನವೆ ಸಾಕ್ಷಿ,
ಕೂಡಲಸಂಗಮದೇವಾ.
1079
ಎನ್ನ ಕರಸ್ಥಲದ ಲಿಂಗವ ಅನಿಮಿಷ ಕೊಂಡನು,
ಅನಿಮಿಷನ ಕರಸ್ಥಲದ ಲಿಂಗವ ನೀವು ಕೊಂಡಿರಿ.
ನಿಮ್ಮ ಕರಸ್ಥಲವೆ ಪರಸ್ಥಲವಾಯಿತ್ತು,
ಕುರುಹಳಿದಲ್ಲಿ ಕುರುಹ ಕೊಂಬ ಪರಿ ಎಂತಯ್ಯಾ
ಕೊಡುವವರು ಕೊಂಬವರೊಳಗೆ ಸಿಲುಕಿದ ಬಳಿಕ
ಕೊಂಬವರು ಕೊಡುವವರೊಳಗೆ ಸಿಲುಕಿದ ಬಳಿಕ,
ಕೂಡಲಸಂಗಮದೇವಪ್ರಭುವೆ,
ನಿಮ್ಮ ಕರಸ್ಥಲದ ಲಿಂಗವೆನಗೆ ಸಾಧ್ಯವಹ ಪರಿಯೆಂತಯ್ಯಾ.
1080
ಎನ್ನ ಕಾಯಕ್ಕೆ ಕಾಹ ಹೇಳುವರಲ್ಲದೆ ಮನಕ್ಕೆ ಕಾಹ
ಹೇಳುವರಿಲ್ಲಯ್ಯಾ,
ಅಣಕದ ಮಿಂಡತನಂಗಳ ನೋಡಿ ಕಂಡೆನವ್ವಾ.
ಈತನ ಲೀಲೆಗಂಡಾನು ಬೆರಗಾದೆ.
ಕೂಡಲಸಂಗಮದೇವ ಎನ್ನ ಮನಕ್ಕೆ ಕಾಹ ಹೇಳಿದನವ್ವಾ.
1081
ಎನ್ನ ಕಾಯದ ಕತ್ತಲೆಯ ಕಳೆಯಲರಿಯೆನು,
ಎನ್ನ ಜೀವದ ನಿಲವ ಗೆಲಲರಿಯೆನು,
ಎನ್ನ ಭಾವದ ಸೂತಕವ ಕಳೆಯಲರಿಯೆನು.
ನಾನೆಂತು ಬಲ್ಲೆನಯ್ಯಾ ನಿಮ್ಮ ಘನಮಹಿಮರ ನಿಲವ
ಕೂಡಲಸಂಗಮದೇವಾ,
ನಿಮ್ಮ ಶರಣ ಮಡಿವಾಳ ಮಾಚಿತಂದೆಯ ಘನವ ನೀವೆ ಬಲ್ಲಿರಿ.
1082
ಎನ್ನ ಕಾಯದ ಕತ್ತಲೆ ಹಿಂಗಿತ್ತು,
ಚೆನ್ನಬಸವಣ್ಣಾ ಇಂದಿನಲ್ಲಿ.
ಎನ್ನ ತನುಮನಧನದ ಲೋಭವಳಿದು ತಳವೆಳಗಾಯಿತ್ತು,
ಚೆನ್ನಬಸವಣ್ಣಾ ಇಂದಿನಲ್ಲಿ.
ಎನ್ನನೆಡೆಗೊಂಡ ಅಹಂಕಾರ ನಿರ್ವಯಲಾಯಿತ್ತು
ಚೆನ್ನಬಸವಣ್ಣಾ ಇಂದಿನಲ್ಲಿ.
ಕೂಡಲಸಂಗಮದೇವರ ತೃಪ್ತಿಯ ತೆರನ
ನೀನು ತೋರಿದೆಯಾಗಿ ನಾನು ಬದುಕಿದೆ ಕಾಣಾ,
ಚೆನ್ನಬಸವಣ್ಣಾ.
1083
ಎನ್ನ ಕಾಯದ ಕರಸ್ಥಲದಲ್ಲಿ ಅಲ್ಲಮಪ್ರಭುದೇವರ ಕಂಡೆನು,
ಎನ್ನ ಮನದ ಕರಸ್ಥಲದಲ್ಲಿ ಚೆನ್ನಬಸವಣ್ಣನ ಕಂಡೆನು,
ಎನ್ನ ಅರಿವಿನ ಕರಸ್ಥಲದಲ್ಲಿ ಮಡಿವಾಳಯ್ಯನ ಕಂಡೆನು.
ಒಳಗು ಹೊರಗು, ಹೊರಗು ಒಳಗೆಂಬ ಭೇದವನರಿಯದೆ ಇದ್ದೆನು.
ಕೂಡಲಸಂಗಮದೇವಯ್ಯಾ,ನಿಮ್ಮ ಶರಣರು ಎನ್ನ ಪಾವನವ ಮಾಡಿದ
ಪರಿಣಾಮವ
ಅಂತಿಂತೆನಲಮ್ಮದೆ ನಮೋ ನಮೋ ಎನುತ್ತಿದ್ದೆನು.
1084
ಎನ್ನ ಕಾಯವ ಶುದ್ಧವ ಮಾಡಿದಾತ ಮಡಿವಾಳ,
ಎನ್ನ ಮನವ ನಿರ್ಮಳವ ಮಾಡಿದಾತ ಮಡಿವಾಳ,
ಎನ್ನಂತರಂಗವ ಬೆಳಗಿದಾತ ಮಡಿವಾಳ,
ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ.
ಕೂಡಲಸಂಗಮದೇವಾ,
ಎನ್ನ ನಿಮಗೆ ಯೋಗ್ಯನ ಮಾಡಿದಾತ ಮಡಿವಾಳ.
1085
 1086
ಎನ್ನ ಗುರು ಪರಮಗುರು ನೀವೆ ಕಂಡಯ್ಯ,
ಎನ್ನ ಗತಿಮತಿ ನೀವೆ ಕಂಡಯ್ಯ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.
ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.
1087
ಎನ್ನ ತನುಮನವೆರಡನೂ
ಗುರು ಕಳೆದು ಲಿಂಗದಲಿ ಏಕವ ಮಾಡಿದನಾಗಿ,
ಎನ್ನ ಅಂತರಂಗ ಬಹಿರಂಗವೆರಡೂ
ನಿಮ್ಮವು ನೋಡಾ !
ನಿಮ್ಮ ಅಂತರಂಗದೊಳಗೆ
ನಿಮ್ಮನೆ ಇಂಬಿಟ್ಟುಕೊಂಬೆ,
ನಿಮ್ಮ ಬಹಿರಂಗದೊಳಗೆ
ನಿಮ್ಮನೆ ನೀವಾಗಿ ಪೂಜಿಸುವೆ,
ನಿಮ್ಮ ಅರಿವಿಂದ ನಿಮ್ಮನೆ ಅರಿವೆ ಕಾಣಾ,
ಕೂಡಲಸಂಗಮದೇವಾ.
1088
 1089
ಎನ್ನ ತನುವಿಡಿದವರ ತನುವ ಬೆರೆಸುವೆನು,
ಎನ್ನ ಮನವಿಡಿದವರ ಮನವ ಬೆರೆಸುವೆನು,
ಎನ್ನ ಶಿರವನವರ ಪಾದಕ್ಕೆ ಪೂಜೆಯ ಮಾಡುವೆನು.
ಕೂಡಲಸಂಗನ ಶರಣರನು
ಒಡಗೊಂಡು ಬಂದೆನ್ನ ಭವವ ಹರಿವೆನು.
1090
ಎನ್ನ ನುಡಿ ಎನಗೆ ನಂಜಾಯಿತ್ತು, ಎನ್ನ ಅಲಗೆ ಎನ್ನ ಕೊಂದಿತ್ತು.
ಆನು ಪಾಪಿಯಯ್ಯಾ, ಆನು ಕೋಪಿಯಯ್ಯಾ.
ತರಳತನದಲ್ಲಿ ಕೆಟ್ಟೆನಯ್ಯಾ,
ಭಕ್ತಿಯ ಹೊಲಬನರಿಯದೆ ಮರುಳಾದೆನಯ್ಯಾ.
ಆಳು ಮುನಿದಡೆ ಆಳೇ ಕೆಡುವನು,
ಆಳ್ದ ಮುನಿದಡೆ ಆಳೇ ಕೆಡುವನು.
ನೀವು ಮುನಿದಡೆ ನಾನೇ ಕೆಡುವೆನಯ್ಯಾ
ಕೂಡಲಸಂಗಮದೇವಾ.
1091
ಎನ್ನನುಭಾವದ ಗಮ್ಯವೆ, ಎನ್ನರುಹಿನ ವಿಶ್ರಾಮವೆ,
ಎನ್ನ ಭಾವದ ಬಯಕೆಯೆ, ಎನ್ನ ನಿಜದ ನಿಲವೆ,
ಎನ್ನ ಪರಿಣಾಮದ ಮೇರುವೆ,
ಎನ್ನ ಘನದ ನಿಲವೆ,
ನಿಮ್ಮ ಸುಳುಹು ಎತ್ತಲಡಗಿತ್ತೊ
ನಿಮ್ಮ ನಾಮ ನಿರ್ನಾಮವಾಯಿತ್ತೆ
ಎಲೆ ಪರಮಗುರುವೆ
ಕೂಡಲಸಂಗಯ್ಯನಲ್ಲಿ
ಉರಿಯುಂಡಕರ್ಪುರದಂತಾದೆಯಲ್ಲಾ, ಪ್ರಭುವೆ.
1092
ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವೆತ್ತಿ ತೋರಿ,
ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು,
ನಿಜವೀರಶೈವಾಚಾರವನರುಹಿ ತೋರಿ,
ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ
ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗಂಗಳಲ್ಲಿಸಂದಿಸಿದ
ಶೈವಕರ್ಮವ ಕಳೆದು,
ಭವಮಾಲೆಯ ಹರಿದು, ಭಕ್ತಿಮಾಲೆಯನಿತ್ತು,
ಭವಜ್ಞಾನವ ಕೆಡೆಮೆಟ್ಟಿ, ಭಕ್ತಿಜ್ಞಾನವ ಗಟ್ಟಿಗೊಳಿಸಿ,
ಭವಮಾಟಕೂಟವ ಬಿಡಿಸಿ, ಭಕ್ತಿಮಾಟಕೂಟವ ಹಿಡಿಸಿ,
ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು,
ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂಗಳೆಲ್ಲರಿಗೆ
ಶಿವಸದಾಚಾರದ ಘನವನರುಹಿ ತೋರಿ,
ಮತ್ರ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ,
ಶಿವಭಕ್ತಿಯನುದ್ಧರಿಸಿ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣ
ಎನ್ನನಾಗುಮಾಡಿ ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧನವಿಲ್ಲದೆ,
ಭಕ್ತಿ ಮಾಟಕೂಟದ ಗೊತ್ತಿನಲ್ಲಿರ್ದು
ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕುವೆನು.
1093
ಎನ್ನ ಭಕ್ತಿ ಎಲವದ ಕಾಯಫಲದಂತೆ ನೋಡಯ್ಯಾ,
ಹೊರಗೆ ಹೆಂಪು, ಒಳಗೆ ಬೂರವಯ್ಯಾ,
ನಿಮ್ಮ ದೇವರೆಂದು ಪೂಜಿಸಿ ಮಾನವರೆಂದು ಮರೆವೆನು.
ಸಗುಣ ನಿರ್ಗುಣವೆರಡೂ ಅಳವಡದ ಸಂದೇಹಿ ನಾನಯ್ಯಾ.
ಕೂಡಲಸಂಗಮದೇವಾ,
ಎನ್ನ ಅಪರಾಧವ ಸೈರಿಸುವಡೆ ನೀವಲ್ಲದೆ ಮತ್ತಾರನೂ ಕಾಣೆ,
ಶರಣಾರ್ಥಿ ಶರಣಾರ್ಥಿ, ಕೃಪೆಯಿಂದ ಕರುಣಿಸಿರಯ್ಯಾ.
1094
ಎನ್ನ ಭಕ್ತಿಯ ಶಕ್ತಿಯು ನೀನೆ,
ಎನ್ನ ಯುಕ್ತಿಯ ಶಕ್ತಿಯು ನೀನೆ,
ಎನ್ನ ಮುಕ್ತಿಯ ಶಕ್ತಿಯು ನೀನೆ.
ಎನ್ನ ಮಹಾಘನದ ನಿಲವಿನ ಪ್ರಭೆಯನುಟ್ಟು
ತಳವೆಳಗಾದ ಸ್ವಯಜ್ಞಾನಿ
ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ
ಮಡಿವಾಳನಿಂದರಿದು ಬದುಕಿದೆನಯ್ಯಾ, ಪ್ರಭುವೆ.
1095
ಎನ್ನ ಮನವು ನಿಮ್ಮ ಚರಣವ ಕಂಡ ಬಳಿಕ
ಬೆರಸಿಯಲ್ಲದೆ ಅಗಲಿ ಸೈರಿಸಲಾರೆನಯ್ಯಾ.
ತ್ರಾಹಿ ತ್ರಾಹಿ, ಘನಮಹಿಮಾ,
ನಿಮ್ಮ ಪಾದಾರ್ಚನೆಗೆ ಎನ್ನ ಪರಮಾನಂದಜಲವ ತುಂಬುವೆನಯ್ಯಾ.
ಪೂಜೆಯ ಮಾಡುವಡೆ ಎನ್ನ ಹೃದಯಕಮಲವನ[ರ್ಪಿ]ಸುವೆ,
ಆರತಿಯಿಂದ ಆರತಿಯನೆತ್ತುವೆ,
ಎನ್ನ ಮಹಾಪ್ರಕಾಶದ ಧೂಪವ ಬೀಸುವೆ,
ಎನ್ನ ಸ್ವಾನುಭಾವದ ಗಂಧವನೀವೆ.
ಈ ತೆರನಲ್ಲದೆ ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬುದಕ್ಕೆ
ಬೇರೆ ತೆರನ ಕಾಣೆನಯ್ಯಾ.
ಕೂಡಲಸಂಗಮದೇವಯ್ಯಾ, ಪ್ರಭುವೆನ್ನ ಪ್ರಾಣಲಿಂಗವೆಂಬುದು
ಎನಗಿಂದು ಕಾಣಬಂದಿತ್ತು ನೋಡಯ್ಯಾ.
1096
ಎನ್ನ ಮನವೆಂಬ ಮರ್ಕಟನು ತನುವಿಕಾರವೆಂಬ ಅಲ್ಪಸುಖದಾಸೆಗಾಡಿ,
ವೃಥಾ ಭ್ರಮೆಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ !
ಕೂಡಲಸಂಗಮದೇವರೆಂಬ ಕಲ್ಪವೃಕ್ಷಕ್ಕೆ ಲಂಘಿಸಿ
ಅಪರಿಮಿತದ ಸುಖವನೈದದು, ನೋಡಾ.
1097
ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ, ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ,
ಎನ್ನಯ್ಯಾ ಕೀಟಧ್ಯಾನದಲ್ಲಿ ನಿಮ್ಮನರಸುತ್ತಿದ್ದೇನೆ.
ಎನ್ನಯ್ಯಾ ಕೂಡಲಸಂಗಮದೇವಾ,
ಭ್ರಮರದ ಲೇಸಿನಂತೆ ಕಾರುಣ್ಯವ ಮಾಡು,
ತಪ್ಪೆನ್ನದು, ತಪ್ಪೆನ್ನದು ಶಿವಧೋ ಶಿವಧೋ.
1098
ಎನ್ನ ವಚನರಚನೆಯ ಮೆಚ್ಚ,
ಅಡಿಗಡಿಗೆನ್ನ ಮನದ ಮೈಲಿಗೆಯ ತೊಳೆದು
ಹೋದ ಪ್ರಾಣವ ಮರಳಿ ತಂದು ರಕ್ಷಿಸಿದ.
ಕೂಡಲಸಂಗಮದೇವಯ್ಯಾ,
ಮಡಿವಾಳಯ್ಯಗಳ ಕರುಣದಿಂದ
ಮರುಳುಶಂಕರದೇವರ ನಿಲವ ಕಂಡು ಬದುಕಿದೆನು
ಕಾಣಾ ಕಿನ್ನರಿ ಬ್ರಹ್ಮಯ್ಯಾ.
1099
ಎನ್ನ ಶಿರ ನಿಮ್ಮ ಚರಣವೊರಸೊರಸಿ ಬೆರಸಿ ಭೇದವಿಲ್ಲಯ್ಯಾ,
ಎನ್ನ ಕಾಯದ ಕಪಟ, ಎನ್ನ ಮನದ ವಿಕಾರ,
ನಿಮ್ಮ ಅಂಗುಷ್ಟದ ಮೊನೆಯ ಸೋಂಕಲೊಡನೆ ಹರಿದುದು ನೋಡಯ್ಯಾ.
ಕೂಡಲಸಂಗಮದೇವಯ್ಯಾ ನಿಮ್ಮ ಶ್ರೀಪಾದದ ಬೆಳಗ ಕಂಡು
ಎನ್ನ ಅಂತರಂಗದ ಕತ್ತಲೆ ಓಡಿತ್ತು.
1100
 1101
ಎಮ್ಮಯ್ಯನ ಬಲ್ಲವರು ಒಮ್ಮೆಯೂ ಅರ್ಪಿಸರು,
ಅವರರ್ಪಿಸುವನ್ನಬರ ಎಮ್ಮಯ್ಯ ಸುಮ್ಮನಿರನು.
ಬೆಂದ ಬಿಸಿಯಾರಿದಡೆ ಪ್ರಾಣೇಶನೊಲ್ಲ,
ಕೂಡಲಸಂಗಮದೇವನುಪಚಾರದರ್ಪಿತವನೋಗಡಿಸುವ.
1102
ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು,
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ,
ಉಪಮಿಸಬಲ್ಲವರ ಕಾಣೆನು.
1103
ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ,
ಎನ್ನ ಪ್ರಾಣಲಿಂಗ ಬೇರೆ ಕಂಡಯ್ಯಾ.
ಕೂಡಲಸಂಗಮದೇವ ಕೇಳಯ್ಯಾ,
ಜಂಗಮವೆನ್ನ ಪ್ರಾಣಲಿಂಗ ಕಂಡಯ್ಯಾ.
1104
ಏನೆಂದುಪಮಿಸುವೆನಯ್ಯಾ
ತನ್ನಿಂದ ತಾ ತೋರದೆ,
ಗುರುಮುಖದಿಂದ ತೋರಿದ ತನ್ನ ನಿಲವ,
ನಿರುಪಮನು.
ಶಬ್ದಮುಗ್ಧವಾಗಿ, ಇದ್ದೆಡೆಯನಿದಿರಿಂಗೆ ತೋರದೆ
ಇರವೆ ಪರವಾಗಿರ್ದ ಅಜಡನು.
ಇನನುದಯಕಾಲಕ್ಕೆ ಕುಕ್ಕುಟ ಧ್ವನಿದೋರುವಂತೆ
ಘನಮಹಿಮರ ದರ್ಶನದಿಂದ ಸತ್ಪ್ರಣವವ
ತಾನಾಗಿ ನುಡಿದ ಮೂಲಿಗನು,
ಕೂಡಲಸಂಗಮದೇವರಲ್ಲಿ
ಬೆರೆಸಿ ಬೇರಿಲ್ಲದಿಪ್ಪ ಮರುಳುಶಂಕರದೇವರ ನಿಲವ
ಪ್ರಭುದೇವರು ಸಿದ್ಧರಾಮಯ್ಯದೇವರು
ಹಡಪದಪ್ಪಣ್ಣನಿಂದ ಕಂಡು
ಎನ್ನ ಜನ್ಮ ಸಫಲವಾಯಿತ್ತಯ್ಯಾ.
1105
ಏರಂಡದ ಬಿತ್ತಿನಂತೆ, ರಸವಾರಿಯಂತೆ,
ಪಶುವಿನ ಪಿಸಿತದಲ್ಲಿ ತಲೆದೋರುವ ಅಮೃತದಂತೆ,
ಕಾಯವಿಡಿದು ಬಂದಡೆ ನಿನಗಾ ಭಾವವಿಲ್ಲ.
ಕೂಡಲಸಂಗಮದೇವರಲ್ಲಿ
ಪ್ರಭುದೇವರ ಸುಳುಹು ಅಗಮ್ಯವಾಯಿತ್ತು.
1106
ಒಂದೆತ್ತಿಗೈವರು ಗೊಲ್ಲರು,
ಅಯ್ವರಯ್ವರಿಗೆ ಐದೈದಾಗಿ ಐವರಾಳಯ್ಯಾ.
ತಮ್ಮ ತಮ್ಮಿಚ್ಛೆಗೆ ಹರಿಹರಿದಾಡಿ
ತಾವು ಕೆಟ್ಟು, ಎತ್ತನು ಕೆಡಿಸಿದರಯ್ಯಾ.
ಎತ್ತಿನ ಹೊಯ್ಲಿನ್ನಾರಿಗೆ ಹೇಳುವೆ
ಕೂಡಲಸಂಗಮದೇವಯ್ಯಾ.
1107
ಒಡನಿರ್ದ ಸತಿಯೆಂದು ನಚ್ಚಿರ್ದೆನಯ್ಯಾ,
ಕೈವಿಡಿದ ಸಜ್ಜನೆಯೆಂದು ನಂಬಿರ್ದೆನಯ್ಯಾ.
ಅಯ್ಯಾ, ನಮ್ಮಯ್ಯನ ಕೈನೊಂದಿತು,
ತೆಗೆದುಕೊಡಾ ಎಲೆ ಚಂಡಾಲಗಿತ್ತಿ,
ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದಡೆ
ಕೂಡಲಸಂಗಮದೇವನಲ್ಲದೆ ಆರೂ ಇಲ್ಲ.
1108
ಒಡಲಿಲ್ಲದ ಭಕ್ತನ ಪರಿಯ ನೋಡಾ,
ಮನಪ್ರಾಣಮುಕ್ತ, ಭವರಹಿತಜಂಗಮದ ಪರಿಯ ನೋಡಾ.
ಸಿಡಿಲ ಮಿಂಚಿನ ಬೆಳಗನೊಂದೆಡೆಯಲ್ಲಿ ಹಿಡಿಯಲುಂಟೆ
ಉಭಯ ಒಂದಾದವರ ಕಂಡಡೆ,
ನೀವೆಂಬೆ ಕೂಡಲಸಂಗಮದೇವಾ.
1109
ಒಡಲುಗೊಂಡು ಹುಟ್ಟಿದ ಘಟ್ಟಕ್ಕೆ ಅಷ್ಟೋತ್ತರಶತವ್ಯಾಧಿ.
ಅದಕ್ಕೆ ನಾನಾ ಔಷಧಿಯ ತಂದು ಹೊರೆವರು,
ಆ ಪರಿಯ ನಾನದ ಹೊರಿಯೆನು.
ಅದೇನು ಕಾರಣವೆಂದೆಡೆ :
ಭವರೋಗವೈದ್ಯ, ಭವಹರನೆಂಬ ಬಿರಿದು ನಿಮ್ಮದಾಗಿ.
ಇದು ಕಾರಣ ಕೂಡಲಸಂಗಮದೇವಾ,
ನಿಮ್ಮ ಪುರಾತನರ ಪ್ರಸಾದವಲ್ಲದೆ ಕೊಂಡಡೆ ನಿಮ್ಮಾಣೆ.
1110
ಒಡವೆ ಭಂಡಾರ ಕಡವರ ದ್ರವ್ಯವ
ಬಡ್ಡಿ ಬೆವಹಾರಕ್ಕೆ ಕೊಟ್ಟು
ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ
ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ.
ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ,
ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ.
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ,
ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ.
ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ.
ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ
ಬಾಣಸವ ಮಾಡುವಲ್ಲಿ,
ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಇಂತೀ ತ್ರಿವಿಧವೂ ಹೊರಗಣವು.
ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ.
ಇನ್ನು ನಾನಿದೇನೆ,
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ,
ನೀನು ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು,
ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು,
ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು,
ನವಖಂಡವ ಮಾಡಿ ಕಡಿಕಡಿದು ನೋಡು,
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು.
ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದ ಬಿಡೆ,
ಪಾದತೀರ್ಥಪ್ರಸಾದವ ಕೊಂಬುದ ಬಿಡೆ.
ಇಂತೀ ತ್ರಿವಿಧಕ್ಕೆ ರೋಷವ ಮಾಡಿಬಿಟ್ಟೆನಾದಡೆ,
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ,
ಕೂಡಲಸಂಗಮದೇವಾ. ಬಡ್ಡಿ ಬೆವಹಾರಕ್ಕೆ ಕೊಟ್ಟು
ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ
ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ.
ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ,
ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ.
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚೆಲುವೆ,
ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಪ್ರತ್ಯಕ್ಷವಾಗಿ ಸಿರಿಯಾಳಸೆಟ್ಟಿ ಚಂಗಳವ್ವೆಯ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ.
ಸಂಗಮದೇವಾ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಾನೆ.
ನೀನು ಜಂಗಮರೂಪಾಗಿ ಬಂದು, ಆತನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ, ಚಿನಿಖಂಡವ ಮಾಡಿ
ಬಾಣಸವ ಮಾಡುವಲ್ಲಿ,
ಎನ್ನ ಉದರದಲ್ಲಿ ಬಂದ ಪುತ್ರನೆಂದು ಮಾಯಕ್ಕೆ ನಾನು ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲೆ.
ಇಂತೀ ತ್ರಿವಿಧವೂ ಹೊರಗಣವು.
ಎನ್ನ ನೋವಿನೊಳಗಲ್ಲ, ಎನ್ನ ಬೇನೆಯೊಳಗಲ್ಲ.
ಇನ್ನು ನಾನಿದೇನೆ,
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ,
ನೀನು ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು,
ಬಸಿದ ಶೂಲಪ್ರಾಪ್ತಿಯ ಮಾಡಿ ನೋಡು,
ಸೂಜಿಯ ಮೊನೆಯಂತಿರ್ದ ಶೂಲದ ಮೇಲಿಕ್ಕಿ ನೋಡು,
ನವಖಂಡವ ಮಾಡಿ ಕಡಿಕಡಿದು ನೋಡು,
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು.
ಈ ರೀತಿಯಲ್ಲಿ ಎನ್ನ ಭಂಗಬಡಿಸಿ ನೋಡಿದಡೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದ ಬಿಡೆ,
ಪಾದತೀರ್ಥಪ್ರಸಾದವ ಕೊಂಬುದ ಬಿಡೆ. ಇಂತೀ ತ್ರಿವಿಧಕ್ಕೆ ರೋಷವ
ಮಾಡಿಬಿಟ್ಟೆನಾದಡೆ,
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಇಷ್ಟರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗಕೊಯಿ,
ಕೂಡಲಸಂಗಮದೇವಾ.
1111
ಒಡೆದ ಹಂಚು ಮರಳಿ ಮಡಕೆಯಾಗಬಲ್ಲುದೆ
ಕೆಟ್ಟ ವ್ರತಗೇಡಿ ಭಕ್ತನಾಗಬಲ್ಲನೆ
ಬಾಳೆಗೆ ಫಲವೆ ಕಡೆ, ಚೇಳಿಗೆ ಗರ್ಭವೆ ಕಡೆ.
ಕೂಳು ಮಾರೆಡೆಯುಂಟು, ಸೀರೆ ಮಾರೆಡೆಯುಂಟು,
ಭಕ್ತಿ ಮಾರೆಡೆಯುಂಟೆ, ಕೂಡಲಸಂಗಮದೇವಾ.
1112
ಒಡೆಯರುಳ್ಳಾಳಿಂಗೆ ಕೇಡಿಲ್ಲ ಕಾಣಿರೊ !
ಊರೆನ್ನದೆ ಅಡವಿಯೆನ್ನದೆ, ಆಳನರಸಿ ಬಹ[ಆಳ್ದ]ರುಂಟೆ ?
ಜೋಳವಾಳಿಂಗೆ ಬಿಜ್ಜಳಂಗೆ ಆಳಾದಡೇನು
ವೇಳೆವಾಳಿಂಗೆ ಕೂಡಿಕೊಂಡಿಪ್ಪ ಕೂಡಲಸಂಗಮದೇವ.
1113
ಒತ್ತಿ ಹೊಸೆದ ಕಿಚ್ಚ ನಾ ಮಾಡಿದೆನೆಂದು ಮುಟ್ಟಿ ಹಿಡಿದಡೆ,
ಕೈ ಬೇಯದಿಹುದೆ
ಎನ್ನಿಂದಾಯಿತ್ತು, ಎನ್ನಿಂದಾಯಿತ್ತು, ಎನ್ನಿಂದಾಯಿತ್ತು ಎನ್ನದಿರು ಮನವೆ,
ನಾನು ಮಾಡಿದೆನೆನ್ನದಿರು ಮನವೆ.
ಕೂಡಲಸಂಗಮದೇವ ಕೇಳಯ್ಯಾ,
ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋ ಎಂಬೆನು.
1114
ಓಡದಿರು, ಓಡದಿರು ನಿನ್ನ ಬೇಡುವಾತ ನಾನಲ್ಲ ಶಿವನೆ,
ನೋಡುವೆನು ಕಣ್ಣ ತುಂಬ, ಆಡಿ ಪಾಡಿ ನಲಿದಾಡುವೆ.
ಬೇಡೆನ್ನ ಕೂಡೆ ಮಾತಾಡಲಾಗದೆ, ಎಲೆ ಶಿವನೆ.
ಕೂಡಲಸಂಗಮದೇವಾ, ನೀನಾಡಿಸುವ ಬೊಂಬೆ ನಾನು.
1115
ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು,
ಪುರಾಣದ ಹಿರಿಯರು, ವೇಷದ ಹಿರಿಯರು, ಭಾಷೆಯ ಹಿರಿಯರು,
ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ.
ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವರು.
1116
 1117
 1118
ಕಂಗಳಲ್ಲಿ ಕರಸ್ಥಳದ ನೋಟ, ಅಂಗವಿಕಾರವೆಂಬುದನರಿಯ ನೋಡಾ,
ಮನದ ಕೊನೆಯ ಮೊನೆಯ ಮೇಲಣ ಅನುಭಾವ ಗಮನಗೆಟ್ಟು,
ಭಾವ ನಿರ್ಭಾವವೆಂಬುದನರಿಯ, ನೋಡಾ.
ಕೂಡಲಸಂಗಮದೇವರಲ್ಲಿ
ಪ್ರಭುದೇವರಿಂದಲಾನು ಬದುಕಿದೆನು ಕಾಣಾ, ಚೆನ್ನಬಸವಣ್ಣಾ.
1119
 1120
 1121
 1122
 1123
 1124
ಕಂಡಹರೆಂದು ಕಣ್ಗೆ ಮರೆಮಾಡಿದ,
ಕೇಳಿಹರೆಂದು ಕಿವಿಗೆ ಮರೆಮಾಡಿದ,
ಮುಟ್ಟಿಹರೆಂದು ಕೈಗೆ ಮರೆಮಾಡಿದ,
ಸೋಂಕಿಹರೆಂದು ತನುವಿಂಗೆ ಮರೆಮಾಡಿದ,
ನೆನೆದಹರೆಂದು ಮನಕ್ಕೆ ಮರೆಮಾಡಿದ,
ಅರಿದಹರೆಂದು ಅಂತರಂಗದಲ್ಲಿ ಮರೆಮಾಡಿದ,
ಪೂಜಿಸಿಹರೆಂದು ಕ್ರೀಗೆ ಮರೆಮಾಡಿದ,
ಕೂಡಲಸಂಗಮದೇವರೊಡನೆ, ಅಹಂಕಾರವ ಮಾಡಿ
ಕೆಟ್ಟ ಕೇಡನೇನೆಂದುಪಮಿಸುವೆನು.
1125
 1126
 1127
ಕತ್ತಲೆಯ ನುಂಗಿದ ದೀಪದ ಬೆಳಗಿನಂತೆ,
ಕರ್ದಮವನೀಂಟಿದ ಸುಜಲದಂತೆ,
ಮಧುರರಸವನರಿದ ಜಿಹ್ವೆಯಂತೆ,
ಎನ್ನ ಕಂಗಳಿಗೆ ದೃಷ್ಟವಾಗಿ, ಮನಕ್ಕೆ ಮನೋಹರವಾಗಿ
ಕೂಡಲಸಂಗಮದೇವರಲ್ಲಿ
ಪ್ರಭುದೇವರ ಸುಳುಹು ಚಿಹ್ನವಾಯಿತ್ತು.
1128
ಕತ್ತೆ[ಯ] ಕರವೆತ್ತಿ ಕರವೆತ್ತಿ ಕರೆದಡೆ
ಅದೆತ್ತಣ ವಾರ್ತೆಯೆಂದು ಬಲ್ಲುದು
ಕುಬುದ್ಧಿಯುಳ್ಳವ[ರಿಗೆ] ಸುಬುದ್ಧಿಯ ಹೇಳಿದಡೆ
ಕುಬುದ್ಧಿ ಮಾ[ಣ್ಬು]ದೆ ಕೂಡಲಸಂಗಮದೇವಾ.
1129
ಕದ್ದ ಕಳ್ಳನ ಬಿಟ್ಟಮಂಡೆಯ ಹಿಡಿದು,
ಹುಡುಕು ನೀರೊಳಗದ್ದುವಂತೆ ಮುಳುಗಲಾರೆನು, ಹಿಂಡಲಾರೆನು.
ಹಿಂಗಿದೆನಯ್ಯಾ ಎಲ್ಲ ಹಾರುವ ಕುಲವನು,
ಮುಳುಗುವನ ಕೈಯ ಹಿಡಿದೆತ್ತಿದ
ನಮ್ಮ ನಮ್ಮ ಕೂಡಲಸಂಗಮದೇವ.
1130
ಕಪ್ಪೆಯ ಶಿರದ ಮೇಲೆ ಎಪ್ಪತ್ತೆರಡು ಪುರವ ಕಂಡೆ,
ಆ ಪುರದೊಳಗೊಬ್ಬ ನಾರಿಯ ಕಂಡೆ,
ಆ ನಾರಿಯ ಕೈಯಲ್ಲಿ ನಾರಿವಳ ಸಸಿಯ ಕಂಡೆ.
ಇಂತಪ್ಪ ಬೆಡಗಿನ ಕೀಲ ಬಲ್ಲಾತನೆ
ಪ್ರಾಣಲಿಂಗಸಂಬಂಧಿಯೆಂದೆನಯ್ಯಾ,
ಕೂಡಲಸಂಗಮದೇವಾ.
1131
ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,
ಅವು ಒಂದರ ಸಿಹಿಯನೊಂದರಿಯವು.
ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಬ್ಥಿಮಾನವೆಂಬ ಸಿಗುರು
ಕಾಡಿತ್ತು ಕಾಣಾ, ಕೂಡಲಸಂಗಮದೇವಾ.
1132
 1133
ಕರ್ತನಟ್ಟಿದಡೆ ಮತ್ರ್ಯದಲ್ಲಿ ಮಹಾಮನೆಯ ಕಟ್ಟಿದೆ,
ಸತ್ಯಶರಣರಿಗೆ ತೊತ್ತು ಭೃತ್ಯನಾಗಿ ಸವೆದು ಬದುಕಿದೆನು.
ಕರ್ತನ ಬೆಸನು ಮತ್ತೆ ಬರಲೆಂದಟ್ಟಿದಡೆ,
ಕೂಡಲಸಂಗಮದೇವರ ನಿರೂಪಕ್ಕೆ ಮಹಾಪ್ರಸಾದವೆಂದೆನು.
1134
 1135
 1136
 1137
 1138
 1139
ಕಾಮ್ಯ ಕಲ್ಪಿತಂಗಳಿಲ್ಲದೆ, ನಿಮ್ಮಿಂದ ನೀವೆ ಸ್ವಯಂಭುವಾಗಿದ್ದಿರ[ಲ್ಲಾ],
ನಿಮ್ಮ ಪರಮಾನಂದದ ಪ್ರಭಾಪರಿಣಾಮದಲ್ಲಿ ಒಂದನಂತಕಾಲವಿದ್ದಿರಲ್ಲಾ,
ನಿಮ್ಮಾದ್ಯಂತವ ನೀವೆ ಅರಿವುತಿದ್ದಿರಲ್ಲಾ,
ನಿಮ್ಮ ಸ್ವಭಾವದುದಯವ ನೀವೆ ಬಲ್ಲಿರಿ, ಕೂಡಲಸಂಗಮದೇವಾ.
1140
 1141
 1142
 1143
ಕಾಯದ ಕೈಯಲ್ಲಿ ಕರಸ್ಥಲ,
ಪ್ರಾಣದ ಕೈಯಲ್ಲಿ ಜಂಗಮಸ್ಥಲ,
ಈ ಉಭಯಭಾವದ ಶಿವಲಿಂಗಾರ್ಚನೆ ಪರಮಾನಂದಸುಖಸ್ಥಲ.
ಕಾಯ ಭಕ್ತ, ಪ್ರಾಣ ಜಂಗಮ,
ಆವುದ ಘನವೆಂಬೆನಾವುದ ಕಿರಿದೆಂಬೆ
ಕೂಡಲಸಂಗನ ಶರಣರು ಬಂದಡೆ ಉಪಚಾರಕ್ಕೆ ಇಂಬಿಲ್ಲ,
ಕರುಣದಿಂದ ಬರಹೇಳಾ, ಅಪ್ಪಣ್ಣಾ.
1144
ಕಾಯದ ಲಜ್ಜೆಯ ಕಲ್ಪಿತವ ಕಳೆದು,
ಜೀವದ ಲಜ್ಜೆಯ ಮೋಹವನಳಿದು,
ಮನದ ಲಜ್ಜೆಯ ನೆನಹ ಸುಟ್ಟು,
ಭಾವದ ಕೂಟ ಬತ್ತಲೆಯೆಂದರಿದು,
ತವಕದ ಸ್ನೇಹ ವ್ಯವಹಾರಕ್ಕೆ ಹುಗದು.
ಕೂಡಲಸಂಗಮದೇವಯ್ಯಾ,
ಎನ್ನ ಹೆತ್ತ ತಾಯಿ ಮಹದೇವಿಕ್ಕನ ನಿಲವ ನೋಡಯ್ಯಾ ಪ್ರಭುವೆ.
1145
ಕಾಲದಿಂದ ಕಡೆಮುಟ್ಟ ಮಾಡಿದ ಲೇಸು
ಒಂದು ದಿನ ಉದಾಸೀನವ ಮಾಡಿದಡೆ
ಅದೆಲ್ಲವು ವ್ಯರ್ಥವಾಗಿ ಹೋಹುದು ಕೇಳಯ್ಯಾ.
ಸಾವಿರ ನೋಂಪಿಯ ನೋಂತು ಒಂದು ಬಾರಿ ಹಾದರವನಾಡಿದಡೆ
ಆ ನೋಂಪಿಯೆಲ್ಲವು ನೀರಲ್ಲಿ ನೆರೆದು ಹೋಹಂತೆ ಕೇಳಯ್ಯಾ.
ನಾನು ಎಷ್ಟು ಭಕ್ತಿಯ ಮಾಡಿದಡೇನು
ನಿಮ್ಮ ಶರಣರ ಮನವೆಳ್ಳನಿತು ನೊಂದಡೆ,
ಎನ್ನ ಭಕ್ತಿಯಭಿಮಾನ ಹೋಯಿತ್ತಯ್ಯಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಮುನಿಸನಾವಪರಿಯಲ್ಲಿ ತಿಳುಹುವೆ
ಹೇಳಾ, ಎಲೆ ಪ್ರಭುವೆ.
1146
ಕಾಲ ಮುಟ್ಟಲಮ್ಮದ ಸಯದಾನ, ಕಲ್ಪಿತವಿಲ್ಲದ ಸಯದಾನ.
ಅನಂತರತಿ ಎಂಬ ಹೆಂಗೂಸ ಮುಟ್ಟದ ಸಯದಾನ.
ಭಾಳಲೋಚನನೆಂಬ ಜಂಗಮ ಮುಟ್ಟದ ಸಯದಾನ.
ಎಲ್ಲಿಯೂ ಮುಟ್ಟದ ಸಯದಾನವ ನಿಮಗರ್ಪಿಸಿದೆನು
ಆರೋಗಿಸಯ್ಯಾ ಪ್ರಭುವೆ, ಕೂಡಲಸಂಗಮದೇವಾ.
1147
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು,
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೆ ಕಾಯೋ, ಕೂಡಲಸಂಗಯ್ಯಾ.
1148
 1149
ಕೀಟಕ ಸೂತ್ರದ ನೂಲಗೂಡಮಾಡಿ ಸುತ್ತಿರ್ಪಂತೆ
ಸೂತ್ರಕ್ಕೆ ನೂಲನೆಲ್ಲಿಂದ ತಂದಿತ್ತಯ್ಯಾ
ರಾಟಿಯಿಲ್ಲ, ಅದಕ್ಕೆ ಹಂಜಿ ಮುನ್ನವೆ ಇಲ್ಲ, ನೂತವರಾರೋ
ತನ್ನೊಡಲ ನೂಲ ತೆಗೆದು ಪಸರಿಸಿ, ಅದರೊಳು ಪ್ರೀತಿಯಿಂದೊಲಿದಾಡಿ,
ತುದಿಯಲ್ಲಿ ತನ್ನೊಳಗದ ಮಡಗಿಕೊಂಡಿಪ್ಪಂತೆ,
ತನ್ನಿಂದಾದ ಜಗವ ತನ್ನೊಳಗೈದಿಸಿಕೊಳಬಲ್ಲ
ನಮ್ಮ ಕೂಡಲಸಂಗಮದೇವರು.
1150
 1151
ಕುಲವನರಸುವರೆ ಇದರೊಳು ಛಲವನರಸುವರೆ
ಹೊಲೆಗೇರಿಯಲೊಂದು ಎಲುವಿನ ಮನೆಗಟ್ಟಿ
ತೊಗಲಹೊದಿಕೆ, ನರವಿನ ಹಂಜರ
ಕುಲವನರಸುವರೆ ?
ಹೊಲತಿ ಹೊಲೆಯ[ನು] ಹೋಗಿ
ಹೊಲೆಯಲ್ಲಿ ಮಿಂದಡೆ
ಹೊಲೆ ಹೋಯಿ[ತ್ತಿ]ಲ್ಲ, ಕುಲ ಹೋಗಲಿಲ್ಲ.
ಕಂಬಳಿಯೊಳಗೆ ಕೂಳಕಟ್ಟಿ ಕೂದಲನರಸುವರೆ
ಇಂಥ ಡಂಬಕರ ಕೂಡಲಸಂಗಮದೇವರು ಮೆಚ್ಚರಯ್ಯಾ.
1152
ಕುಲವ ನೋಡದೆ, ಛಲವ ನೋಡದೆ,
ನಿಲವ ನೋಡದೆ ಕೂಡಿದ ಬಳಿಕ,
ಅಲ್ಲಿ ಹೆಚ್ಚು ಕುಂದನರಸಲುಂಟೆ
ಮುಂದುವರಿದು ಜಂಗಮಕ್ಕೆ ಭಕ್ತಿಯ ಮಾಡೆಂದು
ನಿಮ್ಮ ಕಾರುಣ್ಯವನುಪದೇಶವ ಮಾಡಿದ ಬಳಿಕ
ಬಂದುದ ಬಂದಂತೆ ಸಮನಿಸಿಕೊಳ್ಳಬೇಕಲ್ಲದೆ
ಅಂತಿಂತೆನಬಾರದು ಕೇಳಯ್ಯಾ.
ನೀನು ನಿರಾಕಾರ, ಸಾಕಾರವೆಂಬೆರಡು
ಮೂರ್ತಿಯ ಧರಿಸಿಪ್ಪೆಯಾಗಿ,
ಒಂದ ಜರೆದು ಒಂದ ಹಿಡಿದಿಹೆನೆಂದಡೆ
ಅದೆ ಕೊರತೆ ನೋಡಾ ಪ್ರಭುವೆ, ಕೂಡಲಸಂಗಮದೇವಾ.
1153
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಂಗಳು
ಭವರಾಟಳದಲ್ಲಿ ತಿರುಗುತ್ತಿಪ್ಪಲ್ಲಿ
ಅನಂತ ಕೋಟ್ಯನುಕೋಟಿ ಯುಗಂಗಳು
ಮಡಿದುಹೋದವು,
ಅನಂತ ಜಲಪ್ರಳಯಂಗಳು
ಸುರಿದು ಹೋದವು.
ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಗಳೆಲ್ಲ
ಲಯವಾಗಿ ಹೋದವು.
ಇದರೊಳಗೆ ಆವ ಲೋಕದಲ್ಲಿ ಆವ ಯುಗದಲ್ಲಿ
ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನರುಹಿದವರಾರು ಹೇಳಾ
ಗಂಗೆ ಗೌರೀವಲ್ಲಭರು ಮೊದಲಾದ
ಅನಂತಕೋಟಿ ರುದ್ರಾದಿಗಳೆಲ್ಲರೂ
ಪ್ರಾಣಲಿಂಗಸಂಬಂಧದ ಹೊಲಬನರಿಯದೆ
ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಗೆ ಒಳಗಾದರು.
ಶಿವಾಚಾರದ ವಿಚಾರವನರಿಯದೆ
ಜಗವು ಕೆಟ್ಟುಹೋಹುದೆಂದು
ಪರಮಪುರುಷಾರ್ಥಕಾರಣವಾಗಿ ಮತ್ರ್ಯದಲ್ಲಿ
ಅವತರಿಸಿ,ಗುರುಲಿಂಗಜಂಗಮಪಾದೋದಕಪ್ರಸಾದವೆಂಬ
ಪಂಚಾಚಾರಸ್ಥಲವ ನೆಲೆಗೊಳಿಸಿ,
ಷಡುಸ್ಥಲವೆಂಬ ಮಹಾನುಭಾವಮಂ
ಕರತಳಾಮಳಕವಾಗಿ ಸ್ಥಿತಗೊಳಿಸಿ,
ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನೆನಗೆ ತಿಳುಹಿ,
ಎನ್ನ ಭ್ರಾಂತಿಸೂತಕವ ಬಿಡಿಸಿ,
ಲಿಂಗೈಕ್ಯವೆಂಬುದೆನಗೆ ತೋರಿದೆಯಾಗಿ
ನಿನ್ನಿಂದಲಾನು ಸಂಗನಬಸವಣ್ಣನೆಂಬ ಹೆಸರುವಡೆದನು.
ಕೂಡಲಸಂಗಮದೇವರು ಸಾಕ್ಷಿಯಾಗಿ
ಎನಗೆ ನೀನು ಪರಮಾರಾಧ್ಯ ಕಾಣಾ, ಚೆನ್ನಬಸವಣ್ಣಾ.
1154
ಕೆದರಿದ ತಲೆಯ, ತೊನೆವ ನಡೆಯ, ಹಣೆಯ ಬುಗುಟಿನ,
ಕರಸ್ಥಲದ ಅನಿಮಿಷದಿಂದ ಬಹಿರಂಗದ[ವಧಾ]ನ ತಪ್ಪಿ,
ಇದಿರುಗೊಯಿಲು ತಾಗಿ ಪುರ್ಬೊಡೆದು,
ಕಣ್ಣು ತರಿದು, ಕಿವಿ ಹರಿದು,
ಜೋಲುವ ರಕ್ತಧಾರೆಯ, ಗಾಳಿಯ ಧೂಳಿಯ ಮಳೆಯ ಜೋರಿನ,
ಬೆನ್ನ ಬಾಸುಳದ, ಎಡಬಲದ ಬರಿಯ ತದ್ದಿನ,
ಮುಳ್ಳುದರಹಿನ, ಕಂಕುಳ ಸೀಳ ಕಂಡು
ನೋಡುವ ಜನರು ಬೆರಗಾಗೆ_
ಪೊರವಾರಿನ ಮರೆಯ ದಿಗಂಬರದ ಬಣಗು ಸುರಿವುತ್ತ,
ಆಪ್ಯಾಯನವರತು, ಬಿದ್ದು ಮೊಳಕಾಲೊಡೆದು,
ಹೊಸ ಹುಣ್ಣಿನ ರಕ್ತದ ಜೋರು ಹರಿದು,
ಮುಂಗಾಲ ಕಣೆ [ಒ]ಳೆದು, ಕಣಕಾಲ ಸಂದು ತಪ್ಪಿ,
ಕಿರುಬೆರಳು ಎಡಹಿ, ಹೆಬ್ಬೊಟ್ಟೆಡೆದ ಗಾಯದ,
ಉರುಗು ಟೊಂಕದ, ಪೆರಚು ಗುಂಟನ
ನೋಡಾ ಚೆನ್ನಬಸವಣ್ಣಾ.
ಅತ್ಯಂತ ಮಲಿನ ಕೂಡಲಸಂಗಮದೇವರ ಕುರುಹು ವಿಪರೀತ,
ನೋಡುವಡೆ ಭಯಂಕರವಾಗಿದೆ ನೋಡಯ್ಯಾ.
1155
 1156
 1157
ಕೇಳಿ ಭೋ ! ಕೇಳಿ ಭೋ ! ವಿಪ್ರರೆಲ್ಲರೂ
ಬ್ರಹ್ಮಾಂಡಪುರಾಣದಲ್ಲಿ ನಿಮ್ಮ ಬ್ರಹ್ಮ ನುಡಿದ ವಾಕ್ಯವು;
ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞಾನವೇದಿನಾಂ
ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಬಭೂ ಎಂದುದಾಗಿ
ನಂಬಿ ಧರಿಸಿ ಭೋ ! ವಿಪ್ರರೆಲ್ಲರೂ ಶ್ರೀಮಹಾಭಸಿತವ.
ಇದ ನಂಬಿಯೂ ನಂಬದೆ ಅಜ್ಞಾನದಿಂದ ಶ್ರೀಮಹಾಭಸಿತವ ಬಿಟ್ಟು,
ಮಣ್ಣು ಮಸಿ ಮರದ ರಸಂಗಳ
ಮೋಹದಿಂದ ನಿಮ್ಮ ಹಣೆಯಲ್ಲಿ ಬರೆದುಕೊಂಡಿರಾದಡೆ
ನಮ್ಮ ಕೂಡಲಸಂಗಮದೇವರಲ್ಲಿ,
ನಿಮ್ಮ ಅಧಿದೈವವೇ ನಿಮ್ಮ ಕಿವಿ ಮೂಗ ಕೊಯಿದು,
ಇಟ್ಟಿಗೆಯಲೊರಸಿ, ಕನ್ನಡಿಯ ತೋರಿ,
ನಡೆಸಿ ನರಕದಲ್ಲಿ ಕೆಡುಹದೆ ಬಿಡ ಕಾಣಿ ಭೋ !
ಇದನರಿದು ಮರೆಯದೆ ಧರಿಸಿ ಭೋ !
ಕೆಡಬೇಡ, ಕೆಡಬೇಡ,
ಮಹತ್ತಪ್ಪ ಶ್ರೇಮಹಾಭಸಿತವ ಧರಿಸಿ ಮುಕ್ತರಾಗಿರೇ.
1158
 1159
 1160
 1161
ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೊ.
ನರಮಾನವರು ಕೊಡುವರೆಂಬವರ ಬಾಯಲಿ
ಬಾಲಹುಳುಗಳು ಸುರಿಯವೆ
ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ
ಕಾಣಿರೆಲವೊ.
1162
ಕೋಟಿ ರುದ್ರರು ಮಡಿದರು,
ಅನಂತಕೋಟಿ ಬ್ರಹ್ಮವಿಷ್ಣುಗಳು ಮಡಿದರು,
ನರರು, ಸುರರು, ಗರುಡ ಗಂಧರ್ವರು ಮಡಿದರು.
ಅವರ ಮಡಿಯೊಳಗೆ ತಾನಾಗದೆ,
ತಾನೊಂದು ಹೊಸ ಬಿಳಿದ ಮಡಿಮಾಡಿ
ಎನಗುಡಕೊಟ್ಟು ಎನ್ನ ಬದುಕಿಸಿಕೊಂಡಾತ,
ಮಡಿವಾಳ ಕಾಣಾ, ಕೂಡಲಸಂಗಮದೇವಾ.
1163
ಕೋಡಗವೇಡಿಸಬೇಡೆಂದಡೆ ಮಾಣದಯ್ಯಾ,
ತೋಡುವ ಹೆಗ್ಗಣ ಮಾಳಿಗೆ ಎಂದಡೆ ಮಾಣದಯ್ಯ,
ಗಾಡಿಗ ದೂಷಕನವರವರನಾಡುವುದೆ ನೇಮ.
ಕೂಡಲಸಂಗಮದೇವಾ, ಇದವರ ಕಾಯಕವಯ್ಯಾ.
1164
ಕ್ರಿಯಾಚಾರವಿಲ್ಲದ ಗುರುವಿನ ಕೈಯಿಂದ
ದೀಕ್ಷೆ, ಉಪದೇಶವ ಕೊಳ್ಳಲಾಗದು.
ಕ್ರಿಯಾಚಾರವಿಲ್ಲದ ಶಿಲೆಯ ಲಿಂಗವೆಂದು ಪೂಜಿಸಲಾಗದು.
ಕ್ರಿಯಾಚಾರವಿಲ್ಲದ ಭೂತಪ್ರಾಣಿಗಳಲ್ಲಿ
ಜಂಗಮವೆಂದು ಪಾದೋದಕ ಪ್ರಸಾದವ ಕೊಳಲಾಗದು.
ಇಂತಪ್ಪ ಆಚಾರವಿಲ್ಲದ, ಅನಾಚಾರವ ಬಳಸುವ ದುರಾಚಾರಿಗಳಲ್ಲಿ
ಉಪದೇಶವ ಹಡೆದು, ಪಾದೋದಕಪ್ರಸಾದವ ಕೊಂಡವಂಗೆ
ಅಘನಾಸ್ತಿಯಾಗದು, ಮುಂದೆ ಅಘೋರ ನರಕ ತಪ್ಪದು
ಕಾಣಾ, ಕೂಡಲಸಂಗಮದೇವಾ.
1165
ಕ್ರಿಯಾಜ್ಞಾನಸಂಬಂಧವೆಂದು ನುಡಿವರು_
ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದರಿಯರು.
ಕ್ರೀಯಲ್ಲಿ ಅಂಗಲಿಂಗಸಂಬಂಧವನರಿಯರು,
ಜ್ಞಾನದಲ್ಲಿ ಲಿಂಗಜಂಗಮಸಂಬಂಧವನರಿಯರು.
ಕ್ರೀಯಲ್ಲಿ ಅರ್ಪಿತಪ್ರಸಾದಸಂಬಂಧವನರಿದು,
ಜ್ಞಾನದಲ್ಲಿ ತೃಪ್ತಿಪರಿಣಾಮವನರಿದು.
ಕ್ರೀಯೊಳಗಿರ್ದು ಜ್ಞಾನಸಂಪನ್ನನಾಗಿರಬಲ್ಲ ಶರಣಂಗೆ
ಕ್ರಿಯೆಯೆ ತನು, ಜ್ಞಾನವೆ ಪ್ರಾಣ.
ತನು ಲಿಂಗವಾಗಿ, ಪ್ರಾಣ ಜಂಗಮವಾಗಿ,
ತನುವ ಸಯಮಾಡಿ, ಪ್ರಾಣವ ಲಿಂಗಜಂಗಮಕ್ಕರ್ಪಿಸಿ,
ನಿರಂತರ ಸಾವಧಾನಿಯಾಗಿರಬಲ್ಲ ಪ್ರಸಾದಿಗಳ
ಎನಗೊಮ್ಮೆ ತೋರಿ ಸಲಹಾ, ಕೂಡಲಸಂಗಮದೇವಾ.
1166
 1167
ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನೇರಿಸಿಕೊಂಡು
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ
ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ
ಸವೆದ ಪಾಷಾಣ !
ನಮ್ಮ ಕೂಡಲಸಂಗನ ಶರಣರ ಪ್ರಸಾದಜೀವಿಗಳಲ್ಲದವರು
ಏಸು ಕಾಲವಿರ್ದಡೇನು, ಅದರಂತು ಕಾಣಿರಣ್ಣಾ.
1168
ಗುರುಕಾರುಣ್ಯವಿಡಿದು ಬಂದ ತನ್ನ ಕರಸ್ಥಲದ ಇಷ್ಟಲಿಂಗದಲ್ಲಿ ದೃಷ್ಟಿ ನಟ್ಟು,
ಭಾವಸಂಪನ್ನನಾಗಿ ನಿಂದು, ನಿಜವನೈದಲರಿಯದೆ
ಪವನಮುಖದಿಂದ ಲಿಂಗವನರಿದೆನೆಂಬುದೆ ದ್ರೋಹ.
ಇಡಾ ಪಿಂಗಳ ಸುಷುಮ್ನಾನಾಳವ ಬಲಿದು
ಲಿಂಗವ ಕಂಡೆಹೆನೆಂಬ ಕ್ರೂರಕರ್ಮಿಗಳನು ಕೂಡಲಸಂಗಯ್ಯ
ಕೆಡಹಿ ಮೂಗಕೊಯ್ವ ಕಾಣಿರೊ.
1169
ಗುರುಕಾರುಣ್ಯವೆ ಸದಾಚಾರ, ಗುರುಕಾರುಣ್ಯವೆ ಸದಾಚಾರ,
ಗುರುಕಾರುಣ್ಯವೆ ಪ್ರಸಾದರುಚಿ.
ಮುಂದೆ ಗುರು, ಹಿಂದೆ ಲಿಂಗ ಕೂಡಲಸಂಗಮದೇವಾ.
1170
ಗುರು ಮುಂತಾಗಿ ಕೊಂಡುದು ಪ್ರಸಾದವಲ್ಲ,
ಲಿಂಗ ಮುಂತಾಗಿ ಕೊಂಡುದು ಪ್ರಸಾದವಲ್ಲ,
ಜಂಗಮ ಮುಂತಾಗಿ ಕೊಂಡುದು ಪ್ರಸಾದವಲ್ಲ,
ಪ್ರಸಾದ ಮುಂತಾಗಿ ಕೊಂಡುದು ಪ್ರಸಾದವಲ್ಲ,
ಅಂತಪ್ಪ ಪ್ರಸಾದವೆ ಬೇಕು.
ಅಂತಪ್ಪ ಪ್ರಸಾದವ ತೋರಿ
ಬದುಕಿಸಯ್ಯಾ, ಕೂಡಲಸಂಗಮದೇವಾ.
1171
ಗುರುಲಿಂಗಜಂಗಮವ ನಂಬಿ ಕರೆದಡೆ, ಓ ಎಂಬ ಶಿವನು.
ನಂಬದೆ ಕರೆದಡೆ ಓ ಎಂಬನೇ ಶಿವನು
ನಂಬಲರಿಯರು, ನಚ್ಚಲರಿಯರು ಡಂಭಿನ ಭಕ್ತರು.
ನಂಬದೆ ನಚ್ಚದೆ ಬರಿದೆ ಕರೆದಡೆ ಶಂಭು ಮೌನದಲ್ಲಿಪ್ಪ
ನಮ್ಮ ಕೂಡಲಸಂಗಮದೇವರು.
1174
ಗುರುವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಲಿಂಗವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಜಂಗಮವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ,
ಪ್ರಸಾದವಚನವ ತನ್ನೊಳಗಿಂಬಿಟ್ಟುಕೊಂಡ ಪ್ರಸಾದಿಯ ಪ್ರಸಾದಿಯೆಂಬೆ.
ಇಂತೀ ಚತುರ್ವಿಧ ಸಂಪನ್ನ ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು.
1175
 1176
ಗುರುವಿಂಗೆ ನೀನೆ ಕರ್ತ, ಲಿಂಗಕ್ಕೆ ನೀನೆ ಕರ್ತ, ಜಂಗಮಕ್ಕೆ ನೀನೆ ಕರ್ತ,
ಪ್ರಸಾದಕ್ಕೆ ನೀನೆ ಕರ್ತ, ಉಪದೇಶಕ್ಕೆ ನೀನೆ ಕರ್ತ.
ಕೂಡಲಸಂಗಮದೇವರು ಸಾಕ್ಷಿಯಾಗಿ,
ಎನಗೆಯೂ ನೀನೆ ಕರ್ತನಾದ ಕಾರಣ, ನಾನು ಬೇಕೆನಲಮ್ಮೆ ಬೇಡೆನಲಮ್ಮೆ
ಕಾಣಾ, ಚೆನ್ನಬಸವಣ್ಣಾ.
1177
ಗುರುವಿನಲ್ಲಿ ಸ್ವಾಯತ,
ಲಿಂಗದಲ್ಲಿ ಸನ್ನಿಹಿತ,
ಜಂಗಮದಲ್ಲಿ ಸದರ್ಥನು,
ಪ್ರಸಾದದಲ್ಲಿ ಪರಿಣಾಮಿ.
ಇಂತೀ ಚತುರ್ವಿಧದಲ್ಲಿ ಸನ್ಮತನು,
ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು.
1178
ಗುರುವುಪದೇಶವುಳ್ಳವರ ಗುರುವೆಂದೆ ಕಾಬೆನು,
ಲಿಂಗಾಂಗಸಂಗಿಗಳ ನಿಜಲಿಂಗವೆಂದೆ ಕಾಬೆನು,
ಜಂಗಮಾರ್ಚಕರ ಸರ್ವಾಂಗಲಿಂಗಿಗಳೆಂದೆ ಕಾಬೆನು.
ಕೂಡಲಸಂಗಮದೇವರಲ್ಲಿ ಸಹಜಭಕ್ತರ ಕಂಡಡೆ,
ಅವರ ನೀನೆಂದೇ ನಚ್ಚಿ ಮೆಚ್ಚಿ
ಅಚ್ಚೊತಿದಂತಿಪ್ಪೆನಯ್ಯಾ ಚೆನ್ನಬಸವಣ್ಣಾ.
1179
ಗುರು ಸ್ವಾಯತವಾದ ಬಳಿಕ ಗುರುವ ಮರೆಯಬೇಕಯ್ಯಾ,
ಲಿಂಗ ಸ್ವಾಯತವಾದ ಬಳಿಕ ಲಿಂಗವ ಮರೆಯಬೇಕಯ್ಯಾ,
ಜಂಗಮಸ್ವಾಯತವಾದ ಬಳಿಕ ಜಂಗಮವ ಮರೆಯಬೇಕಯ್ಯಾ,
ಪ್ರಸಾದ ಸ್ವಾಯತವಾದ ಬಳಿಕ ಪ್ರಸಾದವ ಮರೆಯಬೇಕಯ್ಯಾ.
ಇಂತೀ ಗುರುಲಿಂಗಜಂಗಮಪ್ರಸಾದದಲ್ಲಿ ಪರಿಣಾಮಿಯಾಗಿ,
ಸಮಯಭಕ್ತಿಯಲ್ಲಿ ಸಂತೋಷಿಯಾಗಿ ಬದುಕಿದೆನು ಕಾಣಾ,
ಕೂಡಲಸಂಗಮದೇವಾ.
1180
 1181
 1182
 1183
 1184
ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ,
ಇಡಾಪಿಂಗಳ ಮಧ್ಯದಲ್ಲಿ ಅನಿಲ ತುಂಬಿ,
ಅರಿದರಿದು ! ನಿಮ್ಮ ನೆನೆವ ಪರಿಕರ ಹೊಸತು.
ಅರಿವಡೆ ತಲೆಯಿಲ್ಲ, ಹಿಡಿವಡೆ ಒಡಲಿಲ್ಲ,
ಕೂಡಲಸಂಗಮದೇವಾ,
ನಿಮ್ಮ ಶರಣನ ಪರಿ ಇಂತುಟು, ಅರಿದರಿದು.
1185
ಚಿನ್ಮಯ ಚಿತ್ಪ್ರಕಾಶ ಚಿದಾನಂದ ಲಿಂಗವೆ,
ಎನ್ನ ಹೃದಯಕಮಲದಲ್ಲಿ ಬೆಳಗಿ ತೋರುವ ಪರಂಜ್ಯೋತಿ,
ಎನ್ನ ಕರಸ್ಥಲಕ್ಕನುವಾದ ಧರ್ಮಿ,
ಎನ್ನ ಕಂಗಳ ಕೊನೆಯಲ್ಲಿ ಮೂರ್ತಿಗೊಂಡಿಪ್ಪೆಯಯ್ಯಾ,
ಕೂಡಲಸಂಗಮದೇವಯ್ಯಾ.
1186
ಚೆನ್ನಬಸವರಾಜದೇವರೆನ್ನ ಶಿಷ್ಯನಾದನೆಂದಡೆ ಎನಗಾದ ಘನವೇನಯ್ಯಾ !
ಆದಿಯ ತೋರಿದ ಚೆನ್ನಬಸವನು,
ಅನಾದಿಯ ತೋರಿದ ಚೆನ್ನಬಸವನು,
ಆದಿಯನಾದಿಯಿಂದತ್ತತ್ತಲಾದವರನೆ ತೋರಿದ ಚೆನ್ನಬಸವನು.
ಕೂಡಲಸಂಗಮದೇವಾ, ಚೆನ್ನಬಸವರಾಜದೇವರೆನ್ನ
ಮಾತಾಪಿತರಯ್ಯಾ.
1187
 1188
ಜಂಗಮವೆ ಜ್ಞಾನರೂಪು, ಭಕ್ತನೆ ಆಚಾರರೂಪವೆಂಬುದು
ತಪ್ಪದು ನೋಡಯ್ಯಾ.
ನಾನು ನಿಮ್ಮಲ್ಲಿ ಆಚಾರಿಯಾದಡೇನಯ್ಯಾ, ಜ್ಞಾನವಿಲ್ಲದನ್ನಕ್ಕರ
ತಲೆಯಿಲ್ಲದ ಮುಂಡದಂತೆ.
ಜ್ಞಾನ ಉದಯವಾಗದ ಮುನ್ನವೆ ತಲೆದೋರುವ ಆಚಾರವುಂಟೆ ಜಗದೊಳಗೆ
ಜ್ಞಾನದಿಂದ ಆಚಾರ, ಜ್ಞಾನದಿಂದ ಅನುಭಾವ, ಜ್ಞಾನದಿಂದ ಪ್ರಸಾದವಲ್ಲದೆ,
ಜ್ಞಾನವನುಳಿದು ತೋರುವ ಘನವ ಕಾಣೆನು.
ಎನ್ನ ಆಚಾರಕ್ಕೆ ನೀನು ಜ್ಞಾನರೂಪಾದ ಕಾರಣ
ಸಂಗನಬಸವಣ್ಣನೆಂಬ ಹೆಸರುವಡೆದೆನು.
ಅನಾದಿ ಪರಶಿವನು ನೀನೆ ಆಗಿ,
ಘನಚೈತನ್ಯಾತ್ಮಕನೆಂಬ ಮಹಾಜ್ಞಾನವು ನೀನೆ ಆದೆಯಲ್ಲದೆ,
ನಾನೆತ್ತ, ಶಿವತತ್ತ್ವವೆತ್ತಯ್ಯಾ
ಕೂಡಲಸಂಗಮದೇವರು ಸಾಕ್ಷಿಯಾಗಿ,
ನಾನು ಪ್ರಭುದೇವರ ತೊತ್ತಿನ ಮಗನೆಂಬುದ
ಮೂರು ಲೋಕವೆಲ್ಲವೂ ಬಲ್ಲುದು ಕಾಣಾ, ಪ್ರಭುವೆ.
1189
 1190
ಜಂಗಮವೆ ಲಿಂಗವೆಂಬ ಭಾವ ಫಲಿಸಿದಡೆ ಇಂದಿನ ಪುಣ್ಯಕ್ಕೆ ಸರಿಯುಂಟೆ
ಲಿಂಗದ ಒಡಲ ಮನೆಮಾಡಿಪ್ಪ ಜಂಗಮವೆನ್ನ ಕಣ್ಣಮುಂದೆ ಸುಳಿದಡೆ
ಇಂದೆನ್ನ ಭಾಗ್ಯಕ್ಕೆ ಕಡೆಯಿಲ್ಲ.
ಆ ಜಂಗಮವೆ ದಿಟಕ್ಕೆನ್ನ ಮನೆಗೆ ಬಂದಡೆ
ಸಲುಗೆಯ ವರವ ಹಡೆವೆನು ಕಾಣಾ,
ಕೂಡಲಸಂಗಮದೇವರಲ್ಲಿ
ಚೆನ್ನಬಸವಣ್ಣಾ, ನೀನಹುದೆನಲಿಕೆ.
1191
ಜಂಗಮಸೇವೆಯೆ ಗುರುಪೂಜೆಯೆಂದರಿದ,
ಜಂಗಮಸೇವೆಯೆ ಲಿಂಗಪೂಜೆಯೆಂದರಿದ,
ಜಂಗಮಸೇವೆಯೆ ತನ್ನಿರವೆಂದರಿದ,
ಜಂಗಮಸೇವೆಯೆ ತನ್ನ ನಿಜವೆಂದರಿದ,
ಜಂಗಮಸೇವೆಯೆ ಸ್ವಯವೆಂದರಿದ,
ಜಂಗಮಸೇವೆಯೆ ನಿತ್ಯಪದವೆಂದರಿದ.
ಇದು ಕಾರಣ, ನಮ್ಮ ಕೂಡಲಸಂಗಮದೇವರಲ್ಲಿ
ಜಂಗಮಪ್ರಾಣಿಯಾದ ಚಂದಯ್ಯನ ಹಳೆ ಮಗನಾಗಿ,
ಆತನ ಶ್ರೀಚರಣಕ್ಕೆ ಶರಣೆಂದು ಶುದ್ಧನು,
ಆ ಮಹಾಮಹಿಮನ ಘನವ ನಾನೆತ್ತ ಬಲ್ಲೆನಯ್ಯಾ ಪ್ರಭುವೆ.
1192
ಜಗತ್ತೆಂಬ ಯಂತ್ರದ ಹಾಹೆ ಹೇಂಗೆಂದರಿಯಲು
ಅಜ್ಞಾನವೆಂಬ ತುಷದ ಚೋಹವ ತೊಡಿಸಿ,
ಅಹಂ ಮಮತೆಯೆಂಬ ಸೊಕ್ಕನಿಕ್ಕಿ, ಬಾರದ ಭವದ ಬಟ್ಟೆಯಲ್ಲಿ ಬರಿಸಿ,
ಕಾಣದ ಕರ್ಮ ದುಃಖವ ಕಾಣಿಸಿ, ಉಣ್ಣದ ಅಪೇಯವನುಣಿಸಿ,
ಮಾರಾರಿ ವಿನೋದಿಸಿದೆಯಯ್ಯಾ, ಕೂಡಲಸಂಗಮದೇವಾ.
1193
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು.
ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ;
ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ
ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್
ಎಂದುದಾಗಿ. ಅದಕ್ಕೆ ಮತ್ತೆಯು;
ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ
ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೀಯತೇ ಎಂದುದಾಗಿ,
ಯಥಾ ಉದಕದಿಂದಲಿ ಅಗ್ನಿಯಿಂದಲಿ
ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು
ಜೀವಮಯವೆಂದು ಹೇಳುತಿರ್ದವಾಗಿ,
ಆ ದೋಷದಿಂದಲಾದ ಭೋಜನವನು
ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ;
ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು
ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ
ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು,
ಹೇಗೆ ಹೋಹುದಯ್ಯಾ ಎಂದಡೆ:
ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು,
ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು.
ಇದು ಕಾರಣ, ಈ ವರ್ಮ ಸಕೀಲವು
ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ
ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.
1194
ಜನನವಿಲ್ಲದ ಜನಿತನು ನೀನು ನೋಡಯ್ಯಾ,
ಜನಿಯಿಸಿ ಸಂಸಾರವನರಿಯದ ನಿರ್ವಿಕಾರಿ ನೀನು ನೋಡಯ್ಯಾ,
ಭವಬಂಧನಗಳಿಲ್ಲದ ನಿತ್ಯನಿಜತತ್ವವು ನೀನು ನೋಡಯ್ಯಾ,
ನಿನ್ನ ಚರಣಸೇವೆಯ ಮಾಡಿ, ಎನ್ನ ಭವ ಹರಿಯಲೆಂದಿಪ್ಪೆನಲ್ಲದೆ,
ನಿಮ್ಮ ಘನವೆಂತೆಂದು ಅರಿಯೆ ನೋಡಯ್ಯಾ.
ಕೂಡಲಸಂಗಮದೇವಾ,
ನೀನು ಕೊಂಡಾಡಲಾನು ಪ್ರಾಪ್ತನೆ ಹೇಳಾ ಪ್ರಭುವೆ.
1195
ಜನನಸೂತಕ, ಕುಲಸೂತಕ, ರಜಃಸೂತಕ, ಎಂಜಲಸೂತಕ, ಪ್ರೇತಸೂತಕ
ಎಂಬಿವಾದಿಯಾದ ಸರ್ವಸೂತಕಂಗಳು
ಅಂಗಲಿಂಗ ಸಂಬಂಧಿಗಳಾದ ಲಿಂಗಭಕ್ತರಿಗಿಲ್ಲ ನೋಡಾ, ಅದೆಂತೆಂದೊಡೆ;
ಆದಿಬಿಂದುರ್ಭವೇದ್ಬೀಜಂ ಬೀಜಮಧ್ಯಸ್ಥಿತಂ ಕುಲಂ
ಬೀಜಂ ನಾಸ್ತಿ ಕುಲಂ ನಾಸ್ತಿ ತಸ್ಮೈ ಶಿವಕುಲಂ ಭವೇತ್ ಎಂದುದಾಗಿ
ಪೂರ್ವಾಚಾರವನಳಿದು ಪುನರ್ಜಾತನಾಗಿ,
ಅಂಗದ ಮೇಲೆ ಲಿಂಗಸಾಹಿತ್ಯನಾದ ಭಕ್ತಂಗೆ
ಜನನಸೂತಕವೆಂಬುದೆ ಪಾತಕ ನೋಡಾ.
ಶಿವಭಕ್ತರಾದ ಬಳಿಕ ಭವಿನೇಮಸ್ತರ ಕಳೆದು
ಶಿವಕುಲವೆ ಕುಲವಾದ ಭಕ್ತರಿಗೆ ಕುಲಸೂತಕವೆಂಬುದೆ ಪಾತಕ ನೋಡಾ.
ಗುರುಪಾದತೀರ್ಥ, ಲಿಂಗಪಾದತೀರ್ಥ, ಜಂಗಮಪಾದತೀರ್ಥ ಆದಿಯಾದ
ಲಿಂಗೋದಕ, ಪಾದೋದಕ, ಪ್ರಸಾದೋದಕ ಎಂಬ ತ್ರಿವಿಧೋದಕದಲ್ಲಿ
ಸರ್ವಪಾಕಪ್ರಯತ್ನ, ನಾನಾ ಕ್ರಿಯಾವಿಧಾನ, ಸ್ನಾನಪಾನಂಗಳಿಂದ
ಬಾಹ್ಯಾಭ್ಯಂತರಂ ಶುಚಿಯಾದ, ಶುದ್ಧನಿರ್ಮಲದೇಹಿಯಾದ ಭಕ್ತಂಗೆ
ರಜಃಸೂತಕವೆಂಬುದೆ ಪಾತಕ ನೋಡಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಯುಕ್ತವಾದ ಸದಾಸನ್ನಹಿತ ಭಕ್ತಂಗೆ
ಎಂಜಲಸೂತಕವೆಂಬುದೆ ಪಾತಕ ನೋಡಾ.
ಗುರುವಿನಿಂ ಜನನ, ಚರಲಿಂಗದಿಂ ಸ್ಥಿತಿ,
ಪರಮಪಾವನ ಘನಮಹಾಲಿಂಗದೊಳೈಕ್ಯ. ಅದೆಂತೆಂದೊಡೆ;
ಸದ್ಗುರೋಃ ಪಾಣಿಜಾತಸ್ಯ ಸ್ಥಿತೇ ಸದ್ಭಕ್ತಸಂಗಿನಾಂ
ಲೀಯತೇ ಚ ಮಹಾಲಿಂಗೀ ವೀರಶೈವೋತ್ತಮೋತ್ತಮಂ ಎಂದುದಾಗಿ,
ನಿಜಲಿಂಗೈಕ್ಯವಾದ ಸದ್ಭಕ್ತಂಗೆ
ಪ್ರೇತಸೂತಕವೆಂಬುದೆ ಪಾತಕ ನೋಡಾ.
ಇಂತೀ ಪಂಚಸೂತಕವನುಳ್ಳ ಪಾತಕಂಗಳ
ಪಂಚಾಚಾರಯುಕ್ತನಾದ ಸದ್ಭಕ್ತಂಗೆ ಕಲ್ಪಿಸುವ
ಪಂಚಮಹಾಪಾತಕರ ಅಘೋರ ನರಕದಲ್ಲಿಕ್ಕುವ
ಕೂಡಲಸಂಗಯ್ಯ.
1196
 1197
 1198
 1199
ತನುವ ಕೊಟ್ಟೆನೆಂದು ನುಡಿದು, ಗುರುವಚನಕ್ಕೆ ದೂರವಾದೆ,
ಮನವ ಕೊಟ್ಟೆನೆಂದು ನುಡಿದು, ಲಿಂಗಮುಖಕ್ಕೆ ದೂರವಾದೆ,
ಧನವ ಕೊಟ್ಟೆನೆಂದು ನುಡಿದು, ಜಂಗಮಮುಖಕ್ಕೆ ದೂರವಾದೆ,
ಕೂಡಲಸಂಗಮದೇವಯ್ಯಾ,
ನಿಮಗೆ ಮಾಡಿದೆನೆಂದು ನುಡಿದು ಕೆಟ್ಟ ಕೇಡಿಂಗೆ ಕಡೆಯಿಲ್ಲ.
1200
 1201
ತನುವಿಡಿದಿಹುದು ಪ್ರಕೃತಿ, ಪ್ರಕೃತಿವಿಡಿದಿಹುದು ಪ್ರಾಣ,
ಪ್ರಾಣವಿಡಿದಿಹುದು ಜ್ಞಾನ, ಜ್ಞಾನವಿಡಿದಿಹುದು ಗುರು.
ಇಂತೀ ಗುರುಲಿಂಗಜಂಗಮಪ್ರಸಾದವ
ಸಗುಣವೆಂದು ಹಿಡಿದು ನಿರ್ಗುಣವೆಂದು ಕಂಡ
ಸಂದೇಹಿ ವ್ರತಗೇಡಿಗಳನೇನೆಂಬೆ
ಅಂತವರ ಮುಖವ ತೋರದಿರು ಕೂಡಲಸಂಗಮದೇವಾ.
1202
 1203
ತಾನಿಲ್ಲದೆ ತಾ ಮಾಡುವ ಸಹಜನು, ತಾನಿಲ್ಲದೆ ತಾ ನೀಡುವ ಸಹಜನು,
ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು.
ಏನೊಂದರ ಹಮ್ಮಿಲ[ದ] ಸಹಜ ಸುಜ್ಞಾನಿಯ
ಮಾಟದ ಕೂಟದ ಸ್ಥಲದೊಳು ಕೂಡಿಹ
ಕೂಡಲಸಂಗನನದೇನೆಂದುಪಮಿಸುವೆ.
1204
 1205
 1206
 1207
ತೊಂಡಿಲ ಮುಡಿದುಕೊಂಡು
ತಮ್ಮ ತಮ್ಮ ಗಂಡರ ಹಿಂದುಗೊಂಡು
ನಾಡ ಮಿಂಡರ ನೋಡುತ್ತಲಿ,
ಇಂದು ನಮ್ಮ ಹುಲಿ ಹೋಯಿತ್ತು ಬನ್ನಿರೆ.
ಗಂಡರ ಗಂಡನವ್ವಾ ಕೂಡಲಸಂಗ,
ಕಂಡಡೆ ಮೂಗ ಕೊಯಿವಾ.
1208
ತೊತ್ತಿನ ತೊತ್ತಿನ ಮರುದೊತ್ತಿನೊಡನೆ
ಮುನಿವುದು ನಿಮಗೆ ಗುಣವೆ
ಅಯ್ಯಾ ಅಯ್ಯಾ, ನಿಮ್ಮ ಧರ್ಮದವ ನಾನಯ್ಯಾ.
ಒಮ್ಮಿಂಗೆ ಕೃಪೆ ಮಾಡಿ ಕರುಣಿಸಯ್ಯಾ.
ಕೂಡಲಸಂಗಮದೇವಾ,
ಇಲಿಗಂಜಿ ಮನೆ ಸುಡುವರುಂಟೆ.
1209
ತೊರೆಯುದಕವ ಕೆರೆಯುಂಡು ತೃಪ್ತವಾಗಲು
ಆ ಕೆರೆಯುದಕವ ಹಲವು ಕೆಲವು ಸ್ಥಾವರ ಜಂಗಮಗಳುಂಡು
ತೃಪ್ತಿವಡೆವಂತೆ,
ಪ್ರಭುದೇವರ ತೃಪ್ತಿ ಅಸಂಖ್ಯಾತಮಹಾಗಣಂಗಳೆಲ್ಲಕ್ಕೆ ತೃಪ್ತಿಯಾಯಿತ್ತು
ನೋಡಾ.
ಬಸುರುವೆಂಡತಿ ಉಂಡಲ್ಲಿ ಒಡಲ ಶಿಶು ತೃಪ್ತಿಯಾದಂತೆ,
ಸಚರಾಚರವೆಲ್ಲವು ತೃಪ್ತಿಯಾದವು ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣ ಪ್ರಭುದೇವರ ಪ್ರಸಾದಮಹಿಮೆಗೆ
ನಮೋ ನಮೋ ಎಂಬೆನು.
1210
 1211
 1212
ತ್ರಿವಿಧವನಿತ್ತು, ರೂಹು ಮಾತು ಬಳಿಕುಂಟೆ ಅಯ್ಯಾ
ತನುವ ಕೊಡೆನಾಗಿ ಇದಿರುತ್ತರವಿದೆ,
ಮನವ ಕೊಡೆನಾಗಿ ಆನೆಂಬಹಂಕಾರವಿದೆ,
ಧನವ ಕೊಡೆನಾಗಿ ಪ್ರಪಂಚಿನ ಬಳಕೆಯಿದೆ.
ಕೂಡಲಸಂಗಮದೇವಯ್ಯಾ, ಎಂತು ಭಕ್ತನಪ್ಪೆನು !
1213
ದಶವಿಧಪಾದೋದಕವೆಸಗಿದ[ರೆಸ]ಕ ಎಂತೆಂದಡೆ;
ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ
ರುದ್ರಾಕ್ಷಿ ಪಂಚಾಕ್ಷರಿ ಗಣವ್ರತನೇಮ ಆಚಾರ
ಶೀಲ ಸಂಬಂಧದೊಳಗು ಹೊರಗು ತ್ರಿವಿಧ ಸಂಪೂರ್ಣವಾದ ಕಾರಣ
ನಿತ್ಯಪಾದೋದಕವೆನಿಸಿತ್ತು ಕೂಡಲಸಂಗಮದೇವಪ್ರಭುವೆ.
1214
 1215
 1216
 1217
ದೇವ ದೇವ ಮಹಾಪ್ರಸಾದ !
ಅವಧರಿಸು ದೇವಾ ಎನ್ನ ಬಿನ್ನಹವ;
ಕಾಯದ ಮಾಯದ ಸಡಗರದಲ್ಲಿ ಹುಟ್ಟಿಸಿದಿರಿ ಎನ್ನ,
ಅದು ನಿಮ್ಮ ಲೀಲಾವಿನೋದ.
ಆ ಕಾಯದ ಮಾಯದ ತಲೆಯ ಚಿವುಟಿ ಶ್ರೀಗುರುಕಾರುಣ್ಯವ ಮಾಡಿ
ಗುರುಲಿಂಗಜಂಗಮ ತ್ರಿವಿಧಭಕ್ತಿಯ ಘನವ ತೋರಿ
ನಿಮ್ಮ ಪಾದೋದಕ ಪ್ರಸಾದವನಿತ್ತು ರಕ್ಷಿದಿರಿ,
ಅದು ನಿಮ್ಮ ಲೀಲಾವಿನೋದ.
ಪರವಾದಿ ಬಿಜ್ಜಳ ಒರೆಗಲ್ಲಾದಲ್ಲಿ
ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ,
ಮೂವತ್ತಾರು ಕೊಂಡೆಯರ ಪರಿಹರಿಸಿ,
ಎಂಬತ್ತೆಂಟು ಪವಾಡವ ಮೆರೆದಿರಿ,
ಅದು ನಿಮ್ಮ ಲೀಲಾವಿನೋದ.
ಎನ್ನ ಮನದ ಮಲಿನವ ತೊಳೆಯಲೆಂದು ಬಂದು,
ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡು,
ನಿಮ್ಮ ನಿಜ ಮಹಿಮೆಯನೆಲ್ಲಾ ಪ್ರಮಥರ ಮುಂದೆ ತೋರಿ,
ಎನ್ನ ಪಾವನವ ಮಾಡಿ,
ಷಡುಸ್ಥಲಮಂ ಎನ್ನ ಸರ್ವಾಂಗದಲ್ಲಿ ಪ್ರತಿಷಿ*ಸಿ,
ಎನ್ನ ನಿಮ್ಮಂತೆ ಮಾಡಿದಿರಿ,
ಅದು ನಿಮ್ಮ ಲೀಲಾವಿನೋದ.
ಕೂಡಲಸಂಗಮದೇವಾ,
ಎನ್ನ ವರ್ಮದ ಸಕೀಲವ ನೀವೆ ಬಲ್ಲಿರಾಗಿ
ಎನಗೊಮ್ಮೆ ತಿಳುಹಿಕೊಟ್ಟು ಎನ್ನನುಳುಹಿಕೊಳ್ಳಾ ಪ್ರಭುವೆ.
1218
ದೇವ ದೇವ ಮಹಾಪ್ರಸಾದ !
ನಿಮ್ಮಡಿಗಳೆಂದಂತೆಯಲ್ಲದೆ ಎನಗೆ ಬೇರೆ ಸ್ವತಂತ್ರವುಂಟೆ
ದರ್ಪಣದೊಳಗಣ ಪ್ರತಿಬಿಂಬವ ನೋಡುವ ಮುಖಕ್ಕೆ
ಬ್ಥಿನ್ನಭಾವವುಂಟೆ
ಚರಿಸಿ ಬಪ್ಪ ಅನಂತ ಸುಳುಹಿನೊಳಗೆ ನೀನೊಬ್ಬನೆ,
ನಿನ್ನೊಳಗೆ ಅನಂತ ಸುಳುಹು ಅಡಗಿದವು.
ನಿಮಗೆ ಮಾಡಿದ ಸಯದಾನವ ನಿಮಗೆ ನೀಡುವೆನು,
ಅವಧರಿಸಬೇಕಯ್ಯಾ, ಕೂಡಲಸಂಗಮದೇವಾ.
1219
ದೇವ ದೇವ ಮಹಾಪ್ರಸಾದ !
ನೀವೆಂದಂತೆ ನಿಮ್ಮ ಚರಣದಲ್ಲಿ ಸಂದು ಭೇದವಿಲ್ಲದೆ ಇಪ್ಪೆನಲ್ಲದೆ
ಬೇರೆ ಭಿನ್ನವಾಗಿರ್ದೆನಾದಡೆ ನೀವೆ ಸಾಕ್ಷಿ,
ನಿಮ್ಮ ಶ್ರೀಪಾದದ ಕಂಡೆನ್ನ ಭವಂ ನಾಸ್ತಿಯಾಯಿತ್ತು.
ಕೂಡಲಸಂಗಮದೇವಾ,
ನಿಮ್ಮಿಂದೊಂದಾಶ್ಚರ್ಯವಿಲ್ಲವೆಂದು ಶ್ರುತಿಗಳು ಹೊಗಳುತ್ತಿರಲಾಗಿ
ನೀವು ಕಂಡ ಆಶ್ಚರ್ಯವಾವುದೆನಗೊಮ್ಮೆ ನಿರೂಪಿಸಾ ಪ್ರಭುವೆ.
1220
 1221
 1222
 1223
ದೇಹವೆಂಬೆರಡಕ್ಕರವನು ಜೀವವೆಂದರಿದೆನಯ್ಯಾ,
ಜೀವವೆಂಬೆರಡಕ್ಕರವನು ಹಂಸನೆಂಬ ದಳಕ್ಕೆ ವಿಭಾಗಿಸಿದೆನಯ್ಯಾ.
ಹಂಸವೆಂಬೆರಡಕ್ಕರವನು ಜ್ಞಾನಚಕ್ಷುವಿನ
ಭ್ರೂಮಧ್ಯದಲ್ಲಿ ವಿಭಾಗಿಸಿದೆನಯ್ಯಾ.
ಒಂದು ದಳವ ಕರ್ತನ ಮಾಡಿ
ಒಂದು ದಳವ ಭೃತ್ಯನ ಮಾಡಿ
ಈ ಎರಡು ದಳದ ನಡುವಿರ್ಪ ಪರಂಜ್ಯೋತಿಯನು
ತ್ರಿಕೂಟವೆಂದರಿದು ಕೂಡಿದೆನಯ್ಯಾ.
ಇಂತು ಕೂಡಿದಲ್ಲಿ ಪರಿಚರ್ಯವ ಮಾಡುತಿರ್ದೆನಯ್ಯಾ.
ಮೊದಲ ಪರಿಚರ್ಯದಲ್ಲಿ ನಿರ್ಮಳೋದಕವ ತುಂಬಿದೆ,
ಒಂದು ದಳದೊಳಗೆ. ಎರಡನೆಯ
ಪರಿಚರ್ಯದಲ್ಲಿ ಒಂದು ದಳದಲ್ಲಿ
ಆ ಉದಕವ ಗಡಣಿಸುತಿರ್ದೆನಯ್ಯಾ.
ಇರಲಿರಲು ಎರಡು ದಳವು ಅಳಿದು ಜಲ ಮೇರೆದಪ್ಪಲು
ಮನ ಮೇರೆದಪ್ಪಿ ಆರೋಗಿಸಿದೆನಯ್ಯಾ.
ಆರೋಗಿಸಿದ ತೃಪ್ತಿಯ ನೀನೆ ಬಲ್ಲೆ,
ಕೂಡಲಸಂಗಮದೇವಾ.
1224
ಧನಮದದಿಂದ, ಸಯದಾನಮದದಿಂದ ಮಾಡಿದೆನೆಂಬುದು
ಕಡೆಮುಟ್ಟದೆ ಹೋಯಿತ್ತು.
ಹಸ್ತಪರುಷದಿಂದ ಮುಟ್ಟಿ ಮಾಡಿದುದೆಲ್ಲವು ಸವೆಯಿತ್ತು.
ದೃಷ್ಟಿಪರುಷದಿಂದ ನೋಡಿ ಮಾಡಿದೆನೆಂಬುದೆಲ್ಲವು ಹೆಚ್ಚಿತ್ತು.
ವಾಕ್ಪರುಷದಿಂದ ನುಡಿದು ಮಾಡಿದುದೆಲ್ಲವು ಅಂತರಿಸಿತ್ತು.
ಮನಪರುಷದಿಂದ ನೆನೆದು ಮಾಡಿದುದೆಲ್ಲವು ನಿಂದಿತ್ತು.
ಭಾವಪರುಷದಿಂದ ಭಾವಿಸಿದ ಪದಾರ್ಥವೆಲ್ಲವು ನಿರ್ಭಾವದತ್ತವೇಧಿಸಲಾಯಿತ್ತು
ಇಂತೀ ಪಂಚಪರುಷದಿಂದ ಮುಟ್ಟಿ ನೀಡಿದ ಪದಾರ್ಥವೆಲ್ಲವು
ತೋರದ ಮುನ್ನ ಅಮಳೋಕ್ಯವಾದವು.
ಕೂಡಲಸಂಗಮದೇವರ ತೃಪ್ತಿಯನರಿದಿಹೆನೆಂದು ಕೆಟ್ಟೆನು.
1225
ಧನ ಸವೆದಡೆ ತನುವನರ್ಪಿಸುವೆನು,
ತನು ಸವೆದಡೆ ಮನವನರ್ಪಿಸುವೆನು,
ಮನ ಸವೆದಡೆ ಭಾವವನರ್ಪಿಸುವೆನು,
ಭಾವ ಸವೆದಡೆ ನಿರ್ಭಾವವನರ್ಪಿಸುವೆನು.
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣ ತೆತ್ತಿಗನಾದ ಬಳಿಕ,
ನಾನು ನಿಮ್ಮಲ್ಲಿ ಕೂಡಿಯರ್ಪಿಸಿ ಶುದ್ಧನಪ್ಪೆನಯ್ಯಾ.
1226
ಧನ ಹೋಯಿತ್ತೆಂದಡೆ, ಮನಸು ಬೆದರಿದಡೆ, ಚಿತ್ತ ಹೆದರಿದಡೆ,
ತನು ತೆರಳಿದಡೆ, ಭಾವ ಓಸರಿಸಿದಡೆ,
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ತನುಮನಧನವನಲ್ಲಾಡಿಸಿ ನೋಡುವ ಒಡೆಯನು ನೀನೆ,
ಹರಣದ ಮೇಲೆತ್ತಡೆ ಕಳವಳವೆ, ಕೂಡಲಸಂಗಮದೇವಾ.
1227
 1228
ಧರೆ ರಸಾತಳಕ್ಕಿಳಿವಂದು, ಹರಿಬ್ರಹ್ಮಾದಿಗಳಳಿವಂದು,
ಮಹಾದೇವ ಮಹಾದೇವ ಎನುತ್ತಿರ್ದೆನು ಅದೆಂತೆಂದಡೆ;
ಬ್ರಹ್ಮಾಂಡಾನಾಮಸಂಖ್ಯಾನಾಂ ಬ್ರಹ್ಮವಿಷ್ಣುಮಹಾತ್ಮನಃ±
ಯತ್ರೋದಯಂ ಲಯಂ ಯಾಂತಿ ಮಹಾದೇವ ಇತಿ ಸ್ಮೈತಃ
ಎಂದುದಾಗಿ
ಅಗ್ರದ ಕೊನೆಯ ತುದಿಯಿಂದತ್ತತ್ತ
ತತ್ತ್ವಮಸಿಯ ಮೀರಿದ ನಮ್ಮ ಕೂಡಲಸಂಗಮದೇವ.
1229
ಧ್ಯಾನಕ್ಕೆ ನಿಮ್ಮ ಶ್ರೀಮೂರ್ತಿಯೆ ಮುಖ್ಯವಯ್ಯಾ,
ಪೂಜೆಗೆ ನಿಮ್ಮ ಶ್ರೀಪಾದವೆ ಮುಖ್ಯವಯ್ಯಾ.
ಮಂತ್ರಕ್ಕೆ ನಿಮ್ಮ ನಾಮಾಮೃತವೆ ಮುಖ್ಯವಯ್ಯಾ,
ಮುಕ್ತಿಗೆ ನಿಮ್ಮ ಘನಕೃಪೆಯೆ ಮುಖ್ಯವಯ್ಯಾ.
ನಿಮ್ಮಿಂದಧಿಕರನಾರನೂ ಕಾಣೆನಯ್ಯಾ
ಕೂಡಲಸಂಗಮದೇವಾ, ನೀವು ಜ್ಞಾನಗುರುವಾದ ಕಾರಣ.
1230
ಧ್ಯಾನಕ್ಕೆ ಮೋನವೆಂಬ ಶಸ್ತ್ರವ ಪಿಡಿಯಲರಿಯದೆ
ಅಹಂಕಾರದ ಧಾರೆಯ ಮೊನೆಯಲಗೆಂಬ ಶಸ್ತ್ರವ ಪಿಡಿದು ಕೆಟ್ಟೆನಯ್ಯಾ
ಅಂಜುವೆನಂಜುವೆನಯ್ಯಾ,
ಜಂಗಮಲಿಂಗವೆಂಬ ಭಾಷೆ ಪಲ್ಲಟವಾಯಿತ್ತು.
ಇನ್ನು ಜಂಗಮವೆಂಬ ಶಿಕ್ಷಾಶಸ್ತ್ರದಲ್ಲಿ ಎನ್ನ ಹೊಯ್ದು ಬಯ್ದು
ರಕ್ಷಿಸುವುದು ಕೂಡಲಸಂಗಮದೇವಾ.
1231
 1232
ನಚ್ಚು ಮಚ್ಚಿನ ಶರಣರೆನ್ನ ಕಣ್ಣಮುಂದೆ ಬಂದು ನಿಂದಿರಲು
ಎನ್ನ ತನುವ ಬಗಿದು ಎನ್ನ ತನುವಿನೊಳಗಿಂಬಿಟ್ಟುಕೊಂಬೆನು,
ಎನ್ನ ಮನವ ಬಗಿದು ಎನ್ನ ಮನದೊಳಗಿಂಬಿಟ್ಟುಕೊಂಬೆನು,
ಎನ್ನ ಕಂಗಳ ಬಗಿದು ಎನ್ನ ಕಂಗಳೊಳಗಿಂಬಿಟ್ಟುಕೊಂಬೆನು.
ಕೂಡಲಸಂಗನ ಶರಣರೆನ್ನ ಒಡೆಯರಾಗಿ
ಎನ್ನ ಭಾವಕ್ಕೆ ಬಂದ ಭಕ್ತಿಯ ಮಾಡುವೆನು.
1233
ನಡುದೊರೆಯೊಳಗೆ ಹರುಗೋಲನಿಳಿದಂತಾಯಿತ್ತೆನ್ನ ಭಕ್ತಿ,
ಮರನನೇರಿ ಕೈಯ ಬಿಟ್ಟಂತಾಯಿತ್ತೆನ್ನ ಭಕ್ತಿ.
ಶಿವಶಿವಾ, ಕೆಟ್ಟೆನಲ್ಲಾ ಗುರುವೆ, ಕೂಡಲಸಂಗಮದೇವಾ,
ಈ ಮರುಳಶಂಕರದೇವರ ಕೃಪೆ
ಎನಗಿನ್ನೆಂದಪ್ಪುದು ಹೇಳಾ, ಪ್ರಭುವೆ.
1234
 1235
ನಾ ನಡೆವುದೆಲ್ಲಾ ಅನಾಚಾರ, ನಾ ನುಡಿವುದೆಲ್ಲಾ ಅವಿಚಾರ,
ನಡೆನುಡಿ ಶುದ್ಧವಿಲ್ಲದ ಅಪವಿತ್ರನ ತಂದು
ನಿಮ್ಮೊಕ್ಕುದನಿಕ್ಕಿ ಸಲಹಿದಿರಾಗಿ, ಎನಗಿನ್ನಾವ ಭಯವೂ ಇಲ್ಲ.
ಕೂಡಲಸಂಗಮದೇವರು ಸಾಕ್ಷಿಯಾಗಿ,
ಆಯ್ದಕ್ಕಿಯ ಮಾರಯ್ಯನ ಮನೆಯ ಮಗ ನಾನು.
1236
 1237
 1238
ನಾನಾರಿದೆಲ್ಲಿಯ ಪಾಶವಿದೆತ್ತಣ ಮರವೆ
ಅಕಟಕಟಾ ತಾಮಸಕ್ಕೆ ಗುರಿಮಾಡಿದೆಯಲ್ಲಾ.
ಎಲೆ ಕರುಣಾಂಬುನಿಧಿಯೆ, ದಯಾಪಾರಿಯೆ,
ನೀನು ವಿಚಾರಿಸದಿರ್ದಡಾನೆಂತುಳಿವೆನಯ್ಯಾ.
ನಿಮ್ಮ ಕೃಪಾದೃಷ್ಟಿಯಿಂ ನಿರೀಕ್ಷಿಸಿ ನಿಮ್ಮತ್ತ ಸಾರುವಂತೆ ಮಾಡಾ
ಕೂಡಲಸಂಗಮದೇವಾ.
1239
ನಾನಾ ಸ್ಥಾನದಲ್ಲಿ ಬಂದು ತೊಳಲಿ ಬಳಲಿ ಅಳಿದುಳಿದು ನಿಂದ ನಿಲದವನಲ್ಲ,
ಮತ್ರ್ಯಲೋಕದಲ್ಲಿ ಶಿವಾಚಾರದ ಘನವುಹೂಳಿಹೋಯಿತ್ತೆಂದು
ಕರ್ತನು ತಾನೆ ಮಹಾಪ್ರಸಾದಿಯಾಗಿ ಉದಯವಾದನು.
ಹಸ್ತಮಸ್ತಕ ಸಂಯೋಗವಿಲ್ಲದ ಮುನ್ನವೆ
ಆದಿಗುರು ಅನಾದಿಶಿಷ್ಯನೆಂಬುದ ನೆಲೆಮಾಡಿ,
ಸಂಗಮನಾಥನೆಂಬ ಲಿಂಗವನೆನ್ನ ಕೈಯಲ್ಲಿ ಕೊಟ್ಟು,
ಸಾಮದಿಂದ ಅನುಗ್ರಹಿಸಿಕೊಂಡನು.
ಎನ್ನ ಹಿಂದಣ ಪೂರ್ವಾಪರವನೆತ್ತಿ ತೋರಿ ತನ್ನತ್ತ ತೆಗೆದುಕೊಂಡನು
ಕೂಡಲಸಂಗಮದೇವರಲ್ಲಿ ಜೆನ್ನಬಸವಣ್ಣನು.
1240
 1241
ನಾನೆಂಬುದೆಲ್ಲಿಯದಯ್ಯ ಲಿಂಗವೆಂಬ ಮಹಾತ್ಮಂಗೆ,
ಶರಣನೊಡಲುಗೊಂಡಡೇನು ಸಾಮಾನ್ಯನೆ
ಪ್ರಕೃತಿಗುಣವಿಡಿದು ಭಿನ್ನಭಾವಿಯಲ್ಲ.
ಕೂಡಲಸಂಗನ ಶರಣರ ಪರಿ ಬೇರೆ.
1242
ನಾನೊಂದು ಕಾರಣ ಮತ್ರ್ಯಕ್ಕೆ ಬಂದೆನು,
ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚೆನ್ನಬಸವಣ್ಣ ಬಂದನು,
ಇನ್ನು ಬಾರದಂತೆ ಪ್ರಭುದೇವರು ಬಂದರು,
ಇದಕ್ಕೆ ಆಜ್ಞಾಕರ್ತೃ ಮಡಿವಾಳ ಮಾಚಿತಂದೆ ಬಂದನು.
ನಾನಿನ್ನಾರಿಗಂಜೆನು, ಬದುಕಿದೆನು
ಕಾಣಾ ಕೂಡಲಸಂಗಮದೇವಾ.
1243
ನಾರಗೋಣಿಯ ಮೂಲೆಯ ಹೊಲಿದು,
ನೀರ ಭಂಡವ ತುಂಬಿದರಯ್ಯಾ,
ಊರೊಳಗೈವರು ಕಳ್ಳರು ಸಾರಲೀಯರು, ಧರ್ಮವಿಲ್ಲಯ್ಯಾ.
ಊರ[ಸೂರೆ]ಗೊಳ್ಳದ ಮುನ್ನ
ಕೂಡಿಕೊಳ್ಳಿ ಕೂಡಲಸಂಗಮದೇವನ.
1244
ನಿಂದಿಸುವನೊಬ್ಬ, ಸ್ತುತಿಸುವನೊಬ್ಬ,
ಇವರಿಬ್ಬರು ನಮ್ಮ ಶಿವಯೋಗಿಯ ಪರಮಬಂಧುಗಳಯ್ಯಾ.
ಪಾಪವನೊಬ್ಬ ಕೊಂಬ, ಪುಣ್ಯವನೊಬ್ಬ ಕೊಂಬ,
ಕೂಡಲಸಂಗಮದೇವಾ, ನಿಮ್ಮ ಶರಣರು ನಿತ್ಯಮುಕ್ತರು.
1245
ನಿಜರೂಪು ರೂಪಿನಿಂದ ನಿಂದಿತ್ತು,
ಆ ರೂಪು ನಿಜರೂಪವನವಗ್ರಹಿಸಿತ್ತು.
ನಿಜರೂಪು ನಿರ್ಣಯದಲ್ಲಿ ನಿಂದ ನಿಜಶರಣರ ನಿಲವ
ಕಾಯವಿಡಿದು ಕಂಡಹೆನೆಂದಡೆ ಕಾಣಬಹುದೆ
ಕೂಡಲಸಂಗಮದೇವಾ ನಿಮ್ಮ ಶರಣರ ನಿಲವು,
ಎನಗೆ ಸಾಧ್ಯವಪ್ಪುದೆ.
1246
ನಿತ್ಯನಿರಂಜನ ಪರಂಜ್ಯೋತಿವಸ್ತು:
ಉಪದೇಶವ ಕೊಟ್ಟು ಗುರುವಾದ,
ಕರಸ್ಥಲಕ್ಕೆ ಬಂದು ಲಿಂಗವಾದ,
ಹಸರವಾದ ಪ್ರಪಂಚನಳಿದು ದಾಸೋಹವ ಮಾಡಿಸಿಕೊಂಡು ಜಂಗಮವಾದ,
ಇಂತೀ ಗುರುಲಿಂಗಜಂಗಮ ಒಂದೆಯಲ್ಲದೆ ಭಿನ್ನವಿಲ್ಲ.
ಈ ಮೂರಕ್ಕೆ ಮೂರನಿತ್ತು ಮೂರನೊಂದ ಮಾಡಬಲ್ಲಡೆ,
ಆತ ಪ್ರಸಾದಕಾಯನಯ್ಯಾ, ಕೂಡಲಸಂಗಮದೇವಾ.
1247
 1248
ನಿನ್ನ ಜನ್ಮದ ಪರಿಭವವ ಮರದೆಯಲ್ಲಾ ಮನವೆ,
ಲಿಂಗವ ನಂಬು ಕಂಡಾ ಮನವೆ,
ಜಂಗಮವ ನೆರೆ ನಂಬು ಕಂಡಾ, ಎಲೆ ಮನವೆ,
ಕೂಡಲಸಂಗಮದೇವರ ಬೆಂಬತ್ತು ಕಂಡಾ, ಎಲೆ ಮನವೆ.
1249
ಲೌಕಿಕದನುಸಂಧಾನ ಸಮನಿಸದೆ ಅನ್ಯವ ಸುಟ್ಟರು
ಎನ್ನ ಹೃದಯದ ಕಂಗಳು ಲಿಂಗದಲ್ಲಿ ನಟ್ಟು ಬಗೆಯಲಾರಳವು.
ಅಲ್ಲದೆ, ನಿಷೆ* ಒಲಿದು ಗಟ್ಟಿಗೊಂಡು ಅಂಗಶಂಕೆಯೆಂಬ ಭಂಗವಿನ್ನೆಲ್ಲಿಯದೊರಿ
ಹಾಲು ಬೆರಸಿದ ನೀರ ಹಂಸೆ[ಗಾ]ಗದಂತೆ
ಪಾವಕನಾದನಯ್ಯಾ ಕೂಡಲಸಂಗಮದೇವಾ ನಿಮ್ಮ ಶರಣು.
1249
ನಿಮ್ಮ ಕಂಡು, ಕೈಮುಗಿದು, ನಿಮಗೆ ಭಕ್ತನಾದೆನಲ್ಲದೆ,
ನಿಮ್ಮ ಕಾಣದಲೆ ಕೈಮುಗಿವ ಭಕ್ತಿಯುಂಟೆ ಅಯ್ಯಾ
ನಿಮ್ಮ ಮುಟ್ಟಿ ಪೂಜಿಸಿ ಆಚಾರಿಯಾದೆನಲ್ಲದೆ,
ನಿಮ್ಮ ಮುಟ್ಟದಲೆ ಎನಗಾಚಾರವೆಲ್ಲಿಯದಯ್ಯಾ
ನಿಮ್ಮ ಘನವನು ಮನದಲ್ಲಿ ನೆನೆದು ಧರಿಸಿದ ಕಾರಣ
ಜ್ಞಾನೋದಯವಾಯಿತ್ತಲ್ಲದೆ,
ನೀವಿಲ್ಲದಡೆ ಎನಗೆ ಜ್ಞಾನವೆಲ್ಲಿಯದಯ್ಯಾ
ಇಂತು ಆವ ಮುಖದಲ್ಲಿಯೂ ಎನ್ನನಾಗುಮಾಡಲೆಂದು
ನೀವು ಮುಂದುಗೊಂಡಿದ್ದ ಕಾರಣ,
ನಿಮ್ಮ ಸನ್ನಿಧಿಯಲಾನು ಸದಾಚಾರಿಯಾದಡೆ, ನಿಮಗಾನು ಸರಿಯೆ
ಕೂಡಲಸಂಗಮದೇವಾ,
ಜಂಗಮಮುಖದಿಂದ ಸಂಗನಬಸವಣ್ಣ ಬದುಕಿದನೆಂಬುದ
ಮೂರು ಲೋಕವೆಲ್ಲವೂ ಬಲ್ಲುದು ಕಾಣಾ ಪ್ರಭುವೆ.
1251
 1252
 1253
ನಿರ್ಲೇಪವಾದ ನಿಜಗುಣಿ ನೋಡಯ್ಯಾ,
ಕಾಮಿಸದ ಕಲ್ಪಿಸದ ಪ್ರಸಾದಿ ನೋಡಯ್ಯಾ.
ಬಯಸಲಿಲ್ಲದ ಪ್ರಸಾದಿ
ಗುರುವಿನ ಮುಖದಿಂದ ಬಂದ ಪ್ರಸಾದವಲ್ಲದೆ
ಮತ್ತೇನನೂ ಮುಟ್ಟಲೀಯನು,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
1254
 1255
ನೀಲದ ಮಣಿಯೊಂದು ಮಾಣಿಕವ ನುಂಗಿದಡೆ,
ವಜ್ರ ಬಂದು ಅದು ಬೇಡವೆಂದುಗುಳಿಸಿತ್ತು ನೋಡಾ,
ಅಡಗಿದ ಮಾಣಿಕ್ಯ ನೀಲದ ತಲೆಯ ಮೆಟ್ಟಿ,
ಆನಂದನಾಟ್ಯವನಾಡುತ್ತಿದ್ದಿತ್ತು.
ಅಂಬರದೊಳಗಣ ಮುಗ್ಧೆ ಕಂಗಳ ಮುತ್ತಿನ ಮಣಿಯ
ಮಥನವಿಲ್ಲದೆ ನುಂಗಿ ಉಗುಳುತ್ತಿದ್ದಳು.
ಲಿಂಗ ಜಂಗಮವೆಂಬುದ ಇಂದರಿದು ಸುಖಿಯಾದೆನು,
ಕೂಡಲಸಂಗಮದೇವರಲ್ಲಿ
ಪ್ರಭುವಿನ ಕೃಪೆಯಿಂದ ನಾನು ಬದುಕಿದೆನು.
1256
ನೆಲ್ಲ ಗಿಡುವಿನೊಳಗೆ ನಾನೊಂದು ಹುಲ್ಲಾಗಿ ಹುಟ್ಟಿದೆನಯ್ಯಾ.
ಆನು ಭಕ್ತನೆಂದೆಂಬೆನೆ, ಆನು ಯುಕ್ತನೆಂದೆಂಬೆನೆ
ಆನು ಕೂಡಲಸಂಗನ ಶರಣರೊಕ್ಕುದನುಂಡಡೆ,
ಪಾದರಕ್ಷೆಗೆ ಸರಿಯಹೆನೆ.
1257
ನೇಹದ ಸುಖವ ನೋಟ ನುಂಗಿತ್ತು,
ನೋಟದ ಸುಖವ ಕೂಟ ನುಂಗಿತ್ತು,
ಕೂಟದ ಸುಖವ ಆಲಿಂಗನ ನುಂಗಿತ್ತು,
ಆಲಿಂಗದ ಸುಖವ ಸಂಗ ನುಂಗಿತ್ತು,
ಸಂಗದ ಸುಖವ ಪರವಶ ನುಂಗಿತ್ತು,
ಪರವಶದ ಸುಖವ ಕೂಡಲಸಂಗಯ್ಯ ತಾನೆ ಬಲ್ಲ.
1258
ನೋಡಿರೇ ನೋಡಿರೇ ಪೂರ್ವದತ್ತವ;
ವರುಣ ಹೆಳವ, ರವಿ ಕುಷ್ಟ, ಶುಕ್ರನಂಧಕ,
ಶನಿಗೆ ಸಂಕಲೆ, ಬಲಿಗೆ ಬಂಧನ, ಸೀತೆಗೆ ಧ್ರೌಪದಿಗೆ ಸೆರೆ,
ಹರಿ ಹಂದಿಯಾದ, ಅರುಹಂಗೆ ಲಜ್ಜೆ,
ಬ್ರಹ್ಮನ ಶಿರಹೋಯಿತ್ತು,
ಬಲ್ಲಿದನೆಂಬವನ ಕೊಡೆವಿಡಿಸದೆ ವಿದ್ಥಿ
ಜತ್ತಕನೆಂಬವನ ಕತ್ತೆಯ ಮಾಡಿತ್ತು.
ದಶಮುಖನ ನಾಯ ಡೋಣಿಯಲ್ಲಿ ಉಣಿಸಿತ್ತು.
ದೇವೇಂದ್ರನ ಮೈಯ್ಯ ನಾಣುಗೆಡಿಸಿತ್ತು.
ಶೂದ್ರಕನ ತಲೆ ಕಂಚಿಯಾಲದಲ್ಲಿ ನೇರಿತ್ತು.
ಕೂಡಲಸಂಗಮದೇವಯ್ಯಾ,
ನೀ ಮಾಡಿದ ಮಾಯೆಯನಂತರನಾಳಿಗೊಂಡಿತ್ತು.
1259
 1260
ಪಂಚಮುಖವ ಪೂಜಿಸುವಯ್ಯಗಳು ನೀವು ಕೇಳಿರಯ್ಯಾ;
ಪಂಚಲಿಂಗವಾವುದೆಂಬುದ ನೀವು ಕೇಳಿರೆ !
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬ
ಈ ಐದರಲ್ಲಿ ನೊಂದುಬೆಂದಯ್ಯಗಳು ನೀವು ಕೇಳಿರೆ !
ನಾನವನೊಲ್ಲೆ, ನಾನವನಂಗವಿಸುವನಲ್ಲ, ನಾನವ ಹಿಡಿವನಲ್ಲ,
ಸನ್ಯಾಸದೊಳಗಾಡಿ ಸಮೀಪಕ್ಕೆ ಬಾಹಾತನಲ್ಲ,
ಕ್ಷಪಣರೊಳಗಾಡಿ ಲಜ್ಜೆದೋರುವವನಲ್ಲ,
ಲಿಂಗದೊಳಗಾಡಿ ಅಂಗವ ಬಿಡುವವನಲ್ಲ,
ಸರ್ವದೊಳಗಾಡಿ ಅಧೋಗತಿಗಿಳಿವವನಲ್ಲ.
ನಾನು ಜಂಗಮದಾಸೋಹದೊಳಗಾಡಿ ನಿಮ್ಮ ಕಂಡೆ
ಕೂಡಲಸಂಗಮದೇವಾ.
1261
ಪಂಚಾಮೃತದಲ್ಲಿ ಉಂಡರೇನು !
ಮಲಮುತ್ರ ವಿಷಯ ಘನವಕ್ಕು.
ಭ್ರಾಂತು ಬೇಡ ಮರುಳೆ
ಬೇಡದು ಕಾಯಗುಣ.
ಆಸೆಯಾಮಿಷ ತಾಮಸ ಹಸಿವು ತೃಷೆ
ವ್ಯಸನ ವಿಷಯಾದಿಗಳಲ್ಲಿ
ಹಿರಿಯರು, ಗರುವರುಂಟೆ !
ಭ್ರಾಂತು ಬೇಡ ಮರುಳೆ !
ಬೇಡದು ಕಾಯಗುಣ.
ಈ ಭೇದವ ಭೇದಿಸಬಲ್ಲಡೆ
ಕೂಡಲ ಸಂಗನ ಶರಣರ ಸಾಣಿಯಲ್ಲಿ ಸವೆದ
ಶ್ರೀಗಂಧದಂತಿರಬೇಕು ಶರಣ.
1262
ಪಂಚೇಂದ್ರಿಯಂಗಳರತು ತನುಮನವ ನಿಲಿಸಬಲ್ಲಡೆ
ಚೆನ್ನನ ಪ್ರಸಾದ ಲಿಂಗಕ್ಕೋಗರವಾಗದೆ
ನಾಲಗೆಯ ರುಚಿಯ ನಾಣಕ್ಕೆ ತಂದು ಮರಳಿ ಲಿಂಗಾರ್ಪಿತವ ಮಾಡಿದಡೆ,
ಮನದ ಭಾವವ ಕೈಕೊಂಡ ಕಾರಣ,
ನಮ್ಮ ಕೂಡಲಸಂಗಮದೇವನಿಗೆ ಕೊಡಬಹುದು ಕಾಣಾ, ಪ್ರಭುವೆ.
1263
 1264
ಪರಿಮಿತಕೆ ನಡೆತಂದು ಪರುಷದ ಸಿಂಹಾಸನದ ಮೇಲೆ
ಪರಮಗುರು ಮೂರ್ತಿಗೊಂಡಿರಲು,
ಪರಮಾನಂದಜಲದಿಂದ ಪಾದಾರ್ಚನೆಯಂ ಮಾಡಿ,
ದಿವ್ಯಸುಗಂಧಮಂ ಲೇಪಿಸಿ, ಅಕ್ಷಯವೆಂಬ ಅಕ್ಷತೆಯನಿಟ್ಟು,
ಹೃದಯಕಮಲದ ಪುಷ್ಪದಿಂದ ಪೂಜೆಯ ಮಾಡಿ,
ಸುಜ್ಞಾನವಾಸನೆಯೆಂಬ ಧೂಪಮಂ ಬೀಸಿ,
ಭಕ್ತಿಸಾರಾಯವೆಂಬ ನೈವೇದ್ಯಮಂ ಸಮರ್ಪಿಸಿ,
ಪರಮಹರುಷವನೆ ಹಸ್ತಮಜ್ಜನಕ್ಕೆರೆದು,
ತ್ರಿಕರಣಶುದ್ಧವೆಂಬ ತಾಂಬೂಲಮಂ ಕೊಟ್ಟು,
ಸಮರಸಸಂಗದಿಂದ ಕೂಡಲಸಂಗಮದೇವರ ಶರಣ
ಪ್ರಭುದೇವರ ಕರುಣವೆನಗಾಯಿತ್ತು.
1265
ಪವಿತ್ರಲಿಂಗಕ್ಕೆ ಅಪವಿತ್ರವ ಕೊಡಲೊಲ್ಲೆನೆಂಬುದೆನ್ನ ಭಾಷೆ,
ಧರೆಯೊಳು ಬೆಳೆದುವೆಲ್ಲಾ ಅಪವಿತ್ರವೆಂಬುದ ಬಲ್ಲೆನಾಗಿ ನಾನವನೊಲ್ಲೆ,
ಪಾಚಿಗೆಟ್ಟ ಹೊಲದಲ್ಲಿ ಒಂದು ಲಿಂಗಮೂರ್ತಿದೋರಿದಡೆ ಅದು ದಿವ್ಯಕ್ಷೇತ್ರ,
ಅಲ್ಲಿದ್ದವರೆಲ್ಲರೂ ಪವಿತ್ರಕಾಯರು.
ಇದು ಕಾರಣ ಅನಘ ಅನಾದಿ ಜಂಗಮಮುಖದಿಂದೊಗೆದ ಪ್ರಸಾದ,
ಕೂಡಲಸಂಗಯ್ಯಾ, ನಿಮಗೆ ನೈವೇದ್ಯವೆನಗೆ ಪ್ರಸಾದ ತಪ್ಪದು,
ನಿಮ್ಮವರು ಸವಿದ ಸವಿಯ ಕೈಯಾಂತು ಕೊಂಡುದ ನಾ ಬಲ್ಲೆನಾಗಿ.
1266
ಪಿಂಡವೇ ಆದಿಯಾಗಿ, ಜ್ಞಾನವೇ ಶೂನ್ಯವಾಗಿ,
ಆದಿ ಅಂತ್ಯಗಳೆರಡು ಮಧ್ಯದಲ್ಲಿ ನಿಲ್ಲಲು
ನೂರು ಒಂದರ ಮೇಲೆ ನಿಂದು
ಒಂದೇ ನೂರಾಗಿ ನಿಂದ ಮೇಲೆ
ನೂರೊಂದೆಂಬುದಿಲ್ಲವಾಗಿ
ಕೂಡಲಸಂಗಮದೇವನೆಂಬ ಸೊಲ್ಲು ಇಲ್ಲ.
1267
ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು,
ಪುಣ್ಯಗಳಹ ಕಾಲಕ್ಕೆ ಮಣ್ಣು ಹೊನ್ನಹುದು,
ಪುಣ್ಯಗಳಹ ಕಾಲಕ್ಕೆ ಹಾವು ಲೇವಳವಹುದು,
ಪುಣ್ಯಗಳಹ ಕಾಲಕ್ಕೆ ಅನ್ಯರು ತನ್ನವರಹರು.
ಇಂತಪ್ಪ ಪುಣ್ಯಂಗಳೆಲ್ಲವೂ ಭಕ್ತಿಯಿಂದಹುದು,
ಭಕ್ತಿ ಕೆಟ್ಟಡೆ ಪುಣ್ಯವು ಕೆಡುವುದು.
ಇಂತಪ್ಪ ಭಕ್ತಿಯೂ ಪುಣ್ಯವೂ ಚೆನ್ನಬಸವಣ್ಣನಿಗುಂಟಾಗಿ,
ನಾನು ಬದುಕಿದೆನಯ್ಯಾ, ಕೂಡಲಸಂಗಮದೇವಾ.
1268
ಪುಣ್ಯವೆಂದರಿಯೆ, ಪಾಪವೆಂದರಿಯೆ,
ಸ್ವರ್ಗವೆಂದರಿಯೆ ನರಕವೆಂದರಿಯೆ,
ಹರಹರ ಮಹಾದೇವ ಶಿವಶರಣೆಂದು ಶುದ್ಧ ನೋಡಯ್ಯಾ,
ಹರಹರ ಮಹಾದೇವ ಶಿವಶರಣೆಂದು ಧನ್ಯ ನೋಡಯ್ಯಾ.
ಕೂಡಲಸಂಗಮದೇವಯ್ಯಾ,
ನಿಮ್ಮನರ್ಚಿಸಿ, ಪೂಜಿಸಿ ನಿಶ್ಚಿಂತನಾದೆ.
1269
ಪ್ರಣವಾರೂಢನು, ಪ್ರಣವಪ್ರಕೃತಿಸಂಜ್ಞನು,
ಪ್ರಣವಸಂಗಸಮರಸ,
ನಮ್ಮ ಕೂಡಲಸಂಗಮದೇವರು.
1270
ಪ್ರಸಾದಿಯ ಪ್ರಸಾದದಲೊದಗಿದ ಪ್ರಸಾದಿಯನು
ಏನೆಂದುಪಮಿಸುವೆನು
ಏನೆಂದು ಸ್ತುತಿಸುವೆನಯ್ಯಾ,
ಮಹಾಪ್ರಸಾದಿಗೆ ಮಹಾಘನಪ್ರಸಾದವಾದ ಪ್ರಸಾದಿಯನು
ಅಗಮ್ಯಪ್ರಸಾದದಲ್ಲಿ ಸ್ವಾಯತವಾದ
ಕೂಡಲಸಂಗಮದೇವಾ,
ನಿಮ್ಮ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು.
1271
ಪ್ರಾಣಲಿಂಗ ಪ್ರವೇಶಿತನಾಗಿ ಪ್ರಸಾದದಲ್ಲಿ ಸನ್ನಹಿತನಯ್ಯಾ,
ಲಿಂಗಾರ್ಪಿತವಲ್ಲದೆ ಅನರ್ಪಿತವ ಮುಟ್ಟಲೀಯನಯ್ಯಾ,
ಅಂಗಗುಣಂಗಳೆಲ್ಲವನತಿಗಳೆದು ಪ್ರಸಾದದಲ್ಲಿ ಬ್ರಹ್ಮಚಾರಿಯಾದನು
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
1272
ಫಲವ ಸಲಿಸುವನ್ನಬರ ಬಿತ್ತು ಸಿಪ್ಪೆ ಉಭಯವು ಇರಬೇಕು.
ಸಾರವ ಸಲಿಸಿದಲ್ಲಿ ಸಮಯ ಉಳಿಯಿತ್ತು.
ನಮ್ಮ ಕೂಡಲಸಂಗಮದೇವರಲ್ಲಿ
ಹಾಗರಿಯಬೇಕು, ಎಲೆ ಘಟ್ಟಿವಾಳಯ್ಯಗಳೆ.
1273
 1274
ಬಡಗವಾಗಿಲ ¥õ್ಞಳಿಯ ಭರವಸದಿಂ ಪೊಕ್ಕು,
ಪಶ್ಚಿಮದ್ವಾರದ ಧವಳಾರಮಂ ಪಶ್ಚಿಮದಿ ಪೊಕ್ಕು,
ತ್ರಿವಿಧಗತಿಯ ಶೂನ್ಯಸಿಂಹಾಸನದ ಮೇಲೆ ತರಹರವಾದಡೆ
ನಂಬುವುದೆನ್ನ ಮನವು.
ಕೂಡಲಸಂಗಮದೇವರು ಸಾಕ್ಷಿಯಾಗಿ,
ನೀನು ನಮ್ಮ ಕೋಪಿಸಿದಡೆ ಕೋಪಿಸು, ಚೆನ್ನಬಸವಣ್ಣಾ.
1275
ಬಣ್ಣವನಿಟ್ಟು ಮೆರೆವ ಅಣ್ಣನ ಭಕ್ತಿ
ಸುಣ್ಣದ ಕಲ್ಲ ಕಟ್ಟಿ ಮಡುವ ಬಿದ್ದಂತೆ ಆಯಿತ್ತು.
ತನ್ನ [ಬಣ್ಣ ತನ್ನ ಸು]ಡುವುದು,
ತನ್ನ ಸುಡದ ಹಾಗೆ ನೆನೆಯಾ, ಕೂಡಲಸಂಗಮದೇವನ.
1276
 1277
ಬಸವನಿದ್ದಂತೆ ಊರ ಪಶುವನೊಯಿವರೆ ಸಂಗಯ್ಯಾ
ಕಗ್ಗಾಯಿಯಿದ್ದಂತೆ ಹೂಮಿಡಿಯನೊಯಿವರೆ ಸಂಗಯ್ಯಾ
ನಾನಿದ್ದಂತೆ ನನ್ನ ಶಿಶು ಸಂಗಯ್ಯನನೊಯಿವರೆ
ಕೂಡಲಸಂಗಯ್ಯಾ.
1278
ಬಸುರೆ ಬಾಯಾಗಿ, ಬಾಯಿ ಬಸುರಾಗಿಪ್ಪುದ ತೊಡೆದ,
ಕಣ್ಣೆ ತಲೆಯಾಗಿ, ತಲೆಯೆ ಕಣ್ಣಾಗಿರಿಸಿದ,
ಕಾಲೆ ಕೈಯಾಗಿ, ಕೈಯೆ ಕಾಲಾಗಿ ನಡೆಸಿದ,
ನೆಳಲನುಟ್ಟು ಸೀರೆಯನೆನಗೆ ಉಡುಗೊರೆಯ ಕೊಟ್ಟನು,
ಮಥನವಿಲ್ಲದ ಸಂಗಸುಖವನೆನಗೆ ತೋರಿದನು.
ಕೂಡಲಸಂಗಮದೇವಾ,
ಪ್ರಭುವಿನ ಶ್ರೀಪಾದಕ್ಕೆ ಶರಣೆನುತ್ತಿರ್ದೆನು.
1279
ಬಾಗಿಲ ಮುಂದೆ ಬಾಳೆ ಬಿತ್ತುವುದಯ್ಯಾ.
ಬಾಳೆಗೊನೆವಾಗದ ಮುನ್ನ
ಕೂಡಿಕೊಳ್ಳಿ ಕೂಡಲಸಂಗಮದೇವನ.  
1280
ಬಾಳತ್ವಕ್ಕೆಂದು ಮಧುವ ತಂದು
ಕೊಡನ ತುಂಬಿದ ಜೇನಹುಳುವಿನಂತೆ ತಾನುಂಬುದು,
ತನ್ನೆಂಜಲ ಜಗವುಂಬುದು ನೋಡಯ್ಯಾ.
ಶಿವಭಕ್ತನಾಗಿ ಶಿವಾನ್ನವನೆ ಕೊಂಡು,
ಒಕ್ಕಮಿಕ್ಕ ವಸ್ತುವ ಜಂಗಮಕ್ಕಿಕ್ಕುವಾತನೆ ಭಕ್ತ,
ಕೊಂಡಾತನೆ ಜಂಗಮ.
ನಡುವೆ ನೀ ಬಂದು ಭಂಡು ಮಾಡದಿರೈ
ಕೂಡಲಸಂಗಮದೇವಾ.
1281
ಬಿತ್ತು ಬೆಳೆಯಿತ್ತು, ಕೆಯ್ಯ ಕೊಯ್ಯಿತ್ತು, ಗೂಡು ಮುರಿಯಿತ್ತು,
ಕುತ್ತುರಿಯೊಟ್ಟಿತ್ತು, ಒಕ್ಕಿತ್ತು ತೂರಿತ್ತು ಅಳೆಯಿತ್ತು, ಸಲಗೆ ತುಂಬಿತ್ತು.
ಕೂಡಲಸಂಗಮದೇವಯ್ಯಾಮೇಟಿ ಕಿತ್ತಿತ್ತು, ಕಣ ಹಾಳಾಯಿತ್ತಯ್ಯಾ. 
1282
ಬಿತ್ತದೆ ಬೆಳೆಯದೆ ಬೆಳೆದ ಹೆಬ್ಬೆಳಸಿನ ರಾಶಿಯ ನೋಡಾ,
ಸುಗಂಧ ಬಂಧುರದಂತೆ ಹುಟ್ಟುತ್ತವೆ ಪರಿಮಳ !
ಆದಿ ಅನಾದಿಯಿಲ್ಲದ ಮುನ್ನ ತನ್ನಿಂದವೆ ತಾನಾಗಿರ್ದ ಕಾರಣ
ಮುಟ್ಟದೆ ತಟ್ಟದೆ ಗುರುಕಾರುಣ್ಯವ ಪಡೆದು, ಲಿಂಗ ಸಯವಾಗಿ,
ಎನಗೆ ಗತಿಪಥವ ತೋರಿಸಬೇಕೆಂದು ಆಗಾದನು,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
1283
ಬೆಟ್ಟದ ಕಲ್ಲು ಸೋರೆಯ ಕೂಡೆ ಆಡಿದಂತಾಯಿತ್ತಯ್ಯ,
ಜಾತಿಯಲ್ಲದ ಜಾತಿಯ ಕೂಡಿ
ಅದರ ಪರಿಯಂತೆ,
ಸಂಗವಲ್ಲದ ಸಂಗವ ಮಾಡಿದಡೆ ಭಂಗತಪ್ಪದು, ಕೂಡಲಸಂಗಮದೇವಾ.
1284
ಬೆದರಿಸುವ, ಬೆಚ್ಚಿಸುವ, ಮುಯ್ಯಾನುವ,
ಮೇಳವಾಡುವ, ಆಳಿಗೊಳಿಸುವ,
ಆಳಲಿ ನುಡಿಸುವ, ಬಳಲಿಸುವನೊತ್ತಿ ನೋಡುವ,
ಒಳಹೊರಗೆ ಹೊಳದು ಹೋಹ, ಕೇಳದೆ ಬಹ,
ಬೇಳು ಮಾಡುವನಾಳವಾಡುವ, ಹೊಳೆದು ಹೋಹ,
ನಾ ಇದಕ್ಕಂಜೆ ಕೂಡಲಸಂಗಮದೇವಾ. 
1285
ಬೇಡದಿರು ಶಿವಭಕ್ತರಲ್ಲದವರ, ಬೇಡಿ ಬೋಡಾಗದಿರು,
ಬೇಡಿದಡೆ ಹುರುಳಿಲ್ಲ.
ಬೇಡಿದ ಕೈಗೆ ಕಡೆಯಿಲ್ಲದೆ ಕೊಡಬಲ್ಲರು
ಕೂಡಲಸಂಗನ ಶರಣರು.
1286
 1287
ಭಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು.
ಲಿಂಗಸಂಬಂದ್ಥಿಯಾದಡೆ ಜಂಗಮಪ್ರೇಮಿ ನೀನಾಗು,
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ,
ಜಂಗಮದಲ್ಲಿ ನಿರುತ ಭರಿತ, ಕೂಡಲಸಂಗಮದೇವ.
1288
ಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾ,
ಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾ.
ಭಕ್ತನಲ್ಲಿಯೂ ಭಕ್ತಜಂಗಮವೆರಡೂ ಸನ್ನಹಿತ,
ಜಂಗಮದಲ್ಲಿಯೂ ಜಂಗಮಭಕ್ತವೆರಡೂ ಸನ್ನಹಿತ,
ಜಂಗಮಕ್ಕಾದಡೂ ಭಕ್ತಿಯೆ ಬೇಕು,
ಭಕ್ತಂಗೆ ಭಕ್ತಿಸ್ಥಲವೆ ಬೇಕು.
ಭಕ್ತನ ಅರ್ಥಪ್ರಾಣಾಬ್ಥಿಮಾನಕ್ಕೆ ತಾನೆ ಕಾರಣನೆಂದು ಬಂದ ಜಂಗಮ
ಆ ಭಕ್ತನ ಮನೆಗೆ ತಾನೆ ಕರ್ತನಾಗಿ ಹೊಕ್ಕು,
ತನುಮನಧನಂಗಳೆಲ್ಲವನೊಳಕೊಂಡು,
ಆ ಭಕ್ತನ ಪಾವನವ ಮಾಡಬಲ್ಲಡೆ ಆತ ಜಂಗಮವೆಂಬೆ.
ಆ ಜಂಗಮದ ಗಳಗರ್ಜನೆಗೆ ಸೈರಿಸಿ,
ಮುಡುಹಿಂಗ ಮುನ್ನೂರು ಪಟ್ಟವ ಕಟ್ಟಿದಡೆ
ಆತ ಭಕ್ತನೆಂಬೆ.
ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ
ಕೂಡಲಸಂಗನ ಶರಣರ ಮನೆಯ ಬಾಗಿಲುಗಾಹಿ ನಾನಾಗಿರ್ದು
ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ.
1289
ಭಕ್ತಿಯುಕ್ತಿಯನರಿಯೆ, ಷೋಡಶೋಪಚಾರವನರಿಯೆ,
ಭಾವನಿರ್ಭಾವವನರಿಯೆ, ಜ್ಞಾನಮಹಾಜ್ಞಾನವನರಿಯೆ,
ಕೂಡಲಸಂಗಮದೇವಯ್ಯಾ,
ಮಡಿವಾಳತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು.
1290
ಭಕ್ತಿಯೆಂಬ ಪಿತ್ತ ತಲೆಗೇರಿ ಕೈಲಾಸದ ಬಟ್ಟೆಯ ಹತ್ತುವ ವ್ಯರ್ಥರ ಕಂಡು
ಎನ್ನ ಮನ ನಾಚಿತ್ತು, ನಾಚಿತ್ತು.
ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ,
ಆ ಪೃಥ್ವಿಗೆ ಲಯವುಂಟು, ಆ ಮೊರಡಿಗೆಯು ಲಯವುಂಟು,
ಅಲ್ಲಿರ್ಪ ಗಂಗೆವಾಳುಕಸಮರುದ್ರರಿಗೂ ಲಯವುಂಟು,
ಇದು ಕಾರಣ,
`ಯದ್ಧೃಷ್ಟಂ ತನ್ನಷ್ಟಂ' ಎಂಬ ಶ್ರುತಿಯ ನೋಡಿ ತಿಳಿದು,
ಬಟ್ಟಬಯಲು ತುಟ್ಟತುದಿಯ ಮೆಟ್ಟಿನಿಂದ
ಕೂಡಲಸಂಗಾ, ನಿಮ್ಮ ಶರಣ.
1291
ಭಕ್ತಿಯೆಂಬುದು ಅನಿಯಮ ನೋಡಯ್ಯಾ,
ಅದು ವಿಷದ ಕೊಡ; ತುಡುಕಬಾರದು,
ಅಂಗಕ್ಕೆ ಹಿತವಲ್ಲ, ಸಿಂಗಿ ನೋಡಯ್ಯಾ,
ಅದು ವಿಚಿತ್ರ, ವಿಸ್ಮಯ ಕೂಡಲಸಂಗಮದೇವಾ.
1292
 1293
ಭವಭವದಲ್ಲಿ ಭಕ್ತನಾದಡೆ ಆ ಭವವೆ ಲೇಸು ಕಂಡಯ್ಯಾ.
ಲಿಂಗಾರಾಧನೆ, ಜಂಗಮಾನುಭವ ಅಂದಂದಿಗೆ ಪರಮಸುಖವಯ್ಯಾ.
ಎಂದೆಂದೂ ನಾನಿದನೆ ಬಯಸುವೆ ತಂದೆ, ಕರುಣಿಸಯ್ಯಾ
ಕೂಡಲಸಂಗಮದೇವಾ.
1294
ಭವರೋಗವೈದ್ಯನೆಂದು ನಂಬಿದೆ ನಾನು,
ಒಮ್ಮಿಂಗೆ ಕರುಣಿಸಯ್ಯಾ ಭಕ್ತಿಫಲಪ್ರದಾಯಕ.
ನೀನು ಒಮ್ಮಿಂಗೆ ಕರುಣಿಸಯ್ಯಾ
ಜಯ ಜಯ ಶ್ರೀ ಮಹಾದೇವ ಎನುತಿರ್ದೆನು.
ಕೂಡಲಸಂಗಮದೇವಯ್ಯಾ,
ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
1295
ಭವವಿಲ್ಲದಡೇನು, ಬಂಧನವಿಲ್ಲದಡೇನು,
ಶಿವಗಣಂಗಳೆಲ್ಲರ ಮನಕ್ಕೆ ಬಾರದುದೆ ಭವಬಂಧನ ನೋಡಾ.
ಪರಹಿತಾರ್ಥವಾಗಬೇಕೆಂದು ಲಿಂಗವ ಕೊಟ್ಟಡೆ
ನಿಮ್ಮ ಪ್ರಮಥರ ಮುಂದೆ ಶಿವ ಮುನಿದು ಮತ್ರ್ಯಲೋಕಕ್ಕೆ ಕಳುಹಿಸಿದನು.
ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದು ನಂಬಿದಲ್ಲಿ
ನಿಮ್ಮ ಪ್ರಮಥರೆನ್ನನೊಳಗಿಟ್ಟುಕೊಂಡರು.
ಜಂಗಮಮುಖದಲ್ಲಿ ಲಿಂಗವನರಿಸಿಕೋ ಎಂದಡೆ
ದಾಸೋಹವೆಂಬ ಪಸರವನಿಕ್ಕಿದೆನು.
ಕೂಡಲಸಂಗಮದೇವರ ಮುಂದೆ
ಜಂಗಮಮುಖದಲ್ಲಿ
ಎಂದು ಸುಖಿಯಪ್ಪೆನು ಹೇಳಾ, ಚೆನ್ನಬಸವಣ್ಣಾ.
1296
 1297
ಭೂಮಿಯ ಸಾರಾಯದಲೊಂದು ತರು ಬೆಳೆಯಿತ್ತು,
ನವರಸಫಲವನಿತ್ತಿತ್ತು ನೋಡಾ.
ಏನೆಂದರಿಯದೆ ಎಂತೆಂದರಿಯದೆ ಮರುಳಾದೆನು,
ನಾನು ಮಾರಾರಿಯ ಬಲೆಯಲ್ಲಿ ಸಿಲುಕಿದೆನಯ್ಯಾ.
ಕೂಡಲಸಂಗಮದೇವಯ್ಯಾ,
ಚೆನ್ನಬಸವಣ್ಣನಿಂದಲಾನು ಬದುಕಿದೆನು.
1298
ಭೇರುಂಡನ ಪಕ್ಷಿಗೆ ದೇಹ ಒಂದೆ,
ತಲೆಯೆರಡರ ನಡುವೆ ಕನ್ನಡವ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ, ವಿಷ ಬಿಡುವುದೇ ಅಯ್ಯಾ
ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.
1299
ಮಡಿವಾಳ ಮಡಿವಾಳನೆಂಬರು, ಮಡಿವಾಳನೆಂಬುದನಾರೂ ಅರಿಯರು,
ಎನ್ನ ಮಲಯದಲ್ಲಿ ಹೊದಕುಳಿಗೊಂಡ ಮನದ ಮೈಲಿಗೆಯ ತಂದು,
ತನ್ನ ಮನೆಗೆ ಕೊಂಡುಹೋಗಿ ಹಾಯ್ಕಿದಡೆ,
ಕೈಮುಟ್ಟಿದಡೆ ಆಗದೆಂದು ತನ್ನ ಪಾದದೊಳಗೆ ಮೆಟ್ಟಿ, ಅಲುಬಿ ಸೆಳೆದನಯ್ಯಾ.
ತನ್ನ ನಿರ್ಮಲವ ಕೊಟ್ಟನೆನಗೆ,
ಆ ಕೊಟ್ಟ ಬೀಳುಡಿಗೆಯ ಹೊದೆದುಕೊಂಡೆನಾಗಿ,
ಮಡಿವಾಳ ಮಾಚಿತಂದೆಯ ಕೃಪೆಯಿಂದಲಾನು ಬದುಕಿದೆನಯ್ಯಾ,
ಕೂಡಲಸಂಗಮದೇವಾ.
1300
ಮತಿಗೆಟ್ಟು ಧೃತಿಗುಂದಿ ಬೇಳಾದೆನಯ್ಯಾ,
ಗತಿಗೆಟ್ಟು ವ್ರತಗೆಟ್ಟು ಧಾತುಗೆಟ್ಟ ಬಾಹಿರ ನಾನಯ್ಯಾ,
ಕಹಿಸೋರೆ ಮುತ್ತಂತಾಯಿತ್ತೆನ್ನ ಭಕ್ತಿ.
ನಡೆಲಿಂಗ ಜಂಗಮ ಮನೆಗೆ ಬರಲು
ಇಂಬುಗೊಳಲರಿಯದೆ ಕೆಟ್ಟ ಕೇಡನೇನೆಂದುಪಮಿಸುವೆನಯ್ಯಾ,
ನವರತ್ನವ ಕಿತ್ತು ಮಡುವಿನೊಳಗೆ ಹಾಯ್ಕಿದ ಕಪಿಯಂತಾಯಿತ್ತೆನ್ನ ಭಕ್ತಿ
ಕೂಡಲಸಂಗಮದೇವರ ತಂದುಕೊಟ್ಟಡೆ
ನಿಮ್ಮ ಚಮ್ಮಾವುಗೆಯ ಹೊತ್ತು ಕುಣಿದಾಡುವೆನು
ಕಾಣಾ, ಚೆನ್ನಬಸವಣ್ಣಾ.
1301
ಮನದೊಡೆಯ ಮನೆಗೆ ಬಂದಡೆ ಕನಕದ ತೋರಣವ ಕಟ್ಟಿ,
ಷಡುಸಮ್ಮಾರ್ಜನೆಯ ಮಾಡಿ, ರಂಗವಾಲಿಯನಿಕ್ಕಿ,
ಉಘೇ, ಚಾಂಗು, ಭಲಾ ಎಂಬೆನು.
ಕೂಡಲಸಂಗಮದೇವಾ,
ನಿಮ್ಮ ಶರಣ ಪ್ರಭುದೇವರು ಬಂದಡೆ
ಉಬ್ಬಿ ಕೊಬ್ಬಿ ನಲಿನಲಿದಾಡುವೆ.
1302
ಮನ ಮಜ್ಜನ, ತನು ಸಿಂಹಾಸನ,
ನೆನಹೆ ನಾಗವತ್ತಿಗೆಯಾಯಿತ್ತಾಗಿ
ಅರಿಯಲಿಲ್ಲ, ಮರೆಯಲಿಲ್ಲ ತೆರಹಿಲ್ಲದೆ ಇದ್ದುದಾಗಿ.
ಈಯನುವ ಅಲ್ಲಮ ತೋರಿದನು.
1303
ಮನ ಮುಟ್ಟಿದ ಭಕ್ತಿಗೆ ತನುವೆ ಅರ್ಪಿತ,
ತನು ಮುಟ್ಟಿದ ಭಕ್ತಿಗೆ ಮನವೆ ಅರ್ಪಿತವಯ್ಯಾ,
ಎನ್ನ ತನುಮನವೆರಡೂ ನಿಮ್ಮ ಚರಣಕ್ಕೆ ವೇದ್ಯ ನೋಡಯ್ಯಾ.
ದೀರ್ಘದಂಡನಮಸ್ಕಾರಂ ನಿರ್ಲಜ್ಜಃ ಗುರುಸನ್ನಿಧೌ
ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನೀವೇದಯೇತ್ ಎಂದುದಾಗಿ ತ್ರಾಹಿ
ತ್ರಾಹಿ ಶರಣಾರ್ಥಿ
ನೀವೇ ಬಲ್ಲಿರಿ ಕೂಡಲಸಂಗಮದೇವಾ.
1304
ಮನವು ಮಹದೊಳಗೆ ಲೀಯವಾಗಿ
ಘಟವಿಡಿದು ಸುಳಿದಾಡುವ ಮಹಾಮಹಿಮಂಗೆ ಅಹುದಾಗದೆಂಬ ಭ್ರಾಂತೇಕೊ
ಹಿಡಿತಹುದು, ಬಾರದಡೆ ಶಿರವನರಿದು ತಹುದು.
ಕೂಡಲಸಂಗಮದೇವರು ಬಲ್ಲಂತೆ ಮಾಡಲಿ.
1305
ಮನೆಮನೆದಪ್ಪದೆ ಹಗಹದ ಬತ್ತ ಎನಗಿಲ್ಲೆಂದು ಬೆಂಬೀಳಲೇಕಯ್ಯಾ
ಶಿವಶರಣರೆಂಬ ಹಗಹದ ಬತ್ತ ಭವಭವದಲ್ಲಿ ಬಳಸಲುಂಟು.
ತವನಿಧಿಯ ಹಡೆದ ನಮ್ಮ ದಾಸಯ್ಯನುಂಟು,
ಕೂಡಲಸಂಗಮದೇವಾ.
1306
 1307
ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿದ್ಥಿಯಯ್ಯಾ
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು.
1308
 1309
ಮರುಗದ ಗಿಡುವಿನಂತೆ ಹುಟ್ಟುತ್ತಲೆ ಪರಿಮಳ,
ಎರವಿನ ಬಣ್ಣದೊರೆಗೆಡಿಸಿದ ಪರಿಯ ನೋಡಾ.
ಹರನ ಪ್ರೇರಣೆಯೊಳಗೆ ಹಿರಿದೊಂದು ವಾರುಧಿ,
ವಾರುಧಿಯೊಳಗಣ ಕಮಲ ಬಾಡಿ,
ಕಮಲದೊಳಗೆ ಸುಳಿವ ಭ್ರಮರನ ಪಕ್ಕ ಮುರಿದು ಉರುಳಿದಡೆ
ನಿರಂಜನವಾಯಿತ್ತು ನೋಡಾ.
ಹರಿಗೊಯಿದ ಮಿಂಚಿನ ಗೊಂಚಲ ನೆರೆವೋತು,
ಇಂದುಕೋಟಿಪ್ರಭೆಯ ಶಾಂತಿಯನೊಳಕೊಂಡು
ಕೂಡಲಸಂಗಮದೇವರ ನೆರೆವೋತ
ಪ್ರಭುದೇವರ ಶ್ರೀಪಾದದಲ್ಲಿ ಭೃಂಗನಾಗಿ ಬದುಕಿದೆನು.
1310
ಮರುಳ ಹಿಡಿದಿಹೆನೆಂಬವರು ಮರುಳಾಗಿ ಹಿಡಿಯಬೇಕು ಕೇಳಿರೆ.
ಬಹುಬುದ್ಧಿಯ ಜಡರಿಗೆ ಹಿಡಿಯಬಾರದು.
ನಿರವಯಲ ಬಯಲ ಹಿಡಿಯಬಹುದೆ
ಕೂಡಲಸಂಗಮದೇವರ ಭಾವಶಸ್ತ್ರದಿಂದ ಗೆಲಿದುಕೊಂಡು ಬನ್ನಿ.
1311
 1312
 1313
ಮಾಡುವಂತಿರಬೇಕು ಮಾಡದಂತಿರಬೇಕು.
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.
ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು.
1314
ಮಾಡುವ ಮಾಡಿಸಿಕೊಂಬ ಎರಡರ ನಡುವೆ
ಸಂದುಭೇದ ಉಂಟೆ ದೇವಾ
ಕಾಯ ಪ್ರಾಣದ ಸಂಗದಂತೆ ಇದ್ದುದಲ್ಲದೆ.
ಬಲ್ಲಂತೆ ಮಾಡು, ಬಲ್ಲಂತೆ ನೀಡು,
ನಾನರಿಯೆನೆಂಬುದು ನಿಮಗುಚಿತವೆ
ಮಾಡುವಲ್ಲಿ ನೀಡುವಲ್ಲಿ ಹೇಳಿ ಮಾಡಿಸಿಕೊಂಬುದಲ್ಲದೆ.
ಕೈ ಕಲಸಿದಡೆ ಬಾಯಿಗೆ ಹಂಗುಂಟೆ
ಕೂಡಲಸಂಗಮದೇವಾ.
1315
 1316
ಮಾಯೆವಿಡಿದು ಜೀವಿಸುವ ಜೀವಕನಲ್ಲ,
ಅದೇನು ಕಾರಣ
ಆತ ಘನಲಿಂಗವಿಡಿದು ಜೀವಿಸುವ ಜೀವಕನಾಗಿ.
ವಿಷಯವಿಡಿದು ಭುಂಜಿಸುವ ಭುಂಜಕನಲ್ಲ,
ಅದೇನು ಕಾರಣ
ಆತ ಘನಲಿಂಗವಿಡಿದು ಮಹಾಪ್ರಸಾದ ಭುಂಜಿಸುವ ಭುಂಜಕನಾಗಿ.
ವೇಷವಿಡಿದು ರಂಜಿಸುವ ರಂಜಕನಲ್ಲ,
ಅದೇನು ಕಾರಣ
ಆತ ಸಹಜವಿಡಿದು ರಂಜಿಸುವ ರಂಜಕನಾಗಿ.
ಇಂತೀ ತ್ರಿವಿಧ ಒಂದೆಯೆಂದರಿದು ಪರಮಾರ್ಥದಲ್ಲಿ ಚರಿಸುವ ಶರಣಂಗೆ
ಶರಣೆನುತಿರ್ದೆನಯ್ಯಾ, ಕೂಡಲಸಂಗಮದೇವಾ.
1317
 1318
ಮುಗಿಲ ಮರೆಯ ಮಿಂಚಿನಂತೆ, ಒಡಲ ಮರೆಯ ಆತ್ಮನಂತೆ,
ನೆಲದ ಮರೆಯ ನಿಧಾನದಂತೆ ಇಪ್ಪ,
ನಿಮ್ಮ ನಿಲವನಾರು ಬಲ್ಲರು ದೇವಾ
ನಿಮ್ಮ ನಿಲವ ಹಲಕಾಲದಿಂದ ಕಂಡು ಕಂಡು
ಕಡೆಗಣಿಸಿ, ಮರೆದು ಮತಿಗೆಟ್ಟು ಮರುಳಾದೆನು.
ಎನ್ನ ತಪ್ಪಿಂಗೆ ಕಡೆಯಿಲ್ಲ ಕಾಣಾ
ತ್ರಾಹಿ ತ್ರಾಹಿ ಕಾಯಯ್ಯಾ, ಕೂಡಲಸಂಗಮದೇವಾ.
1319
ಮುದ್ದ ನೋಡಿ, ಮುಖವ ನೋಡಿ,
ಮೊಲೆಯ ನೋಡಿ, ಮುಡಿಯ ನೋಡಿ,
ಕರಗಿ ಕೊರಗುವುದೆನ್ನ ಮನ,
ಲಿಂಗದೇವನ ಧ್ಯಾನವೆಂದಡೆ ಕರಗಿ ಕೊರಗದೆನ್ನ ಮನ.
ಆನು ಭಕ್ತನೆಂಬಡೆ ಲಜ್ಜೆಯಿಲ್ಲ ನೋಡಯ್ಯಾ.
ಎನ್ನ ತಂದೆ ಕೂಡಲಸಂಗಮದೇವಯ್ಯ ಒಲಿದು ಒಪ್ಪಗೊಂಡನಾದಡೆ,
ಆನು ಚೆಂಗಳೆಯ ಬಸುರಲ್ಲಿ ಬಾರದಿಹೆನೆ.
1320
ಮೂರ್ತಿಯ ಮುಂದಣ ಮೂವರದೇನೊ
ಸನಕ ಸನಂದಾದಿಗಳಿಂದತ್ತತ್ತಲು ನೋಡಾ.
ಕೂಡಲಸಂಗಮದೇವಾ,
ನಾನಾಳು, ನೀನಾಳ್ದ ಕಂಡಯ್ಯಾ.
1321
 1322
 1323
 1324
ಯೋಗಾಂಗ ಭೋಗಾಂಗ ಜ್ಞಾನಾಂಗ ಈ ತ್ರಿವಿಧವನು ಮರೆದು,
ಭಕ್ತಿಯೋಗದ ಮೇಲೆ ನಿಂದು, ವೈರಾಗ್ಯಯೋಗದ ಮೇಲೆ ನಿಂದು,
ನಡೆದು ನುಡಿದು ತೋರುವರು ಎಮ್ಮೆ ಶರಣರು,
ಗುರುಲಿಂಗಜಂಗಮ ಈ ತ್ರಿವಿಧವನು.
ಸುಖ ದುಃಖ ಚಿಂತೆ ಸಂತೋಷವೆಂಬುವಂ ಕಳೆದು,
ಉತ್ಪತ್ತಿಸ್ಥಿತಿಲಯವೆಂಬುವ ಸುಟ್ಟು,
ದೃಕ್ಕು, [ದರ್ಶನ], ದೃಶ್ಯವೆಂಬ ತ್ರಿಕರಣವ ಏಕವಮಾಡಿ,
ಪಿಂಡಾಂಡವಾ ಬ್ರಹ್ಮಾಂಡವೊಂದೆಂಬುದ ಅರಿದು,
ಸಂದ ಹರಿದು, ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ,
ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ ಎನ್ನ ಬಂಧನ ಹರಿಯಿತ್ತು,
ನಾನು ಬಟ್ಟಬಯಲಾದೆನಯ್ಯಾ, ಕೂಡಲಸಂಗಮದೇವಾ.
1325
ರಂಗವಾಲೆಯೆಂದಡೆ ಅಂಗವಿಸದಯ್ಯಾ ಎನ್ನ ಮನವು,
ಷಡುಸಮ್ಮಾರ್ಜನೆಯೆಂದಡೆ ಸೊಗಸದಯ್ಯಾ ಎನ್ನ ಮನಕ್ಕೆ.
ಅದೇನು ಕಾರಣವೆಂದಡೆ, ಭಕ್ತರಂಗಳ ವಾರಣಾಸಿಯೆಂದುದಾಗಿ.
ತಾ ಹುಟ್ಟಿ ತಮ್ಮವ್ವೆಯ ಬಂಜೆಯೆನ್ನಬಹುದೆ
ಕೂಡಲಸಂಗಮದೇವಾ.
1326
ರತ್ನೇ ಪ್ರಸಾದವನಾರಾಧಿಸುತ್ತಿರಲು
ಆ ಪ್ರಸಾದ[ವ]ಲ್ಲಿ ಬೀಳುತ್ತ ಆಳುತ್ತಲಿದ್ದಿತ್ತು. ನೋಡಾ.
ಅದ ಹಲಬರು ನೋಡಿ ನೋಡಿ ಹೋರುತ್ತಿದ್ದಾರು,
ಆ ಪ್ರಸಾದ ತಾನೇ ಬಂದು ಎನ್ನ ಸುತ್ತಿಕೊಂಡಿತ್ತು.
ಇದರ ಪದಾರ್ಥವ ಮಾಡಿಕೊಡಯ್ಯಾ ಕೂಡಲಸಂಗಮದೇವಾ.
1327
ರೂಪು ಅರೂಪಿನಲ್ಲಿ ನಿಂದಿತ್ತು,
ಅರೂಪು ನಿಜರೂಪವನವಗ್ರಹಿಸಿತ್ತು.
ನಿಜರೂಪು ನಿರ್ಣಯದಲ್ಲಿ ನಿಷ್ಪತ್ತಿಯಾಯಿತ್ತು,
ನಿಷ್ಪತ್ತಿಯಾದ ನಿಜಶರಣರ ನಿಲವು
ಕಾಯವಿಡಿದು ಕಂಡೆಹೆನೆಂದಡೆ ಕಾಣಬಹುದೆ !
ಕೂಡಲಸಂಗಮದೇವರ ಶರಣ ಪ್ರಭುದೇವರ ನಿಲವು
ಎನಗೆ ಸಾಧ್ಯವಪ್ಪುದೆ !
1328
 1329
 1330
ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನ
ನಿತ್ಯಭಂಡಾರಕ್ಕೆ ಸಂದಿತ್ತಯ್ಯಾ.
ಬೆಟ್ಟಕ್ಕೆ ಬಳ್ಳು ಬಗುಳಿದಂತಾಯಿತ್ತಯ್ಯಾ.
ಕ[ರೆದು]ಕೊಳ್ಳಯ್ಯಾ, ಕ[ರೆದು]ಕೊಳ್ಳಯ್ಯಾ,
ಓ ಎನ್ನಯ್ಯಾ, ಓ ಎನ್ನಯ್ಯಾ,
ಕೂಡಲಸಂಗಮದೇವಾ.
1331
ಲಿಂಗಗಂಭೀರ ಗಮನಗೆಟ್ಟುದಲ್ಲಾ,
ಜಂಗಮಗಂಭೀರ ಸುಳುಹುಗೆಟ್ಟುದಲ್ಲಾ,
ಪ್ರಸಾದಗಂಭೀರ ರೂಪುಗೆಟ್ಟುದಲ್ಲಾ,
ಆಚಾರಗಂಭೀರ ಅವಯವಗೆಟ್ಟುದಲ್ಲಾ,
ಜ್ಞಾನಗಂಭೀರ ನಡೆಗೆಟ್ಟುದಲ್ಲಾ,
ಕೂಡಲಸಂಗಮದೇವರಲ್ಲಿ ಪ್ರಭುದೇವರು ನಿಜವನೈದಲು
ಸಂಗನಬಸವಣ್ಣನ ಪ್ರಾಣ ಒಡನೆ ಬಳಿಸಂದಿತ್ತಲ್ಲಾ.
1332
ಲಿಂಗಗಂಭೀರದೊಳಗೆ ಜಗ ಹುಟ್ಟಿದಡೇನು,
ಆ ಲಿಂಗದಿಂದ ಘನವೆ
ಶಿವಲಿಂಗದೊಳಗೆ ಜಗ, ಜಗದೊಳಗೆ ಶಿವಲಿಂಗ,
ಲೋಕಾದಿ ಲೋಕಂಗಳಿಗೆ ನೀನು
ಭಕ್ತಿಯ ಕಂದೆರೆದು ತೋರಿದೆ,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣಾ,
ನಿನ್ನ ಶ್ರೀಪಾದಕ್ಕೆ ನಮೋ ನಮೋ ಎನುತ್ತಿರ್ದೆನು.
1333
ಲಿಂಗ ಜಂಗಮ, ಜಂಗಮ ಲಿಂಗವೆಂಬುದ
ಎನಗೆ ತೋರಿದವರಾರಯ್ಯಾ
ಲಿಂಗವ ಪೂಜಿಸಿದಡೆ ಭವ ಹರಿಯದೆಂದು,
ಜಂಗಮಮುಖ ಲಿಂಗವಾಗಿ ಬಂದು ಶಿಕ್ಷಿಸಿ, ರಕ್ಷಿಸಿ,
ಎನ್ನ ಆದಿ ಅನಾದಿಯ ತೋರಿ,
ಪ್ರಾಣಲಿಂಗ ಜಂಗಮವೆಂದು ಎನಗೆ ಪ್ರತಿಷಿ*ಸಿ ತೋರಿದಿರಾಗಿ,
ಕೂಡಲಸಂಗಮದೇವಾ,
ನಿಮ್ಮಿಂದಲಾನು ಬದುಕಿದೆನು ಕಾಣಾ, ಪ್ರಭುವೆ.
1334
ಲಿಂಗ ಜಂಗಮದ ಪ್ರಸಾದವಲ್ಲದೆ, ಭೂತದ್ರವ್ಯವ ಮುಟ್ಟಬಾರದು,
ಶಿಷ್ಟೋದನವಲ್ಲದುದ ಕೊಳ್ಳಬಾರದು.
ಅದೆಂತೆಂದಡೆ,
ಶೂದ್ರಾನ್ನಂ ಸೂತಕಸ್ಯಾನ್ನಂ ನೈವೇದ್ಯಂ ಶ್ರಾದ್ಧಮೇವ ಚ
ಪತಿತಾನ್ನಂ ಸಮೂಹಾನ್ನಂ ರಾಜಾನ್ನಂ ಚೈವ ವರ್ಜಯೇತ್±
ಎಂಬೀ ಮನುಸ್ಮøತಿಯಲ್ಲಿ ಹೇಳುವ ಅನ್ನವಾವುವೆಂದೊಡೆ;
ಶಿವೋಪದೇಶವಿಲ್ಲದವರಲ್ಲಿಯ[ದು] ಶೂದ್ರಾನ್ನ,
ಹೊಲೆಗಳೆವುದಕ್ಕೆ ಮಾಡಿದು[ದು] ಸೂತಕಾನ್ನ,
ಸ್ಥಾವರನಿಮಿತ್ತವಾದುನದುಫ ನೈವೇದ್ಯಾನ್ನ,
ಪಿತೃಕಾರ್ಯಕ್ಕಾದುದು ಶ್ರಾದ್ಧಾನ್ನ,
ಬಲಿಗೆ ಹಾಕಿದುದು ಪತಿತಾನ್ನ,
ಪರ್ವಕ್ಕೆ ಮಾಡಿದುದು ಸಮೂಹಾನ್ನ,
ಆವುದೊಂದು ಸಿರಿಗರ ಹೊಡೆದಲ್ಲಿ ಪಾಕಭೇದವಾಗಿ
ಟೊಂಬರಕ್ಕೆ ಬೇರೆ ಮಾಡಿದುದು ರಾಜಾನ್ನ.
ಇಂತೀ ಸಪ್ತವಿಧದನ್ನವ ಬಿಟ್ಟು
`ನ ಜಾತಿಭೇದೋ ಲಿಂಗಾರ್ಚೇ ಸರ್ವೇ ರುದ್ರಗಣಾಃ ಸ್ಮೃತಾಃ
ಎಂಬುದನರಿದು ಜಾತಿಭೇದವ ಮರೆದು,
ಶಿವಭಕ್ತರ ಮನೆಯ ಅನ್ನವ ಶಿವಪ್ರಸಾದವೆಂದು ಕೊಂಡು
ಸರ್ವ ಬವರವ ಜಯಸಿದರೆಂಬುದಕ್ಕೆ
ಬ್ರಹ್ಮಾಂಡಪುರಾಣೇ;
ಆಧಿವ್ಯಾಧಿವಿನಾಶಾಯ ಚರೋಚ್ಚಿಷ್ಟಂ ತು ಸೇವಯೇತ್
ಮಾರ್ಗಾದಿಷು ಚ ಶೈವಾನಾಂ ಚ ಪುಣ್ಯತೀರ್ಥಂ ಸುದರ್ಶನಂ
ಎಂದುದಾಗಿ
ಶೈವಾದಿಗಳು ಜಂಗಮಪ್ರಸಾದವ ಕೊಂಡು ಮುಕ್ತರಾದರಲ್ಲದೆ,
ಜಂಗಮಪ್ರಸಾದದಲ್ಲಿ ವಿಶ್ವಾಸಹೀನರನೇನೆಂಬೆನಯ್ಯಾ
ಕೂಡಲಸಂಗಮದೇವಾ.
1335
 1336
ಲಿಂಗದ ಪ್ರಾಣದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು,
ಪ್ರಾಣನದಫ ಲಿಂಗದ ಸಕೀಲಸಂಬಂಧವೆಂತಿಪ್ಪುದೆಂದರಿಯೆನು.
ಹೂಸಿ ಹುಂಡನ ಮಾಡಿ, ಹೊರಗನೆ ಪೂಜಿಸಿ
ವೃಥಾ ದಿನಂಗಳು ಸವೆದುಹೋದವು.
ಕೂಡಲಸಂಗಮದೇವರಲ್ಲಿ,
ಎನ್ನ ಪ್ರಾಣ ನಿಕ್ಷೇಪವಹ ಭೇದವ ತೋರಾ ಚೆನ್ನಬಸವಣ್ಣಾ.
1337
ಲಿಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲೀಯವಾಯಿತ್ತೆಂದಡೆ,
ಅಂಗವ ಲಿಂಗದಲ್ಲಿ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯಾ ಶರಣಂಗೆ
ಪ್ರಾಣವ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ,
ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿಯೆಂತು ಹೇಳಯ್ಯಾ
ಕೂಡಲಸಂಗಮದೇವಯ್ಯಾ,
ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯರಾಗಿಪ್ಪುದ ಹೇಳಯ್ಯಾ,
ನಿಮ್ಮ ಧರ್ಮ, ನಿಮ್ಮ ಧರ್ಮ.
1338
ಲಿಂಗದಲ್ಲಿ ಹೊಳೆದು ಹೋಹ ಜಂಗಮವ ಕಂಡು ಬಿಟ್ಟಡೆ
ಭವ ಹೊದ್ದಿತ್ತಯ್ಯಾ ಎನ್ನ ಭಕ್ತಿಗೆ.
ಹಿಂದೆ ಲಿಂಗವನಗಲಿದ ಕಾರಣ ಬಂದೆನೀ ಜನ್ಮಕ್ಕೆ,
ಕೂಡಲಸಂಗಯ್ಯ ತಪ್ಪಿಹೋಗದ ಮುನ್ನ ಹಿಡಿದು ತನ್ನಿ.
1339
ಲಿಂಗವಲ್ಲದನ್ಯವರಿನಯೆ, ಶಿವಲಿಂಗವಲ್ಲದನ್ಯವ ನೆನೆಯೆ,
ಜಂಗಮವಲ್ಲದನ್ಯಕ್ಕೆರಗೆ, ಪ್ರಸಾದವಲ್ಲದನ್ಯವ ಕೊಳ್ಳೆ,
ಶಿವಗಣಂಗಳಲ್ಲದನ್ಯರ ಬೆರೆಯೆ.
ಕೂಡಲಸಂಗಮದೇವರು ಸಾಕ್ಷಿಯಾಗಿ
ನಾನಾವ ತೀರ್ಥಯಾತ್ರೆಗಳನರಿಯೆ.
1340
ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು,
ಅವರೆಂತಿದ್ದಡೇನು ಹೇಗಿದ್ದಡೇನು ಲಿಂಗವಂತರವರು,
ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು.
1341
ಲಿಂಗವಿರದೆ ಸೀಮೆಯ ಕಲ್ಲಿನಲ್ಲಿ
ಲಿಂಗವಿರದೆ ಪಶುವಿನ ತೊಡೆಯಲ್ಲಿ
ಕಲ್ಲ ತೆಕ್ಕೊಂಡು ಮೆಳೆಯ ಮೇಲೆ ಇಟ್ಟಡೆ,
ಆ ಕಲ್ಲು ಮೆಳೆಯಲ್ಲಿ ಸಿಕ್ಕಿದಡೆ ಆ ಮೆಳೆ ಭಕ್ತನಾಗಬಲ್ಲುದೆ
ಇದು ಕಾರಣ ಸತ್ಯ, ಸಹಜ, ಸದ್ಭಾವ, ಸದ್ವರ್ತನೆ ಉಳ್ಳಡೆ ಸದ್ಭಕ್ತ,
ಇಲ್ಲದಿದ್ದಡೆ ಆ ಮೆಳೆಯೊಳಗೆ ಸಿಕ್ಕಿ ಕಲ್ಲಿನಂತೆ
ಕಾಣಾ ಕೂಡಲಸಂಗಮದೇವಾ.
1342
ಲಿಂಗವೆಂತಿಪ್ಪುದೆಂದರಿಯೆನು,
ಲಿಂಗದ ನಿಲವೆಂತುಟೆಂಬುದ ಹೋದ ಹೊಲಬನರಿಯೆನು,
ಲಿಂಗಾರ್ಚನೆಯ ಮಾತು ಎನಗೇಕಯ್ಯಾ
ಜಂಗಮಲಿಂಗವಾಗಿ ಬಂದು ನೀವಿರುತ್ತಿರಲು,
ಸ್ಥಾವರಕ್ಕೆ ಮಚ್ಚಿ ಮರುಳಾದೆನು
ಕೂಡಲಸಂಗಮದೇವಾ,
ಎನ್ನ ತಪ್ಪನೆ ಎಣಿಸಿಹೆನೆಂದಡೆ ಕಡೆಯಿಲ್ಲ.
1343
ಲಿಂಗವೆ ಅಂಗ, ಅಂಗವೆ ಲಿಂಗವೆಂದರಿದ ಬಳಿಕ ಅಲ್ಲಿಯೆ ಅದೆ.
ಲಿಂಗವೆ ಪ್ರಾಣ, ಪ್ರಾಣವೆ ಲಿಂಗವೆಂದರಿದ ಬಳಿಕ ಅಲ್ಲಿಯೆ ಅದೆ.
ಉಂಟೆಂದು ತೋರಲಿಲ್ಲ, ಇಲ್ಲವೆಂದು ಅರಸಲಿಲ್ಲ,
ಕೂಡಲಸಂಗಮದೇವಾ, ಲಿಂಗ ನಿರಂತರವಲ್ಲಿಯೇ.
1344
ಲಿಂಗಾರ್ಪಿತವ ಮಾಡುವ ಅವಧಾನವೆಂತೆಂದಡೆ;
ಅನ್ಯಾಯವು ಸೋಂಕಲೀಯದವಧಾನವು,
ಅರಿಷಡ್ವರ್ಗಂಗಳು ಮುಟ್ಟಲೀಯದವಧಾನವು.
ಪಂಚಭೂತದ ಭವಿತ್ವವ ಕಳೆದು
ಪ್ರಸಾದಕಾಯವಾಗಿಪ್ಪ ಪರಿಯ ನೋಡಾ.
ಪಂಚೇಂದ್ರಿಯಂಗಳ ಗುಣವ ಕಳೆದು
ಪಂಚವಿಂಶತಿ ತತ್ವದಲ್ಲಿ ಪರಿಣಾಮಿ,
ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
1345
ಲಿಂಗಾರ್ಪಿತವಿಲ್ಲದೆ ಬೋನ ಪದಾರ್ಥವ ಕೊಂಡಡೆ,
ಮಕ್ಕಳಡಗು ನರಮಾಂಸವಯ್ಯಾ.
ಲಿಂಗಾರ್ಪಿತವಿಲ್ಲದೆ ಉದಕವ ಮುಕ್ಕುಳಿಸಿದಡೆ
ನಾಯ ಮೂತ್ರವ ಮುಕ್ಕಳಿಸಿದುದಯ್ಯಾ.
ಲಿಂಗಾರ್ಪಿತವಿಲ್ಲದೆ ಹಲುಕಡ್ಡಿಯನಿರಿದಡೆ
ನಾಯ ಎಲುಬಿದ್ದ ಮಲಕ್ಕೆ ಬಾಯಿದೆರೆದು.
ನಿಮಗೆತ್ತಿದ ಕರವ ಅನ್ಯರಿಗೆ ಮುಗಿದಡೆ
ಅಘೋರ ನರಕವಯ್ಯಾ.
ಈ ಭಾಷೆಗೆ ತಪ್ಪಿದಡೆ ತಲೆದಂಡ ತಲೆದಂಡ,
ಅಳವರಿಯದೆ ನುಡಿದೆನು, ಕಡೆಮುಟ್ಟಿ ನಡಸಯ್ಯಾ.
ಪ್ರಭುವೆ ಕೂಡಲಸಂಗಮದೇವಾ.
1346
 1347
 1348
 1349
ವಚನನಾನುಭವವ ಮಾಡುವಯ್ಯಗಳಿರಾ,
ನಿಮಗೆ ವಚನ ಪ್ರಾಣಲಿಂಗವೊ ಅಲ್ಲ, ದಾಸೋಹ ಪ್ರಾಣಲಿಂಗವೊ !
ಆರೂಢವನೆ ಕಲಿತು ಅಂಗಸಂಗದಲಿಪ್ಪ
ಆರೂಢ ಪ್ರಾಣಲಿಂಗವೊ ಅಲ್ಲ, ದಾಸೋಹ ಪ್ರಾಣಲಿಂಗವೊ !
ಬ್ರಹ್ಮವಿದ್ಯೆಯನೆ ಕಲಿತು ಭ್ರಮೆಯೆಂಬ ಶೂಲದ ಮೇಲೆ ಕುಳ್ಳಿರ್ದು,
ಆ ಬ್ರಹ್ಮವಿದ್ಯೆಯೆ ಪ್ರಾಣಲಿಂಗವೊ ಅಲ್ಲ, ದಾಸೋಹವೆ ಪ್ರಾಣಲಿಂಗವೊ !
ಎಲ್ಲ ಮಾತುಗಳ ಹಲ್ಲಣಿಸಿಕೊಂಡು, ಬಲು ಹುಲಿಯ ಬೆನ್ನಲಿ ಬಪ್ಪತೆರನಂತೆ.
ಬಲ್ಲವರಿಗೆ ಬಲ್ಲವರು ನಮ್ಮ ಜಂಗಮದಾಸೋಹಿಗಳು.
ಕೂಡಲಸಂಗಮದೇವರರಿತಡೆ ನಿಮ್ಮ ಹಲ್ಲ ಕಳೆವ ಕಾಣೆ !
1350
 1351
ವಾಸನೆ ಕಾರಣ ನೊಣವಿನ ಮಲ ಜೇನುತುಪ್ಪವೆಂದೆನಿಸಿತ್ತು,
ಪರಿಮಳ ಕಾರಣ ಕೋಣನ ಮಾಂಸ ವಾಣಿಜ್ಯತೆ ಇಂಗು ಎನಿಸಿತ್ತಯ್ಯಾ,
ಭಕ್ತಿ ಕಾರಣ ಎನ್ನಲುಳ್ಳ ಅವಗುಣ ಹಿಂಗಿತ್ತು ಕಾಣಾ,
ಕೂಡಲಸಂಗಮದೇವಾ.
1352
ವಿಷ್ಣು ವರಾಹವತಾರದಲ್ಲಿ ಹಂದಿಯಂ ತಿಂಬುದಾವಾಚಾರವೋ
ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೋ
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೋ
ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೋ
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ,
ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ
ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ ಹೋತನ ಕೊಂದು
ತಿಂಬುದಾವಾಚಾರದೊಳಗೋ
ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ.
ನಮ್ಮ ಕೂಡಲಸಂಗಮದೇವಂಗೆ
ಅಧಿದೇವತೆಗಳ ಸರಿಯೆಂಬವರ ಬಾಯಲ್ಲಿ ಸುರಿಯುವೆ
ಬಾಲಹುಳುಗಳು.
1353
ವೀರದನುಜರೆಲ್ಲಾ ಧಾರುಣಿಯೆಂಬುದರೊಳಗೆ
ಸಾಗರವಾಗಿದ್ದುದನಾರೂ ಅರಿಯರಲ್ಲಾ,
ದ್ವಾರಾವತಿಯಪುರದೊಳಗೆ ಪರವು ಬಂದಿದ್ದಡೆ
ಶರೀರಸಂಬಂಧವ ಮಾಡಲರಿಯರಲ್ಲಾ.
ಕರಗಸವ ಕಳೆದುಕೊಂಡು, ಪರಶುರಾಮನ ಗೆಲಿದು,
ಸುರರೊಳಗೆ ಸುಳಿದಾಡಲರಿಯರಲ್ಲಾ.
ವಾರುಧಿಯ ಸೇರಿಕೊಂಡು, ಮರಣವೆಂಬುದ ನಿಲಿಸಿ,
ತ್ರಿಪುರವ ಮೂರ್ತಿಗೊಳಿಸಲರಿಯರಲ್ಲಾ.
ಮೇರುವೆಂಬುದ ಹೊಕ್ಕು ನೂರೆಂಟನೆಣಿಸಿಕೊಂಡು
ನಿರಾಕಾರದಲಡಗುವರಿನ್ನಾರು ಹೇಳಾ
ಸಾಸಿರದ ಮೇಲೆ ನೂರೆಂಬತ್ತೆಂಟು ರಾಶಿ
ಪರುಷವೇಧಿಗಳಾಗಲರಿಯರಲ್ಲಾ.
ಕೂಡಲಸಂಗನ ಶರಣರ ಸಂಬಂಧವು
ಪ್ರಭುವಿಂಗಲ್ಲದೆ ಮತ್ತಾರಿಗೆಯೂ ಅಳವಡದು.
1354
ವೇದ ವೇದಾಂತಗಳಿಗೆ ಅಸಾಧ್ಯವಾದ
ಅನುಪಮಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ.
ನಾದಬಿಂದು ಕಳೆಗೆ ಅಭೇದ್ಯವಾದ
ಅಚಲಿತ ಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ.
ವಾಙ್ಮನಕ್ಕಗೋಚರವಾದ
ಅಖಂಡಿತ ಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ,
ಇನ್ನು ನಾನು ಬದುಕಿದೆನು, ನಾ ಬಯಸುವ ಬಯಕೆ ಕೈಸಾರಿತ್ತಿಂದು
ಕೂಡಲಸಂಗಮದೇವಾ.
1355
ವೇದಾಗಮಂಗಳು ಹೇಳಿದ ಹಾಗೆ ನಡೆವುದು, ಹೇಳಿದಂತೆ ನುಡಿವುದು,
ಮೀರಿ ನಡೆಯಲಾಗದು, ಮೀರಿ ನುಡಿಯಲಾಗದು,
ಮುಕ್ತಿಪದವೈದುವಾತ.
ಅಪಹಾಸ್ಯಕ್ಕೆ ಬಾರದೆ ಆಚಾರಮಾರ್ಗದಲ್ಲಿರಬಲ್ಲಡೆ
ಕೂಡಲಸಂಗಮದೇವನೀಗಲೆ ಒಲಿವ.
1356
ಶರಣ ಮನಬಂದಂತೆ ಮಾಡುವ;
ಅರಸಿ ಸಕಳಾಗಮಚಾರ್ಯನಪ್ಪ,
ಅಹುದಾಗದೆಂಬ ಪರಿಯಲ್ಲ ನೋಡಾ.
ಕೂಡಲಸಂಗನ ಶರಣ ಸಂಗಿಯಲ್ಲ, ನಿಸ್ಸಂಗಿಯಲ್ಲ.
1357
ಶರಣ ಲಿಂಗದಲ್ಲಿ ಕೂಡಲು ಮಹಾಪಥವಯ್ಯಾ !
ದೃಢದೃಢಾಂಗಮಧ್ಯಸ್ಥನಾಗಿ,
ಕೂಡಲಸಂಗಮದೇವರ ನಾಮವತಿಸುಖವೆಂದುದು.
1358
ಶರಣೆಂದು ಕರ ಸಂತೋಷವ ಮಾಡಿ,
ಮುರಿದು ಮುಂಜೆರಗ ಗಂಟಿಕ್ಕಿ,
ನೆಲನ ಹೊಯಿದ ಕೈ ತಪ್ಪುವುದಲ್ಲದೆ,
ಆದಿ ಶರಣರ ನುಡಿ ತಪ್ಪುವುದೆ
ಕೂಡಲಸಂಗಮದೇವರು ಸಾಕ್ಷಿಯಾಗಿ
ಕಟ್ಟುವೆ ಗುಡಿಯನೆತ್ತುವೆನು ಧ್ವಜವ.
1359
ಶರಣೆಂದು ಪಾದವ ಹಿಡಿದಿಹೆನೆಂದಡೆ ಚರಣದ ನಿಲವು ಕಾಣಬಾರದು,
ಕುರುಹುವಿಡಿದೆಹೆನೆಂದಡೆ ಕೈಗೆ ಸಿಲುಕದು,
ಬೆರಸಿ ಹೊಕ್ಕೆಹೆನೆಂದಡೆ ಮುನ್ನವೆ ಅಸಾಧ್ಯ.
ಅಕಟಕಟಾ, ಅಹಂಕಾರದಲ್ಲಿ ಕೆಟ್ಟೆನಲ್ಲಾ,
ಗುರುವೆ, ಎನ್ನ ಪರಮಗುರುವೆ ಬಾರಯ್ಯಾ,
ಅರಿಯದ ತರಳನ ಅವಗುಣವ ನೋಡುವರೆ ಕೂಡಲಸಂಗಮದೇವಾ.
1360
ಶಾಂತಿಯ ಮಾಡಹೋದಡೆ ಬೇತಾಳವಾಯಿತ್ತಯ್ಯಾ.
ಸೀತಾಳದಾಪ್ಯಾಯನವಾಯಿತೆಂದಡೆ
ಪರಹಿತಾರ್ಥವೆಂದು ತೋರಿದೆನೆನ್ನ ಪ್ರಾಣಲಿಂಗವನು
ನೇಮವ ಮಾಡಲೆಂದು ಕೊಟ್ಟಡೆ
ಕೊಂಡೋಡಿ ಹೋದನು ಅನಿಮಿಷನು.
ಅಭವನ ಮಹಾಮನೆಯ ಹೊಕ್ಕಡೆ
ಎನಗೆ ಹೇಯವನೊಡ್ಡಿ ಅರಸೆಂದು ಕಳುಹಿದನು.
ಅಳಲಿ ಬಳಲಿ ತೊಳಲಿ ಆಡಿಹಾಡಿ ಹಂಬಲಿಸಿ,
ಅನಂತ ಅವಸ್ಥೆಯಿಂದ ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನವ ಹಾಡಿ
ಆಚಾರ ವಿಚಾರದಿಂದ
ವಿಚಿತ್ರನಭೆಯವ ಕೊಟ್ಟು ಕಳುಹಿಸಿದನಯ್ಯಾ.
ಗೊಹೇಶ್ವರನ ಶರಣ ತೋರಿದಡರಿದನು
ಕೂಡಲಸಂಗಮದೇವರ.
1361
ಶಿವನೆ ಜಗತ್ರಯಕ್ಕೊಡೆಯನೆಂದುದು ವೇದ,
ಉತ್ಪತ್ತಿ ಸ್ಥಿತಿ ಲಯಕಾರಣನೆಂದುದು ವೇದ,
`ಈಶಃ ಸರ್ವಸ್ಯ ಜಗತಃ ಪ್ರಭುಃ ಪ್ರೀಣಾತಿ ವಿಶ್ವಭುಕ್' ಎಂದುದು ಶ್ರುತಿ
ಇದು ಕಾರಣ,
ಕೂಡಲಸಂಗಮದೇವನೊಬ್ಬನೆ ದೇವನು.
1362
ಶಿವಶಿವಾಯೆಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ.
ಹರ ಹರಾ ಎಂಬ ಮಂತ್ರವೆನಗೆ ಅಮೃತಾರೋಗಣೆಯೋ ಎನ್ನ ತಂದೆ.
ಶ್ರೀ ವಿಭೂತಿ ರುದ್ರಾಕ್ಷಿ ಭಕುತಿಯ ಮುಕುತಿಗೆ ಸಾಧನವೋ ಎನ್ನ ತಂದೆ,
ಎನಗಿದೆ ಗತಿಮತಿ ಚೈತನ್ಯ, ಕೂಡಲಸಂಗಮದೇವಯ್ಯಾ,
ನಿಮ್ಮ ನಾಮದ ರುಚಿ ತುಂಬಿತ್ತೊ ಎನ್ನ ತನುವ.
1363
ಶಿಶುವೆನ್ನಬಹುದೆ, ನಂಬಿಯಣ್ಣನ
ಸೂಕ್ಷ್ಮನೆನಬಹುದೆ ರವಿಯನು, ಜಗವ ಬೆಳಗುವ
ದೃಷ್ಟಿ ಕಿರಿದೆನ್ನಬಹುದೆ, ಸೃಷ್ಟಿಯನು ಕಾಣ್ವ
ಭಾವ ಕಿರಿದೆನ್ನಬಹುದೆ, ಬಳ್ಳ ಲಿಂಗವಾದುದನು
ಕೂಡಲಸಂಗಮದೇವಯ್ಯಾ,
ಯುಗಜುಗವೆಲ್ಲವನೂ ಮೀರಿದ ಶರಣನ
ಕಿರಿದೆನಬಹುದೆ, ಚೆನ್ನಬಸವಣ್ಣನ.
1364
ಶ್ವಾನ ಮಡಕೆಯನಿಳುಹಿ ಬೋನವನುಂಡು
ಮಡಕೆಯನೇರಿಸಲರಿಯದಂತೆ
ನಾನು ಷಟ್‍ಸ್ಥಲವನೋದಿ ಏನ ಮಾಡುವೆನಯ್ಯಾ,
ಅವಗುಣಂಗಳೆನ್ನ ಬೆನ್ನ ಬಿಡದನ್ನಕ್ಕರ
ಕಾರ್ಯವುಳ್ಳ ಕರ್ತ ಜಂಗಮಲಿಂಗದಲ್ಲಿ
ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು,
ಕೂಡಲಸಂಗಮದೇವಾ.
1365
ಶ್ರೀಗುರುಕರುಣಿಸಿ ಹಸ್ತಮಸ್ತಕಸಂಯೋಗದಿಂದ
ಪ್ರಾಣಲಿಂಗವನು ಕರತಳಾಮಳಕವಾಗಿ ಕರಸ್ಥಲಕ್ಕೆ ತಂದುಕೊಟ್ಟನಾಗಿ
ಒಳಗೆನ್ನದೆ ಹೊರಗೆನ್ನದೆ, ಆ ಲಿಂಗದಲ್ಲಿ ನಚ್ಚಿ ಮಚ್ಚಿ ಹರುಷದೊಳೋಲಾಡಿದೆ
ಅದೆಂತೆಂದಡೆ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ
ಎಂದುದಾಗಿ
ಆ ಲಿಂಗವ ಪಡೆದು ಆನಂದಿಸುವೆ, ಕೂಡಲಸಂಗಮದೇವಾ.
1366
ಶ್ರೀಗುರು ತನ್ನ ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ,
ಆ ಲಿಂಗಕ್ಕೆ ನಾನು ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ಮಾಡಿ,
ಚತುರ್ವಿಧಫಲಪದಪುರುಷಾರ್ಥವ ಪಡೆದು,
ಆ ಪರಿಭವಕ್ಕೆ ಬರಲೊಲ್ಲದೆ,
ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ.
ಆ ನಿಧಾನದ ಹೆಸರಾವುದೆಂದಡೆ;
ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು.
ಆ ಚರಲಿಂಗದ ಪಾದಾಂಬುವ ತಂದೆನ್ನ
ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ.
ಅದೆಂತೆಂದೆಡೆ;
ಸಾಲೋಕ್ಯಂ ಚ ತು ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾ
ತದುಪೇಕ್ಷಕಭಕ್ತಶ್ಚ gõ್ಞರವಂ ನರಕಂ ವ್ರಜೇತ್ ಎಂದುದಾಗಿ,
ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ
ಅದೆಂತೆಂದೆಡೆ;
ಸ್ವಯಂಪ್ರಕಾಶರೂಪಶ್ಚ ಜಂಗಮೋ ಹಿ ನಿಗದ್ಯತೇ
ಮತ್ತಂ,
ಜಂಗಮಸ್ಯ ಪದೋದಂ ಚ ಯುಕ್ತಂ ಲಿಂಗಾಭಿಷೇಚನೇ
ತತ್ಪ್ರಸಾದೋ ಮಹಾದೇವ ನೈವೇದ್ಯಂ ಮಂಗಲಂ ಪರಂ ಎಂದುದಾಗಿ,
ಆ ಲಿಂಗವೆ ಅಂಗ, ಅಂಗವೆ ಲಿಂಗ,
ಆ ಲಿಂಗವೆ ಪ್ರಾಣ, ಆ ಪ್ರಾಣ ಲಿಂಗವಾದುದು.
ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು.
ಕೂಡಲಸಂಗಮದೇವಯ್ಯಾ.
ಈ ದ್ವಯದ ಪರಿಯ ನಿಮ್ಮ ಶರಣರನೆ ಬಲ್ಲ.
1367
ಶ್ರೀ ರುದ್ರಾಕ್ಷಿಯ ಧರಿಸಿದಾತನೆ ಲಿಂಗವೆಂಬೆ,
ಶ್ರೀ ರುದ್ರಾಕ್ಷಿಯ ಧರಿಸದ ಅಧಮರನೆ ಭವಿಯೆಂಬೆ,
ಕೂಡಲ ಸಂಗಮದೇವಯ್ಯಾ
ಶ್ರೀ ರುದ್ರಾಕ್ಷಿಯ ಧರಿಸುವ ಭಕ್ತರ ನೀನೆಂಬೆ.
1368
ಶ್ರೀವಿಭೂತಿಯ ಬಿಟ್ಟು ತಪಸ್ಸು ಮಾಡಿದಡೆ ಆ ತಪಃಸಿದ್ಧಿ ಬಯಲು,
ಶ್ರೀವಿಭೂತಿಯ ಬಿಟ್ಟು ದೀಕ್ಷೆಯ ಕೊಂಡಡೆ ಆ ದೀಕ್ಷೆ ಬಯಲು,
ಶ್ರೀವಿಭೂತಿಯ ಬಿಟ್ಟು ಮಂತ್ರಗಳ ಸಾಧಿಸಿದಡೆ ಆ ಮಂತ್ರಸಿದ್ಧಿ ಬಯಲು,
ಶ್ರೀವಿಭೂತಿಯ ಬಿಟ್ಟು ಯಜ್ಞಂಗಳ ಸಾಧಿಸಿದಡೆ ಆ ಯಜ್ಞಸಿದ್ಧಿ ಬಯಲು,
ಶ್ರೀವಿಭೂತಿಯ ಬಿಟ್ಟು ದೇವತಾರ್ಚನೆಯ ಮಾಡಿದಡೆ ಆ ದೇವತಾರ್ಚನೆಬಯಲು
ಶ್ರೀವಿಭೂತಿಯ ಬಿಟ್ಟು ವಿದ್ಯವ ಸಾಧಿಸಿದಡೆ ಆ ವಿದ್ಯಾಸಿದ್ಧಿ ಬಯಲು.
ಹಲವು ಕಾಲ ಕೊಂದ ಸೂನೆಗಾರನ ಕೈಯ್ಯ ಕತ್ತಿಯಾದಡೇನು
ಪರುಷ ಮುಟ್ಟಲು ಹೊನ್ನಾಗದೇ ಅಯ್ಯಾ
ಲಲಾಟದಲ್ಲಿ ವಿಭೂತಿಯ ಧರಿಸಲ್ಕೆ,
ಪಾಪಂಗಳು ಬೆಂದು ಹೋಗದಿಹವೇ ಕೂಡಲಸಂಗಮದೇವಾ.
1369
ಶ್ರೋತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
ತ್ವಕ್ಕಿನಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
ನೇತ್ರದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
ಜಿಹ್ವೆಯಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು,
ನಾಸಿಕದಲ್ಲಿ ಬ್ರಹ್ಮಚಾರಿಯಾಗಿರಬೇಕು ಶರಣನು.
ಇಂತೀ ಪಂಚೇಂದ್ರಿಯಂಗಳಲ್ಲಿ ಬ್ರಹ್ಮಚಾರಿಯಾಗಿ,
ಕೂಡಲಸಂಗಮದೇವರಲ್ಲಿ ಎನ್ನನಾಗುಮಾಡಲಿಕೆ
ಬ್ರಹ್ಮಚಾರಿಯಾದರು ಪ್ರಭುದೇವರು.
1370
ಸಂಜೆಯ ಮಂಜಿನ ಕಪ್ಪು-
ಅಂಜಿದಡೆ ಶಂಕೆ ತದ್ರೂಪವಾಗಿ ನಿಂದಿತ್ತು.
ತನ್ನ ಭಾವದ ನಟನೆ ನಡೆವನ್ನಕ್ಕ ನಡೆಯಿತ್ತು,
ಅದು ನಿಂದಲ್ಲಿಯೇ ನಿಂದಿತ್ತು.
ಅದರಂತುವನರಿದಡೆ
ಹಿಂದೆ ಹುಸಿ, ಮುಂದೆ ಕೂಡಲಸಂಗಮದೇವನ ನಿಲವು ತಾನೆ !
1371
 1372
ಸಂಸಾರಸರ್ಪನ ಹೇಳಿಗೆಯ ಬಿಡಿಸಲು ಬಾರದು,
ಬಿಟ್ಟಡೆ ಕಟ್ಟಲು ಬಾರದು ನೋಡಾ.
ಬಿಡಿಸುವ ಬೆಡಗಿನ್ನೆಂತೊ !
ಕಾಮಕ್ರೋಧಲೋಭಮೋಹಮದಮತ್ಸರವೆಂಬ
ವಿಷದ ಹಲ್ಲಿಂಗಾವುದು ಗಾರುಡವಯ್ಯಾ,
ಮಹಾದಾನಿ ಕೂಡಲಸಂಗಮದೇವಾ.
1373
ಸಕಲಕ್ರಿಯೆಗಳಿಗಿದು ಕವಚ,
ಸಕಲವಶ್ಯಕ್ಕಿದು ಶುಭತಿಲಕ,
ಸಕಲಸಂಪದಕ್ಕೆ ತಾಣವಿದು,
ಅಘಟಿತ ಘಟಿತವೆನಿಸುವ ಅನುಪಮ ತ್ರಿಪುಂಡ್ರ.
ಅಣುಮಾತ್ರ ವಿಭೂತಿಯ ಪಣಿಯೊಳಿಡೆ
ಎಣಿಕೆಯಿಲ್ಲದ ಭವಪಾಶ ಪರಿವುದು.
ತ್ರಿಣಯ ನೀನೊಲಿದು ಧರಿಸಿದೆಯೆಂದೆನೆ,
ಆನು ಧರಿಸಿ ಬದುಕಿದೆ ಕೂಡಲಸಂಗಯ್ಯಾ.
1374
ಸಕಲದಲ್ಲಿ ಸನ್ನಿಹಿತರಲ್ಲದವರು
ನಿಷ್ಕಲದಲ್ಲಿ ನಿಜವನೈದುವ ಪರಿ ಎಂತಯ್ಯಾ
ಲಿಂಗವ ಹೋಗಾಡಿದೆನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು
ಲಿಂಗೈಕ್ಯವೆಂತಪ್ಪುದು ಹೇಳಾ
ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು
ಎನ್ನ ಮನ ತಾರ್ಕಣೆಯಲ್ಲಿಪ್ಪಂತೆ
ನಿಮ್ಮಲ್ಲಿ ಐಕ್ಯವ ಮಾಡಾ
ಕೂಡಲಸಂಗಮದೇವಪ್ರಭುವೆ.
1375
ಸತಿಪುರುಷರಿಬ್ಬರೂ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ
ಅದೆ ಮಾಟ,
ಕೂಡಲಸಂಗಮದೇವರ ಕೂಡುವ ಕೂಟ.
1376
 1377
ಸತ್ಯ ಸದಾಚಾರ ಸಂಬಂಧವಾದ ಭೃತ್ಯಾಚಾರ ಎನಗಿಲ್ಲಯ್ಯಾ,
ಆನು ನಿಮ್ಮ ನೆನೆಯಲು ಎನಗೆ ಭಕ್ತಿಯಿಲ್ಲಯ್ಯಾ,
ಕರುಣದಿಂ ಕೃಪೆ ಮಾಡಾ, ಕೂಡಲಸಂಗಮದೇವಾ.
1378
ಸದಾಚಾರವ ಕಂಡು, ಲಾಂಛನಪಕ್ಷವನಾ[ಡಿ]ದವರಿಗೆ,
ಇಹದೊಳು ಪರದೊಳು ಗತಿಯಿಲ್ಲ, ಕಾಣಿರೋ.
ಮಣ್ಣೆತ್ತಾದಡೇನು, ತನ್ನೆತ್ತು ಗೆಲಬೇಕೆಂಬುದಕ್ಕೊಲಿವ
ನಮ್ಮ ಕೂಡಲಸಂಗಯ್ಯ.
1379
ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ಬೇರೆಂಬ
ಶಾಸ್ತ್ರದ ಸದಗರು ನೀವು ಕೇಳಿರೋ.
ಭಕ್ತದೇಹಿಕ ದೇವನೆಂದು ಶ್ರುತಿ ಸಾರುತ್ತಿವೆ, ಅರಿದು ಮರೆಯದಿರಿ,
ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ,
ಮರವೆಯಿಂದ ದಕ್ಷ ಶಿರವ ನೀಗಿ ಕುರಿದಲೆಯಾದುದನರಿಯಿರೆ
ಮರೆಯದೆ ವಿಚಾರಿಸಿ ನೋಡಿ, ಭಕ್ತಂಗೂ ಲಿಂಗಕ್ಕೂ ಭಿನ್ನವಿಲ್ಲ.
ಇನ್ನು ಆ ಭಕ್ತಂಗೆಯೂ ಆ ಜಂಗಮಕ್ಕೆಯೂ ಭೇದವಿಲ್ಲ.
ಬೇರ್ಪಡಿಸಿ ನುಡಿಯಲುಂಟೆ
ಇನ್ನು ಆ ಗುರುವಿಂಗೆಯೂ ಆ ಭಕ್ತಂಗೆಯೂ ಸಂಕಲ್ಪವಿಲ್ಲ.
ಅದೆಂತೆಂದಡೆ;
ಮೆಟ್ಟುವ ರಕ್ಷೆ, ಮುಟ್ಟುವ ಯೋನಿ, ಅಶನ, ಶಯನ, ಸಂಯೋಗ,
ಮಜ್ಜನ, ಭೋಜನ ಇಂತಿವನು
ಗುರುಲಿಂಗಜಂಗಮ ಸಹಿತವಾಗಿ ಭೋಗಿಸುವ ಸದ್ಭಕ್ತಂಗೆ
ನಾನು ನಮೋ ನಮೋ ಎಂಬೆನು.
ಅದೆಂತೆಂದಡೆ;
ಅರ್ಥಪ್ರಾಣಾಭಿಮಾನಂ ಚ ಗುgõ್ಞ ಲಿಂಗೇ ಚ ಜಂಗಮೇ±
ತಲ್ಲಿಂಗಜಂಗಮಪ್ರಾಣಂ ಭಕ್ತಸ್ಥಲಮುದಾಹೃತಮ್ ಎಂದುದಾಗಿ,
ಇದನರಿದು ಅರ್ಥವನೂ ಪ್ರಾಣವನೂ ಅಭಿನವನೂ
ಗುರುಲಿಂಗಜಂಗಮಕ್ಕೆ ಸಮರ್ಪಿಸಿ
ಆ ಗುರುಲಿಂಗಜಂಗಮವೆ ಪ್ರಾಣವಾಗಿಹ ಸದ್ಭಕ್ತಂಗೆಯೂ
ಆ ಗುರುಲಿಂಗಜಂಗಮಕ್ಕೆಯೂ ಏಕಭಾಜನವಲ್ಲದೆ ಏಕಭೋಜನವಲ್ಲದೆ,
ಭಿನ್ನಭಾಜನ ಭಿನ್ನಭೋಜನವುಂಟೆ _ಇಲ್ಲವಾಗಿ,
ಅದೇನು ಕಾರಣವೆಂದಡೆ;
ಆ ಸದ್ಭಕ್ತನ ಅಂಗವೆಂಬ ಗೃಹದಲ್ಲಿ ಜಂಗಮವಿಪ್ಪನಾಗಿ
ಇದನರಿದು ಬೇರೆ ಮಾಡಿ ನುಡಿಯಲಾಗದು.
ಚೆನ್ನಯ್ಯನೊಡನುಂಬುದು ಆವ ಶಾಸ್ತ್ರ
ಕಣ್ಣಪ್ಪ ಸವಿದುದ ಸವಿವುದಾವ ಶಾಸ್ತ್ರ
ಭಕ್ತದೇಹಿಕ ದೇವನಾದ ಕಾರಣ.
ಅದೆಂತೆಂದಡೆ;
ಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ
ರುಚ್ಯಗ್ರೇ ತು ಪ್ರಸಾದೋಸ್ತು ಪ್ರಸಾದಃ ಪರಮಂ ಪದಂ
ಇಂತೆಂಬ ಪುರಾಣವಾಕ್ಯವನರಿದು
ಸದ್ಭಕ್ತನೂ ಗುರುಲಿಂಗಜಂಗಮವೂ ಈ ನಾಲ್ವರೂ
ಒಂದೆ ಭಾಜನದಲ್ಲಿ ಸಹಭೋಜನಮಾಡುವರಿಂಗೆ
ಇನ್ನೆಲ್ಲಿಯ ಸಂಕಲ್ಪವೊ, ಇನ್ನೆಲ್ಲಿಯ ಸೂತಕವೋ,
ಇನ್ನೆಲ್ಲಿಯ ಪಾತಕವೋ ಕೂಡಲಸಂಗಮದೇವಾ.
1380
 1381
ಸಬಳದ ತುದಿಯಲ್ಲಿ ಕಟ್ಟಿದ ಗಂಟೆಯಂತೆ,
ಮಾತು ಲಿಂಗಾ ಲಿಂಗಾ ಎನುತ್ತ
ಮೊನೆ ಇರಿವಂತೆ ಬೇಡವಯ್ಯಾ, ಹುಸಿ.
ಮಾತಿನಲ್ಲಿ ದಿಟ, ಮನದಲ್ಲಿ ಸಟೆ
ಬೇಡವಯ್ಯಾ.
ಮನ ವಚನ ಕಾಯ ಒಂದಾಗದಿದ್ದರೆ
ಕೂಡಲಸಂಗಯ್ಯನೆಂತೊಲಿವನಯ್ಯಾ.
1382
ಸಮತೆ ಸನ್ಮತದಿಂದ ನಿಜಗುಣಕಾರಣದಿಂದ
ಸತ್ವರಜಸ್ತಮದ ಕ್ರೋಧ ಉಳಿಯದನ್ನಕ್ಕರ
ಅನುಭಾವವೆಲ್ಲಿಯದೊ
ಆತ್ಮಸ್ತುತಿ, ಪರನಿಂದೆ, ಅಸಹ್ಯ, ಅನೃತ, [ಕು]ತರ್ಕ
ಉಡುಗದನ್ನಕ್ಕರ ಅನುಭಾವವೆಲ್ಲಿಯದೊ
ಅರಿಷಡ್ವರ್ಗ ದಶವಾಯುಗಳ ವಿಕಳ ಅಪಾನ ಬಿಡದನ್ನಕ್ಕರ
ಅನುಭಾವವೆಲ್ಲಿಯದೊ
ಮದ ಮತ್ಸರ ವೈತಾಳ ಸಂವಾದವಲ್ಲದೆ
ಅನುಭಾವವೆಲ್ಲಿಯದೊ
ಸಮತೆ, ಸಜ್ಜನಿಕೆ, ಸಮಯಾಚಾರದ ನಿಜಪದವು
ದುರಾಚಾರಿಗಳಿಗಳವಡುವುದೆ
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಅನುಭಾವವೆಲ್ಲರಿಗೆಲ್ಲಿಯದೊ.
1383
ಸಮಯವಿರುದ್ಧಕಂಜಿ ವಿನಯವ ನುಡಿವೆ,
ಕೊಂದಡೆ ಕೊಲ್ಲು, ಕಾಯ್ದಡೆ ಕಾಯಿ. ಎ
ನ್ನವರೆಂದು ಮನ ಹಿಡಿಯದು, ಕೂಡಲಸಂಗಮದೇವಾ.
1384
ಸಮರತಿ ಸಮಸಂಧಾನದ ಸಂಗಸುಖವು
ನಿನ್ನಿಂದಲೆನಗೆ ಸಾಧ್ಯವಾಯಿತ್ತಲ್ಲದೆ,
ಎನಗೆ ತೋರಿದಪರಾರು ಹೇಳಾ ಲಿಂಗೈಕ್ಯದ ಹೊಲಬ
ಕೂಡಲಸಂಗಮದೇವರ ಶರಣ ಪ್ರಭುದೇವರಲ್ಲಿ
ನೀನೆನ್ನನಿರಿಸದನ್ನಕ್ಕರ, ನಾನು ಬಲ್ಲನೆ ಹೇಳಾ.
1385
 1386
 1387
ಸರ್ವಾವಧಾನಿ ಸಮಯಪ್ರಸಾದಿ ನೋಡಯ್ಯಾ,
ಲಿಂಗಾರ್ಪಿತದಲ್ಲಿ ಸರ್ವಾವಧಾನಿ ನೋಡಯ್ಯಾ,
ಅಯ್ಯಾ, ಅನಾಹತಂಗಳ ಮುನ್ನವೆ ಇರಲೀಯ,
ಕೂಡಲಸಂಗಮದೇವರಲ್ಲಿ
ಚೆನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
1388
ಸಾಕಾರ ನಿರಾಕಾರದೊಳಗೆ ನಿರವಯಾಂಗನಾಗಿ ಸುಳಿದು,
ಭಕ್ತರ ಭವವ ಹರಿಯಲೆಂದು ಬಂದ ಜಂಗಮದ ಪರಿಯ ನೋಡಾ.
ಉಳಲುಡಲು ಬಂದವನಲ್ಲ ಪ್ರಭುದೇವರು,
ತ್ರಿವಿಧದಾಸೆ ಮುನ್ನವೆಯಿಲ್ಲ, ಪ್ರಭುದೇವರಿಗೆ.
ಭಕ್ತನೆಂಬ ತನ್ನಂಗವ ತನ್ನೊಳೈಕ್ಯವ ಮಾಡಿಕೊಂಡು,
ನಿರವಯವಾಗ ಬಂದ ನಿರವಯನಯ್ಯಾ,
ಕೂಡಲಸಂಗಮದೇವರಲ್ಲಿ ಪ್ರಭುದೇವರು.
1389
ಸಾಕಾರ ಸಂಗನಲ್ಲಿ ನಿರಾಕಾರವಿಲ್ಲೆಂದು
ನಿರಾಕರ ಸಂಗವನರಸಿ ತೊಳಲಿ ಬಳಲಿದೆನಯ್ಯಾ.
ನಿಶ್ಚಿಂತ ನಿಜಭಜನೆ ನೆಲೆಗೊಳ್ಳದೆನಗೆ,
ಭ್ರಾಂತು ಭ್ರಮೆಯಿಲ್ಲದಂತೆ ಎಂದಪ್ಪುದೋ ಎನಗೆ
ಕೂಡಲಸಂಗಮದೇವಾ, ಕೇಳಯ್ಯಾ.
1390
 1391
ಸೂತ್ರಧಾರಿ ಮನದ ಮೈಲಿಗೆಯ ಕಳೆಯಬಂದನಯ್ಯಾ ಮಡಿವಾಳನು.
ಎನ್ನ ಕಾಯದ ಮೈಲಿಗೆಯ ತಂದು ತನ್ನ ಮುಂದೆ ಇರಿಸಿದೆಡೆ
ಸಮತೆಯೆಂಬ ಕೂಪತೋಹಿನಲ್ಲಿ ಅದ್ದಿ, ಕಟ್ಟಿ ಹಿಳಿದನಯ್ಯಾ.
ಪಂಚೇಂದ್ರಿಯವರ್ಗಂಗಳ ಜ್ಞಾನವೆಂಬ ನಿರ್ಮಲಜಲದಲ್ಲಿ
ಅಲುಬಿ ಸೆಳೆದನಯ್ಯಾ.
ರವಿಶಶಿಶಿಖಿಯ ತೇಜದಲ್ಲಿ ಆರಿಸಿದನು,
ಚತುರ್ದಶ ಷೋಡಶವೆಂಬ ಘಳಿಗೆಯ ಮಾಡಿದನು.
ಸಮಾಧಾನವೆಂಬ ಅಡ್ಡೆಯ ಮೇಲಿರಿಸಿ ಸಮಗುಣವೆಂಬ
ಕೊಡತಿಯಲ್ಲಿ ಘಟ್ಟಿಸಿದನು.
ಹರಿಯಿತ್ತಯ್ಯಾ ಸೆರಗು ಮೂರಾಗಿ.
ಆ ಮೂರರಿವೆಯ ಕೊಟ್ಟನಯ್ಯಾ, ಎನ್ನ ಕೈಯಲ್ಲಿ,
ಆ ಅರಿವೆಯ ಗುರುವಿಂಗೊಂದ ಕೊಟ್ಟೆನು,
ಲಿಂಗಕ್ಕೊಂದ ಕೊಟ್ಟೆನು, ಜಂಗಮಕ್ಕೊಂದ ಕೊಟ್ಟೆನು.
ಎನಗೆ ಕೊಟ್ಟ ಮೂರರಿವೆಯನೂ
ಒಂದುಮಾಡಿ
ಹೊದೆದುಕೊಂಡು ನಿಶ್ಚಿಂತನಾಗಿ,
ಮಡಿವಾಳನ ಕೃಪೆಯಿಂದಲಾನು ಬದುಕಿದೆನು
ಕಾಣಾ, ಕೂಡಲಸಂಗಮದೇವಾ.
1392
ಸ್ಥೂಲತನುವೆಂಬ ಭಾಂಡದಲ್ಲಿ ಸರ್ವಾಚಾರವೆಂಬ ಸಯದಾನವ ತುಂಬಿದೆ
ತುಂಬಲೊಡನೆ ಅಗ್ನಿಯಿಲ್ಲದ ಮುನ್ನ ಪಾಕವಾಯಿತ್ತು,
ಮೇಲು ಸಾಧನವಿಲ್ಲದ ಮುನ್ನ ರುಚಿ ಪಕ್ವವಾಯಿತ್ತು.
ಅದನು ಸೂಕ್ಷ್ಮತನುವೆಂಬ ಭಾಂಡದಲ್ಲಿ ಬರಿಕೆಯ್ದು,
ಕಾರಣತನುವಿನಲ್ಲಿ ಕುಳ್ಳಿರ್ದು ಊಡೆಹೆನೆಂದನುಮಾಡಲು,
ಪ್ರಕೃತಿಯಳಿದು ಒಂದೆ ಭಾಂಡವಾದುದ ಕಂಡು
ಉಣಲೊಲ್ಲದೆ ಅನ್ಯರಿಗಿಕ್ಕದೆ,
ಎನ್ನದೆನ್ನದೆ, ಸಯದಾನಂಗಳ ತೆಗೆದುಕೊಳ್ಳದೆ,
ಬೀಸರವೋಗದೆ, ಒಂದರೊಳಗೊಂದಿತ್ತೆನ್ನದೆ
ಉಂಡು ಸುಖಿಯಾದೆನಯ್ಯಾ, ಕೂಡಲಸಂಗಮದೇವಾ.
1393
ಹಗಲಾಯಿತ್ತು [ಹೊತ್ತು] ಹೋಗದು, ಇರುಳಾಯಿತ್ತು ನಿದ್ರೆಬಾರದು,
ಉಳಿದವರ ಮಾತು ಸಾಗದು, ಉಳಿದವರ ಮಾತು ಸಾಗದು.
ಕೂಡಲಸಂಗಯ್ಯನಲ್ಲದೆ ಒಲ್ಲದು ಮನ.
1394
ಹದಿನಾರಿದ್ದಡೆ ಎಂಟಮಾಡುವ ಸಂಗಯ್ಯದೇವರು,
ಎಂಟಿದ್ದಡೆ ನಾಲ್ಕಮಾಡುವ ಸಂಗಯ್ಯದೇವರು,
ನಾಲ್ಕಿದ್ದಡೆ ಎರಡಮಾಡುವ ಸಂಗಯ್ಯದೇವರು,
ಎರಡಿದ್ದಡೆ ಒಂದಮಾಡುವ ಸಂಗಯ್ಯದೇವರು,
ಆ ಒಂದ ಇಲ್ಲವೆಯ ಮಾಡುವ ಸಂಗಯ್ಯದೇವರು,
ತಿರಿಕನ ಶೋಭಿತನ ಮಾಡುವ ಸಂಗಯ್ಯದೇವರು,
ತಿರಿ [ತಿ]ನಹೋದಡೆ ಹುಟ್ಟದೆನಿಸುವ ಸಂಗಯ್ಯದೇವರು.
ಇದಾವುದಕ್ಕೂ ಸೆಡೆಯದಿದ್ದಡೆ
ಕೂಡಲಸಂಗಮದೇವರು ತನ್ನಂತೆ ಮಾಡುವ.
1395
ಹಮ್ಮಿ ಹನ್ನೆರಡು ಸಂವತ್ಸರ ಹಿಂದಾಯಿತ್ತು,
ಏನ ಮಾಡಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ
ಏನ ಹಮ್ಮಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ
ಎನ್ನ ಪುಣ್ಯದ ಫಲ, ಕೂಡಲಸಂಗಮದೇವಾ,
ಬಾಯಿನದುಂಡೆಗೆ ತೋಯನಟ್ಟಂತಾಯಿತ್ತು.
1396
ಹರನ ಭಜಿಸುವುದು,
ಮನಮುಟ್ಟಿ ಭಜಿಸಿದೆಯಾದಡೆ ತನ್ನ ಕಾರ್ಯ ಘಟ್ಟಿ.
ಅಲ್ಲದಿರ್ದಡೆ ತಾಪತ್ರಯ ಬೆನ್ನಟ್ಟಿ ಮುಟ್ಟಿ ಒತ್ತಿ ಮುರಿದೊಯ್ವುದು,
ವಿಧಿ ಹೆಡಗಯ್ಯ ಕಟ್ಟಿ ಕುಟ್ಟುವುದು.
ಕೂಡಲಸಂಗನ ಶರಣರ ದೃಷ್ಟಿಯವನ ಮೇಲೆ ಬಿದ್ದವ ಜಗಜಟ್ಟಿ.
1397
ಹರಶಕ್ತಿಗಳಲ್ಲಿ ಹುಟ್ಟಿದ ಬೆನಕ ಭೈರವ ಷಣ್ಮುಖರ
ಮಹಾಹರನ ಮಕ್ಕಳೆಂಬ ಪಾತಕ ನೀ ಕೇಳೊ.
ಹರಿಹರನು ಒಂದೆಂಬ ಶಿವದ್ರೋಹಿ ನೀ ಕೇಳೊ.
ಹರಿ ಸಹಿತಾರರಿಂದತ್ತ ಅಜಾತನಚರಿತ್ರ ಅಪ್ರತಿಮಮಹಿಮ
ಕೂಡಲಸಂಗಮದೇವನೊಬ್ಬನೆ ಕಾಣಿ ಭೋ.
1398
ಹರಿಯ ಬೇಡುವಡೆ ಅವಗೆ ಬಲೀಂದ್ರ ದಾನವನಿಕ್ಕಿದನು,
ಬ್ರಹ್ಮನ ಬೇಡುವಡೆ ಅವಗೆ ಶಿರವಿಲ್ಲ,
ಚೌದ್ಧನ ಬೇಡುವಡೆ ಅವಗೆ ಬುದ್ಧಿ ಸಮನಿಸದು,
ಜಿನನ ಬೇಡುವಡೆ ಅವಗೆ ಉಡಲಿಲ್ಲ,
ಬೆನಕನ ಬೇಡುವಡೆ ಅವಗೆ ಕೋಡು ಮುರಿಯಿತ್ತು,
ಭೈರವನ ಬೇಡುವಡೆ ಅವ ಉಟ್ಟುದನಿಕ್ಕಿ ಆಡುತ್ತಿರ್ದನು.
ಅಭಯಂಕರ ಜಗಕ್ಕೆಲ್ಲ ! ಜಗದಾನಿಯ ಬೇಡುವೆನು
ಕೂಡಲಸಂಗಯ್ಯನ.
1399
ಹಸಿದಳುವ ಶಿಶುವಿಂಗೆ ತಾಯಿ ಮೊಲೆಯ ಕೊಟ್ಟಡೆ,
ಆ ಶಿಶು ಜೀವಿಸದಿಪ್ಪುದೆ ಹೇಳಾ, ಅಯ್ಯಾ
ಪ್ರಾಣವಲ್ಲಭನ ಅಗಲಿಕೆಯಿಂದ ಪ್ರಾಣವಿಯೋಗವಾಗಿಹ
ಹೆಂಗೂಸಿಂಗೆ ಆ ಪ್ರಾಣವಲ್ಲಭ ಬಂದಡೆ
ವಿರಹ ಸಂತವಿಸದಿಪ್ಪುದೆ ಹೇಳಾ, ಅಯ್ಯಾ
ಕೂಡಲಸಂಗಮದೇವರು ಸಾಕ್ಷಿಯಾಗಿ
ಪ್ರಭುವೆನ್ನ ಮನೆಗೆ ಬಂದಡೆ ಎನ್ನ ಬಯಕೆ ಕೈಸಾರಿ
ಚೆನ್ನಬಸವಣ್ಣನ ಕರುಣದ ಕಂದನಾಗಿ
ಉಳಿದೆನು ಕಾಣಾ, ಮಡಿವಾಳಯ್ಯಾ.
1400
ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ.
ಶಿಶುವೇಧೆಗಾರನು ನಮ್ಮ ಡೋಹರ ಕಕ್ಕಯ್ಯ.
ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ.
ಇವರಿಬ್ಬರ ಮೂವರ ಕೂಡಿಕೊಂಡಿಪ್ಪ,
ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ.
1401
ಹಸ್ತಕಡಗ ಕೈಗಧಿಕ ನೋಡಾ; ಕೊಡಲಹುದು ಕೊಳಲಾಗದು,
ಬಾಹುಬಳೆ ತೋಳಿಗಂಧಿಕ ನೋಡಾ; ಪರವಧುವನಪ್ಪಲಾಗದು,
ಕರ್ಣಕುಂಡಲ ಕಿವಿಗಧಿಕ ನೋಡಾ; ಶಿವನಿಂದೆಯ ಕೇಳಲಾಗದು,
ಕಂಠಮಾಲೆ ಕೊರಳಿಂಗಧಿಕ ನೋಡಾ; ಅನ್ಯದೈವಕ್ಕೆ ತಲೆವಾಗಲಾಗದು.
ಆಗಳೂ ನಿಮ್ಮುವ ನೆನೆದು, ಕೂಡಲಸಂಗಮದೇವಾ,
ನಿಮ್ಮುವನೆ ಪೂಜಿಸಿ ಸದಾ ಸನ್ನಿಹಿತನಾಗಿಪ್ಪನು ಲಿಂಗಶಿಖಾಮಣಿಯಯ್ಯಾ.
1402
ಹಸ್ತ ತೋಳು ಉರ ಕಂಠ ಕರ್ಣ ಮಸ್ತಕದಲ್ಲಿ
ರುದ್ರಾಕ್ಷಿಯ ಧರಿಸಿಪ್ಪ ಸದ್ಭಕ್ತನೆ ರುದ್ರನು ನೋಡಾ.
ಅದೆಂತೆಂದಡೆ;
ಹಸ್ತೇ ಚೋರಸಿ ಕಂಠೇ ವಾ ಮಸ್ತಕೇ ವಾಪಿ ಧಾರಯೇತ್
ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರ ಸಂಶಯಃ
ಇಂತೆಂದುದಾಗಿ,
ಸಮಸ್ತ ಪಾಪಂಗಳ ಕಳೆದು, ಕೂಡಲಸಂಗಯ್ಯ ತನ್ನಂತೆ ಮಾಡುವನು.
1403
ಹಳಿವವರ ಲೆಂಕ, ಮತ್ಸರಿಸುವವರ ಡಿಂಗರಿಗ,
ಸಲೆಯಾಳಿಗೊಂಬವರ ತೊತ್ತಿನ ಮಗ.
ಜರಿದು [ಮತ್ಸರಿ]ಸಿ, ಹೊಯ್ದು ಬೈದು ಅದ್ದಲಿಸಿ
ಬುದ್ಧಿಯ ಹೇಳುವ ಹಿರಿಯರಾದ
ಡೋಹರ ಕಕ್ಕಯ್ಯಗಳ ಪಾದರಕ್ಷೆಯ ಕಿರುಕುಣಿಕೆಯಲ್ಲಿ
ಎ[ನ್ನನ್ನಿ]ಡು ಕೂಡಲಸಂಗಮದೇವಾ.
1404
ಹಾಡಿದಡೆನ್ನೊಡೆಯನ ಹಾಡುವೆ,
ಬೇಡಿದಡೆನ್ನೊಡೆಯನ ಬೇಡುವೆ,
ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ.
ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.
1405
ಹಾದರದ ಮಿಂಡನ ಹತ್ತಿರ ಮಡಗಿಕೊಂಡು,
ಮನೆಯ ಗಂಡನ ಒಲ್ಲೆನೆಂದಡೆ ಒಲಿವನೆ
ತಾ ಶಿವಭಕ್ತನಾಗಿ, ತನ್ನಂಗದ ಮೇಲೆ ಲಿಂಗವಿದ್ದು
ಮತ್ತೆ ಭಿನ್ನಶೈವಕ್ಕೆರಗುವುದೆ ಹಾದರ,
ಕೂಡಲಸಂಗಯ್ಯನು ಅವರ ಮೂಗ ಕೊಯ್ಯದೆ ಮಾಣ್ಬನೆ.
1406
ಹಾವು, ಕಿಚ್ಚ ಮುಟ್ಟಿಹ ಶಿಶುವೆಂದು
ಹೆತ್ತತಾಯಿ ಮಗನ ಬೆಂಬತ್ತಿ ಬಪ್ಪಂತೆ ಇಪ್ಪ ನೋಡಾ,
ಎನ್ನೊಡನೊಡನೆ ಕೂಡಲಸಂಗಮದೇವ ಕಾಯ್ದುಕೊಂಡಿಪ್ಪನಾಗಿ.
1407
ಹಾವು ಹದ್ದು ಕಾಗೆ ಗೂಗೆ ಅನಂತಕಾಲ ಬದುಕವೆ
ಬೇಡವೋ ಮಾನವಾ, ಲೇಸೆನಿಸಿಕೊಂಡು ಬದುಕು,
ಓ ಮಾನವಾ ಶಿವಭಕ್ತನಾಗಿ.
ಅದೆಂತೆಂದಡೆ;
ಜೀವಿತಂ ಶಿವಭಕ್ತಾನಾಂ ವರಂ ಪಂಚದಿನಾನಿ ಚ
ನಾಜಕಲ್ಪಸಹಸ್ರಾಣಿ ಭಕ್ತಿಹೀನಸ್ಯ ಶಾಂಕರಿ
ಎಂದುದಾಗಿ,
ನಮ್ಮ ಕೂಡಲಸಂಗಮದೇವರ ಭಕ್ತಿವಿಡಿದು,
ಐದು ದಿವಸವಾದಡೂ ಬದುಕಿದಡೆ ಸಾಲದೆ.
1408
ಹಿಂದೆ ಎನ್ನ ಗುರುವನುಮಿಷಂಗೆ ನೀನು ಲಿಂಗವ ಕೊಟ್ಟೆನೆಂಬ ಸೂತಕ ಬೇಡ,
ಅಂದು ಅನುಮಿಷ ನಿನ್ನ ಕೈಯಲ್ಲಿ ಕೊಂಡನೆಂಬ ಸಂಕಲ್ಪ ಬೇಡ,
ಹಿಂದು ಮುಂದೆಂಬ ಸಂದಳಿದು ನಿಂದಲ್ಲಿ ಭರಿತನಾದ ಬಳಿಕ
ಕೊಡಲುಂಟೆ, ಕೊಳಲುಂಟೆ ಹೇಳಾ !
ಹಿಡಿದಡೆ ಸಿಕ್ಕದು, ಕೊಡುವಡೆ ಹೋಗದು, ಎಡೆಯಾಟದ ಜೀವಪರಿಯೆಂತಯ್ಯಾ
ಲಿಂಗವ ಹೋಗಾಡಿದನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು
ಲಿಂಗೈಕ್ಯವೆಂತಪ್ಪುದು ಹೇಳಾ !
ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು,
ಎನ್ನ ಮನ ಮನ ತಾರ್ಕಣೆಯಪ್ಪಂತೆ
ನಿಮ್ಮಲ್ಲೈಕ್ಯವ ಮಾಡಾ, ಕೂಡಲಸಂಗಮದೇವಾ.
1409
ಹಿಂದೆ ಸಂದ ಭಕ್ತರಂತಾನೊಂದೊಂದ ಬೇಡಿ ಕಾಡುವನಲ್ಲ,
ಹಿಂದೆ ಬೆನ್ನಲಿ ಬಂದು ಬಳಲಿದೆ.
ಇನ್ನೊಂದ ಬೇಡೆನಂಜದಿರಂಜದಿರಯ್ಯಾ,
ಆಶಾಪಾಶ ಎನ್ನಲ್ಲುಳ್ಳಡೆ ಕೂಡಲಸಂಗಾ ನಿಮ್ಮಾಣೆ.
1410
ಹುತ್ತವ ಕಂಡಲ್ಲಿ ಹಾವಾಗಿ, ನೀರ ಕಂಡಲ್ಲಿ [ಒಳ್ಳೆ]ಯಾದವನ ಮಚ್ಚುವನೆ
ಬಾರದ ಭವಂಗಳಲ್ಲಿ ಬರಿಸುವನಲ್ಲದೆ ಮಚ್ಚುವನೆ
ಅಘೋರನರಕವನುಣಿಸುವನಲ್ಲದೆ, ಮಚ್ಚುವನೆ
ಅಟಮಟದ ಭಕ್ತರ ಕಂಡಡೆ, ಕೋಟಲೆಗೊಳಿಸುವ
ಕೂಡಲಸಂಗಮದೇವ.
1411
ಹೆಂಗೂಸಿನಂಗವ ನೋಡಿರೆ ಪುರಾತನರು,
ಬಾಲತನದಂಗವ ನೋಡಿರೆ ಪುರಾತನರು,
ಬ್ರಹ್ಮವನಾಚರಿಸಿ ತನ್ನ ಮರೆದಿಪ್ಪುದ ನೋಡಿರೆ ಲಿಂಗವಂತರು.
ತನ್ನಲ್ಲಿ ತಾನು
ಶ್ಚಯವಾಗಿ ಭಾಷೆ ಬೀಸರವೋಗ
ದೆಯಿಪ್ಪಇರವು ಕೂಡಲಸಂಗಮದೇವರಲ್ಲಿ ನಮ್ಮ
ಮಹದೇವಿಯಕ್ಕಂಗಾಯಿತ್ತು.
1412
ಹೊನ್ನಿನ ಆಪ್ಯಾಯನಕ್ಕೆ ಬೋಳಾದವನಲ್ಲ,
ಮಣ್ಣಿನ ಆಪ್ಯಾಯನಕ್ಕೆ ಬೋಳಾದವನಲ್ಲ,
ಹೆಣ್ಣಿನ ಆಪ್ಯಾಯನಕ್ಕೆ ಬೋಳಾದವನಲ್ಲ.
ಕೂಡಲಸಂಗಮದೇವರಲ್ಲಿ ಎನಗಾರು ಇಲ್ಲವೆಂದು
ಬೋಳಾದನೆನ್ನ ಪ್ರಭುದೇವರು.
1413
ಹೊಯಿದವರೆನ್ನ ಹೊರೆದವರೆಂಬೆ, ಬಯಿದವರೆನ್ನ ಬಂಧುಗಳೆಂಬೆ,
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ, ಆಳಿಗೊಂಡವರೆನ್ನ ಆಳ್ದವರೆಂಬೆ,
ಜರಿದವರೆನ್ನ ಜನ್ಮಬಂಧುಗಳೆಂಬೆ,
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ
ಕೂಡಲಸಂಗಮದೇವಾ.
1414

 

.

.

 

ಲಿಂಗಧಾರಣ ಸ್ಥಲ

೧. ಪಾತಕ ಶತಕೋಟಿಯನೊರಸಲು ಸಾಲದೆ ಒಂದು ಶಿವನ ನಾಮ ? ಸಾಲದೆ ಒಂದು ಹರನ ನಾಮ ? ಕೂಡಲ ಸಂಗಮದೇವಾ, ನಿಮ್ಮ ಉಂಡಿಗೆಯ ಪಶುವ ಮಾಡಿಧೆಯಾಗಿ. ೨. ಲಿಂಗದ ಉಂಡಿಗೆಯ ಪಶುವಾನನಯ್ಯ ವೇಶ್ಹಧಾರಿಯಾನು, ಉದರ ಪೋಶ್ಹಕನಾನಯ್ಯ. ಕೂಡಲ ಸಂಗನ ಶರಣರ ಧರ್ಮದ ಕವಿಲೆಯಾನು. ೩. ನಮಃ ಶಿವಾಯ, ನಮಃ ಶಿವಾಯ, ನಮಃ ಶಿವಾಯ ಶರಣೆಂದಿತ್ತು ; ಲಲಾಟಲಿಖಿತ ಬರೆದಬಳಿಕ ಪಲ್ಲಟವ ಮಾಡ ಬಾರದು. ಎನ್ನ ಉರದ ಉಂಡೆಗೆ ; ಸಿರಿದ ಅಕ್ಶರ ಕೂಡಲ ಸಂಗಯ್ಯ ಶರಣೆಂದಿತ್ತು. ೪. ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು ಲಿಂಗ ದೇವರಿಲ್ಲದ ಠಾವು ನರವಿಂಧ್ಯ, ಹೋಗಲಾಗದು ದೇವಭಕ್ತರಿಲ್ಲದೂರುಸಿನೆ, ಹಾಳು ಕೂಡಲ ಸಂಗಮದೇವಾ. ೫. ಅಡ್ಡ ತ್ರಿಪುಣ್ಡ್ರದ ಮಣಿ ಮುಕುಟದ ವೇಶ್ಹದ ಶರಣರ ಕಂಡರೆ ನಂಬುವದೆನ್ನ ಮನವು , ನೆಚ್ಚುವುದೆನ್ನ ಮನವು ಸಂದೇಹವಿಲ್ಲದೆ ; ಇವಿಲ್ಲವರ ನಂಬೆ ಕೂಡಲ ಸಂಗಮದೇವಾ. ೬. ಆರಾಧ್ಯ ಪ್ರಾಣಲಿಂಗವೆಂದರಿದು ಪೂರ್ವಗುಣವಳಿದು ಪುನರ್ಚಾತಕನಾದ ಬಳಿಕ ಸಂಸಾರ ಬಂಧುಗಳೆನ್ನರೆಂದೊಡೆ ನಂಟ ಭಕ್ತಿನಾಯಕ ನರಕ ಇಂತೆಂದುದು ಕೂಡಲ ಸಂಗನ ವಚನ. ೭. ತಾಳಮರದ ಕೆಳಗೆ ಒಂದು ಹಾಲ ಹರವಿಯಿರ್ದೊಡೆ ಅದು ಹಾಲಹರವಿಯಿನ್ನರು, ಸುರೆಯ ಹರವಿಯಂಬರು ಈ ಭಾವನಿಂದೆಯ ಮಾಣಿಸಾ, ಕೂಡಲ ಸಂಗಮ ದೇವಾ. ೮. ಸುಪಥ ಮಂತ್ರದುಪದೇಶವ ಕಲಿತು ಯುಕ್ತಿಗೆಟ್ಟು ನಡೆವಿರಯ್ಯ ತತ್ವಮಸಿ ಎಂಬುದನರಿದು ಕತ್ತಲೆದೊಡವಿರಯ್ಯ ವೇದವಿಪ್ರರ ವಿಚಾರಿಸಿ ನೋಡಲು ’ಉಪದೇಶ ಪರೀಕ್ಶೆ ನಾಯಕ ನರಕ’ ಎಂಬುದು ಕೂಡಲ ಸಂಗನ ವಚನದ ಸೂಚನೆ. ೯. ಕುಂಬಳಕಾಯಿಗೆ ಕುಬ್ಬುನದ ಕಟ್ಟಕೊಟ್ಟರೆ ಕೊಳೆವುದಲ್ಲದೇ ಬಲಹಾಗ ಬಲ್ಲುದೇ ? ಅಳಿಮನದವಂಗೆ ಶಿವದೀಕ್ಶೆಯ ಕೊಟ್ಟರೆ ಭಕ್ತಿ ಎಂತಹದೊ ?... ಮುನ್ನಿನಂತೆ ಕೂಡಲ ಸಂಗಯ್ಯ ; ಮನಹೀನನ ಮೀಸಲ ಕಾಯ್ದಿರಿಸಿದಂತೇ. ೧೦. ಸಗಣೆಯ ಬೆನಕಂಗೆ ಸಂಪಿಗೆಯರಳಲ್ಲಿ ಪೂಜಿಸಿದರೆ, ರಂಜನೆಯಲ್ಲದೆ ಅದರ ಗುಂಜಳ ಬಿಡದಣ್ಣಾ ! ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದರೆ ನಿಚ್ಚ ನಿಚ್ಚಕ್ಕೆ ಕೆಸರಹುದಲ್ಲದೆ ಅದರಚ್ಚುಗ ಬಿಡದಣ್ಣಾ ! ಲೋಕದ ಮಾನವಂಗೆ ಶಿವದೀಕ್ಶೆಯ ಕೊಟ್ಟರೆ ಕೆಟ್ಟವನೇಕೆ ಶಿವಭಕ್ತನಹನು ಕೂಡಲ ಸಂಗಮದೇವಾ ? - - - - - - - - - -

This is contribution of K Sree Hari. Please Send your corrections

Related Content

3. Don't be a seperatist - (Basavanna)

4. What is devotion ? - (Basavanna)

5. My Dignity & Disrespect is all Yours ! - (Basavanna)

6. Can anyone become a great saint ? - (Basavanna)

7. Worried about the sins piled up ? - (Basavanna)